Raghava Sharma Nidle Column: ಆಲಮಟ್ಟಿ ಎತ್ತರ: ಇಷ್ಟು ವರ್ಷ ಕಾದಿದ್ದೇ ಮುಳುವಾಯ್ತೇ ?
ಕೃಷ್ಣಾ ನ್ಯಾಯಾಧೀಕರಣದ 2013ರ ಸ್ಪಷ್ಟೀಕರಣ ತೀರ್ಪುಗಳನ್ನು ಪ್ರಶ್ನಿಸಿ ಮೂರೂ ರಾಜ್ಯಗಳ ಸಿವಿಲ್ ಅಪೀಲ್ಗಳು ಸುಪ್ರೀಂಕೋರ್ಟ್ ಕಡತಗಳಲ್ಲಿ ಈಗಲೂ ಧೂಳು ತಿನ್ನುತ್ತಿವೆ. ಸಿವಿಲ್ ಅಪೀಲ್ಗಳ ಬಗ್ಗೆ ಈ ಹಿಂದೆ ಹಲವು ಸುದೀರ್ಘ ವಿಚಾರಣೆ ಗಳು ನಡೆದಿದ್ದರೂ, ಸುಪ್ರೀಂ ಕೋರ್ಟ್ನ ಅಂತಿಮ ತೀರ್ಪು ಇನ್ನೂ ಹೊರ ಬೀಳದಿರುವುದು ರಾಜ್ಯದ ಕೃಷ್ಣಾ ಕಣಿವೆ ಭಾಗದ ಜನರ ಗೋಳನ್ನು ಹೆಚ್ಚಿಸುತ್ತಲೇ ಇದೆ.


ಕ್ರಿಯಾಲೋಪ
ರಾಘವ ಶರ್ಮ ನಿಡ್ಲೆ
ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟಕ್ಕೆ ಒಳಪಟ್ಟ ಕೃಷ್ಣಾ ನದಿ ನೀರು ಹಂಚಿಕೆ ವ್ಯಾಜ್ಯ ದ ಕುರಿತು ಕೃಷ್ಣಾ ನ್ಯಾಯಾಧೀಕರಣ 2010ರಲ್ಲಿ ಐತೀರ್ಪು ಪ್ರಕಟಿಸಿ 15 ವರ್ಷಗಳೇ ಕಳೆದಿವೆ. ದುರಂತ ಎಂದರೆ, ಐತೀರ್ಪಿನಲ್ಲಿ ಅನುಮೋದಿಸಿದಂತೆ, ಆಲಮಟ್ಟಿ ಜಲಾಶಯದ ಎತ್ತರವನ್ನು 519 ಮೀಟರ್ನಿಂದ 524 ಮೀ.ಗೆ ಏರಿಸಲು ನಮಗೆ ಇಂದಿಗೂ ಸಾಧ್ಯವಾಗಿಲ್ಲ. ನ್ಯಾಯಾಧೀಕರಣದ ಐ ತೀರ್ಪಿನ ಬಗ್ಗೆ ಸ್ಪಷ್ಟೀಕರಣ ಕೋರಿ ಮೂರೂ ರಾಜ್ಯಗಳು ಅದೇ ನ್ಯಾಯಾ ಧೀಕರಣಕ್ಕೆ ಸಲ್ಲಿಸಿದ್ದ ಅರ್ಜಿಗಳೂ ಇತ್ಯರ್ಥಗೊಂಡಿವೆ.
ಹೀಗಿದ್ದರೂ, ಆಲಮಟ್ಟಿ ಜಲಾಶಯದ ಎತ್ತರ ಮಾತ್ರ ಏರಲೇ ಇಲ್ಲ. ಕೆಲ ದಿನಗಳ ಹಿಂದೆ ದೇವೇಂದ್ರ ಫಡ್ನವಿಸ್ ನೇತೃತ್ವದ ಮಹಾರಾಷ್ಟ ಸರಕಾರ ಆಲಮಟ್ಟಿ ಜಲಾಶಯದ ಎತ್ತರವನ್ನು ಏರಿಸುವು ದಕ್ಕೆ ತಗಾದೆ ತೆಗೆದು, ರಾಜ್ಯದ ಸಾಂಗ್ಲಿ ಮತ್ತು ಕೊಲ್ಹಾಪುರದಲ್ಲಿ ಉಂಟಾಗುವ ಪ್ರವಾಹಕ್ಕೆ ಈ ಜಲಾಶಯವೇ ಕಾರಣ ಎಂದು ದೂರಿದ್ದಾರೆ.
ಅಂದರೆ, ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀ.ಗೆ ಏರಿಸಲು ಮಹಾರಾಷ್ಟದ ವಿರೋಧ ವಿದೆ ಎಂಬುದನ್ನು ಅಧಿಕೃತಗೊಳಿಸಿದ್ದಾರೆ. ಕೃಷ್ಣಾ ನ್ಯಾಯಾಧೀಕರಣದ 2013ರ ಸ್ಪಷ್ಟೀಕರಣ ತೀರ್ಪುಗಳನ್ನು ಪ್ರಶ್ನಿಸಿ ಮೂರೂ ರಾಜ್ಯಗಳ ಸಿವಿಲ್ ಅಪೀಲ್ಗಳು ಸುಪ್ರೀಂಕೋರ್ಟ್ ಕಡತಗಳಲ್ಲಿ ಈಗಲೂ ಧೂಳು ತಿನ್ನುತ್ತಿವೆ. ಸಿವಿಲ್ ಅಪೀಲ್ಗಳ ಬಗ್ಗೆ ಈ ಹಿಂದೆ ಹಲವು ಸುದೀರ್ಘ ವಿಚಾರಣೆ ಗಳು ನಡೆದಿದ್ದರೂ, ಸುಪ್ರೀಂ ಕೋರ್ಟ್ನ ಅಂತಿಮ ತೀರ್ಪು ಇನ್ನೂ ಹೊರ ಬೀಳದಿರುವುದು ರಾಜ್ಯದ ಕೃಷ್ಣಾ ಕಣಿವೆ ಭಾಗದ ಜನರ ಗೋಳನ್ನು ಹೆಚ್ಚಿಸುತ್ತಲೇ ಇದೆ.
ಇದನ್ನೂ ಓದಿ: Roopa Gururaj Column: ಅತಿಯಾಸೆ ಯಾರಿಗೂ ಒಳ್ಳೆಯದಲ್ಲ
ಸುಪ್ರೀಂ ಕೋರ್ಟ್ನ ನಿವೃತ್ತ ಸಿಜೆಐ ಡಿ.ವೈ. ಚಂದ್ರಚೂಡ್ ಅವರು ಸಿಜೆಐ ಆಗುವ ಮುನ್ನ ನ್ಯಾ.ಎ.ಎಸ್. ಬೋಪಣ್ಣ ಜತೆಗಿದ್ದ ನ್ಯಾಯಪೀಠದಲ್ಲಿ ಅಧಿಸೂಚನೆ ಪ್ರಕಟಿಸಬೇಕೆಂಬ ಕರ್ನಾಟಕ, ಮಹಾರಾಷ್ಟ್ರದ ಬೇಡಿಕೆ ಕುರಿತ ಅರ್ಜಿಯ ವಿಚಾರಣೆ ನಡೆಸಿದ್ದರು. ನ್ಯಾ. ಚಂದ್ರಚೂಡ್ ಮಹಾ ರಾಷ್ಟ್ರದವರು ಮತ್ತು ನ್ಯಾ.ಬೋಪಣ್ಣ ಕರ್ನಾಟಕದವರಾಗಿದ್ದರಿಂದ ಮೂರ್ನಾಲ್ಕು ವಿಚಾರಣೆಗಳ ಬಳಿಕ ಎರಡೂ ನ್ಯಾಯಮೂರ್ತಿಗಳಿಗೆ ಅನಾಮಧೇಯ ಪತ್ರಗಳು, ಇ-ಮೇಲ್ಗಳು ಬಂದಿದ್ದವು.
ಅವುಗಳಲ್ಲಿ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವುದಕ್ಕೆ ಬಹಳ ಕೆಟ್ಟ ರೀತಿಯಲ್ಲಿ ಟೀಕೆಗಳನ್ನು ಮಾಡಲಾಗಿತ್ತು. ಇದರಿಂದ ಬೇಸರಗೊಂಡಿದ್ದ ನ್ಯಾಯಮೂರ್ತಿಗಳು, ತಾವು ವಿಚಾರಣೆ ನಡೆಸುವು ದಿಲ್ಲ ಎಂದು ಹಿಂದೆ ಸರಿದಿದ್ದರು. ನಂತರದಲ್ಲಿ, ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ಬಾಲ ಸುಬ್ರಹ್ಮಣ್ಯಂ ವಿಚಾರಣೆ ನಡೆಸಲು ಮುಂದಾಗಿ, ಮೂರ್ನಾಲ್ಕು ಸುದೀರ್ಘ ವಿಚಾರಣೆಗಳು ನಡೆದವು. ಆದರೆ, ನ್ಯಾ. ಬಾಲಸುಬ್ರಹ್ಮಣ್ಯಂ ಸೇವೆಯಿಂದ ನಿವೃತ್ತರಾದರು.
ಹೀಗಾಗಿ, ಮತ್ತೆ ಕೃಷ್ಣಾ ಜಲವ್ಯಾಜ್ಯ ಕೋರ್ಟ್ ಕಡತಗಳೊಳಗೆ ಕೂತು ಬಿಟ್ಟಿತು. 2023ರ ಬಳಿಕ ಕೃಷ್ಣಾ ಕೇಸಿನ ವಿಚಾರಣೆ ನಡೆದೇ ಇಲ್ಲ. ಕೃಷ್ಣಾ ಕಣಿವೆ ಜನರು ಕೋರ್ಟುಗಳತ್ತ ಆಸೆಗಣ್ಣಿನಿಂದ ನೋಡುತ್ತ ಕಾದು ಕುಳಿತದ್ದು ಬಿಟ್ಟರೆ ಇದಕ್ಕೊಂದು ತಾರ್ಕಿಕ ಅಂತ್ಯ ಸಿಗಲಿಲ್ಲ.
ಜಲವ್ಯಾಜ್ಯಗಳನ್ನು ಕಣಿವೆ ರಾಜ್ಯಗಳು ಮಾತುಕತೆ ಮೂಲಕ ಇತ್ಯರ್ಥಪಡಿಸಬೇಕು ಎನ್ನುವುದು ಹಾಲಿ ಕೇಂದ್ರ ಸರಕಾರದ ಆಶಯವಾಗಿದ್ದರೂ, ಅವು ಮಾತುಕತೆ ಅಥವಾ ಸಂಧಾನದ ಮೂಲಕ ಬಗೆಹರಿಯುವುದಿಲ್ಲ ಎನ್ನುವುದು ಈ ಹಿಂದೆ ಹಲವು ಬಾರಿ ಸಾಬೀತಾಗಿದೆ. ಹೀಗಿರುವಾಗ, ಜನರು ಕೋರ್ಟುಗಳಿಂದಲೇ ನ್ಯಾಯವನ್ನು ನಿರೀಕ್ಷಿಸುತ್ತಾರೆ.
ಸರಕಾರಗಳ ಮಧ್ಯೆ ಮಾತುಕತೆ ಎನ್ನುವುದು ಬರೀ ಪ್ರಕ್ರಿಯೆಯ ಭಾಗವಾಗಿ ಉಳಿದುಬಿಟ್ಟಿದೆ. ಕೃಷ್ಣಾ ಐತೀರ್ಪಿನ ಅಽಸೂಚನೆ ಪ್ರಕಟಿಸಬೇಕು ಎಂದು ಕರ್ನಾಟಕ ಸರಕಾರ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದರೂ, ಆಂಧ್ರ, ತೆಲಂಗಾಣದ ವಿರೋಧದಿಂದಾಗಿ ಕೇಂದ್ರವು ಅಧಿಸೂಚನೆಗೆ ಮನಸ್ಸು ಮಾಡಿಲ್ಲ.
ಅಧಿಸೂಚನೆ ಪ್ರಕಟಿಸಿ ಎಂದು ಕೇಂದ್ರಕ್ಕೆ ಕರ್ನಾಟಕದ ಸಿಎಂಗಳು, ಸಚಿವರು ಹತ್ತಾರು ಬಾರಿ ಮನವಿ ನೀಡಿ, ಕೇಂದ್ರ ಸಚಿವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರಾದರೂ ಫಲಿತಾಂಶ ಮಾತ್ರ ಶೂನ್ಯ. ಅಧಿಸೂಚನೆ ಪ್ರಕಟವಾದಲ್ಲಿ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ 7 ಜಿಲ್ಲೆ ಗಳ ಭಾಗ್ಯದ ಬಾಗಿಲು ತೆರೆದಂತಾಗಲಿದೆ.
2023ರಲ್ಲಿ ಈ ಬಗ್ಗೆ ಸುಪ್ರೀಂಕೋರ್ಟ್ಗೆ ವಿವರಿಸಿದ್ದ ರಾಜ್ಯದ ಹಿರಿಯ ವಕೀಲರಾದ ಶ್ಯಾಮ್ ದಿವಾನ್ ಮತ್ತು ಮೋಹನ್ ಕಾತರಕಿ, ದೇಶದ ಹಲವು ಭಾಗಗಳು ಈಗ ಬರಗಾಲಕ್ಕೆ ತುತ್ತಾಗಿವೆ. ಕರ್ನಾಟಕ ಕೂಡ ಇದರಿಂದ ಹೊರತಾಗಿಲ್ಲ. ಕೃಷ್ಣಾ ನದಿ ವ್ಯಾಪ್ತಿಯ ಪ್ರದೇಶಗಳು ಬರಪೀಡಿತ ಪ್ರದೇಶಗಳಾಗಿದ್ದು, ಸೂಕ್ತ ಆದ್ಯತೆ ನೀಡಬೇಕು.
ಕೃಷ್ಣಾ ನದಿ ನೀರು ಬಳಕೆಗೆ ಸಂಬಂಧಿಸಿ ಮೂಲಸೌಕರ್ಯ ಪೂರ್ಣಗೊಂಡಿದೆ ಮತ್ತು ಸಿದ್ಧವಾಗಿದೆ. ಇದರಿಂದ ನ್ಯಾಯಾಧೀಕರಣದ ತೀರ್ಪಿನ ಅಡಿಯಲ್ಲಿ ಹಂಚಿಕೆಯಾದ ನೀರನ್ನು ಬಿಡುಗಡೆ ಮಾಡಬಹುದು. ಇವೆಲ್ಲವೂ ತೆರಿಗೆದಾರರ ದೊಡ್ಡ ಮೊತ್ತದ ಹಣವನ್ನು ಒಳಗೊಂಡಿದೆ. ವಿನಾ ಕಾರಣ ಕೃಷ್ಣಾ ನದಿ ನೀರನ್ನು ಬಂಗಾಳ ಕೊಲ್ಲಿಗೆ ಹರಿಯಬಿಟ್ಟು ಏಕೆ ವ್ಯರ್ಥಗೊಳಿಸಬೇಕು ಎಂದು ಗಮನಸೆಳೆದಿದ್ದರು. ಆದರೆ, ಈ ವಿಚಾರಗಳ ಗಂಭೀರತೆ ನ್ಯಾಯಾಲಯಗಳಿಗೆ ಇನ್ನೂ ಅರ್ಥವಾ ದಂತಿಲ್ಲ.
ಜಲಾಶಯದ ಮಟ್ಟ ಏರಿಸಬೇಕು ಜಲವ್ಯಾಜ್ಯ ವಿಚಾರಗಳಲ್ಲಿ ತಮಿಳುನಾಡು, ಗೋವಾದಂಥ ರಾಜ್ಯಗಳು ಪ್ರದರ್ಶಿಸುವ ಆತ್ಮವಿಶ್ವಾಸ, ದಿಟ್ಟತನ ಮತ್ತು ಹಠಮಾರಿ ಧೋರಣೆಯನ್ನು ಕರ್ನಾಟಕದ ರಾಜಕಾರಣಿಗಳು (ಬಿಜೆಪಿ ಮತ್ತು ಕಾಂಗ್ರೆಸ್) ಪ್ರದರ್ಶಿಸುವುದೇ ಇಲ್ಲ. ದಿಲ್ಲಿ ದೊರೆಗಳ ಮುಂದೆ ಅವರದ್ದು ಮಹಾಮೌನ. ಆಲಮಟ್ಟಿ ಜಲಾಶಯದ ಎತ್ತರ ಏರಿಸುವ ಕಾಮಗಾರಿ ಆರಂಭಿಸುವ ದೃಢ ನಿರ್ಧಾರವನ್ನು ಕೈಗೊಳ್ಳುವ ಅವಕಾಶಗಳನ್ನು ಕಾಂಗ್ರೆಸ್, ಬಿಜೆಪಿ ಸರಕಾರಗಳು ಕೈಚೆಲ್ಲಿ ಕುಳಿತಿವೆ. ಯಾವಾಗ ಆ ಧೈರ್ಯ ಬರುತ್ತದೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.
ನ್ಯಾಯಾಧೀಕರಣದ ಐತೀರ್ಪನ್ನೇ ಆಧಾರವಾಗಿಟ್ಟುಕೊಂಡು, ಜಲಾಶಯದ ಎತ್ತರ ಏರಿಸಲು ಈಗಲಾದರೂ ಮುಂದಾಗಬೇಕು ಎಂದು ರಾಜ್ಯ ಕಾನೂನು ತಂಡದ ವಕೀಲರು ಅನೇಕ ಬಾರಿ ಹೇಳಿದ್ದರು. 2018ರಲ್ಲಿ ಅಂದಿನ ರಾಜ್ಯ ಕಾನೂನು ತಂಡದ ಮುಖ್ಯಸ್ಥರಾಗಿದ್ದ ಫಾಲಿ ನಾರಿಮನ್ ಅವರು, ಎತ್ತರ ಏರಿಸುವ ಕಾಮಗಾರಿ ಶುರು ಮಾಡುವಂತೆ ಸಿಎಂ ಮತ್ತು ಜಲ ಸಂಪನ್ಮೂಲ ಸಚಿವರಿಗೆ ಮೌಖಿಕ ಸಲಹೆ ನೀಡಿದ್ದರು. 2022ರಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹಿರಿಯ ವಕೀಲ ಮೋಹನ್ ಕಾತರಕಿ ಅವರೂ ಇದೇ ಸಲಹೆ ಕೊಟ್ಟಿದ್ದರು.
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಜಲ ಸಚಿವ ಡಿ.ಕೆ. ಶಿವಕುಮಾರ್ ಅವರ ಜತೆ ರಾಜ್ಯದ ಕಾನೂನು ತಂಡ ಸಭೆ ನಡೆಸಿzಗಲೂ, “ಆಲಮಟ್ಟಿ ವಿಷಯದಲ್ಲಿ ನಾವು ಸುಪ್ರೀಂಕೋರ್ಟ್ ಅಥವಾ ಕೇಂದ್ರ ಸರಕಾರದ ಅನುಮೋದನೆಗಾಗಿ ಏಕೆ ಕಾಯುತ್ತಿದ್ದೇವೆ? ಜಲಾಶಯದ ಕ್ರೆ ಗೇಟ್ಗಳಿಗೆ ಸ್ಕಿನ್ ಪ್ಲೇಟ್ಗಳನ್ನು ಅಳವಡಿಸೋಣ.
ಆದರೆ, ಸದ್ಯದ ಮಟ್ಟಿಗೆ ನೀರು ಸಂಗ್ರಹದ ಮಿತಿಯನ್ನು 519 ಮೀಟರ್ಗೆ ಇರಿಸಿ, ಕೋರ್ಟು ಹೇಳಿರುವ ಪ್ರಮಾಣದಷ್ಟೇ ನೀರನ್ನು ಬಳಸಿಕೊಳ್ಳೋಣ" ಎಂದು ಮೋಹನ್ ಕಾತರಕಿ ತಮ್ಮ ನಿಲುವನ್ನು ಖಚಿತಪಡಿಸಿದ್ದರು. ಆಲಮಟ್ಟಿ ವಿಷಯದಲ್ಲಿ ದೇವೇಂದ್ರ ಫಡ್ನವೀಸ್ರದ್ದು ಮೊಸಳೆ ಕಣ್ಣೀರು. ಸಾಂಗ್ಲಿ ಮತ್ತು ಕೊಲ್ಹಾಪುರ ಭಾಗದ ಜನರ ಒತ್ತಡಕ್ಕೆ ಮಣಿದು, ಪ್ರವಾಹಕ್ಕೆ ಆಲಮಟ್ಟಿ ಜಲಾಶಯ ಕಾರಣ ಎಂದು ಬೊಬ್ಬಿರಿದಿದ್ದಾರೆ.
ಸುಪ್ರೀಂಕೋರ್ಟ್ ವಿಚಾರಣೆ ಸಂದರ್ಭದಲ್ಲೂ ಇದನ್ನು ಪ್ರಸ್ತಾಪಿಸದಿದ್ದ ಮಹಾರಾಷ್ಟ ಸರಕಾರ, ಈಗ ಆಲಮಟ್ಟಿ ಮೇಲೆ ಕೆಂಗಣ್ಣು ಬೀರಿರುವುದರ ಹಿಂದೆ ಓಲೈಕೆ ರಾಜಕಾರಣದ ಕರಿನೆರಳಿರುವುದು ಸ್ಪಷ್ಟ. 2020ರಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ತಜ್ಞ ಮತ್ತು ಮಹಾರಾಷ್ಟ್ರದ ನಿವೃತ್ತ ಮುಖ್ಯ ಕಾರ್ಯದರ್ಶಿ ನಂದಕುಮಾರ್ ವಡ್ನೆರೆ ನೇತೃತ್ವದ ಏಳು ಸದಸ್ಯರ ಸಮಿತಿ ಎರಡೂ ರಾಜ್ಯಗಳಲ್ಲಿನ ಪ್ರವಾಹ ಮಾದರಿಗಳು ಮತ್ತು ನದಿ ಜಲಾನಯನ ಪ್ರದೇಶವನ್ನು ಅಧ್ಯಯನ ಮಾಡಿತ್ತು.
ಸಿಎಂ ಠಾಕ್ರೆ ಅವರಿಗೆ ಸಲ್ಲಿಸಿದ್ದ ವರದಿಯಲ್ಲಿ, “ಸಾಂಗ್ಲಿ ಮತ್ತು ಕೊಲ್ಹಾಪುರದಲ್ಲಿ ಪದೇ ಪದೆ ಸಂಭವಿಸುವ ಪ್ರವಾಹಗಳು ಆಲಮಟ್ಟಿ ಮತ್ತು ಹಿಪ್ಪರಗಿ ಜಲಾಶಯಗಳ ನೀರಿನ ಸಂಗ್ರಹಣೆಗೆ ಸಂಬಂಽಸಿಲ್ಲ" ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ನದಿ ಜಲಾನಯನ ಪ್ರದೇಶದಲ್ಲಿ ಅತಿಕ್ರಮಣ, ಸಾಂಗ್ಲಿ ಮತ್ತು ಕೊಲ್ಹಾಪುರದಲ್ಲಿ ಕಟ್ಟಡಗಳ ಅಕ್ರಮ, ಅವೈಜ್ಞಾನಿಕ ನಿರ್ಮಾಣವೇ ಇದಕ್ಕೆ ಕಾರಣ ಎಂದು ದೂಷಿಸಿರುವುದು ಇಲ್ಲಿ ಉಲ್ಲೇಖಾರ್ಹ.
ಹೀಗಿದ್ದಾಗ, ಏಕಾಏಕಿಯಾಗಿ ಮಹಾರಾಷ್ಟ ಸಿಎಂ ದೇವೇಂದ್ರ ಫಡ್ನವಿಸ್ಗೆ ಇದಕ್ಕೆ ಆಲಮಟ್ಟಿಯೇ ಕಾರಣ ಎಂದು ಅನ್ನಿಸಿರುವುದೇಕೆ? ಆಲಮಟ್ಟಿ ಎತ್ತರ ಹೆಚ್ಚಳವಾದಲ್ಲಿ ಕೆಲ ಹಳ್ಳಿಗಳ ಜನರು ಸ್ಥಳಾಂತರಗೊಳ್ಳಬೇಕಾಗುತ್ತದೆ. ಭೂಸ್ವಾದೀನ, ಪುನರ್ವಸತಿ ಹಾಗೂ ಇತರೆ ಸಂಬಂಧಿ ಕೆಲಸ ಗಳನ್ನು ಪೂರ್ಣಗೊಳಿಸಲು 1 ಲಕ್ಷ ಕೋಟಿ ರು. ಹಣದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಗ್ಯಾರಂಟಿ ಯೋಜನೆಗಳ ಮಧ್ಯೆ, ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಲು ಕಾಂಗ್ರೆಸ್ ಸರಕಾರಕ್ಕೆ ‘ಆರ್ಥಿಕ ಶಕ್ತಿ’ ಇದೆಯೋ ಇಲ್ಲವೋ ಗೊತ್ತಿಲ್ಲ. ಹಾಗಂತ, ಮಹಾರಾಷ್ಟದ ವಿರೋಧ ಇದೆ ಎಂದು ಮತ್ತೆ ‘ಮೌನಿ’ಯಂತೆ ಕೂತರೆ ನಷ್ಟ ನಮಗೇ ವಿನಾ, ಆ ರಾಜ್ಯಗಳಿಗಲ್ಲ.
ಜೂನ್ ೧೮ರಂದು ಕಣಿವೆ ರಾಜ್ಯಗಳ ಜತೆ ಕೇಂದ್ರ ಸರಕಾರ ಸಭೆ ನಡೆಸಲಿದೆ ಎಂಬ ಮಾತುಗಳಿದ್ದವು. ಆದರೆ ಯಾವುದೇ ಮಾತುಕತೆ ನಡೆದಿಲ್ಲ. ಹಿಂದಿನ ಉದಾಹರಣೆಗಳನ್ನು ನೋಡಿದರೆ ರಾಜ್ಯಗಳ ಜತೆಗಿನ ಸಭೆಯಲ್ಲಿ ಒಮ್ಮತದ ನಿರ್ಧಾರ ಹೊರಬೀಳುವ ಬಗ್ಗೆ ಅನುಮಾನವಿದೆ. ಹೀಗಿದ್ದರೂ, ಸುಪ್ರೀಂಕೋರ್ಟ್ ತೀರ್ಪಿಗೆ ಮುನ್ನ ಅಧಿಸೂಚನೆ ಪ್ರಕಟವಾಗಬೇಕು ಎಂಬ ಕರ್ನಾಟಕದ ನಿಲುವಿಗೆ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಒಪ್ಪಿದರೆ ಅದಕ್ಕಿಂತ ದೊಡ್ಡ ಅಚ್ಚರಿ ಬೇರೊಂದಿರದು.
(ಲೇಖಕರು ಹಿರಿಯ ಪತ್ರಕರ್ತರು)
ಕಣ್ಣೀರಿಗೂ ಬೆಲೆ ಇಲ್ಲ
2010ರಲ್ಲಿ ನ್ಯಾ.ಬೃಜೇಶ್ ಕುಮಾರ್ ನೇತೃತ್ವದ ನ್ಯಾಯಾಧೀಕರಣ ಆಲಮಟ್ಟಿ ಜಲಾಶಯದ ಎತ್ತರದ ಹೆಚ್ಚಳಕ್ಕೆ ಅನುಮತಿ ನೀಡಿದ್ದಲ್ಲದೆ, ಕರ್ನಾಟಕಕ್ಕೆ 911 ಟಿಎಂಸಿ ನೀರಿನ ಹಂಚಿಕೆ ನಿಗದಿ ಪಡಿಸಿದ್ದಾಗ ನ್ಯಾಯಾಧೀಕರಣದ ಕೊಠಡಿಯಿಂದ ಹೊರ ಬಂದಿದ್ದ ಹಿರಿಯ ವಕೀಲ ಮೋಹನ್ ಕಾತರಕಿ ಅವರ ಕಣ್ಣಾಲಿಗಳು ಒದ್ದೆಯಾಗಿ, ಬಿಕ್ಕಿ ಅತ್ತಿದ್ದರು. ದಶಕಗಳ ಹೋರಾಟಕ್ಕೆ ನ್ಯಾಯ ಸಿಕ್ಕಿತು ಎಂದು ಕೃಷ್ಣಾ ಕಣಿವೆ ರೈತರು, ಜನರೂ ಸಂಭ್ರಮಿಸಿದ್ದರು. ಇದಾಗಿ, 15 ವರ್ಷ ಗಳಾದರೂ, ಐತೀರ್ಪನ್ನು ನೈಜರೂಪದಲ್ಲಿ ಅನುಭವಿಸುವ ಭಾಗ್ಯ ನಮ್ಮದಾಗಿಲ್ಲ!