IND vs ENG: ಬುಮ್ರಾ 5 ವಿಕೆಟ್ ಬೇಟೆ; ಅಲ್ಪ ಮುನ್ನಡೆ ಸಾಧಿಸಿದ ಭಾರತ
6 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ಆರಂಭಿಕ ಆಘಾತ ಎದುರಿಸಿತು. ಮೊದಲ ಇನಿಂಗ್ಸ್ನ ಶತಕ ವೀರ ಯಶಸ್ವಿ ಜೈಸ್ವಾಲ್(6) ವಿಕೆಟ್ ಬೇಗನೆ ಬಿತ್ತು. ಸಾಯಿ ಸುದರ್ಶನ್ ಬಿರುಸಿನ ಬ್ಯಾಟಿಂಗ್ ನಡೆಸಿ 30 ರನ್ ಬಾರಿಸಿದರು. ಸದ್ಯ ಕನ್ನಡಿಗ ರಾಹುಲ್(47) ಮತ್ತು ನಾಯಕ ಶುಭಮನ್ ಗಿಲ್(6) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.


ಲೀಡ್ಸ್: ಜಸ್ಪ್ರೀತ್ ಬುಮ್ರಾ(83 ಕ್ಕೆ5) ಅವರ ಘಾತಕ ಬೌಲಿಂಗ್ ದಾಳಿಯ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್(IND vs ENG) ಪಂದ್ಯದಲ್ಲಿ ಭಾರತ ಅಲ್ಪ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದೆ. ಒಟ್ಟಾರೆ 96 ರನ್ ಮುನ್ನಡೆಯಲ್ಲಿದೆ. ನಾಲ್ಕನೇ ದಿನದಾಟದಲ್ಲಿ ಭಾರತ( IND vs ENG 1st Test) ದೊಡ್ಡ ಮೊತ್ತ ಪೇರಿಸಿ ಆ ಬಳಿಕ ಬೇಗನೆ ಆಂಗ್ಲರ ವಿಕೆಟ್ ಬೇಟೆಯಾಡಿದರೆ ಗೆಲುವು ಸಾಧಿಸುವ ಅವಕಾಶವಿದೆ.
3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿದ್ದಲ್ಲಿಂದ ಭಾನುವಾರ ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ 465ರನ್ ಸರ್ವಪತನ ಕಂಡು 6 ರನ್ ಹಿನ್ನಡೆ ಅನುಭವಿಸಿತು. ಭಾರತ ಪರ ಬಿಗಿ ಬೌಲಿಂಗ್ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಕಿತ್ತು ಮಿಂಚಿದರು. ಇದೇ ವೇಳೆ ವಿದೇಶಿ ನೆಲದಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಗೊಂಚಲು ಪಡೆದ ದಿಗ್ಗಜ ಆಟಗಾರ ಕಪಿಲ್ದೇವ್(12 ಬಾರಿ) ದಾಖಲೆ ಸರಿಗಟ್ಟಿದರು. ಶನಿವಾರ ಮೂರು ವಿಕೆಟ್ ಕಿತ್ತ ಬುಮ್ರಾ ಭಾನುವಾರ 2 ವಿಕೆಟ್ ಉರುಳಿಸಿದರು.
ಶತಕ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಓಲಿ ಪೋಪ್ ಮೂರನೇ ದಿನದಾಟದಲ್ಲಿ ಕೇವಲ 6 ರನ್ ಗಳಿಸಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಒಟ್ಟು 106 ರನ್ ಗಳಿಸಿದರು. ಪೋಪ್ ವಿಕೆಟ್ ಪತನದ ಬಳಿಕ ಹ್ಯಾರಿ ಬ್ರೂಕ್ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಬ್ರೂಕ್ 99 ರನ್ ಗಳಿಸಿದ್ದ ವೇಳೆ ಸಿಕ್ಸರ್ ಪ್ರಯತ್ನದಲ್ಲಿ ಶಾರ್ದೂಲ್ಗೆ ಕ್ಯಾಚ್ ನೀಡಿ ಒಂದು ರನ್ ಅಂತರದಿಂದ ಶತಕ ವಂಚಿತರಾದರು. ನಾಯಕ ಬೆನ್ ಸ್ಟೋಕ್ಸ್(20) ದೊಡ್ಡ ಮೊತ್ತ ಬಾರಿಸುವಲ್ಲಿ ವಿಫಲರಾದರು. ಅಂತಿಮ ಹಂತದಲ್ಲಿ ಜೇಮೀ ಸ್ಮಿತ್(40), ವೇಗಿಗಳಾದ ಕ್ರಿಸ್ ವೋಕ್ಸ್(38) ಮತ್ತು ಬ್ರೈಡನ್ ಕಾರ್ಸೆ(22) ರನ್ ಗಳಿಸಿದರು.
ರಿಷಭ್ ಪಂತ್ ಕ್ಯಾಚ್ ಒಂದನ್ನು ಪಡೆಯುವ ಸಯ್ಯದ್ ಕಿರ್ಮಾನಿ ಮತ್ತು ಧೋನಿ ಬಳಿಕ ಟೆಸ್ಟ್ನಲ್ಲಿ150 ಕ್ಯಾಚ್ ಪೂರ್ತಿಗೊಳಿಸಿದ 3ನೇ ಭಾರತೀಯ ವಿಕೆಟ್ ಕೀಪರ್ ಎಸಿಕೊಂಡರು. ಬುಮ್ರಾ ಹೊರತುಪಡಿಸಿ ಕನ್ನಡಿಗ ಪ್ರಸಿದ್ಧ್ ಕೃಷ್ಣ 3 ಮತ್ತು ಮೊಹಮ್ಮದ್ ಸಿರಾಜ್ 2 ವಿಕೆಟ್ ಕಿತ್ತರು. ಆಲ್ರೌಂಡರ್ಗಳಾದ ಶಾರ್ದಲ್ ಠಾಕೂರ್ ಮತ್ತು ರವೀಂದ್ರ ಜಡೇಜಾ ವಿಕೆಟ್ ಪಡೆಯುವಲ್ಲಿ ವಿಫಲರಾದರು.
ರಾಹುಲ್ ಆಸರೆ
6 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ಆರಂಭಿಕ ಆಘಾತ ಎದುರಿಸಿತು. ಮೊದಲ ಇನಿಂಗ್ಸ್ನ ಶತಕ ವೀರ ಯಶಸ್ವಿ ಜೈಸ್ವಾಲ್(6) ವಿಕೆಟ್ ಬೇಗನೆ ಬಿತ್ತು. ಸಾಯಿ ಸುದರ್ಶನ್ ಬಿರುಸಿನ ಬ್ಯಾಟಿಂಗ್ ನಡೆಸಿ 30 ರನ್ ಬಾರಿಸಿದರು. ಸದ್ಯ ಕನ್ನಡಿಗ ರಾಹುಲ್(47) ಮತ್ತು ನಾಯಕ ಶುಭಮನ್ ಗಿಲ್(6) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಳೆಯ ಭೀತಿ ಎದುರಾದ ಕಾರಣ ದಿನದಾಟವನ್ನು ಬೇಗನೆ ಮುಗಿಸಲಾಯಿತು.