ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಆತ ಬದುಕುಳಿದಿದ್ದೇ ಪವಾಡ

ಸೆಪ್ಟೆಂಬರ್ 21, 2025ರ ಭಾನುವಾರ ಬೆಳಗ್ಗೆ. ಕಾಮ್ ಏರ್‌ನ ವಿಮಾನ (RQ-4401) ಕಾಬೂಲ್‌ ನಿಂದ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಒಂದು ಆಶ್ಚರ್ಯಕರ ಘಟನೆ ಬೆಳಕಿಗೆ ಬಂದಿತು. ಹದಿಮೂರು ವರ್ಷದ ಆಫ್ಘನ್ ಬಾಲಕ ನೊಬ್ಬ ವಿಮಾನದ ಲ್ಯಾಂಡಿಂಗ್ ಗೇರ್‌ನ ಒಳಗಡೆ ನುಗ್ಗಿ, ಟಿಕೆಟ್ ಇಲ್ಲದೇ ಕಾಬೂಲ್‌ನಿಂದ ದೆಹಲಿಗೆ ಪಯಣಿಸಿದ್ದು ಬೆಳಕಿಗೆ ಬಂದಿತು.

ಆತ ಬದುಕುಳಿದಿದ್ದೇ ಪವಾಡ

-

ಸಂಪಾದಕರ ಸದ್ಯಶೋಧನೆ

ಸೆಪ್ಟೆಂಬರ್ 21, 2025ರ ಭಾನುವಾರ ಬೆಳಗ್ಗೆ. ಕಾಮ್ ಏರ್‌ನ ವಿಮಾನ (RQ-4401) ಕಾಬೂಲ್‌ನಿಂದ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಒಂದು ಆಶ್ಚರ್ಯಕರ ಘಟನೆ ಬೆಳಕಿಗೆ ಬಂದಿತು. ಹದಿಮೂರು ವರ್ಷದ ಆಫ್ಘನ್ ಬಾಲಕನೊಬ್ಬ ವಿಮಾನದ ಲ್ಯಾಂಡಿಂಗ್ ಗೇರ್‌ನ ಒಳಗಡೆ ನುಗ್ಗಿ, ಟಿಕೆಟ್ ಇಲ್ಲದೇ ಕಾಬೂಲ್‌ನಿಂದ ದೆಹಲಿಗೆ ಪಯಣಿಸಿದ್ದು ಬೆಳಕಿಗೆ ಬಂದಿತು.

ಕಾಮ್ ಏರ್‌ನ RQ-4401 ವಿಮಾನವು ಕಾಬೂಲ್‌ನ ಹಮೀದ್ ಕರ್ಜಾಯ್ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:46ಕ್ಕೆ ಹೊರಟು, ಸುಮಾರು 94 ನಿಮಿಷ ಗಳ ಪ್ರಯಾಣದ ನಂತರ ದೆಹಲಿಯಲ್ಲಿ ಬೆಳಗ್ಗೆ 10:20ರ ಸುಮಾರಿಗೆ ಲ್ಯಾಂಡ್ ಆಯಿತು. ಈ ಬಾಲಕ ಅಫ್ಘಾನಿಸ್ತಾನದ ಕುಂದುಜ್ ನಗರದವನಾಗಿದ್ದು, ಕಾಬೂಲ್ ವಿಮಾನ ನಿಲ್ದಾಣ ದಲ್ಲಿ ಭದ್ರತೆಯನ್ನು ದಾಟಿ, ಪ್ರಯಾಣಿಕರ ಗುಂಪಿನೊಂದಿಗೆ ಒಡನಾಡಿ ವಿಮಾನದ ಹಿಂಭಾಗದ ಲ್ಯಾಂಡಿಂಗ್ ಗೇರ್‌ನ ಒಳಗೆ ನುಗ್ಗಿದ್ದ.

ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಬಾಲಕ ಬಿಟ್ಟುಹೋದ ಕೆಂಪು ಬಣ್ಣದ ಚಿಕ್ಕ ಆಡಿಯೋ ಸ್ಪೀಕರ್ ಒಂದನ್ನು ಭದ್ರತಾ ತಪಾಸಣೆ ವೇಳೆ ಪತ್ತೆ ಹಚ್ಚಲಾಯಿತು. ವಿಮಾನ ಲ್ಯಾಂಡ್ ಆದ ಕೂಡಲೇ, ಏರ್‌ಲೈನ್‌ನ ಭದ್ರತಾ ಸಿಬ್ಬಂದಿಗಳು ಬಾಲಕನು ವಿಮಾನದ ಬಳಿ ಓಡಾಡುತ್ತಿರುವುದನ್ನು ಗಮನಿಸಿ, ಕೂಡಲೇ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಒಪ್ಪಿಸಿ ದರು.

ಬಾಲಕನನ್ನು ವಿಚಾರಣೆ ಒಳಪಡಿಸಲಾಯಿತು. ವಿಚಾರಣೆಯ ವೇಳೆ, ಬಾಲಕನು ತಾನು ಇರಾನ್‌ಗೆ ತೆರಳಲು ಇಚ್ಛಿಸಿದ್ದಾಗಿ, ಆದರೆ ತಪ್ಪಾಗಿ ದೆಹಲಿಗೆ ಹೋಗುವ ವಿಮಾನವನ್ನು ಏರಿದ್ದಾಗಿ ತಿಳಿಸಿದ. ಕೆಲವು ಮೂಲಗಳ ಪ್ರಕಾರ, ಅವನು ಈ ಸಾಹಸವನ್ನು ‘ಕುತೂಹಲ’ ಕ್ಕಾಗಿ ಮಾಡಿದ್ದಾಗಿ ಹೇಳಿದ. ಆದರೆ ಇದರ ಹಿಂದಿನ ನಿಜವಾದ ಉದ್ದೇಶವು ಸ್ಪಷ್ಟವಾಗಿಲ್ಲ.

ವಿಚಾರಣೆ ಮತ್ತು ಅಗತ್ಯ ಕಾನೂನು ಕ್ರಮಗಳ ನಂತರ, ಬಾಲಕನನ್ನು ಅದೇ ದಿನ ಮಧ್ಯಾಹ್ನ 12:30 ರಿಂದ 4:00 ಗಂಟೆಯ ಸುಮಾರಿಗೆ ಕಾಮ್ ಏರ್‌ನ, ಮರಳಿ ಕಾಬೂಲ್‌ಗೆ ಹೋಗುವ ವಿಮಾನ (RQ-4402)ದಲ್ಲಿ ಅಫ್ಘಾನಿಸ್ತಾನಕ್ಕೆ ವಾಪಸ್ ಕಳುಹಿಸಲಾಯಿತು.

ಲ್ಯಾಂಡಿಂಗ್ ಗೇರ್‌ನ ಒಳಗೆ ಪ್ರಯಾಣಿಸುವುದು ಅತ್ಯಂತ ಅಪಾಯಕಾರಿ. ವಿಮಾನವು 30000 ದಿಂದ 40000 ಅಡಿ ಎತ್ತರದಲ್ಲಿ ಹಾರುವಾಗ, ಈ ವಿಭಾಗದಲ್ಲಿ ಆಮ್ಲಜನಕದ ಕೊರತೆ, ಮೈನಸ್ 50 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ಮತ್ತು ಲ್ಯಾಂಡಿಂಗ್ ಗೇರ್‌ನ ಚಲನೆಯಿಂದ ಅಪಾಯವಾಗುವ ಸಾಧ್ಯತೆಯಿದೆ. ಈ ರೀತಿಯ ಪ್ರಯಾಣದಲ್ಲಿ ಬದುಕುಳಿಯುವ ಸಾಧ್ಯತೆ ಕೇವಲ ಶೇ.20ರಿಂದ ಶೇ.25 ಮಾತ್ರ.

ಆಮ್ಲಜನಕದ ಕೊರತೆಯಿಂದ ಉಸಿರಾಟಕ್ಕೆ ತೊಂದರೆಯಾಗಬಹುದು. ತೀವ್ರ ಶೀತದಿಂದ ದೇಹದ ತಾಪಮಾನ ಕಡಿಮೆ (ಹೈಪೋಥರ್ಮಿಯಾ)ಯಾಗಬಹುದು. ಲ್ಯಾಂಡಿಂಗ್ ಗೇರ್‌ನ ಚಲನೆಯಿಂದ ಗಾಯವಾಗಬಹುದು ಅಥವಾ ಎತ್ತರದಿಂದ ಬೀಳುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಈ ಬಾಲಕ ಬದುಕುಳಿದಿರುವುದೇ ಒಂದು ಅಚ್ಚರಿ ಮತ್ತು ಅದ್ಭುತ.

ಏಕೆಂದರೆ ಕಾಬೂಲ್-ದೆಹಲಿ ವಿಮಾನವು ಕಡಿಮೆ ಎತ್ತರದಲ್ಲಿ ಹಾರುತ್ತಿತ್ತು. ಅಲ್ಲದೇ ನಿಗದಿತ ವೇಳೆಗಿಂತ ಹದಿನೈದು ನಿಮಿಷ ಮುಂಚಿತವಾಗಿ ಆಗಮಿಸಿತು. ಕಾಬೂಲ್ ಸಮುದ್ರ ಮಟ್ಟದಿಂದ ಸುಮಾರು ೬,೦೦೦ ಅಡಿ ಎತ್ತರದಲ್ಲಿದೆ, ಇದು ಬಾಲಕನಿಗೆ ಆಮ್ಲಜನಕದ ಕೊರತೆಯನ್ನು ಸಹಿಸಿಕೊಳ್ಳಲು ಸಹಾಯ ಮಾಡಿರಬಹುದು. ಈ ಘಟನೆಯು ಕಾಬೂಲ್ ವಿಮಾನ ನಿಲ್ದಾಣದ ಭದ್ರತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಒಬ್ಬ 13 ವರ್ಷದ ಬಾಲಕ ಭದ್ರತೆಯನ್ನು ದಾಟಿ ವಿಮಾನದ ಲ್ಯಾಂಡಿಂಗ್ ಗೇರ್‌ಗೆ ಒಳನುಗ್ಗಿದ್ದು, ಒಡ್ಡಿಕೊಳ್ಳಬಹುದಾದ ಭಯೋತ್ಪಾದಕ ದಾಳಿಗಳ ಅಪಾಯವನ್ನು ಎತ್ತಿ ತೋರಿಸುತ್ತದೆ. ಈ ರೀತಿಯ ‘ವೀಲ್-ವೆಲ್ ಸ್ಟೋವೇ’ ಘಟನೆಗಳು ವಿರಳವಾದರೂ, ಸಂಪೂರ್ಣವಾಗಿ ಅಪರೂಪವೇನಲ್ಲ. ‌

ಉದಾಹರಣೆಗೆ, 1996ಲ್ಲಿ ದೆಹಲಿಯಿಂದ ಲಂಡನ್‌ಗೆ ಹೋಗುವ ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಇಬ್ಬರು ಭಾರತೀಯ ಸಹೋದರರಾದ ಪ್ರದೀಪ್ ಸೈನಿ ಮತ್ತು ವಿಜಯ್ ಸೈನಿ ಲ್ಯಾಂಡಿಂಗ್ ಗೇರ್‌ನಲ್ಲಿ ಒಳನುಗ್ಗಿದ್ದರು. ಪ್ರದೀಪ್ ಬದುಕುಳಿದರೂ, ವಿಜಯ್ ಮೃತಪಟ್ಟಿದ್ದ. 2024ರ ಜನವರಿಯಲ್ಲಿ, ಡೊಮಿನಿಕನ್ ರಿಪಬ್ಲಿಕ್‌ನಿಂದ ಫ್ಲೋರಿಡಾಕ್ಕೆ ಹೋಗುವ ಜೆಟ್‌ಬ್ಲೂ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಇಬ್ಬರು ವ್ಯಕ್ತಿಗಳ ಶವಗಳು ಕಂಡುಬಂದಿದ್ದವು.