ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಉಪಕಾರಸ್ಮರಣೆ ಇಲ್ಲದ ಮನುಷ್ಯ

ಗೋವು ಮಹಿಳೆಗೆ ಕೊಟ್ಟ ಶಾಪದಿಂದಾಗಿ ಮನುಷ್ಯರಿಗೆ ಹುಟ್ಟಿದ ಮಕ್ಕಳು ಎದ್ದು ನಿಲ್ಲಲು 8-10 ತಿಂಗಳು ಬೇಕಾಗುತ್ತದೆ. ಪ್ರಾಣಿಗಳಿಗೆ ಹುಟ್ಟಿದ ಮರಿ-ಕರು ಗಳು, ಕೆಲವೇ ಸಮಯದಲ್ಲಿ ಎದ್ದು ನಿಂತು ಓಡಾಡುತ್ತವೆ. ‘ಹುಟ್ಟಿಸಿದ ದೇವರು ಹುಲ್ಲು ಮೇಯಿಸಿ ಯಾನೆ?’ ಎನ್ನುವಂತೆ, ತಾನು ಸೃಷ್ಟಿಸಿದ ಜೀವಗಳನ್ನು ಭಗವಂತ ತಾನೇ ರಕ್ಷಿಸುತ್ತಾನೆ...

Roopa Gururaj Column: ಉಪಕಾರಸ್ಮರಣೆ ಇಲ್ಲದ ಮನುಷ್ಯ

-

ಒಂದೊಳ್ಳೆ ಮಾತು

ಪೂರ್ವ ಯುಗದಲ್ಲಿ ಒಬ್ಬಾತ ತನ್ನ ಪತ್ನಿ-ಮಕ್ಕಳ ಜತೆ ನೆಲೆಸಿದ್ದನು. ಅವನ ಮನೆಯಲ್ಲಿ ಒಂದು ಹಸು ಇದ್ದು, ಅದು ಕೊಡುವ ಹಾಲಿನಿಂದ ಕುಟುಂಬಕ್ಕೆ ಸಾಕಾಗುವಷ್ಟು ಮೊಸರು, ತುಪ್ಪ, ಬೆಣ್ಣೆ ಒದಗುತ್ತಿತ್ತು. ಆದರೆ, ಹಸು ಹಾಲು ಕೊಡುವುದನ್ನು ನಿಲ್ಲಿಸಿದ ಕೂಡಲೇ ಮನೆಯವನು ಅದನ್ನು ಕಾಡಿಗೆ ಅಟ್ಟಿದನು.

ಕಾಡಿಗೆ ಬಂದ ಗೋವು ಹಸಿವೆ, ಬಾಯಾರಿಕೆಯಿಂದ ಬಳಲಿತು. ಅದು ಹಾಗೇ ಒಂದು ಶಿವನ ದೇವಸ್ಥಾನಕ್ಕೆ ಹೋಗಿ ‘ಈ ಸ್ವಾರ್ಥಿ ಮನುಷ್ಯ ನನ್ನಿಂದ ಉಪಯೋಗವಾಗುವವರೆಗೆ ಬಳಸಿ ಕೊಂಡು ಈಗ ನನ್ನನ್ನು ಕಾಡಿಗೆ ಅಟ್ಟಿzನೆ. ನನಗೆ ನೀನೇ ದಿಕ್ಕು’ ಎಂದು ಪ್ರಾರ್ಥಿಸಿತು. ಭಗವಂತನ ಅಗೋಚರ ಶಕ್ತಿಯ ಪ್ರೇರಣೆಯಿಂದ ದೂರದ ಕಾಡಿಗೆ ಹೋಗಿ ನೆಲೆ ಕಂಡು ಕೊಂಡಿತು.

ಇದನ್ನೂ ಓದಿ: Roopa Gururaj Column: ಸಮುದ್ರಕ್ಕೆ ಬಿದ್ದಾಗ ಬುದ್ಧಿ ಕಲಿತ ವ್ಯಾಪಾರಿ

ಒಂದು ದಿನ ಕಟ್ಟಿಗೆ ತರಲು ಒಬ್ಬ ಮಹಿಳೆ ಬಂದಳು. ಹಸುವನ್ನು ನೋಡಿದಳು, ಅದು ಗರ್ಭಿಣಿಯಾಗಿತ್ತು. ‘ಇದು ಕೆಲವೇ ದಿನಗಳಲ್ಲಿ ಕರುವನ್ನು ಹಾಕುತ್ತದೆ. ನಾನು ಹಸುವನ್ನು ಮನೆಗೆ ಕರೆದುಕೊಂಡು ಹೋದರೆ ಮನೆಗೆ ಬೇಕಾದಷ್ಟು ಹಾಲು ಸಿಗುತ್ತದೆ ಮತ್ತು ಮಾರಿ ಹಣ ಸಂಪಾದನೆ ಮಾಡಬಹುದು’ ಎಂದು ಆಕೆ ಯೋಚಿಸಿ, ಅದನ್ನು ಒಯ್ಯಲು ತನ್ನ ಗಂಡನನ್ನು ಕರೆ ತರಲು ಹೋದಳು. ಆದರೆ ಅವಳು ಗಂಡನೊಂದಿಗೆ ಬರುವ ಹೊತ್ತಿಗೆ ಆ ಹಸು ಅಲ್ಲಿ ಇರಲಿಲ್ಲ, ಬೇರೆ ಕಡೆಗೆ ಹೋಗಿತ್ತು.

ಹಸುವು ಸುರಕ್ಷಿತ ಜಾಗಕ್ಕೆ ತೆರಳಿ ಕರುವನ್ನು ಹಾಕಿತು. ಅದು ಕರು ಹಾಕಿದ ಸ್ವಲ್ಪ ಹೊತ್ತಿಗೆ, ಅದೇ ಮಹಿಳೆ ಕಟ್ಟಿಗೆಯನ್ನು ತರಲು ಕಾಡಿಗೆ ಬಂದಳು, ಹಸುವು ಕರು ಹಾಕಿರುವುದನ್ನು ನೋಡಿದಳು. ‘ಇದು ಈ ಹಿಂದೆ ನಾನು ನೋಡಿದ ಹಸು. ಈಗ ಕರು ಹಾಕಿದೆ; ಹಸು ಮತ್ತು ಕರುವನ್ನು ಮನೆಗೆ ಕರೆದೊಯ್ಯುವೆ’ ಎಂದು ಸಂತೋಷದಿಂದ ಅಂದುಕೊಂಡು ಗಂಡ ನನ್ನು ಕರೆತರಲು ಹೊರಟಳು.

ಹಾಗೆ ಹೊರಟಿದ್ದ ಮಹಿಳೆಗೆ ಹಸು, ‘ಅಕ್ಕ ನನಗೆ ಸ್ವಲ್ಪ ಸಹಾಯಮಾಡು. ಈಗ ತಾನೆ ಹುಟ್ಟಿದ ನನ್ನ ಕರು ಕೆಳಗೆ ಬಿದ್ದು ಮಣ್ಣುಮೆತ್ತಿ ಗಲೀಜಾಗಿದೆ, ಅದು ಕಾಲೂರಿ ನಡೆಯಲು ಎಂಟು ತಿಂಗಳು ಬೇಕು. ಕೆಳಗೆ ಬಿದ್ದ ನನ್ನ ಕರುವನ್ನು ಎತ್ತಿ ನನ್ನ ಬೆನ್ನ ಮೇಲೆ ಹಾಕು, ನಾನು ಸುರಕ್ಷಿತ ಜಾಗಕ್ಕೆ ಕರೆದುಕೊಂಡು ಹೋಗಿ ಅದಕ್ಕೆ ನಡೆಯಲು ಬರುವವರೆಗೆ ನೋಡಿಕೊಳ್ಳಬೇಕು’ ಎಂದಿತು. ಆದರೆ ಮಹಿಳೆ ಕರುವನ್ನು ನೋಡಿದಳು. ಆಗಷ್ಟೇ ಹುಟ್ಟಿದ ಅದರ ಮೈಯೆಲ್ಲಾ ಗಲೀಜಾಗಿತ್ತು. ಗೋವನ್ನು ಉದ್ದೇಶಿಸಿ ಆಕೆ- ‘ಛೀ ಛೀ ಇಷ್ಟು ಗಲೀಜಾದ ನಿನ್ನ ಮಗುವನ್ನು ನಾನು ಮುಟ್ಟಲಾರೆ ನನಗೆ ಅಸಹ್ಯ’ ಎಂದು ನಿರಾಕರಿಸಿದಳು. ಅಸಹಾಯಕ ಹಸುವಿಗೆ ಕೋಪ ಬಂದು, ‘ನೀವು ಮನುಷ್ಯರು ಉಪಯೋಗ ಸಿಗುವ ತನಕ ಬಳಸಿಕೊಳ್ಳುತ್ತೀರಿ, ನಿಮ್ಮ ಮಗು ಹುಟ್ಟಿದ ಕೂಡಲೇ ನಡೆಯುತ್ತದೆ, ಅದಕ್ಕೇ ನಿಮಗೆ ಇಷ್ಟು ಅಹಂಕಾರ.

ನನ್ನ ಕರು ಹುಟ್ಟಿದ ಎಂಟು ತಿಂಗಳಿಗೆ ತನ್ನ ಕಾಲ ಮೇಲೆ ನಿಲ್ಲುತ್ತದೆ. ಆದರೆ ಈಗ ನಾನು ಶಾಪ ಕೊಡುವೆ, ಇನ್ನು ಮುಂದೆ ನಿಮಗೆ ಹುಟ್ಟಿದ ಮಗು ಎದ್ದು ನಿಲ್ಲಲು ಎಂಟು ತಿಂಗಳು ಆಗುತ್ತದೆ, ಇಲ್ಲಿಯ ತನಕ ಹುಟ್ಟಿದ ನನ್ನ ಕರುಗಳು ನಿಲ್ಲಲು ಎಂಟು ತಿಂಗಳು ಬೇಕಾಗಿತ್ತು. ಇನ್ನು ಮುಂದೆ ಪ್ರಾಣಿ ಸಂಕುಲದಲ್ಲಿ ಮರಿ ಮತ್ತು ಕರುಗಳು ಹುಟ್ಟಿದ ಕೂಡಲೇ ಎದ್ದು ತಮ್ಮ ಕಾಲ ಮೇಲೆ ತಾವೇ ನಿಲ್ಲುತ್ತವೆ’ ಎಂದಿತು.

ಈ ರೀತಿ ಗೋವು ಮಹಿಳೆಗೆ ಕೊಟ್ಟ ಶಾಪದಿಂದಾಗಿ ಮನುಷ್ಯರಿಗೆ ಹುಟ್ಟಿದ ಮಕ್ಕಳು ಎದ್ದು ನಿಲ್ಲಲು 8-10 ತಿಂಗಳು ಬೇಕಾಗುತ್ತದೆ. ಪ್ರಾಣಿಗಳಿಗೆ ಹುಟ್ಟಿದ ಮರಿ-ಕರು ಗಳು, ಕೆಲವೇ ಸಮಯದಲ್ಲಿ ಎದ್ದು ನಿಂತು ಓಡಾಡುತ್ತವೆ. ‘ಹುಟ್ಟಿಸಿದ ದೇವರು ಹುಲ್ಲು ಮೇಯಿಸಿ ಯಾನೆ?’ ಎನ್ನುವಂತೆ, ತಾನು ಸೃಷ್ಟಿಸಿದ ಜೀವಗಳನ್ನು ಭಗವಂತ ತಾನೇ ರಕ್ಷಿಸುತ್ತಾನೆ...