ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಖುಷಿಯ ಹೊನಲಿನಲಿ ಕೊಚ್ಚಿ ಹೋಗುತಿದೆ ಅಳುವ ಹಾಯಿದೋಣಿ

ಯಾವುದೂ ಶಾಶ್ವತವಲ್ಲ ಅನ್ನೋದು ಕಳೆದ ಮೂರು ದಿನಗಳಲ್ಲಿ ಮೂರು ರೀತಿಯಲ್ಲಿ ನಿರೂಪಿತ ವಾಗಿಹೋಯ್ತು. ಹದಿನೆಂಟು ವರ್ಷಗಳ ನಂತರ ಕಪ್ ಗೆದ್ದ ಆರ್ ಸಿಬಿ ತಂಡದ ಖುಷಿ ಇಪ್ಪತ್ನಾಲ್ಕು ಗಂಟೆಗಳಲ್ಲಿ ಶೋಕವಾಗಿ ಬದಲಾಯ್ತು. ಆರ್‌ಸಿಬಿ ಇನ್ನೂ ಹತ್ತು ಕಪ್ ಗೆದನ್ನು ನೋಡುವಷ್ಟು ಆಯಸ್ಸಿದೆ ಎಂದುಕೊಂಡಿದ್ದ ಹನ್ನೊಂದು ಮಂದಿ, ಕೆಲವೇ ಗಂಟೆಗಳ ಹಿಂದೆ, ತಾವು ಸಾಯ ಬಹುದು ಎಂಬ ಸುಳುಹೂ ಇಲ್ಲದವರು ಇವತ್ತಿಗೆ ಪಂಚಭೂತಗಳಲ್ಲಿ ಲೀನ.

ಖುಷಿಯ ಹೊನಲಿನಲಿ ಕೊಚ್ಚಿ ಹೋಗುತಿದೆ ಅಳುವ ಹಾಯಿದೋಣಿ

ಪದಸಾಗರ

ಅಂಥದ್ದೊಂದು ಸಾಲು ಹೇಳು... ಖುಷಿಯಲ್ಲಿ ರೋವ್ರಿಗೆ ದುಃಖ ತರಬಲ್ಲ.. ದುಃಖದಲ್ಲಿ ರೋವ್ರಿಗೆ ಸಮಾಧಾನ ನೀಡಬಲ್ಲ ಒಂದು ಸಾಲು ಹೇಳು" ಎಂದು ಕೇಳಿದಾಗ ಶ್ರೀಕೃಷ್ಣ ಹೇಳಿದನಂತೆ- “ಈ ಸಮಯವೂ ಕಳೆದುಹೋಗುತ್ತದೆ"! ಹಿಂದಿಯಲ್ಲಿ.. “ಯೆ ವಕ್ತ್ ಭಿ ಗುಜರ್ ಜಾಯೇಗಾ.." ಇಂಗ್ಲಿಷಲ್ಲಿ ‘ This too Shall pass..." ಎಂಬ ನುಡಿಗಳನ್ನು ನೀವು ಕೇಳಿಯೇ ಕೇಳಿರ್ತೀರಿ. ಖುಷಿಯಲ್ಲಿದ್ದಾಗ ಯಾರೂ ಈ ಮಾತನ್ನು ಹೇಳೋ ದಿಲ್ಲ. ಆದರೆ ದುಃಖದಲ್ಲಿ, ಕಷ್ಟದಲ್ಲಿ, ನೋವಿನಲ್ಲಿ ಇರುವವ ರನ್ನು ಸಮಾಧಾನಪಡಿಸೋದಕ್ಕೆ ಈ ಮಾತು ಬಳಕೆಯಾಗುತ್ತೆ. ಅಂದ್ರೆ ಯಾವ ಭಾವಗಳೂ ಶಾಶ್ವತ ವಲ್ಲ.

ನಿಮಿಷಗಳಲ್ಲಿ ಸಂತಸಗಳು ಸಂತಾಪವಾಗಿ, ಶೋಕಗಳು ಸಂಭ್ರಮವಾಗಿ ಬದಲಾಗಬಹುದು. ಈಗಂತೂ ಸೋಷಿಯಲ್ ಮೀಡಿಯಾದ ಸ್ಕ್ರೋಲಿಂಗ್ ಜಮಾನದಲ್ಲಿ ಪ್ರತಿಭಾವನೆಯ ಜೀವಿತಾವಧಿ ಒಂದು ಸೆಕೆಂಡಿಗಿಂತ ಕಮ್ಮಿ. ಯಾವುದೋ ಪೋಸ್ಟ್ ನೋಡ್ತೀರಿ. ತಂದೆಯ ಸಾವು ಅಂತ -ಟೋ ಸಮೇತ ಹಾಕಿರ್ತಾರೆ. ‌

ನೋಡಿದ ಕೂಡಲೇ ನಮಗೇ ಗೊತ್ತಿಲ್ಲದ ಹಾಗೆ ಸ್ಯಾಡ್ ಎಮೋಜಿಯ ರಿಯಾಕ್ಷನ್ ಪ್ರೆಸ್ ಮಾಡು‌ ತ್ತೇವೆ. ಆರ್‌ಐಪಿ ಅಂತಲೋ ಓಂ ಶಾಂತಿ ಅಂತಲೋ ಕಮೆಂಟ್ ಹಾಕುತ್ತೇವೆ. ಆ ಪೋ ನೋಡ್ತಾ ಇದ್ದಾಗ ಮನಸ್ಸು ಮತ್ತು ಮುಖ ಎರಡೂ ಬಾಡುತ್ತವೆ. ಹಾಗೆ ಮನಸ್ಸು ಕುಗ್ಗುತ್ತಾ ಇರೋ ಕ್ಷಣದ ಬೆರಳು ಮೊಬೈಲ್ ಸ್ಕ್ರೀನನ್ನು ಒಂದಿಂಚು ಸ್ಕ್ರೋಲ್ ಮಾಡುತ್ತದೆ.

ಕೆಳಗೊಂದು ಪೋಸ್ಟಲ್ಲಿ ಇನ್ಯಾರೋ ಒಬ್ರು ತಮ್ಮ ಮಗನ ಜನ್ಮದಿನ ಅಂತ ಕೇಕ್ ಕಟಿಂಗ್ ಫೋಟೋ ಹಾಕಿರುತ್ತಾರೆ. ನಮಗೆ ಅರಿವೇ ಇಲ್ಲದಂತೆ ಬೆರಳು ಹಾರ್ಟ್ ಎಮೋಜಿ ಒತ್ತುತ್ತದೆ. ಹ್ಯಾಪಿ ಬರ್ತಡೇ ಅನ್ನುತ್ತದೆ. ಹಾಗೇ ದಾಟ್ತಾ ಮರುಕ್ಷಣದಲ್ಲಿ ಅಂದು ಜೋಕೋ, ಟ್ರೋಲೋ, ಕಾಮಿಡಿ ವಿಡಿಯೋನೋ ಸಿಗುತ್ತದೆ. ಅಯಾಚಿತವಾಗಿ ನಗು ಬರುತ್ತದೆ. ಲಾಫ್ ಎಮೋಜಿ ಕ್ಲಿಕ್ಕಿಸುತ್ತೇವೆ. ಎರಡೇ ಸೆಕೆಂಡಿನಲ್ಲಿ ಇನ್ಯಾವುದೋ ಪೋಸ್ಟ್‌ ಕಂಡು ಸಿಟ್ಟು ಬಂದು, ಕೆಂಗಣ್ಣಿನ ಕೆಂಪುಮುಖದ ಎಮೋಜಿ ಸಿಡಿಸುತ್ತೇವೆ.

ಇದನ್ನೂ ಓದಿ: Naveen Sagar Column: ಹಣೆ ಮೇಲೆ ಬೋರ್ಡ್‌ ಹಾಕ್ಕೊಂಡ್‌ ಓಡಾಡಬೇಕಾ ?

ಅಬ್ಬಾ... ನಿಮಿಷಾರ್ಧದಲ್ಲಿ ಐದಾರು ಭಾವನೆಗಳ ಮನ್ವಂತರ! ಹಾಗಂತ ಯಾವ ಭಾವವಾದರೂ ನಕಲಿಯಾ? ಖಂಡಿತ ಅಲ್ಲ. ಆದರೆ ಪ್ರತಿ ಭಾವನೆಯ ಆಯಸ್ಸು ಈಗ ಒಂದು ಸ್ಕ್ರೋಲ್ ಸೆಕೆಂಡಿ‌ ನಷ್ಟು ಕಿರಿದಾಗಿ ಹೋಗಿದೆ. ಆದರೆ ಯಾವ ಭಾವನೆಗಳೂ, ಯಾವ ಸಂತಸ ದುಃಖಗಳೂ, ಗೆಲುವು ಸೋಲುಗಳೂ, ಸ್ಥಾನಮಾನಗಳೂ ಸೇರಿದಂತೆ ಪ್ರಾಣಪಕ್ಷಿಯ ತನಕ ಎಲ್ಲವೂ ಬಹಳ ಟೆಂಪೊರರಿ.

ಯಾವುದೂ ಶಾಶ್ವತವಲ್ಲ ಅನ್ನೋದು ಕಳೆದ ಮೂರು ದಿನಗಳಲ್ಲಿ ಮೂರು ರೀತಿಯಲ್ಲಿ ನಿರೂಪಿತ ವಾಗಿಹೋಯ್ತು. ಹದಿನೆಂಟು ವರ್ಷಗಳ ನಂತರ ಕಪ್ ಗೆದ್ದ ಆರ್‌ಸಿಬಿ ತಂಡದ ಖುಷಿ ಇಪ್ಪತ್ನಾಲ್ಕು ಗಂಟೆಗಳಲ್ಲಿ ಶೋಕವಾಗಿ ಬದಲಾಯ್ತು. ಆರ್‌ಸಿಬಿ ಇನ್ನೂ ಹತ್ತು ಕಪ್ ಗೆದನ್ನು ನೋಡುವಷ್ಟು ಆಯಸ್ಸಿದೆ ಎಂದುಕೊಂಡಿದ್ದ ಹನ್ನೊಂದು ಮಂದಿ, ಕೆಲವೇ ಗಂಟೆಗಳ ಹಿಂದೆ, ತಾವು ಸಾಯ ಬಹುದು ಎಂಬ ಸುಳುಹೂ ಇಲ್ಲದವರು ಇವತ್ತಿಗೆ ಪಂಚಭೂತಗಳಲ್ಲಿ ಲೀನ.

ನಿನ್ನೆಯ ತನಕ ಪೊಲೀಸ್ ಆಯುಕ್ತರಾಗಿ ಇಡೀ ಬೆಂಗಳೂರು ನಗರವನ್ನು ಕಾಯುತ್ತಿದ್ದ ದಕ್ಷ ಅಧಿಕಾರಿ ದಿಢೀರ್ ಅಮಾನತ್ತಾಗಿ ಈ ಕ್ಷಣಕ್ಕೆ ಒಬ್ಬ ಜನಸಾಮಾನ್ಯ! ಆರ್‌ಸಿಬಿಯ ಮೇಲಿನ ಎಮೋಷನ್ ಬಳಸಿಕೊಂಡು ಜನರ ಪ್ರೀತಿಯನ್ನು ತಮ್ಮೆಡೆಗೆ ಸೆಳೆದುಕೊಂಡು ಇನ್ನಷ್ಟು ಇಮೇಜ್ ವೃದ್ಧಿಗೊಳಿಸಿಕೊಳ್ಳುವ ಕನಸು ಕಂಡಿದ್ದ ರಾಜಕಾರಣಿಗಳ ಕನಸು ಕೆಲವೇ ಗಂಟೆಗಳಲ್ಲಿ ಭಗ್ನವಾಗಿ, ಇದೇ ಸರಕಾರಕ್ಕೆ ಉರುಳಾದರೇನೆಂಬ ಆತಂಕ! ಹೂಂ. ಯಾವುದೂ ಶಾಶ್ವತವಲ್ಲ.

RCB R

ವೈಯಕ್ತಿಕವಾಗಿ ನಂಗೆ ಆರ್‌ಸಿಬಿ ನೆಚ್ಚಿನ ತಂಡವಲ್ಲ. ಧೋನಿ ಮೇಲಿನ ಅಭಿಮಾನದಿಂದಾಗಿ ನಾನು ಸಿಎಸ್ಕೆ ತಂಡದ ಗೆಲುವಿಗೆ ಹಂಬಲಿಸೋ ಕ್ರಿಕೆಟ್ ಅಭಿಮಾನಿ. ಆದರೆ ಧೋನಿಯನ್ನು ಇಷ್ಟಪಡೋ ದಕ್ಕಿಂತ ಹೆಚ್ಚಾಗಿ ಕ್ರಿಕೆಟನ್ನು ಇಷ್ಟಪಟ್ಟವನು ನಾನು. ಹೀಗಾಗಿ ಅಂತಿಮವಾಗಿ ಉಭಯ ತಂಡಗಳ ನಡುವೆ ಅದ್ಭುತ ಹಣಾಹಣಿ ನಡೆದು ಬೆಟರ್ ಟೀಮ್ ಗೆದ್ದಿತೆಂದರೆ ನನ್ನಿಷ್ಟದ ತಂಡ ಸೋತರೂ, ಕ್ರಿಕೆಟ್ ಎಂಜಾಯ್ ಮಾಡಿರುತ್ತೇನೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತಕ್ಕೆ ಸೋಲಾದರೆ ಮಾತ್ರ ಅದು ನೋವಾಗಿ ಕೊಂಚ ಬಾಧಿಸಿರುತ್ತದೆ. ನಂತರದಲ್ಲಿ ಆಫ್ಟರಾಲ್ ಆಟವಲ್ಲವೇ ಎಂಬ ಪ್ರಬುದ್ಧ ಯೋಚನೆ ಮಗುಚಿದ್ದ ಮನಸನ್ನು ಮತ್ತೆ ಎತ್ತಿ ಕೂರಿಸುತ್ತದೆ. ಕ್ರಿಕೆಟ್‌ನ ಮೊಮೆಂಟ್‌ಗಳು, ವೈಯಕ್ತಿಕ ಪ್ರದರ್ಶನಗಳು, ಅಂಕಿ-ಅಂಶಗಳು ಇವೆಲ್ಲವೂ ನನಗೆ ಖುಷಿ ಕೊಟ್ಟಿರುತ್ತವೆ.

ಈ ಬಾರಿ ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಿರಾಶಾದಾಯಕ ಪ್ರದರ್ಶನ ಸಹಜ ವಾಗಿಯೇ ನನ್ನನ್ನು ಬಹಳ ತಟಸ್ಥತೆಯಿಂದ ಐಪಿಎಲ್ ನೋಡುವಂತೆ ಮಾಡಿತ್ತು. ಹಾಗೆ ನೋಡು ವಾಗ ಬಹಳ ಸ್ಪಷ್ಟವಾಗಿ ಅನಿಸಿದ್ದು ಏನೆಂದರೆ, ಈ ಸಲ ಗೆಲ್ಲುವ ಅರ್ಹತೆ ಅಂತ ಇದ್ರೆ ಅದು ಆರ್‌ಸಿಬಿಗೆ ಮಾತ್ರ ಅಂತ. ಆರ್‌ಸಿಬಿಯ ಪ್ರದರ್ಶನದ ಮಟ್ಟ ಹಾಗಿತ್ತು. ‌

ಟಿಮ್ ಡೇವಿಡ್, ಜಿತೇಶ್ ಶರ್ಮ, ಪಾಟಿದಾರ್, ಪಡಿಕ್ಕಲ್, ಸಾಲ್ಟ್, ಕೃನಾಲ್ ಪಾಂಡ್ಯ, ಬೆತೆಲ್, ಭುವಿ, ಹ್ಯಾಜಲ್ ವುಡ್, ಸುಯೇಶ್ ಶರ್ಮ, ಯಶ್ ದಯಾಳ್ ಹೀಗೆ ಒಬ್ಬೊಬ್ಬರು ಒಂದೊಂಡು ಪಂದ್ಯ‌ ದಲ್ಲಿ ಹೀರೋ ಆಗಿ ಗೆಲುವು ತಂದುಕೊಡ್ತಾ ಇದ್ರು. ವಿರಾಟ್ ಕೊಹ್ಲಿಯ ಬ್ಯಾಟ್ ಪ್ರತಿ ಪಂದ್ಯದಲ್ಲೂ ಮಾತಾಡಿತು. ಕೊಹ್ಲಿಯ ಸುತ್ತ ಮಿಕ್ಕವರ ಆಟ ಅರಳಿದವು. ತಂಡ ಒಬ್ಬನ ಮೇಲೆ ಡಿಪೆಂಡ್ ಆಗಲಿಲ್ಲ. ಒಬ್ಬನ ಆಟವನ್ನು ಸ್ಪೂರ್ತಿಯಾಗಿಟ್ಟುಕೊಂಡು ತಂಡ ಕಪ್‌ಗೆ ಸನಿಹ ವಾಗತೊಡಗಿತು.

ಆರ್‌ಸಿಬಿಯಲ್ಲಿ ಈ ಹಿಂದೆ ಕ್ರಿಸ್ ಗೇಲ್, ಎಬಿಡಿ ಥರದ ಘಟಾನುಘಟಿಗಳಿದ್ದರು. ಆದರೆ ಈ ತಂಡ ಈ ಬಾರಿ ಕಪ್ ಗೆದ್ದೇ ಗೆಲ್ಲುವೆನೆಂಬ ಶಪಥ ಮಾಡಿ ಬಂದಂತಿತ್ತು. ಶಾಪವಿಮುಕ್ತನಾಗುವ ಹಟ ತೊಟ್ಟು ಬಂದಂತಿತ್ತು. ಸಚಿನ್ ಗಾಗಿ ವಿಶ್ವಕಪ್ ಗೆದ್ದಂತೆ, ಕೊಹ್ಲಿಗಾಗಿ ಐಪಿಎಲ್ ಗೆಲ್ಲಬೇಕು ಎನ್ನುವ ರೀತಿ ಯಲ್ಲಿ ಆರ್‌ಸಿಬಿ ಆಡಿತ್ತು. ‌

ಅಭಿಮಾನಿಗಳ ಎಮೋಷನ್, ಅನ್‌ಕಂಡೀಷನಲ್ ಪ್ರೀತಿಯನ್ನು, ತಾಳ್ಮೆಯನ್ನು ಇನ್ನೂ ಇನ್ನೂ ಟೆಸ್ಟ್ ಮಾಡಬಾರದು.. ಹದಿನೆಂಟು ವರ್ಷಗಳ ಕಾಯುವಿಕೆಗೆ ಕೊನೆ ಹಾಡಬೇಕು, ಚೋಕರ್ಸ್ ಪಟ್ಟದಿಂದ ಹೊರಬರಬೇಕು, ಕಪ್ ಗೆಲ್ಲಲಾರದವರು ಅನ್ನೋ ಮೂದಲಿಕೆಗೆ ಅಂತ್ಯ ಹೇಳಬೇಕು, ‘ಈ ಸಲ ಕಪ್ ನಮ್ದೇ’ ಅನ್ನೋದನ್ನು ಈ ಬಾರಿಯಾದರೂ ನಿಜವಾಗಿಸಲೇಬೇಕು ಎಂದು ಇಡೀ ತಂಡ ಜೀವ ಅಡವಿಟ್ಟಂತೆ ಭಾಸವಾಗುತ್ತಿತ್ತು.

ಆದರೂ ಐಪಿಎಲ್‌ನ ಸ್ಕ್ರಿಪ್ಟ್ ಎಲ್ಲಿ ಆರ್‌ಸಿಬಿಯನ್ನು ಗೆಲ್ಲಲು ಬಿಡದಂತೆ ಮಾಡಿಬಿಡುತ್ತದೋ, ಅಭಿಮಾನಿಗಳ ಎಮೋಷನ್ನನ್ನು ಬಂಡವಾಳವಾಗಿರಿಸಿಕೊಂಡು ಫೈನಲ್‌ನಲ್ಲಿ ಸೋಲಿಸಿ ಬಿಡುತ್ತೇನೋ ಎಂಬೆಲ್ಲ ಆತಂಕ ಅನುಮಾನಗಳೂ ಇದ್ದೇ ಇದ್ವು. ಎಲ್ಲ ಸ್ಕ್ರಿಪ್ಟ್ ಗಳನ್ನು ನಿವಾಳಿಸಿ ಒಗೆದು ಕಪ್ ಗೆದ್ದೇಬಿಡ್ತು ಆರ್‌ಸಿಬಿ.

ಐಪಿಎಲ್ ಫಿಕ್ಸಿಂಗ್ ಅಲ್ಲ, ಸ್ಕ್ರಿಪ್ಟೆಡ್ ಅಲ್ಲ ಅಂತ ಕೊನೆಗೂ ಆರ್‌ಸಿಬಿ ಅಭಿಮಾನಿಗಳಿಗೆ ನಂಬಿಕೆ ಬಂದಿತು. ಕೆಲಸದ ಒತ್ತಡದಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಫೈನಲ್ ಪಂದ್ಯವನ್ನು ನಾನು ‘ಬಾಲ್-ಟು-ಬಾಲ್’ ನೋಡೋದನ್ನುಮಿಸ್ ಮಾಡಿಕೊಂಡಿದ್ದೆ. ಅದರೆ ನನ್ನ ಪ್ರಕಾರ ಅಸಲಿ ಸಿನಿಮಾ ಶುರು ಆಗಿದ್ದೇ ಕೊನೆಯ ಐದು ಬಾಲ್‌ಗಳಿದ್ದಾಗ.

ಅಲ್ಲಿಂದ ಶುರುವಾಗಿದ್ದು ಅಕ್ಷರಶಃ ಭಾವನೆಗಳ ಸುನಾಮಿ. ಕಿಚ್ಚೆಬ್ಬಿಸೋ ಸೆಲೆಬ್ರೇಷನ್ ಮಾಡುವ ಎಂದಿನ ವಿರಾಟ್ ಕೊಹ್ಲಿಯ ಜಾಗದಲ್ಲಿ ಕಣ್ಣೀರು ತುಂಬಿದ, ಉಬ್ಬಿದ ಗಂಟಲಿನ, ಅವುಡುಗಚ್ಚಿ ಅವುಡುಗಚ್ಚಿ ನಿರಾಳಗೊಳ್ಳುತ್ತಿದ್ದ ಹೊಸ ಕೊಹ್ಲಿ ಇದ್ದ. ಅವನ ಸುತ್ತ ಇದ್ದ ಮಿಕ್ಕ ಆಟಗಾರರ ಮುಖಭಾವಗಳೂ ವಿರಾಟನ ಭಾವವನ್ನೇ ಪ್ರತಿಬಿಂಬಿಸುತ್ತಿದ್ದವು.

ಕಿಂಗ್ ಕೊಹ್ಲಿ ಕೂಲ್ ಕೊಹ್ಲಿಯಾಗಿ ಬದಲಾಗಿದ್ದ. ಅದೆಂಥ ಸಂತಸ, ನಿರಾಳತೆ ಮತ್ತು ಗೆದ್ದ ಖುಷಿಯ ನಿಟ್ಟುಸಿರು ಅದು.. ತಂಡದವರು ಕಪ್ ಮುಟ್ಟಿ, ನೋಡಿ ಮುತ್ತಿಟ್ಟು ನೋಡ್ತಾ ಇದ್ದ ದೃಶ್ಯಗಳು ಎಂಥವರಲ್ಲೂ ಒಂದು ಹನಿ ಕಣ್ಣೀರು ಜಿನುಗುವಂತೆ ಮಾಡುತ್ತಿತ್ತು. ಹೀಗಿತ್ತಾ ಈ ಕಪ್,.!? ಹದಿನೆಂಟು ವರ್ಷ ಇದನ್ನು ಮುಟ್ಟೋದಿರ್ಲಿ ಹತ್ತಿರದಿಂದ ನೋಡೋಕೂ ಅವಕಾಶ ವಾಗಲಿಲ್ಲವಲ್ಲ.. ನಿಜಕ್ಕೂ ನಾವು ಗೆದ್ದಿದೀವಾ? ನಿಜವಾಗ್ಲೂ ಕೈಯಲ್ಲಿ ಕಪ್ ಹಿಡಿದಿದ್ದೀವಾ ಅಂತ ಚಿವುಟಿಕೊಂಡು ಚಿವುಟಿಕೊಂಡು ಖಾತ್ರಿ ಮಾಡಿಕೊಳ್ಳುತ್ತಿದ್ದ ಬಗೆ, ದಿನೇಶ್ ಕಾರ್ತಿಕ್ ಎಂಬ ಅಪ್ರತಿಮ ನಿಸ್ವಾರ್ಥಿ ಆಟಗಾರನ ಆ ಹೆಮ್ಮೆಯ ಮುಖ, ವರ್ಣಿಸುತ್ತಾ ಹೋದರೆ ಪ್ರತಿಯೊಂದೂ ಕ್ಯಾರೆಕ್ಟರ್‌ಗಳದ್ದೂ ಒಂದು ಬಯೋಪಿಕ್ ಆದೀತೇನೋ!

ಆರ್‌ಸಿಬಿಬಿಯ ಈ ಜರ್ನಿ ಮತ್ತು ಗೆಲುವು ಮಾತ್ರ ಖಂಡಿತವಾಗ್ಯೂ ಬಾಲಿವುಡ್‌ನ ಒಂದು ಸಿನಿಮಾ ಆಗಬಲ್ಲ ಸೂಪರ್‌ಹಿಟ್ ಸ್ಕ್ರಿ ಅನ್ನೋದರಲ್ಲಿ ಅನುಮಾನವೇ ಬೇಡ. ಆದರೆ ಅಷ್ಟು ವರ್ಷ ಕಾದು ಪಡೆದ ಗೆಲುವು.. ಗೆಲುವು ಕೊಟ್ಟ ಖುಷಿ ಎಲ್ಲವೂ ಇಷ್ಟು ಕ್ಷಣಿಕವಾಗಿ ಹೋಯಿತಲ್ಲ..! ಏನನ್ನಬೇಕು ಇದಕ್ಕೆ? ಆರ್‌ಸಿಬಿ ಆಗಲೀ ಕೊಹ್ಲಿಯಾಗಲೀ ಇಂಥ ದುರ್ಘಟನೆಗೆ ಸಾಕ್ಷಿಯಾಗಲು ಅರ್ಹರಲ್ಲ. ಈ ಕಪ್ ಗೆದ್ದ ಸಂತಸ ಕನಿಷ್ಠ ಒಂದು ತಿಂಗಳಾದರೂ ಜಾರಿಯಲ್ಲಿರಬೇಕಿತ್ತು.

ಯಾಕಂದ್ರೆ ಇದು ಆರ್‌ಸಿಬಿಯ ಸಾಮಾನ್ಯ ಗೆಲುವಾಗಿರಲಿಲ್ಲ. ತಪಸ್ಸು ಮಾಡಿ ಪಡೆದ ವರವಾಗಿತ್ತು. ಅಳುವ ಕಡಲಿನಲಿ ತೇಲಿಬಂದಿದ್ದ ನಗೆಯ ಹಾಯಿದೋಣಿ ಇದು ಅನ್ನುವ ಹೊತ್ತಿಗೆ.., ನಗೆಯ ಹೊನಲಿನಲಿ ಕೊಚ್ಚಿಕೊಂಡು ಹೋದ ಅಳುವಿನ ಹಾಯಿದೋಣಿಯಾಗಿಬಿಡ್ತು ಐಪಿಎಲ್ ಗೆಲುವಿನ ಎಲ್ಲ ಸಂಭ್ರಮ. ಯಾರನ್ನು ದೂರೋದು? ಅಭಿಮಾನಿಗಳ ಅತಿರೇಕವನ್ನೋ? ಸರಕಾರವನ್ನೋ? ಐಪಿಎಲ್ ಕ್ರಿಕೆಟನ್ನೋ? ದುರ್ವಿಧಿಯನ್ನೋ? ಗೊತ್ತಾಗುತ್ತಿಲ್ಲ. ಜಡ್ಡುಗಟ್ಟಿದ ಮೈಗಳಿಗೆ ಛಡಿಯೇಟು ಕೊಟ್ಟರೆ ನಮ್ಮ ಕೈಗಳಿಗೆ ನೋವಷ್ಟೆ.

ಹನ್ನೊಂದು ಸಾವು, ಅಧಿಕಾರಿಗಳ ಅಮಾನತು, ಆಳುವ ರಾಜಕಾರಣಿಗಳ ಡ್ರಾಮಾಗಳು, ಬೇಜವಾ ಬ್ದಾರಿ ಹೇಳಿಕೆಗಳು, ಅಭಿಮಾನಿಗಳ ಅಂಧವರ್ತನೆ ಇವೆಲ್ಲವನ್ನೂ ನೋಡಿದರೆ ಜುಗುಪ್ಸೆ ಹುಟ್ಟು ತ್ತದೆ. ಆರ್‌ಸಿಬಿಯ ಗೆಲುವು ಕ್ರಿಕೆಟ್ ವಿಭಾಗದಲ್ಲಿ ಐತಿಹಾಸಿಕ, ಭಾವುಕ ಘಟನೆ ನಿಜ. ಆದರೆ ಅದು ಅಭಿಮಾನಿಗಳ ಹುಚ್ಚುತನದಿಂದ ಅತಿರೇಕದ ಎಲ್ಲೆ ಮೀರಿದ್ದು, ಅಭಿಮಾನಿಗಳ ಈ ಹುಚ್ಚಾಟ ವನ್ನು ವೋಟ್ ಬ್ಯಾಂಕನ್ನಾಗಿ ಪರಿವರ್ತಿಸಿಕೊಳ್ಳಲು ಹಪಹಪಿಸಿದ್ದು ಇವೆಲ್ಲವೂ ಅಸಹ್ಯವಾಗಿಸಿತು.

ಆರ್ಸಿಬಿ ಅಭಿಮಾನಿಗಳು, ರಾಜಕಾರಣಿಗಳು ಒಮ್ಮೆ ಅವಲೋಕಿಸಿಕೊಳ್ಳಬೇಕಿತ್ತು. ರಣಜಿ ಗೆದ್ದ ರಾಜ್ಯತಂಡವನ್ನು ಒಮ್ಮೆಯಾದರೂ ಹೀಗೆ ಮೆರೆಸಿದ್ದೀವಾ? ಸೈನಿಕರ ಗೆಲುವನ್ನು ಈ ರೀತಿ ಸೆಲೆಬ್ರೇಟ್ ಮಾಡಿದ್ದೇವಾ? ಪದ್ಮಭೂಷಣ ಪಡೆದ ಅನಂತ್ ನಾಗ್ ಅವರನ್ನು ರಾಜ್ಯದ ಜನರೆಲ್ಲ ಸೇರಿ ಗೌರವಿಸುವ ಮನಸು ಮಾಡಿದ್ದೇವಾ? ಕವಿ ‘ಎಚ್‌ಎಸ್‌ವಿ’ ನಿಧನಕ್ಕೆ ಒಕ್ಕೊರಲಿಂದ ಕಂಬನಿ ಮಿಡಿದೆವಾ? ಕ್ರಿಕೆಟ್ ಹೊರತಾದ ಕ್ರೀಡಾಕ್ಷೇತ್ರಗಳಲ್ಲಿನ ಹಲವಾರು ಆಟಗಾರರು, ವಿಜ್ಞಾನಿಗಳು, ಸೈನಿಕರು, ಸಂಶೋಧಕರು, ಗಾಯಕರು ಸಾಧನೆ ಮಾಡಿಲ್ಲವೇ?. ಕೃಷಿ, ಶಿಕ್ಷಣ, ಸಾಹಿತ್ಯ, ಫೋಟೋ ಗ್ರಫಿ, ಪತ್ರಿಕೋದ್ಯಮ ಎಷ್ಟೆಷ್ಟೋ ವಿಭಾಗದಲ್ಲಿ ರಾಜ್ಯಕ್ಕೆ ಕೊಡುಗೆ ಕೊಟ್ಟವರ ಸಮೂಹವೇ ಇದೆ.

ಹದಿನೆಂಟು ವರ್ಷ ಅಲ್ಲ 50-60 ವರ್ಷಗಳ ಶ್ರಮ ಸಾಧನೆ ಇದೆ. ಅವರನ್ನು ಯಾವತ್ತಾದರೂ ರಾಜ್ಯದ ಜನ ಈ ಮಟ್ಟಿಗೆ ಸೆಲೆಬ್ರೇಟ್ ಮಾಡಬಹುದಾ? ಯಾಕೆ ನಾವು ಕ್ರಿಕೆಟ್ ಮತ್ತು ಸಿನಿಮಾ ಇವೆರಡನ್ನೇ ರಾಜ್ಯಾಭಿಮಾನ, ದೇಶಾಭಿಮಾನ, ಭಾಷಾಭಿಮಾನದ ಪ್ಯಾರಾ ಮೀಟರ್‌ಗಳನ್ನಾಗಿ ಮಾಡಿಕೊಂಡಿದ್ದೇವೆ? ಹೋದ ಹನ್ನೊಂದು ಜೀವಗಳದ್ದು ಘನತೆಯ ಸಾವೇ? ಖಂಡಿತ ಇಲ್ಲ. ಐಪಿಎಲ್ ಅಭಿಮಾನದ ಹುಚ್ಚುತನದಲ್ಲಿ ಪ್ರಾಣ ಕಳ್ಕೊಂಡವರು ಅಷ್ಟೆ. ಅವರ ಹೆಸರು ಇವತ್ತಿಗೆ ಅವರ ಬಳಗಕ್ಕೆ ಬಿಟ್ಟು ಯಾರಿಗೂ ಗೊತ್ತಿಲ್ಲ. ಬೇಕಾಗಿಲ್ಲ. ಕೊನೆಗೂ ಉಳಿಯೋ ಪ್ರಶ್ನೆ ಒಂದೇ- ಇಂಥ ಅತಿರೇಕದ ಅಭಿಮಾನ ಬೇಕಿತ್ತಾ?