Viral Video: ಇಂಡಿಗೋ ವಿಮಾನ ರದ್ದು; ಪುತ್ರನಿಗಾಗಿ 800 ಕಿ.ಮೀ ದೂರ ಕಾರು ಚಲಾಯಿಸಿದ ತಂದೆ!
IndiGo crisis: ಇಂಡಿಗೋ ವಿಮಾನ ರದ್ದಾದ ಘಟನೆಯ ನಡುವೆ, ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ತಂದೆಯೊಬ್ಬರು ತಮ್ಮ ಮಗನ ಪರೀಕ್ಷೆಗೆ ಶಾಲೆಗೆ ತಲುಪಲು 800 ಕಿಲೋಮೀಟರ್ ದೂರವನ್ನು ಕಾರು ಚಾಲನೆ ಮಾಡಿದ್ದಾರೆ. ವಿಮಾನ ರದ್ದಾದ ಕಾರಣ ಪುತ್ರ ಪರೀಕ್ಷೆ ಕಳೆದುಕೊಳ್ಳಬಾರದು ಎಂದು ಈ ನಿರ್ಧಾರ ಕೈಗೊಂಡಿದ್ದಾರೆ.
ಪುತ್ರನಿಗಾಗಿ 800 ಕಿ.ಮೀ ದೂರ ಕಾರು ಚಲಾಯಿಸಿದ ತಂದೆ -
ನವದೆಹಲಿ: ಇಂಡಿಗೋ ವಿಮಾನ ಸಂಕಷ್ಟದ (IndiGo crisis) ಸಂದರ್ಭದಲ್ಲಿ, ದೇಶದಾದ್ಯಂತ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ (Airport) ಸಿಲುಕಿಕೊಂಡಿದ್ದರು. ತಮ್ಮ ವಿವಾಹ ಸಮಾರಂಭಗಳನ್ನು ಮಿಸ್ ಮಾಡಿಕೊಳ್ಳುವುದರಿಂದ ಹಿಡಿದು ಉದ್ಯೋಗ ಸಂದರ್ಶನಗಳನ್ನು ತಪ್ಪಿಸುವವರೆಗೂ, ಸಾಮೂಹಿಕ ವಿಮಾನ ರದ್ದು, ವಿಳಂಬಗಳ ಪರಿಣಾಮವಾಗಿ ಹಲವಾರು ಮಂದಿ ಕಂಗಾಲಾಗಿದ್ದರು. ಇದೀಗ ಮನಮುಟ್ಟುವ ಪ್ರಕರಣವೊಂದರಲ್ಲಿ ತಂದೆಯೊಬ್ಬರು, ತನ್ನ ಮಗನಿಗೆ ಪರೀಕ್ಷೆ ಇದ್ದುದರಿಂದ ಶಾಲೆಗೆ ತಲುಪಿಸಲು ನೂರಾರು ಕಿಲೋಮೀಟರ್ ಕಾರು ಚಾಲನೆ ಮಾಡಬೇಕಾಯಿತು. ಹರಿಯಾಣದ (Haryana) ರೋಹ್ಟಕ್ನಲ್ಲಿ ಘಟನೆ ನಡೆದಿದೆ.
ಪುತ್ರನಿಗಾಗಿ ನೂರಾರು ಕಿ.ಮೀ ಕಾರು ಚಲಾಯಿಸಿದ ತಂದೆಯನ್ನು ರಾಜನಾಥ್ ಪಾಂಗಲ್ ಎಂದು ಗುರುತಿಸಲಾಗಿದೆ. ಪಾಂಗಲ್ ಅವರು ತಮ್ಮ ಮಗನಿಗಾಗಿ ಮಧ್ಯಪ್ರದೇಶದ ಇಂದೋರ್ಗೆ ಇಂಡಿಗೋ ವಿಮಾನವನ್ನು ಬುಕ್ ಮಾಡಿದ್ದರು. ಅದು ಡಿಸೆಂಬರ್ 6ರಂದು ಸಂಜೆ 5.35ಕ್ಕೆ ದೆಹಲಿಯಿಂದ ಹಾರಬೇಕಾಗಿತ್ತು. ಆದರೆ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಆ ವಿಮಾನ ರದ್ದಾಗಿದೆ ಎಂಬುದು ತಿಳಿದುಬಂದಿತು. ಮುಂದೆ ಏನು ಮಾಡಬೇಕು ಎಂದು ತೋಚದಾಯಿತು. ಮಗನ ಪ್ರೀ ಬೋರ್ಡ್ ಎಕ್ಸಾಂ ಹತ್ತಿರದಲ್ಲಿತ್ತು. ಹೀಗಾಗಿ ಆತನನ್ನು ಶಾಲೆಗೆ ತಲುಪಿಸಲೇಬೇಕಾಗಿತ್ತು.
ಇಂಡಿಗೋ ಬಿಕ್ಕಟ್ಟಿನ ನಡುವೆ ಫ್ಲೈಟ್ ಒಳಗೆ ಪಾರಿವಾಳ ನುಗ್ಗಿ ಅವಾಂತರ: ವಿಡಿಯೊ ವೈರಲ್
ಅವರ ಪುತ್ರನ ಪರೀಕ್ಷೆಗಳು ಡಿಸೆಂಬರ್ 8 ರಂದು ಆರಂಭವಾಗಬೇಕಿರುವುದರಿಂದ, ಪಾಂಗಲ್ ಮರು ಯೋಚನೆ ಮಾಡದೆ ಇಂದೋರ್ಗೆ ಸ್ವತಃ ತಾವೇ ಡ್ರೈವಿಂಗ್ ಮಾಡಲು ನಿರ್ಧರಿಸಿದರು. ಪಾಂಗಲ್ ರಾತ್ರಿಯಿಡೀ ಚಾಲನೆ ಮಾಡುತ್ತಾ 800 ಕಿಲೋಮೀಟರ್ ದೂರದ ತಮ್ಮ ಮಗನ ಶಾಲೆಗೆ ಬೆಳಗ್ಗೆ ತಲುಪಿದರು. ರಸ್ತೆಗಳು ಹದಗಟ್ಟಿದ್ದವು. ಹೀಗಾಗಿ ಚಾಲನೆ ಮಾಡುವಾಗ ಕಷ್ಟಗಳು ಬಂದವು. ಆದರೆ, ಬೆಳಗ್ಗೆ 7 ಗಂಟೆಗೆ ಶಾಲೆಗೆ ತಲುಪಿದ್ದೇವೆ ಎಂದು ಪಾಂಗಲ್ ತಿಳಿಸಿದ್ದಾರೆ.
ಇನ್ನು ವಿಮಾನ ರದ್ದಿನ ಬಗ್ಗೆ ತೀವ್ರ ಖಾರವಾಗಿ ಪ್ರತಿಕ್ರಿಯಿಸಿದರು. ವಿಮಾನ ಕಂಪನಿಗಳು ನೀಡುವ ಪರಿಹಾರವು ರದ್ದಾದ ವಿಮಾನ ಟಿಕೆಟ್ನ ನಿಖರ ಬೆಲೆಗಷ್ಟೇ ಸೀಮಿತವಾಗಿರಬಾರದು. ವಿಮಾನ ನಿಲ್ದಾಣಕ್ಕೆ ಹೋಗಿ ಬರುವ ಖರ್ಚನ್ನೂ ಕೂಡ ಪರಿಹಾರವಾಗಿ ನೀಡಬೇಕು ಎಂದು ಪಾಂಗಲ್ ಒತ್ತಾಯಿಸಿದ್ದಾರೆ.
ಈ ತಿಂಗಳಲ್ಲಿ, ಇಂಡಿಗೋವು ಕಠಿಣ ಸುರಕ್ಷತಾ ನಿಯಮಾವಳಿಗಳನ್ನು ಸರಿಯಾಗಿ ಯೋಜಿಸದ ಕಾರಣ ಸಾವಿರಾರು ವಿಮಾನಗಳನ್ನು ರದ್ದು ಮಾಡಿತ್ತು. ರದ್ದಾದ ವಿಮಾನಗಳ ಗರಿಷ್ಠ ಪ್ರಮಾಣ ಡಿಸೆಂಬರ್ 5 ರಂದು ದಾಖಲಾಗಿದ್ದು, ಇದೀಗ ಕಡಿಮೆ ಆಗುತ್ತಿದೆ. ವಿಮಾನ ಕಂಪನಿಯು, ಮಂಗಳವಾರದಂದು ತನ್ನ ಕಾರ್ಯಾಚರಣೆಗಳು ಸ್ಥಿರಗೊಂಡು ಸಾಮಾನ್ಯ ಮಟ್ಟಕ್ಕೆ ಮರಳಿವೆ ಎಂದು ತಿಳಿಸಿದೆ.
ಪ್ರಯಾಣಿಕರಲ್ಲಿ ಕ್ಷಮೆ ಕೇಳಿದ್ದ ಪೈಲಟ್
ಅಂದಹಾಗೆ ತಮ್ಮಿಂದ ಉಂಟಾದ ತೊಂದರೆ ಬಗ್ಗೆ ಈಗಾಗಲೇ ಇಂಡಿಗೋ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ. ಇದರ ಬೆನ್ನಲ್ಲೇ ಇಂಡಿಗೋ ವಿಮಾನದ ಪೈಲಟ್ ಒಬ್ಬರು ಪ್ರಯಾಣಿಕರ ಬಳಿ ಕ್ಷಮೆಯಾಚಿಸಿದ್ದ ವಿಡಿಯೊವೊಂದು ವೈರಲ್ ಆಗಿತ್ತು. ವಿಮಾನಯಾನ ಸಂಸ್ಥೆಯು ಎಲ್ಲ ಅಡೆತಡೆಗಳ ಹೊರತಾಗಿಯೂ ಪೈಲಟ್ ಹೃತ್ಪೂರ್ವಕ ಕ್ಷಮೆಯಾಚಿಸಿದ್ದ ಈ ವಿಡಿಯೊ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಕ್ಯಾಪ್ಟನ್ ಪ್ರದೀಪ್ ಕೃಷ್ಣನ್ ಅವರು ವಿಮಾನದ ಮುಂಭಾಗದಲ್ಲಿ ನಿಂತು ಪ್ರಯಾಣಿಕರನ್ನು ತಮಿಳು ಭಾಷೆಯಲ್ಲಿ ಮಾತನಾಡಿಸಿ ಕ್ಷಮೆ ಕೇಳಿದ್ದಾರೆ.