ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಅಗಲಿದವರ ನೆನಪಿಗೆ ಸಮಾಧಿ ಕಲ್ಲಿನ ಬದಲು ಸಸಿ ನೆಟ್ಟರೆ ಹೇಗಿದ್ದೀತು ?

“ಯೋಗೀಜೀ, ಎಲ್ಲ ಕಡೆ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುತ್ತಿದ್ದರೂ ವ್ಯಕ್ತವಾಗದ ಪ್ರತಿಭಟನೆ, ಈ ಅರಣ್ಯದ ವಿಷಯಕ್ಕೆ ಬಂದಾಗ ಮುಗಿಲು ಮುಟ್ಟುವುದೇಕೆ? ಈ ಅರಣ್ಯವೇಕೆ ಅಷ್ಟು ಮಹತ್ವದ್ದು?" ಎಂದು ಕೇಳಿದೆ. ಅದಕ್ಕೆ ಯೋಗೀಜೀ ಹೇಳಿದರು- “ನೋಡಿ, ಇದು ಜನರೇ ನೆಟ್ಟ ಕಾಡು. ಇದೇನು ಸುಮ್ಮನೆ ನೆಟ್ಟಿದ್ದಲ್ಲ. ತಮ್ಮ ತಂದೆ, ತಾಯಿ, ಮಗ, ಮಗಳು, ಆಪ್ತರು ನಿಧನರಾದಾಗ ಅವರ ಅಸ್ಥಿ, ಬೂದಿಯನ್ನು ತಂದು ಸುರಿದು, ಅವರ ಹೆಸರಿನಲ್ಲಿ ಸಸಿ ನೆಟ್ಟು, ಅದರ ಪೋಷಣೆಗೆ ಹಣ ಕೊಟ್ಟು, ಮನೆ ಮಕ್ಕಳಂತೆ ಸಾಕಿ ಬೆಳೆಸಿದ್ದಾರೆ.

ಅಗಲಿದವರ ನೆನಪಿಗೆ ಸಮಾಧಿ ಕಲ್ಲಿನ ಬದಲು ಸಸಿ ನೆಟ್ಟರೆ ಹೇಗಿದ್ದೀತು ?

ಇದೇ ಅಂತರಂಗ ಸುದ್ದಿ

vbhat@me.com

ಯೋಗಿ ದುರ್ಲಭಜೀ ಅವರು ಒಮ್ಮೆ ಒಂದು ಕಾಡನ್ನು ನೋಡಲು ಹೋಗಿದ್ದರು. ಸುಮಾರು ಒಂದು ಲಕ್ಷಕ್ಕೂ ಅಧಿಕ ಮರಗಳಿದ್ದ ಕಾಡು. ಹಾಗೆ ನೋಡಿದರೆ ಅಲ್ಲಿನ ಮರಗಳು ತಮ್ಮಷ್ಟಕ್ಕೆ ತಾವು ಬೆಳೆದದ್ದಲ್ಲ. ಎಲ್ಲವನ್ನೂ ಬೆಳೆಸಿದ್ದು. ಅಂದರೆ ಅದು ಕೃತಕ ಕಾಡು. ಅಲ್ಲಿ ಎಲ್ಲ ರೀತಿಯ ಮರಗಳಿದ್ದವು. ಅಲ್ಲಿ ಮರಗಳನ್ನು ನೆಟ್ಟು ಹೋದವರು ಬಹಳ ಆಸ್ಥೆಯಿಂದ ಅದರ ಆರೈಕೆ ಮಾಡುತ್ತಿದ್ದರು. ತಾವು ನೆಟ್ಟ ಮರ ಹೇಗಿದೆಯೆಂದು ವನಪಾಲಕರನ್ನು ವಿಚಾರಿಸುತ್ತಿದ್ದರು.

ವಿದೇಶಗಳಲ್ಲಿ ನೆಲೆಸಿದವರೂ ಕಾಲಕಾಲಕ್ಕೆ, “ನಾವು ನೆಟ್ಟ ಸಸಿ ಎಷ್ಟು ಎತ್ತರವಾಗಿದೆ, ನೀರು-ಗೊಬ್ಬರ ಹಾಕಿ ಆರೈಕೆ ಮಾಡುತ್ತಿದ್ದೀರಾ, ಆ ಸಸಿಯ ಫೋಟೊ ತೆಗೆದು ವಾಟ್ಸ್ಯಾಪ್‌ನಲ್ಲಿ ಕಳಿಸಿ ಕೊಡಿ" ಎಂದು ಹೇಳುತ್ತಿದ್ದರು. ಇನ್ನು ಕೆಲವರಂತೂ ತಾವು ನೆಟ್ಟ ಸಸಿ ದೊಡ್ಡ ಮರವಾಗಿದ್ದನ್ನು ಕಂಡು ಸಂಭ್ರಮಿಸಿ, ಅದಕ್ಕೆ ಪೂಜೆ ಮಾಡಿ, ಅದರ ಮುಂದೆ ನಿಂತು ಫೋಟೊ ತೆಗೆಸಿ, ಅದನ್ನು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಪೋಸ್ಟ್ ಮಾಡಿ ಖುಷಿ ಪಡುತ್ತಿದ್ದರು.

ಬರುಬರುತ್ತಾ ಈ ಕಾಡು ಸಮೃದ್ಧವಾಗಿ ಬೆಳೆದು ದಟ್ಟ ಅರಣ್ಯವೇ ಆಯಿತು. ಹೂವು, ಹಣ್ಣು, ಮರಮಟ್ಟುಗಳು ಸೇರಿದಂತೆ ವೈವಿಧ್ಯಮಯ ತಳಿಗಳಿಂದ ಈ ಕಾಡು ವೈಶಿಷ್ಟ್ಯಪೂರ್ಣವೆಂದು ಅನಿಸಿಕೊಂಡಿತು. ಈ ಕಾಡಿನಲ್ಲಿ ಔಷಧಿಯ ಗುಣಗಳುಳ್ಳ ಸಸ್ಯಗಳೂ ತಲೆಯೆತ್ತಿದವು. ಈ ಕಾಡಿಗೆ ಪ್ರತಿವರ್ಷ ಬಂದು ಹೋಗುವವರ ಸಂಖ್ಯೆಯೂ ಹೆಚ್ಚಾಯಿತು.

ಇದನ್ನೂ ಓದಿ: Vishweshwar Bhat Column: ಇದು ಸೈಕಲ್‌ ದೇಶ

‘ವಿಶ್ವದಲ್ಲೇ ಮನುಷ್ಯ ನಿರ್ಮಿಸಿದ ಪ್ರಥಮ ಅರಣ್ಯ’ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು. ಪತ್ರಿಕೆ, ಟಿವಿಗಳಲ್ಲೂ ಈ ಕಾಡಿನ ಬಗ್ಗೆ ವಿಶೇಷ ವರದಿ, ಕಾರ್ಯಕ್ರಮಗಳಾಗಿ ಅದು ಮತ್ತಷ್ಟು ಜನಪ್ರಿಯವಾಯಿತು. ಎಲ್ಲ ಕಾಡುಗಳಲ್ಲಿರುವ ಮರಗಳು ಕಣ್ಮರೆಯಾಗಿ, ಅರಣ್ಯ ವಿನಾಶದಲ್ಲಿದ್ದರೆ, ವರ್ಷದಿಂದ ವರ್ಷಕ್ಕೆ ಅತಿ ಶೀಘ್ರದಲ್ಲಿ ವಿಸ್ತರಿಸಿಕೊಳ್ಳುತ್ತಿರುವ ಕಾಡು ಇದೊಂದೇ ಎಂಬುದು ಇದರ ವೈಶಿಷ್ಟ್ಯಗಳಲ್ಲೊಂದಾಗಿತ್ತು.

ಈ ಮಧ್ಯೆ, ಕೆಲವು ಕಾಡುಗಳ್ಳರು ಈ ಅರಣ್ಯದಲ್ಲಿರುವ ಶ್ರೀಗಂಧ, ಬೀಟೆ, ತೇಗದ ಮರಗಳಿಗೆ ಕೊಡಲಿ ಹಾಕಿದರು. ಆಗ ತೀವ್ರ ಪ್ರತಿರೋಧ ವ್ಯಕ್ತವಾಯಿತು. ತಾವು ನೆಟ್ಟ ಮರಗಳಿಗೇ ಕೊಡಲಿ ಹಾಕಿದ್ದಾರಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಜನರು ಅಲ್ಲಿಗೆ ಬರಲಾರಂಭಿಸಿದರು. ಅರಣ್ಯಕ್ಕೆ ಒದಗಿಸಿದ ಭದ್ರತೆ ಹೆಚ್ಚಿಸುವಂತೆ ಆಗ್ರಹಿಸಿದರು. ಇವರೆಲ್ಲರನ್ನೂ ಸಂತೈಸುವ ಹೊತ್ತಿಗೆ ವನಪಾಲಕರು ಸುಸ್ತಾಗಿ ಹೋದರು. ಈ ಕಾಡಿನಲ್ಲಾದ ಮರಗಳ್ಳತನದ ಬಗ್ಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆ ಗಳಲ್ಲೂ ವರದಿಯಾಯಿತು.

ಇನ್ನು ಮುಂದೆ ಈ ರೀತಿ ಆಗದಂತೆ ತಾನೂ ಎಚ್ಚರ ವಹಿಸುವುದಾಗಿ ಸ್ಥಳೀಯ ಆಡಳಿತವೂ ಭರವಸೆ ನೀಡಿತು. ಕೇವಲ ಶ್ರೀಗಂಧ, ಬೀಟೆ, ತೇಗ, ಸಾಗವಾನಿ ಮರಗಳಷ್ಟೇ ಅಲ್ಲ, ಪ್ರತಿ ಮರಕ್ಕೂ ಲಕ್ಷ ಲಕ್ಷ ಹಣ ಕೊಡುತ್ತೇವೆಂದರೂ ಅದನ್ನು ನೆಟ್ಟವರು ಕಡಿಯಲು ಅವಕಾಶ ಕೊಡುತ್ತಿರಲಿಲ್ಲ. ಅದು ಬೆಲೆ ಕಟ್ಟಲಾಗದ ಅಮೂಲ್ಯ ಆಸ್ತಿ ಎಂದು ಅವುಗಳನ್ನು ನೆಟ್ಟವರು ಭಾವಿಸಿದ್ದರು. ಅಷ್ಟಕ್ಕೂ ಪೂಜಿಸಿದ ಮರವನ್ನು ಕಡಿಯಲು ಅವರು ಬಿಟ್ಟಾರಾ?

6.1

ಇಷ್ಟೆಲ್ಲ ಆದ ಮೇಲೆ ಟಿಂಬರ್ ಮಾಫಿಯಾದ ಕಣ್ಣು ಈ ಅರಣ್ಯದ ಮೇಲೆ ಬಿತ್ತು. ಈ ಅರಣ್ಯ ದೊಳಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ಹೈಟೆನ್‌ಶನ್ ವಿದ್ಯುತ್ ತಂತಿ ಮಾರ್ಗ ನುಗ್ಗಿಸುವ ಯೋಜನೆಯ ಪ್ರಸ್ತಾವನೆ ಹರಿಬಿಟ್ಟರು. ಖಡಾಖಡಿ ರಣಾಂಗಣವಾಗುವುದೊಂದು ಬಾಕಿ ಇತ್ತು. ಆ ಪರಿ ವಿರೋಧ ವ್ಯಕ್ತವಾಯಿತು. ಅಲ್ಲಿ ಸಸಿ ನೆಟ್ಟವರೆಲ್ಲ ಯಾರ ಪ್ರೇರಣೆಯಿಲ್ಲದೇ, ಸುದ್ದಿ ತಿಳಿದ ತಕ್ಷಣ ಧಾವಿಸಿ ಬಂದರು. ಅಂಥ ಯಾವುದೇ ಪ್ರಸ್ತಾವನೆಯೂ ಸರಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿಯೇ ಖುದ್ದು ಹೇಳಿಕೆ ನೀಡಿದರು. ಅಲ್ಲಿಗೆ ಆ ವಿವಾದ ಕೊನೆಗೊಂಡಿತು. ಯೋಗಿ ದುರ್ಲಭಜೀ ಈ ಪ್ರಸಂಗವನ್ನು ಹೇಳಿ ಸುಮ್ಮನಾದರು.

“ಯೋಗೀಜೀ, ಎಲ್ಲ ಕಡೆ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುತ್ತಿದ್ದರೂ ವ್ಯಕ್ತವಾಗದ ಪ್ರತಿಭಟನೆ, ಈ ಅರಣ್ಯದ ವಿಷಯಕ್ಕೆ ಬಂದಾಗ ಮುಗಿಲು ಮುಟ್ಟುವುದೇಕೆ? ಈ ಅರಣ್ಯವೇಕೆ ಅಷ್ಟು ಮಹತ್ವದ್ದು?" ಎಂದು ಕೇಳಿದೆ. ಅದಕ್ಕೆ ಯೋಗೀಜೀ ಹೇಳಿದರು- “ನೋಡಿ, ಇದು ಜನರೇ ನೆಟ್ಟ ಕಾಡು. ಇದೇನು ಸುಮ್ಮನೆ ನೆಟ್ಟಿದ್ದಲ್ಲ. ತಮ್ಮ ತಂದೆ, ತಾಯಿ, ಮಗ, ಮಗಳು, ಆಪ್ತರು ನಿಧನರಾದಾಗ ಅವರ ಅಸ್ಥಿ, ಬೂದಿಯನ್ನು ತಂದು ಸುರಿದು, ಅವರ ಹೆಸರಿನಲ್ಲಿ ಸಸಿ ನೆಟ್ಟು, ಅದರ ಪೋಷಣೆಗೆ ಹಣ ಕೊಟ್ಟು, ಮನೆ ಮಕ್ಕಳಂತೆ ಸಾಕಿ ಬೆಳೆಸಿದ್ದಾರೆ.

ಯಾರ ನೆನಪಿನಲ್ಲಿ ಇವುಗಳನ್ನು ನೆಟ್ಟಿದ್ದಾರೋ, ಅವರು ಮರದ ರೂಪದಲ್ಲಿ ಸಾಕ್ಷಾತ್ ಜೀವಂತ ವಾಗಿದ್ದಾರೆಂದು ನಂಬಿದ್ದಾರೆ. ಹೀಗಿರುವಾಗ ಈ ಮರಗಳನ್ನು ಕಡಿಯಲು ಬಿಟ್ಟಾರಾ? ತಮ್ಮ ಜೀವವನ್ನಾದರೂ ಒತ್ತೆಯಿಟ್ಟು ಈ ಅರಣ್ಯವನ್ನು ರಕ್ಷಿಸುತ್ತಾರೆ. ದುರ್ದೈವವೆಂದರೆ ಇವರೆಲ್ಲ ಬೇರೆ ಮರ, ಅರಣ್ಯಕ್ಕೆ ಕೊಡಲಿ ಬಿದ್ದಾಗ ಸುಮ್ಮನಿರುತ್ತಾರೆ. ಅದು ಏನು ಬೇಕಾದರೂ ಆಗಲಿ, ಈ ಕಾಡು ಮಾತ್ರ ಶಾಶ್ವತವಾಗಿರಲಿ ಎಂಬ ಮನೋಭಾವ. ಅದೇನೇ ಇರಲಿ, ಹೀಗಾದರೂ ನಾವು ಅರಣ್ಯ ಬೆಳೆಸಬೇಕಿದೆ, ಉಳಿಸಿಕೊಳ್ಳಬೇಕಿದೆ". ನಮ್ಮನ್ನು ಅಗಲಿದವರ ನೆನಪಿಗೆ ಸಮಾಧಿ ಮಾಡಿ, ಕಲ್ಲು ನೆಡುವ ಬದಲು ಒಂದು ಸಸಿ ನೆಟ್ಟರೆ ಹೇಗಿದ್ದೀತು, ಯೋಚಿಸಿ.

ಕಳೆದುಕೊಳ್ಳುವ ಸಂಗತಿಗಳು

ನ್ಯೂಯಾರ್ಕಿನ ಮೆಟ್ರೋ ಸ್ಟೇಶನ್‌ನಲ್ಲಿ ಒಬ್ಬ ವಯೋಲಿನ್ ನುಡಿಸುತ್ತಿದ್ದ. ಅದು ಜನವರಿಯ ಚಳಿಗಾಲ ಬೇರೆ. ಸಾವಿರಾರು ಮಂದಿ ಹಾದುಹೋಗುವ ಆ ಜಾಗದಲ್ಲಿ ಆತ ಸುಮಾರು 45 ನಿಮಿಷ ಗಳ ಕಾಲ ತನ್ಮಯನಾಗಿ ವಯೋಲಿನ್ ನುಡಿಸಿದ. ಎಲ್ಲರೂ ಆಫೀಸಿಗೆ ಹೋಗುವ ಧಾವಂತದಲ್ಲಿದ್ದ ವರೇ.

ಆತ ಸುಮಾರು ಮೂರು ನಿಮಿಷಗಳ ಕಾಲ ನುಡಿಸಿದ ಬಳಿಕ, ಒಬ್ಬ ದಾರಿಹೋಕ ಅವನ ಸಂಗೀತ ವನ್ನು ಕೇಳಿ ನಿಂತ. ಎರಡು ನಿಮಿಷಗಳ ಬಳಿಕ ಆತ ಅಲ್ಲಿಂದ ಹೊರಟ. ಹೊರಡುವ ಮುನ್ನ ಒಂದು ಡಾಲರ್ ಕೊಟ್ಟು ಹೋದ. ಮಹಿಳೆಯೊಬ್ಬಳು ವಯೋಲಿನ್ ನುಡಿಸುವುದನ್ನು ಕೇಳದಿ ದ್ದರೂ, ನೋಡದಿದ್ದರೂ ಒಂದು ಡಾಲರ್ ಎಸೆದು ಹೋದಳು.

ಅಷ್ಟೊತ್ತಿಗೆ ಮತ್ತೊಬ್ಬ ಸಂಗೀತಗಾರನ ಹತ್ತಿರದಲ್ಲಿ ನಿಂತು ಐದು ನಿಮಿಷ ಕೇಳಿ, ತನ್ನ ವಾಚ್ ಅನ್ನು ನೋಡಿಕೊಂಡು ಅಲ್ಲಿಂದ ಹೊರಟು ಹೋದ. ಅವನಿಗೆ ಹೋಗಲು ಇಷ್ಟವಿರಲಿಲ್ಲ. ಆದರೆ ಆಫೀಸಿಗೆ ತಡವಾಗಿರಬೇಕು. ಆತ ವಯೋಲಿನ್ ನುಡಿಸುತ್ತಿದ್ದರೆ ತದೇಕಚಿತ್ತದಿಂದ ನೋಡಿದವ ನೆಂದರೆ ನಾಲ್ಕು ವರ್ಷದ ಹುಡುಗ. ಅವನಿಗೆ ಆ ವಾದ್ಯದಿಂದ ಹೇಗೆ ಧ್ವನಿ ಮೂಡುತ್ತದೆಂಬ ಸೋಜಿಗ. ಅವನಿಗೆ ಅಲ್ಲಿಂದ ಕದಲಲು ಇಷ್ಟವಿರಲಿಲ್ಲ.

ಆದರೆ ಅವನ ತಾಯಿ ಅವನನ್ನು ಎಳೆದುಕೊಂಡು ಹೋದಳು. ಆತ 45 ನಿಮಿಷಗಳ ಕಾಲ ವಯೋಲಿನ್ ನುಡಿಸಿದರೆ, ಆರು ಮಂದಿ ಮಾತ್ರ ಕೆಲ ಕ್ಷಣ ನಿಂತು ಕೇಳಿದರು. ಸುಮಾರು ಇಪ್ಪತ್ತು ಮಂದಿ ಮಾತ್ರ ಹಣ ಹಾಕಿದರು. ಉಳಿದವರು ಅವನ ಸಂಗೀತವನ್ನು ಕೇಳಿದರೋ, ಇಲ್ಲವೋ? ಕೊನೆಯಲ್ಲಿ ಅವನಿಗೆ ಸಂಗ್ರಹವಾಗಿದ್ದು 32 ಡಾಲರ್ ಮಾತ್ರ. ಆತ ವಯೋಲಿನ್ ನುಡಿಸುವುದನ್ನು ನಿಲ್ಲಿಸಿದ. ಒಂದು ಕ್ಷಣ ಎಲ್ಲೆಡೆ ಮೌನ.

ಯಾರೂ ಅದನ್ನು ಗಮನಿಸಿರಲಿಲ್ಲ. ಯಾರೂ ಚಪ್ಪಾಳೆ ಹೊಡೆಯಲಿಲ್ಲ. ಅವನು ಯಾರು ಎಂದು ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಬಹುತೇಕ ಎಲ್ಲರೂ ಹೊಟ್ಟೆಪಾಡಿಗೆ ವಾದ್ಯ ನುಡಿಸುವ ನಿರ್ಗತಿಕ ನಿರಬಹುದು ಎಂದು ಭಾವಿಸಿದ್ದಿರಬಹುದು. ಆದರೆ ಆತ ಜಗದ್ವಿಖ್ಯಾತ ವಯೋಲಿನ್ ವಾದಕ ನಾಗಿದ್ದ. ಆತ ಅತ್ಯಂತ ಕಷ್ಟಕರವಾಗಿದ್ದ ರಾಗವನ್ನು ನುಡಿಸಿದ್ದ. ಆತನ ಕೈಯಲ್ಲಿದ್ದ ವಯೋಲಿನ್ ಅತಿ ಬೆಲೆಬಾಳುವಂಥದ್ದಾಗಿತ್ತು.

ಎರಡು ದಿನಗಳ ನಂತರ ನ್ಯೂಯಾರ್ಕಿನಲ್ಲಿ ಅವನ ಸಂಗೀತ ಕಛೇರಿ ನಡೆಯಿತು. ಅದಕ್ಕೆ ಜನ ಒಂದು ಸೀಟಿಗೆ ಸಾವಿರಾರು ಡಾಲರ್ ಕೊಟ್ಟು ಭಾಗವಹಿಸಿದರು. ಅಂದಹಾಗೆ ಆ ವಯೋಲಿನ್ ವಾದಕನ ಹೆಸರು ಜೋಶುವಾ ಬೆಲ್. ಇದು ನಿಜ ಪ್ರಸಂಗ. ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಒಬ್ಬ ಅನಾಮಧೇಯ, ನಿರ್ಗತಿಕ ಸಂಗೀತಗಾರನಂತೆ ಮೆಟ್ರೋ ಸ್ಟೇಶನ್‌ನಲ್ಲಿ ವಯೋಲಿನ್ ನುಡಿಸುವಂತೆ ಬೆಲ್‌ನನ್ನು ವಿನಂತಿಸಿಕೊಂಡಿತ್ತು.

ಜನರ ಆದ್ಯತೆ, ಅಭಿರುಚಿ, ಮೂಡು, ಧಾವಂತದ ಬದುಕಿನ ಬಯಕೆ ಮುಂತಾದ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಈ ಪ್ರಯೋಗ ಮಾಡುವುದು ಪತ್ರಿಕೆಯ ಉದ್ದೇಶವಾಗಿತ್ತು. ಜಗದ್ವಿಖ್ಯಾತ ಸಂಗೀತ ಗಾರನೊಬ್ಬ ಅತಿ ಕ್ಲಿಷ್ಟಕರ ರಾಗವನ್ನು ನುಡಿಸುತ್ತಿದ್ದರೂ, ಒಂದು ಕ್ಷಣ ನಿಂತು, ಸಮಾಧಾನದಿಂದ ಕೇಳಲು, ಸವಿಯಲು ನಮಗೆ ಸಮಯ ಇಲ್ಲ ಎಂದಾದರೆ, ನಮ್ಮ ಬದುಕಿನಲ್ಲಿ ನಾವು ಎಂತೆಂಥ ಉತ್ತಮ ಸಂಗತಿಗಳನ್ನು ಕಳೆದುಕೊಳ್ಳುತ್ತೇವೆ ಅಲ್ಲವೇ? ಅಂದ ಹಾಗೆ ಈ ಸರಳ ಆದರೆ ಪರಿಣಾಮ ಕಾರಿಯಾದ ಪ್ರಯೋಗ ಆಧರಿತ ವರದಿ ಪ್ರಕಟಿಸಿದ್ದಕ್ಕೆ ಪತ್ರಿಕೆಗೆ ಪುಲಿಟ್ಜರ್ ಪ್ರಶಸ್ತಿ ಬಂತು.

ಸಂದರ್ಶನಕ್ಕೆ ಬಂದವರು

ಎಚ್‌ಪಿ (ಹೆವೆಲೆಟ್-ಪೆಕಾರ್ಡ್) ಕಂಪನಿಗೆ ಒಬ್ಬ ಇಲೆಕ್ಟ್ರಿಕಲ್ ಎಂಜಿನಿಯರ್ ಉದ್ಯೋಗಕ್ಕೆ ಅರ್ಜಿ ಹಾಕಿದ. ಸಂದರ್ಶನಕ್ಕೆ ಕರೆ ಬಂತು. ಸಂದರ್ಶನದಲ್ಲಿ ಹತ್ತಾರು ಪ್ರಶ್ನೆಗಳನ್ನು ಕೇಳಿದರು. ಎಲ್ಲವು ಗಳಿಗೂ ಸಮರ್ಪಕವಾದ ಉತ್ತರ ನೀಡಿದ. ಕೊನೆಯಲ್ಲಿ ಒಂದು ಪ್ರಶ್ನೆ ಕೇಳಿದರು- “ನೀನೊಬ್ಬ ಇಲೆಕ್ಟ್ರಿಕಲ್ ಎಂಜಿನಿಯರ್. ನಿನಗೆ ನಮ್ಮ ಕಂಪನಿಯಲ್ಲೇಕೆ ಕೆಲಸ ಕೊಡಬೇಕು ಎಂದು ಭಾವಿಸು ತ್ತೀಯಾ?". ಆತ ಸಂದರ್ಶನಕ್ಕೆ ಹೋಗುವ ಮುನ್ನ ಎಚ್‌ಪಿ ಕಂಪನಿ ಬಗ್ಗೆ ತಿಳಿದು ಕೊಂಡಿದ್ದ. “ನೋಡಿ ಇಬ್ಬರು ಇಲೆಕ್ಟ್ರಿಕಲ್ ಎಂಜಿನಿಯರ್‌ಗಳಾದ ವೆಲಿಯಂ ರೆಡಿಂಗ್ಟನ್ ಹೆವಲೆಟ್ ಮತ್ತು ಡೆವಿಡ್ ಪೆಕಾರ್ಡ್ ಎಂಬುವವರು ಈ ಕಂಪನಿಯನ್ನು ಕಟ್ಟಿರುವಾಗ, ಮತ್ತೊಬ್ಬ ಇಲೆಕ್ಟ್ರಿಕಲ್ ಎಂಜಿನಿಯರ್ ಅದರಲ್ಲಿ ಏಕೆ ಕೆಲಸ ಮಾಡಬಾರದು?" ಎಂದ.

ತಮ್ಮ ಸಂಸ್ಥೆಯ ಇತಿಹಾಸ ತಿಳಿದುಕೊಂಡಿದ್ದಕ್ಕೆ ಹಾಗೂ ಅವನ ಆತ್ಮವಿಶ್ವಾಸಕ್ಕೆ ಅವರಿಗೆ ಖುಷಿ ಆಯ್ತು. “ನೀನು ಆಯ್ಕೆಯಾಗಿದ್ದೀಯಾ!" ಎಂದು ಹೇಳಿದರು. ಈ ಪ್ರಸಂಗವನ್ನು ನಾನು ಯಾಕೆ ನೆನಪಿಸಿಕೊಳ್ಳುತ್ತಿದ್ದೇನೆ ಅಂದರೆ, ಕೆಲ ತಿಂಗಳ ಹಿಂದೆ ಪತ್ರಿಕೋದ್ಯಮ ವಿದ್ಯಾರ್ಥಿಯೊಬ್ಬ ಉದ್ಯೋಗ ಅರಸಿ ಬಂದಿದ್ದ. ಆತನಿಗೆ ಐದು ತೀರಾ ಸರಳ ಪ್ರಶ್ನೆಗಳನ್ನು ಕೇಳಿದೆ.

ಮೂರು ಪತ್ರಿಕೆಗಳ ಸಂಪಾದಕರ ಹೆಸರುಗಳನ್ನು ಹೇಳು ಎಂದೆ. ಪಾಪ ಚಡಪಡಿಸಿದ. ಅವನ ಬಯೋಡಾಟದ ಮೇಲೆ ಕಣ್ಣಾಡಿಸಿದೆ. ಹದಿನಾರು ತಪ್ಪುಗಳಿದ್ದವು. “ಬಯೋಡಾಟದಲ್ಲೇ ಅಷ್ಟು ತಪ್ಪುಗಳಿದ್ದರೆ, ಪತ್ರಿಕೆಯಲ್ಲಿ ಎಷ್ಟು ತಪ್ಪು ಮಾಡ್ತೀಯಾ?" ಎಂದು ಕೇಳಿದೆ. “ಚೆನ್ನಾಗಿ ಮಾಡ್ಕೊಂಡು ಹೋಗ್ತೀನಿ ಸಾರ್" ಅಂದ. “ತಪ್ಪುಗಳನ್ನು ಚೆನ್ನಾಗಿ ಮಾಡ್ಕೊಂಡು ಹೋಗ್ತೀಯಾ?" ಎಂದೆ. “ಇಲ್ಲ ಸಾರ್" ಎಂದು ನಕ್ಕ. “ಒಂದು ಸರಳ ಟೆಸ್ಟ್ ಕೊಡ್ತೇನೆ, ಮಾಡು" ಎಂದೆ. ಒಂದು ಪುಟ ಭಾಷಾಂತರಿಸಲು ಮೂರು ತಾಸು ತಿಣುಕಾಡಿ, ಕೊನೆಗೆ ಯಾರಿಗೂ ಹೇಳದೇ ಪರಾರಿಯಾಗಿಬಿಟ್ಟ!

ನಂತರ ಆತ ನನಗೊಂದು ಮೆಸೇಜ್ ಮಾಡಿದ್ದ- “ನನಗೆ ಟಿವಿ ಚಾನೆಲ್‌ನಲ್ಲಿ ಕೆಲಸ ಸಿಕ್ಕಿದೆ. ನೀವು ತೋರಿದ ಪ್ರೀತಿಗೆ ಧನ್ಯವಾದಗಳು". ದೇವರು ದೊಡ್ಡವನು. ಪ್ರತಿಯೊಬ್ಬರಿಗೂ ಅವರದೇ ಆದ ಜಾಗವನ್ನು ಕಾಯ್ದಿರಿಸಿದ್ದಾನೆ. ಇನ್ನು ಅವನನ್ನು ಸಹಿಸಿಕೊಳ್ಳಬೇಕಾದವರು ಆ ಟಿವಿಯ ಸಹೋ ದ್ಯೋಗಿಗಳು ಹಾಗೂ ವೀಕ್ಷಕರು!

ಮನುಷ್ಯರ ನಾಯಿಪ್ರೀತಿ

“ಮನೆಯಲ್ಲಿ ಎಲ್ಲರೂ ಆರಾಮ ಇದ್ದಾರೆ, ನಾಯಿಯೂ ಸೇರಿದಂತೆ" ಎಂದು ನನ್ನ ತಂದೆಯವರು ನಾನು ಕಾಲೇಜಿನಲ್ಲಿ ಓದುವಾಗ ಪತ್ರ ಬರೆಯುತ್ತಿದ್ದರು. ಪ್ರತಿ ಪತ್ರದಲ್ಲೂ ನಾಯಿಯ ಬಗ್ಗೆ ಪ್ರಸ್ತಾಪವಿರುತ್ತಿತ್ತು. ನಮ್ಮ ಮನೆಗೆ ಅಕ್ಕಂದಿರು ಬರುವಾಗ ಅವರ ಮನೆಯ ನಾಯಿಯೂ ಬಂದಿದ್ದರೆ, “ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಅಕ್ಕ-ಭಾವಂದಿರೆಲ್ಲ ಬಂದಿದ್ದರು. ಜತೆಯಲ್ಲಿ ಅವರ ಮಕ್ಕಳು ಬಂದಿದ್ದರು. ನಾಯಿಯೂ ಬಂದಿತ್ತು" ಎಂದು ಪತ್ರದಲ್ಲಿ ಬರೆಯುತ್ತಿದ್ದರು. ಈ ಪತ್ರವನ್ನು ನೋಡಿ ನನಗೆ ನಗು ಬರುತ್ತಿತ್ತು. ನಮ್ಮ ಸಂಬಂಧಿಕರಿಗೆ ಬರೆದ ಪತ್ರದಲ್ಲೂ ನಾಯಿಯ ಬಗ್ಗೆ ತಂದೆಯವರು ಪ್ರಸ್ತಾಪಿಸುತ್ತಿದ್ದರು. ಅದನ್ನು ಓದಿ ಅವರೆಲ್ಲರೂ ಜೋರಾಗಿ ನಗುತ್ತಿದ್ದರು. ನಾವೆಲ್ಲ ಸೇರಿದಾಗ, ಈ ವಿಷಯ ಪ್ರಸ್ತಾಪವಾದಾಗ ಎಲ್ಲ ಸೇರಿ ಇದನ್ನು ತಮಾಷೆಯ ವಿಷಯವಾಗಿ ತೆಗೆದುಕೊಂಡು ನನ್ನ ತಂದೆಯವರನ್ನು ಗೇಲಿ ಮಾಡುತ್ತಿದ್ದರು.

ಮನುಷ್ಯರ ಬಗ್ಗೆಯೇ ಯಾರೂ ಯೋಚಿಸುವುದಿಲ್ಲ, ವಿಚಾರಿಸಿಕೊಳ್ಳುವುದಿಲ್ಲ. ಹೀಗಿರುವಾಗ ತಂದೆಯವರು ನಾಯಿಯ ಬಗ್ಗೆ ಪ್ರತಿ ಪತ್ರದಲ್ಲೂ ಬರೆಯುತ್ತಿದ್ದುದು ಉಳಿದವರಿಗೆ ವಿಚಿತ್ರವಾಗಿ ಕಾಣುತ್ತಿತ್ತು. ಆರಂಭದಲ್ಲಿ ನನಗೆ ಇದು ಹಾಗೇ ಅನಿಸಿದರೂ, ಕೊನೆ ಕೊನೆಗೆ ಅವರು ಪ್ರಾಣಿಗಳ ಬಗ್ಗೆ ಹೊಂದಿದ್ದ ಮೃದು ಮನಸ್ಸನ್ನು ಅರ್ಥಮಾಡಿಕೊಂಡಾಗ, ಅದು ತೀರಾ ಸಹಜ ಎನಿಸುತ್ತಿತ್ತು. ಅವರು ಮನೆಯಲ್ಲಿ ಸಾಕಿದ್ದ ಆಕಳು, ಬೆಕ್ಕಿನ ಯೋಗಕ್ಷೇಮದ ಬಗ್ಗೆ ತಮ್ಮ ಪತ್ರದಲ್ಲಿ ಬರೆಯು ತ್ತಿದ್ದರು. ಬೇರೆಯವರು ಈ ವಿಷಯದ ಬಗ್ಗೆ ತಮ್ಮನ್ನು ಗೇಲಿ ಮಾಡುತ್ತಾರೆ ಎಂದು ಅವರಿಗೆ ಗೊತ್ತಾದ ನಂತರವೂ, ಅವುಗಳ ಬಗ್ಗೆ ಬರೆಯುವುದನ್ನು ನಿಲ್ಲಿಸಲಿಲ್ಲ. ಕಾರಣ ಈ ಸಾಕುಪ್ರಾಣಿಗಳು ತಮ್ಮ ಕುಟುಂಬದ, ಮನೆಯ ಒಂದು ಭಾಗವೆಂದೇ ಅವರು ಭಾವಿಸಿದ್ದರು.

ಸಾಮಾನ್ಯವಾಗಿ ಯಾರೂ ಪತ್ರದಲ್ಲಿ ತಮ್ಮ ಮನೆಯ ನಾಯಿ, ಬೆಕ್ಕುಗಳ ಬಗ್ಗೆ ಬರೆಯುವುದಿಲ್ಲ. ಅದರಲ್ಲೂ 35-40 ವರ್ಷಗಳ ಹಿಂದೆ ಈ ರೀತಿ ಬರೆಯುತ್ತಿದ್ದುದು ಇಲ್ಲವೇ ಇಲ್ಲ ಎನ್ನಬಹುದು. ನನ್ನ ತಂದೆಯವರು ನನಗೆ ಬರೆದ ಹಳೇ ಪತ್ರಗಳನ್ನು ಇತ್ತೀಚೆಗೆ ಓದುತ್ತಿದ್ದೆ. ಆ ಎಲ್ಲ ಪತ್ರಗಳಲ್ಲಿ ನಾಯಿಯ ಪ್ರಸ್ತಾಪವಿಲ್ಲದೇ ಕೊನೆಗೊಂಡಿದ್ದೇ ಇಲ್ಲ.

ಈಗ ನಾಯಿ ಸಾಕುವುದು, ಮನೆಯಲ್ಲಿ ಮಕ್ಕಳೊಂದಿಗೇ ಬೆಳೆಸುವುದು, ಅವುಗಳಿಗೆ ಡ್ರೆಸ್ ಹೊಲಿಸು ವುದು, ಸತ್ತಾಗ ಸಮಾಧಿ ನಿರ್ಮಿಸುವುದು, ಕಾರಿನಲ್ಲಿ ಜತೆಯಲ್ಲಿಯೇ ಕರೆದುಕೊಂಡು ಹೋಗುವುದು ತೀರಾ ಸಹಜ. ಆದರೆ ಹಳ್ಳಿಗಳಲ್ಲಿ ಅದೂ ಅಷ್ಟು ವರ್ಷಗಳ ಹಿಂದೆ, ನಾಯಿ ಬಗ್ಗೆ ಅಂಥ ಮಮಕಾರ ಇರಲಿಲ್ಲ. ಈಗ ಅದೊಂದು ಫ್ಯಾಶನ್ ಆಗಿದೆ. ನಾನು ಅಮಿತಾ ತ್ರಾಸಿ ಬರೆದ The Color of Our sky ಎಂಬ ಕಾದಂಬರಿಯನ್ನು ಓದುತ್ತಿದ್ದೆ. ಕೊನೆಯಲ್ಲಿ ಕಾದಂಬರಿಕಾರ್ತಿಯ ಸಂಕ್ಷಿಪ್ತ ಪರಿಚಯ ಹೀಗಿತ್ತು- Amita Trasi was born and raised in Mumbai, India. She has an MBA in Human Resource Management and currently lives in Houston, Texas with her husband and two cats.

ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪರಿಚಯ ಸಾಮಾನ್ಯವಾಗಿದೆ. ಮನುಷ್ಯರು ಮನುಷ್ಯರ ಜತೆಗೆ ಜೀವಿಸುವುದು ಹೊಸತೇನಲ್ಲ. ಪ್ರಾಣಿಗಳ ಜತೆ ಬಾಳ್ವೆ ಮಾಡುವುದು ಬಹುತ್ವದ ಪ್ರತೀಕವಾಗಿದೆ. ದಿಲ್ಲಿಯ ವಾಸ್ತುಶಿಲ್ಪ ತಜ್ಞ ಸಂಜೀವ ಅಶೋಕ ತಾವು ಹೆಂಡತಿ, ಮಗ ಹಾಗೂ ಮೂರು ಹಾವುಗಳ ಜತೆ ಜೀವಿಸುತ್ತಿರುವುದಾಗಿ ಪರಿಚಯದಲ್ಲಿ ಹೇಳಿಕೊಂಡಿದ್ದರು. ಈ ರೀತಿಯ ಪರಿಚಯದಿಂದ ವ್ಯಕ್ತಿಯ ಬಗ್ಗೆ ಬೇರೆ ರೀತಿಯ ಭಾವನೆ ಮೂಡುವುದು ಸುಳ್ಳಲ್ಲ. ಕೆಲವರ್ಷಗಳ ಹಿಂದೆ ಫೇಸ್‌ಬುಕ್‌ ನಲ್ಲಿ ಒಬ್ಬರು ತಮ್ಮ ಪರಿಚಯದಲ್ಲಿ “ನಾನು ಜಗಳಗಂಟ, ನನ್ನ ನಾಯಿಗೆ ಒಳ್ಳೆಯ ಸ್ನೇಹಿತ. ಕಲಿಸಿದ್ದಕ್ಕಿಂತ ಕಲಿತದ್ದೇ ಜಾಸ್ತಿ. ಹೀಗಾಗಿ ನಾನು ಕೀಳುಮಾನವ, ಅದು ಉತ್ತಮ ಶ್ವಾನ" ಎಂದು ಬರೆದುಕೊಂಡಿದ್ದರು. ಈಗ ನನ್ನ ತಂದೆಯವರು ಬದುಕಿದ್ದಿದ್ದರೆ ಬಹುಶಃ ತಮ್ಮ ಪರಿಚಯದಲ್ಲಿ ನಾಯಿಯನ್ನು ಖಂಡಿತವಾಗಿಯೂ ಬಿಡುತ್ತಿರಲಿಲ್ಲವೇನೋ...

ಫ್ಯಾಕ್ಟರಿಯಲ್ಲಿ ಕಂಡ ಬೋರ್ಡ್

ಒಮ್ಮೆ ಪೀಣ್ಯದಲ್ಲಿರುವ ನನ್ನ ಸ್ನೇಹಿತರ ಫ್ಯಾಕ್ಟರಿಗೆ ಹೋಗಿದ್ದೆ. ಸುಮಾರು ನೂರಾರು ಕೆಲಸಗಾರ ರಿರುವ ಫ್ಯಾಕ್ಟರಿ ಅದು. ಸಾಕಷ್ಟು ಮಹಿಳಾ ಸಿಬ್ಬಂದಿಯೂ ಅಲ್ಲಿದ್ದರು. ಅಲ್ಲಿ ನೇತುಹಾಕಿದ್ದ ಒಂದು ಬೋರ್ಡ್ ಕಡೆಗೆ ಗಮನ ಹೋಯಿತು. ಅದನ್ನು ಬರೆದವರು ಯಾರು ಎಂದು ಕೇಳಿದೆ.

“ನಮ್ಮಲ್ಲಿಯೇ ಕೆಲಸ ಮಾಡುವ ಒಬ್ಬ ಸಿಬ್ಬಂದಿ" ಎಂದರು. “ಅವರನ್ನು ಭೇಟಿ ಮಾಡಬಹುದಾ?" ಎಂದು ಕೇಳಿದೆ. ಅಂದು ಅವರು ರಜಾದಲ್ಲಿದ್ದರು. ಹೀಗಾಗಿ ಭೇಟಿ ಸಾಧ್ಯವಾಗಲಿಲ್ಲ. ಆ ಬೋರ್ಡ್ ಮೇಲೆ ಬರೆದಿತ್ತು- Girls wearing long skirts beware of machines and girls with short skirts beware of machanics.

ವಿಚ್ಛೇದನ ಪಡೆದಿಲ್ಲ ಅಂದ್ರೆ

ವೃದ್ಧ ದಂಪತಿ ಧರ್ಮಗುರುವಿನ ಬಳಿ ವಿವಾಹ ವಿಚ್ಛೇದನ ಕೋರಿ ಬಂದರು. ಗಂಡನನ್ನು ನೋಡಿದ ಧರ್ಮಗುರು “ನಿಮ್ಮ ವಯಸ್ಸೆಷ್ಟು?" ಎಂದು ಕೇಳಿದರು. “103 ವರ್ಷ" ಎಂದ ಆ ವೃದ್ಧ ಪತಿರಾಯ. ಹೆಂಡತಿಯ ಕಡೆಗೆ ತಿರುಗಿ “ನಿಮ್ಮ ವಯಸ್ಸೆಷ್ಟು?" ಎಂದು ಕೇಳಿದರು ಧರ್ಮಗುರು. “96 ವರ್ಷ" ಎಂದಳು ಪತ್ನಿ.

“ಅದ್ಸರಿ, ನಿಮ್ಮ ಮದುವೆಯಾಗಿ ಎಷ್ಟು ವರ್ಷಗಳಾದವು?" ಎಂದು ಕೇಳಿದರು ಧರ್ಮಗುರು. ಈ ಪ್ರಶ್ನೆಗೆ ಇಬ್ಬರೂ “77 ವರ್ಷ" ಎಂದರು. “ನನಗೆ ಬಹಳ ಆಶ್ಚರ್ಯವಾಗುತ್ತಿದೆ, 77 ವರ್ಷ ದಾಂಪತ್ಯ ಜೀವನ ನಡೆಸಿದ ಬಳಿಕ ಈಗ ವಿಚ್ಛೇದನಕ್ಕೆ ನಿರ್ಧರಿಸಿದ್ದೀರಲ್ಲ, ಅದಕ್ಕೆ ಕಾರಣವೇನು?" ಎಂದು ಗಂಭೀರವಾಗಿ ಕೇಳಿದರು ಧರ್ಮಗುರುಗಳು. ಅದಕ್ಕೆ ಪತ್ನಿ ಹೇಳಿದಳು- “ಇದೇನೂ ಹಠಾತ್ ನಿರ್ಧಾರ ಅಲ್ಲ. ನಾವಿಬ್ಬರೂ ವಿಚ್ಛೇದನ ಪಡೆಯಲು 70 ವರ್ಷಗಳ ಹಿಂದೆಯೇ ತೀರ್ಮಾನಿಸಿದ್ದೆವು. ಆದರೆ ನಮಗಿರುವ ಒಬ್ಬನೇ ಮಗ ಬದುಕಿರುವ ತನಕ ಈ ನಿರ್ಧಾರವನ್ನು ಆಚರಣೆಗೆ ತರುವುದು ಬೇಡ ಎಂದುಕೊಂಡಿದ್ದೆವು. ಕಳೆದ ತಿಂಗಳು ಆತ ನಿಧನನಾದ. ಹೀಗಾಗಿ ಈಗ ತೀರ್ಮಾನಿಸಿದ್ದೇವೆ". ಆಕೆಯ ಮಾತಿಗೆ ಪತಿ ಹೌದೆಂಬಂತೆ ತಲೆಯಾಡಿಸಿದ. ಧರ್ಮಗುರು ಗೊಣಗಿಕೊಂಡ- “ಮದುವೆಯಾದವರು ವಿಚ್ಛೇದನ ಪಡೆದಿಲ್ಲ ಅಂದ್ರೆ ಸಂತಸದಿಂದ ಸಂಸಾರ ಮಾಡುತ್ತಿದ್ದಾರೆ ಎಂದರ್ಥವಲ್ಲ".