ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಮೂರು ಉಳಿಸುವ ಸ್ವಾರ್ಥದಿಂದ ಆರು ನಷ್ಟ

“ಅಯ್ಯೋ! ಎಂಥ ಮನೆಹಾಳು ಕೆಲಸವಾಯಿತು. ಅನ್ಯಾಯವಾಗಿ ಚಿನ್ನದ ಸರ ಕೈ ಬಿಟ್ಟು ಹೋಯಿ ತಲ್ಲಾ" ಎಂದು ಪಾಪಯ್ಯ ಮಮ್ಮಲ ಮರುಗಿದ. ಅತಿಯಾದ ಬುದ್ಧಿವಂತಿಕೆ ಉಪಯೋಗಿಸಿ ಹಣ ಉಳಿಸಲು ವಾಮಮಾರ್ಗಕ್ಕೆ ಇಳಿದರೆ, ಅದರ ಎರಡರಷ್ಟು ಖರ್ಚಾಗಿರುತ್ತದೆ. ಹಣದ ಮೋಹ ಒಳ್ಳೆಯದಲ್ಲ, ಸಂಬಂಧಗಳಿಗೆ ಬೆಲೆ ಕೊಡಬೇಕು. ಅಲ್ಲವೇ ?

ಮೂರು ಉಳಿಸುವ ಸ್ವಾರ್ಥದಿಂದ ಆರು ನಷ್ಟ

-

ಒಂದೊಳ್ಳೆ ಮಾತು

ಬಟ್ಟೆಗಳ ವ್ಯಾಪಾರಿ ಪಾಪಯ್ಯ ಪರಮಲೋಭಿ ಮತ್ತು ಮಹಾಜಿಪುಣ. ಆ ಊರಿನ ಜಮೀನ್ದಾರರ ಮಗನ ಮದುವೆಗೆ ಪಾಪಯ್ಯನಿಗೂ ಆಹ್ವಾನ ಪತ್ರಿಕೆ ಬಂತು. ಜಮೀನ್ದಾರರ ಮೇಲಿರುವ ಗೌರವ ದಿಂದ ಎಲ್ಲರೂ ಬೆಲೆಬಾಳುವ ಉಡುಗೊರೆಗಳನ್ನು ಕೊಳ್ಳುತ್ತಿದ್ದರು. ಪಾಪಯ್ಯ ಉಡುಗೊರೆ ಕೊಡದೆ ಮದುವೆಗೆ ಹೋಗಬೇಕೆಂದು ಆಲೋಚಿಸಲು ಆರಂಭಿಸಿದನು. ಹೇಗಾದರೂ ಹಣ ಉಳಿಸ ಬೇಕು ಆದರೆ ಜಮೀನ್ದಾರರಿಗೆ ಗೊತ್ತಾಗಬಾರದು ಎಂದುಕೊಂಡನು. ಕಡೆಗೆ ಒಂದು ಉಪಾಯ ತೋರಿತು.

ಮದುವೆಗೆ ತುಂಬ ಜನ ಬರುತ್ತಾರೆ. ಆ ಗಡಿಬಿಡಿಯಲ್ಲಿ ಯಾರು ಯಾವ ಉಡುಗೊರೆ ತಂದಿದ್ದಾ ರೆಂದು ತಿಳಿಯುವುದಿಲ್ಲ. ಅದರ ಬಗ್ಗೆ ಲಕ್ಷ್ಯ ಕೊಡುವುದೂ ಇಲ್ಲ. ತನ್ನ ಸ್ನೇಹಿತ ರಾಮಯ್ಯ ಹೇಗೂ ಮದುವೆಗೆ ಉಡುಗೊರೆ ಕೊಂಡುಕೊಂಡೇ ಇರುತ್ತಾನೆ. ಅದರೊಂದಿಗೆ ತನಗೆ ತೋಚಿದ ಯಾವು ದಾದರೂ ಚಿಕ್ಕ ವಸ್ತುವನ್ನು ಇಟ್ಟು ಇಬ್ಬರದ್ದೂ ಸೇರಿಸಿಕೊಟ್ಟರೆ ಮುಗಿಯಿತು ಎಂದುಕೊಂಡನು. ಅಂದುಕೊಂಡ ಹಾಗೇನೇ ರಾಮಯ್ಯನ ಹತ್ತಿರ ಹೋಗಿ ಕೇಳಿದನು.

ಅದಕ್ಕೆ ಆತನು, “ಜಮೀನ್ದಾರರು ನನಗೆ ಮುಂಚಿತವಾಗಿಯೇ ಬಂದು ಮದುವೆ ಕೆಲಸಗಳನ್ನು ನೋಡಿಕೊಳ್ಳಲು ಹೇಳಿದ್ದಾರೆ. ಅದರಿಂದ ನಾನು ಮೊದಲೇ ಹೋಗುತ್ತೇನೆ. ನೀನು ನಮ್ಮಿಬ್ಬರ ಕಾಣಿಕೆಗಳನ್ನು ಸೇರಿಸಿ ತೆಗೆದುಕೊಂಡು ಬಾ" ಎಂದನು.

ಇದನ್ನೂ ಓದಿ: Roopa Gururaj Column: ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಸಾರಿದ ಶಂಕರಾಚಾರ್ಯರು

ಪಾಪಯ್ಯ ಮನೆಗೆ ಬಂದು, ರಾಮಯ್ಯ ಕೊಡಲು ಹೊರಟಿದ್ದ ಉಡುಗೊರೆ ಪೆಟ್ಟಿಗೆಯನ್ನು ತೆರೆದು ನೋಡಿದನು. ಅದರಲ್ಲಿ ಅಮೃತ ಶಿಲೆಯಿಂದ ಮಾಡಿದ ಕೃಷ್ಣನ ವಿಗ್ರಹವಿತ್ತು. ಅಷ್ಟರಲ್ಲಿ ಪಾಪಯ್ಯನ ಚಿಕ್ಕ ಮಗ ಓಡುತ್ತಾ ಬಂದು “ಬೊಂಬೆ ತುಂಬಾ ಚೆನ್ನಾಗಿದೆ. ನಾನು ಆಡಿಕೊಳ್ಳುತ್ತೇನೆ" ಎಂದು ಕೇಳಿದನು.

ಪಾಪಯ್ಯನು ಮಗುವಿಗೆ, “ಇದು ನಮ್ಮ ವಸ್ತು ಅಲ್ಲ, ಇದರೊಂದಿಗೆ ಆಡಿಕೊಳ್ಳುವಾಗ ಕೈ ಜಾರಿ ಕೆಳಗೆ ಬಿದ್ದರೆ ಮುರಿದು ಹೋಗುತ್ತದೆ. ನಾನು ಹೊಸ ಬೊಂಬೆಯನ್ನು ತೆಗೆದು ಕೊಡುತ್ತೇನೆ" ಎಂದನು. ಆದರೂ ಮಗು ಕೇಳದೆ, ಪಾಪಯ್ಯನ ಕೈಯಲ್ಲಿರುವ ಬೊಂಬೆಯನ್ನು ಕಿತ್ತುಕೊಂಡು ಪಕ್ಕದ ಕೋಣೆಗೆ ಓಡಿಹೋಯಿತು.

ಬೊಂಬೆ ಎಲ್ಲಿ ಮುರಿದು ಹೋಗುವುದೋ ಎಂಬ ಭಯದಿಂದ ಪಾಪಯ್ಯ ಓಡಿ ಹೋಗಿ ಮಗುವನ್ನು ಮುದ್ದಿಸಿ, ಮೆಲ್ಲನೆ ಬೊಂಬೆಯನ್ನು ತೆಗೆದುಕೊಂಡು ಬೇಗ ಬೇಗ ಪೆಟ್ಟಿಗೆಯಲ್ಲಿಟ್ಟು ಅದರ ಸುತ್ತಲೂ ಹುಲ್ಲನ್ನು ಹರಡಿ, ಮೇಲೆ ಬಣ್ಣದ ಕಾಗದಗಳಿಂದ ಅಲಂಕರಿಸಿ, ಅದರ ಮೇಲೆ ‘ಪಾಪಯ್ಯ, ರಾಮಯ್ಯ’ ಎಂದು ಇಬ್ಬರ ಹೆಸರು ಬರೆದು ಮದುವೆಗೆ ಹೊರಟನು.

ಮದುವೆ ಮನೆಯಲ್ಲಿ ಎಲ್ಲರಿಗಿಂತ ಮುಂಚೆ ಹೋಗಿ ತಾನೇ ವಧು-ವರರಿಗೆ ಉಡುಗೊರೆ ಕೊಟ್ಟನು. ಜಮೀನ್ದಾರರ ಗುಮಾಸ್ತ ಯಾರ ಯಾರ ಹೆಸರಿನಲ್ಲಿ ಏನೇನು ಉಡುಗೊರೆಗಳು ಬಂದಿವೆ ಎಂದು ತಿಳಿದುಕೊಳ್ಳಲು ಪೆಟ್ಟಿಗೆಗಳನ್ನೆ ಬಿಚ್ಚತೊಡಗಿದನು. ಆದರೆ ಪೆಟ್ಟಿಗೆಯನ್ನು ಪೂರ್ತಿಯಾಗಿ ಬಿಚ್ಚಿದ ಮೇಲೆ ಪಾಪಯ್ಯನ ಗುಂಡಿಗೆ ಹಠಾತ್ತನೆ ನಿಂತಂತಾಯಿತು. ಆ ಸಮಯಕ್ಕೆ ರಾಮಯ್ಯ ಸಹ ಅಲ್ಲಿಗೆ ಬಂದನು. ಗುಮಾಸ್ತ ಪೆಟ್ಟಿಗೆಯಿಂದ ಅಮೃತ ಶಿಲೆಯ ಕೃಷ್ಣನ ಬೊಂಬೆ ತೆಗೆದನು.

ಬೊಂಬೆಯ ಕೊರಳಲ್ಲಿ ಥಳಥನೆ ಹೊಳೆಯುತ್ತಿರುವ ಚಿನ್ನದ ಸರ ಇದೆ. ರಾಮಯ್ಯ ಗುಮಾಸ್ತನಿಗೆ, “ಆ ಅಮೃತಶಿಲೆಯ ಕೃಷ್ಣ ನನ್ನ ಉಡುಗೊರೆ, ಆ ಚಿನ್ನದ ಸರ ಪಾಪಯ್ಯನ ಉಡುಗೊರೆ" ಎಂದು ಹೇಳಿದನು. ಆಗ ಪಾಪಯ್ಯ ಕೆಂಡ ತುಳಿದವನಂತೆ ಬೆಚ್ಚಿದನು. ಆ ಮಾಲೆಯನ್ನು ನೋಡಿ ಆತನ ಮುಖದಲ್ಲಿ ರಕ್ತ ಬತ್ತಿಹೋಯಿತು.

ಅದು ಪಾಪಯ್ಯನ ಮಗನ ಕುತ್ತಿಗೆಯಲ್ಲಿದ್ದ ಚಿನ್ನದ ಸರ. ಆತ ಬೊಂಬೆಯೊಂದಿಗೆ ಆಡಿಕೊಳ್ಳುತ್ತಿರು ವಾಗ ಆ ಸರವನ್ನು ತೆಗೆದು ವಿಗ್ರಹಕ್ಕೆ ಹಾಕಿರಬೇಕು. ಪಾಪಯ್ಯನು ಭಯ, ಗಡಿಬಿಡಿ, ಆತುರಗಳಲ್ಲಿ ಆ ಬೊಂಬೆಯನ್ನು ತೆಗೆದು ಪೆಟ್ಟಿಗೆಯಲ್ಲಿಟ್ಟು ಹುಲ್ಲು ಮುಚ್ಚಿ, ಬಣ್ಣ ಬಣ್ಣದ ಕಾಗದಗಳೊಂದಿಗೆ ಸುತ್ತಿ ಅಲಂಕರಿಸಿಬಿಟ್ಟಿದ್ದ!

“ಅಯ್ಯೋ! ಎಂಥ ಮನೆಹಾಳು ಕೆಲಸವಾಯಿತು. ಅನ್ಯಾಯವಾಗಿ ಚಿನ್ನದ ಸರ ಕೈ ಬಿಟ್ಟು ಹೋಯಿ ತಲ್ಲಾ" ಎಂದು ಪಾಪಯ್ಯ ಮಮ್ಮಲ ಮರುಗಿದ. ಅತಿಯಾದ ಬುದ್ಧಿವಂತಿಕೆ ಉಪಯೋಗಿಸಿ ಹಣ ಉಳಿಸಲು ವಾಮಮಾರ್ಗಕ್ಕೆ ಇಳಿದರೆ, ಅದರ ಎರಡರಷ್ಟು ಖರ್ಚಾಗಿರುತ್ತದೆ. ಹಣದ ಮೋಹ ಒಳ್ಳೆಯದಲ್ಲ, ಸಂಬಂಧಗಳಿಗೆ ಬೆಲೆ ಕೊಡಬೇಕು. ಅಲ್ಲವೇ ?