Rangaswamy Mookanahalli Column: ಅಭಿವೃದ್ದಿ ಎನ್ನುವ ಮಾಯಾಜಿಂಕೆಯ ಬೆನ್ನತ್ತಿ ಸಿಕ್ಕಿದ್ದು ಖಿನ್ನತೆ !
ಬದುಕಿಗೊಂದು ಹೋಮ್ವರ್ಕ್ ಬೇಕು. ಅದಿಲ್ಲದ ಬಿಡುಬೀಸು ಬದುಕು ನಮ್ಮನ್ನು ಎಲ್ಲಿಗೂ ಒಯ್ಯುವು ದಿಲ್ಲ. ಇಚ್ಛೆ ಬಂದಂತೆ ಬದುಕು ಎಂದರೆ, ನಮಗೇನಿಷ್ಟ ಅದನ್ನು ಮಾಡುವುದು. ನಮ್ಮಿಷ್ಟದ ಕೆಲಸ ವನ್ನು ಆಯ್ಕೆ ಮಾಡಿಕೊಳ್ಳುವುದು. ನಾವು ಯಾವಾಗ ನಮಗಿಷ್ಟವಾದ ಕೆಲಸವನ್ನು ಆಯ್ದುಕೊಳ್ಳುತ್ತೇವೆ ಆಗ ಅದು ಕೆಲಸ ಎನ್ನಿಸುವುದಿಲ್ಲ.


ವಿಶ್ವರಂಗ
mookanahalli@gmail.com
ನಾವು ಭಾರತೀಯರು ಪುನರ್ಜನ್ಮದಲ್ಲಿ ನಂಬಿಕೆಯಿಟ್ಟವರು. ಆದರೆ ನಮಗೆ ಜನ್ಮಾಂತರದ ನೆನಪು ಗಳು ಇರುವುದಿಲ್ಲ. ಹೀಗಾಗಿ ಜನ್ಮಗಳ ಮಾತು ಬೇಡ. ಇಂದು ನಮ್ಮ ಕೈಲೇನಿದೆ ಅಷ್ಟೇ ನಮ್ಮದು. ಈ ನಿಟ್ಟಿನಲ್ಲಿ ನೋಡಿದಾಗ ಇರುವುದೊಂದು ಬದುಕು, ಅದನ್ನು ನಿನ್ನಿಚ್ಛೆಯಂತೆ ಬದುಕು ಎನ್ನಲಡ್ಡಿ ಯಿಲ್ಲ. ನಮ್ಮಿಚ್ಛೆ ಎಂದ ತಕ್ಷಣ ಬಿಡು ಬೀಸಾಗಿ, ಸಮಾಜ ಹಾಕಿದ ಎಲ್ಲಾ ಕಟ್ಟಳೆಗಳನ್ನು ಧಿಕ್ಕರಿಸುತ್ತ ಬದುಕುವುದಲ್ಲ.
ಬದುಕಿಗೊಂದು ಹೋಮ್ವರ್ಕ್ ಬೇಕು. ಅದಿಲ್ಲದ ಬಿಡುಬೀಸು ಬದುಕು ನಮ್ಮನ್ನು ಎಲ್ಲಿಗೂ ಒಯ್ಯುವುದಿಲ್ಲ. ಇಚ್ಛೆ ಬಂದಂತೆ ಬದುಕು ಎಂದರೆ, ನಮಗೇನಿಷ್ಟ ಅದನ್ನು ಮಾಡುವುದು. ನಮ್ಮಿಷ್ಟದ ಕೆಲಸವನ್ನು ಆಯ್ಕೆ ಮಾಡಿಕೊಳ್ಳುವುದು. ನಾವು ಯಾವಾಗ ನಮಗಿಷ್ಟವಾದ ಕೆಲಸ ವನ್ನು ಆಯ್ದುಕೊಳ್ಳುತ್ತೇವೆ ಆಗ ಅದು ಕೆಲಸ ಎನ್ನಿಸುವುದಿಲ್ಲ.
ಮಾಡುವ ಕೆಲಸ ಮನಸ್ಸಿಗೆ ಆಪ್ತವಾಗಿದ್ದರೆ ಆಗ ಗಡಿಯಾರ ನೋಡಿ ಕೆಲಸ ಮಾಡುವ ಅವಶ್ಯಕತೆ ಬರುವುದಿಲ್ಲ. ಯಾವಾಗ ಆ ರೀತಿಯ ಸನ್ನಿವೇಶವನ್ನು ನಾವು ಸೃಷ್ಟಿಸಿಕೊಳ್ಳುತೇವೆ, ಆಗ ಫಲಿತಾಂಶ ಕ್ಕೂ ನಾವು ಹೆಚ್ಚು ಚಿಂತಿಸುವ ಅವಶ್ಯಕತೆ ಬರುವುದಿಲ್ಲ. ಕಳೆದ ಎರಡು ದಶಕದಲ್ಲಿನ ಜನರ ಮನಸ್ಥಿತಿಗೂ ಇಂದಿನ ಜನರ ಮನಸ್ಥಿತಿಗೂ ಬಹಳಷ್ಟು ಬದಲಾವಣೆಯಾಗಿದೆ.
ಹಿಂದೆ ಇಷ್ಟವಿರಲಿ ಬಿಡಲಿ ಸಿಕ್ಕ ಕೆಲಸವನ್ನು ಮಾಡಬೇಕಾಗಿತ್ತು. ಕೆಲಸ ಬಿಡುವುದು ಅಪರಾಧ ಎನ್ನುವಂತಾಗಿತ್ತು. ಇಂದಿಗೆ ಕಾಲ ಬದಲಾಗಿದೆ. ಚಿಕ್ಕ ವಯಸ್ಸಿನ ಹುಡುಗ/ಹುಡುಗಿಯರು ತಮ್ಮ ‘ಪ್ಯಾಶನ್’ ಹಿಂದೆ ಹೊರಟಿದ್ದಾರೆ.
ಇದನ್ನೂ ಓದಿ: Rangaswamy Mookanahalli Column: ಒತ್ತಾಸೆಯಾದವರಿಗೆ ನಾವೂ ಹೆಗಲಾಗಬೇಕಲ್ಲವೇ?
ತಾವು ಮಾಡುವ ಕೆಲಸದಿಂದ ಆರು ತಿಂಗಳು, ವರ್ಷ ಬ್ರೇಕ್ ತೆಗೆದುಕೊಂಡು ತಮ್ಮ ಮನಸ್ಸಿನ ಕೂಗಿಗೆ ಕಿವಿಯಾಗುತ್ತಿದ್ದಾರೆ. ಗೆಲುವು-ಸೋಲು ನಂತರದ ಮಾತು. ಪ್ರಯತ್ನ ಅತ್ಯಂತ ಮುಖ್ಯವಾಗಿ ಆಗಬೇಕಾದದ್ದು. ಅದಾಗುತ್ತಿದೆ. ‘ಇರುವುದು ಒಂದೇ ಬದುಕು, ಆದ್ದರಿಂದ ಅದನ್ನು ಚೆನ್ನಾಗಿ ಅನುಭವಿಸಿ ಬಿಡಬೇಕು, ಮಜಾ ಮಾಡಬೇಕು’ ಎನ್ನುವ ಒಂದು ದೊಡ್ಡ ವರ್ಗವಿದೆ. ‘ನಾಳೆ ಕಂಡವ ರಿಲ್ಲ, ಕಾಣದ ನಾಳೆಗಾಗಿ ನಮ್ಮ ಇಂದನ್ನು ಅದೇಕೆ ಬಲಿ ಕೊಡಬೇಕು?’ ಎನ್ನುವುದು ಇವರ ವಾದ.
‘ಬದುಕು ಒಂದೇ ಸರಿ. ಆದರೆ ಅದನ್ನು ಸರಿಯಾಗಿ ಬದುಕಿದರೆ ನಾವು ಸತ್ತ ಮೇಲೂ ಬದುಕಿರುತ್ತೇವೆ’ ಎನ್ನುವ ವರ್ಗವೂ ಉಂಟು. ನಾಳೆಗಾಗಿ, ಭವಿಷ್ಯಕ್ಕಾಗಿ, ದೀರ್ಘಕಾಲದ ಸ್ವಸುಖ ಮತ್ತು ಲೋಕ ಕಲ್ಯಾಣಕ್ಕಾಗಿ ಒಂದಷ್ಟು ಸ್ಯಾಕ್ರಿಫೈಸ್ ಮಾಡುವುದು ತಪ್ಪೇನಿಲ್ಲ ಎನ್ನುವ ಸಿದ್ಧಾಂತವಾದಿಗಳು ಇದ್ದಾರೆ. ಇವೆರಡರ ನಡುವೆ ಬ್ಯಾಲೆ ಮಾಡುತ್ತಾ ಬದುಕವರ ಸಂಖ್ಯೆಯೂ ಅಸಂಖ್ಯ.

‘ಒಂದೇ ಬದುಕು’ ಎಂದು ಅತ್ಯಂತ ಸುರಕ್ಷಿತವಾಗಿ ಬದುಕನ್ನು ನಡೆಸಬೇಕು. ಯಾವುದೇ ಜಂಜಾಟ, ರಿಸ್ಕ್ ಬೇಡ ಎನ್ನುವ ಜನರೂ ನಮ್ಮ ನಡುವೆ ಇದ್ದಾರೆ. ನಾವೆಲ್ಲರೂ ಒಬ್ಬರಂತೆ ಒಬ್ಬರಿಲ್ಲ, ಒಬ್ಬರಂತೆ ಒಬ್ಬರು ಚಿಂತಿಸುವುದಿಲ್ಲ. ಬದುಕನ್ನು ನಾವು ನೋಡುವ ದೃಷ್ಟಿಕೋನ ಬದಲಾಗುತ್ತಲೇ ಇರುತ್ತದೆ. ಒಟ್ಟಾರೆ ಅವರ ನಂಬಿಕೆ ಅವರ ತಲೆ ಕಾಯುತ್ತೆ. ಕೆಲಸ ಮಾಡುವುದು ಅಥವಾ ಬಿಡುವುದು, ವೇಳೆಯನ್ನು ಹೇಗೆ ಕಳೆಯುವುದು? ನಮ್ಮ ಬದುಕಿನ ಗುರಿಯೇನು? ಈ ಜಗತ್ತು, ಜನ ನಮ್ಮನ್ನು ಹೇಗೆ ನೆನಪಿಟ್ಟುಕೊಳ್ಳಬೇಕು? ಈ ಬದುಕಿನಿಂದ ನನ್ನ ನಿರೀಕ್ಷೆಗಳೇನು? ಬದುಕಿಗೆ ಏನಾದರೂ ಉದ್ದೇಶವಿದೆಯೇ? ನೆನಪಿರಲಿ, ಎಲ್ಲರೂ ಎಲ್ಲವನ್ನು ಸಾಧಿಸಲು ಬದುಕಬೇಕು ಎನ್ನುವ ನಿಯಮವಿಲ್ಲ.
ನನಗೇನೂ ಹೆಚ್ಚಿನ ಆಕಾಂಕ್ಷೆಯಿಲ್ಲ, ಸುಖವಾಗಿ, ಖುಷಿಯಾಗಿ ಬದುಕಿ ಜೀವನ ಸವೆಸಬೇಕು ಎನ್ನುವುದು ಕೂಡ ಒಂದು ಉದ್ದೇಶವೇ? ಏನೂ ಮಾಡುವುದಿಲ್ಲ, ಸುಮ್ಮನೆ ಓಡಾಡಿ ಕೊಂಡಿರು ತ್ತೇವೆ ಎನ್ನುವುದು ಕೂಡ ಒಂದು ಆಯ್ಕೆ, ಅದೂ ಕೂಡ ಒಂದು ಉದ್ದೇಶ. ಒಟ್ಟಿನಲ್ಲಿ ಬದುಕಿ ಗೊಂದು ಉದ್ದೇಶ ಬೇಕು. ಅದು ಬಹುತೇಕರ ಜೀವನದ ಉದ್ದೇಶದ ಜತೆಗೆ ತಾಳೆಯಾಗಬೇಕು ಎಂದಿಲ್ಲ.
ಯಾವಾಗ ಬದುಕಿಗೊಂದು ಉದ್ದೇಶ ಅಥವಾ ಗುರಿ ಇಲ್ಲವಾಗುತ್ತದೆ ಆಗ ಸದ್ದಿಲ್ಲದೆ ಖಿನ್ನತೆ ನಮ್ಮಲ್ಲಿ ಮನೆಮಾಡಿಕೊಳ್ಳುತ್ತದೆ. ನಾವು ಮಾತನಾಡಲು ಇಷ್ಟ ಪಡದ ವಿಷಯಗಳಲ್ಲಿ ಡಿಪ್ರೆಶನ್ ಕೂಡ ಒಂದು. ಕನ್ನಡದಲ್ಲಿ ಇದನ್ನ ‘ಖಿನ್ನತೆ’ ಎನ್ನಬಹುದು. ಇದೊಂದು ರೀತಿಯ ಮಾನಸಿಕ ರೋಗ. ಇದನ್ನ ಪ್ರಾಥಮಿಕ ಹಂತದಲ್ಲಿ ಗುರುತಿಸಿ ಇದಕ್ಕೆ ಬೇಕಾದ ಉಪಚಾರ ಮಾಡಿದರೆ ಇದನ್ನ ಗುಣಪಡಿಸಬಹುದು. ಖಿನ್ನತೆಯ ಅತ್ಯಂತ ಉಗ್ರ ಅಥವಾ ಕೊನೆಯ ಮಟ್ಟದಲ್ಲಿ ಮನುಷ್ಯ ತನ್ನನ್ನ ತಾನೇ ಕೊಂದುಕೊಳ್ಳಲು ನಿರ್ಧರಿಸುತ್ತಾನೆ, ಅಂದರೆ ಆತ್ಮಹತ್ಯೆಗೆ ಶರಣಾಗುತ್ತಾನೆ.
ಖಿನ್ನತೆಗೆ ಬಹಳಷ್ಟು ಕಾರಣಗಳಿವೆ ಅವುಗಳಲ್ಲಿ ಪ್ರಮುಖವಾದವೆಂದರೆ: ೧) ಕೆಲಸದಲ್ಲಿ ಸೋಲು ಅಥವಾ ಅಂದುಕೊಂಡಂತೆ ಜಯ ಸಿಗದಿರುವುದು. ಜಗತ್ತಿನ ಪಾಲಿಗೆ ಯಶಸ್ವಿಯಾಗಿ ಕಂಡರೂ ಅವರ ಮಟ್ಟದಲ್ಲಿ ಅದು ಸೋಲಿನಂತೆ ಕಾಣುತ್ತದೆ
೨) ಪ್ರೀತಿಯಲ್ಲಿ ಮೋಸ ಅಥವಾ ವಂಚನೆ
೩) ಶಾಲೆ ಅಥವಾ ಕಾಲೇಜಿನಲ್ಲಿ ಅವಮಾನ ಅಥವಾ ವಿದ್ಯಾಭ್ಯಾಸದಲ್ಲಿ ಸೋಲು
೪) ಕುಟುಂಬ ಕಲಹಗಳು
೫) ತೀವ್ರ ಹಣಕಾಸಿನ ಮುಗ್ಗಟ್ಟು ಯುವಜನತೆಯ ಸಾವಿನಲ್ಲಿ ಖಿನ್ನತೆ ಎರಡನೇ ಪ್ರಮುಖ ಕಾರಣ ವಾಗಿದೆ ಎನ್ನುವುದು, ನಮ್ಮ ಸಮಾಜ ತೀವ್ರಗತಿಯಲ್ಲಿ ಬದಲಾಗುತ್ತಿದೆ ಎನ್ನುವುದನ್ನು ಸಾರುತ್ತಿದೆ. ಮೇಲಿನ ಎಲ್ಲಾ ಕಾರಣಗಳನ್ನೂ ಮೀರಿದ ಕಾರಣವೊಂದು ಖಿನ್ನತೆಗೆ ಕಾರಣವಾಗುತ್ತಿದೆ.
ಇದು ಹೇಳಿ ಕೇಳಿ ಸೋಶಿಯಲ್ ಮೀಡಿಯಾ ಯುಗ. ತಾಸುಗಟ್ಟಲೆ ರೀಲ್ಸ್ ನೋಡುತ್ತಾ ಯುವ ಜನರು ಅಲ್ಲಿ ಜೀವನ ಕಳೆಯುತ್ತಿದ್ದಾರೆ. ಬದುಕಿಗೊಂದು ಉದ್ದೇಶ ಇಲ್ಲವಾಗಿದೆ. ಕೆಲಸ ಮಾಡುತ್ತಾ ಅಲ್ಲಿ ಯಶಸ್ಸು ಕಂಡ ಜನ ಅದನ್ನು ವರ್ಣರಂಜಿತವಾಗಿ ಚಿತ್ರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಾಕುವುದು, ಅದನ್ನು ನೋಡಿ ಬೇಕಿಲ್ಲದ ಹೋಲಿಕೆ ಮಾಡಿಕೊಂಡು ನಾನು ನಿಷ್ಪ್ರಯೋಜಕ ಎನ್ನುವ ತೀರ್ಮಾನಕ್ಕೆ ಬರುವುದು ಮತ್ತು ಆ ನಂಬಿಕೆ ದಿನ ಕಳೆದಂತೆ ಮತ್ತಷ್ಟು ಬಲಿತು ಗಟ್ಟಿ ಯಾಗಿ ಯಾವಾಗ ಖಿನ್ನತೆಗೆ ಪರಿವರ್ತನೆಯಾಗುತ್ತದೆ ಹೇಳಲು ಬಾರದು.
ಸರಿಯಾದ ಕೆಲಸವಿದ್ದಿದ್ದರೆ ಅವರಿಗೆ ಇಂಥ ಸ್ಥಿತಿ ಬರುತ್ತಿರಲಿಲ್ಲ ಎನ್ನುವುದು ಇಂಥ ಸಮಯದಲ್ಲಿ ಸಹಜವಾಗಿ ಕೇಳಿಬರುವ ಮಾತು. ನಮ್ಮಲ್ಲಿ ಕೆಲಸಕ್ಕೇನೂ ಕೊರತೆಯಿಲ್ಲ. ಕೆಲಸ ಮಾಡುವ ಮನಸ್ಸಿದ್ದವರಿಗೆ ಎಂದಿಗೂ ಕೆಲಸವಿದ್ದೇ ಇರುತ್ತದೆ. ಆದರೆ ನಮ್ಮಲ್ಲಿ ಕೆಲಸದ ಕುರಿತು ಬಹಳಷ್ಟು ಮಡಿವಂತಿಕೆಯಿದೆ. ನನ್ನ ವಿದ್ಯಾಭ್ಯಾಸಕ್ಕೆ ತಕ್ಕಂಥ ಹುದ್ದೆ ಬೇಕು ಎನ್ನುವುದು ಅಂಥ ಒಂದು ಮಡಿವಂತಿಕೆ.
ಏನಾದರೂ ಸರಿಯೇ ನಾನು ಮಾಡಲು ಸಿದ್ಧ ಎನ್ನುವ ಮನಸ್ಥಿತಿ ಉಳ್ಳವರಿಗೆ ಕೆಲಸದ ಕೊರತೆ ಎಂದಿಗೂ ಉಂಟಾಗುವುದಿಲ್ಲ. ಕೆಲಸ ಮಾಡುತ್ತಿದ್ದರೆ ಖಿನ್ನತೆ ಪಕ್ಕಕ್ಕೂ ಸುಳಿಯುವುದಿಲ್ಲ. ಖಿನ್ನತೆಗೆ ಅನೇಕ ಕಾರಣಗಳಿವೆ, ಅವುಗಳೆಲ್ಲವೂ ಬಹುತೇಕ ನಮ್ಮ ಹಿಂದಿನ ತಲೆಮಾರಿಗೆ ಸರಿ ಹೊಂದುವ ಕಾರಣಗಳು. ಇಂದಿಗೆ ಹೊಸ ಕಾರಣಗಳು ಸೃಷ್ಟಿಯಾಗಿವೆ. ಎಲ್ಲವೂ ಉಳ್ಳವರು ಕೂಡ ಖಿನ್ನತೆಗೆ ತುತ್ತಾಗುತ್ತಿದ್ದಾರೆ.
ಮೇಲ್ನೋಟಕ್ಕೆ ಅವರು ಬಹಳ ಯಶಸ್ವಿಯಂತೆ ಕಂಡರೂ ಅವರಲ್ಲೂ ಈ ಖಿನ್ನತೆ ಮನೆ ಮಾಡಿರುತ್ತದೆ. ಬಹಳಷ್ಟು ಸೆಲೆಬ್ರಿಟಿಗಳು ಕಾರಣವಿಲ್ಲದೆ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಎಲ್ಲವೂ ಸಿಕ್ಕ ನಂತರ ಅಚಾನಕ್ಕಾಗಿ ಮುಂದೇನು ಮಾಡಬೇಕು ಎಂದು ತಿಳಿಯದೆ ಉಂಟಾಗುವ ಖಿನ್ನತೆಯಿದು.
ನಮ್ಮಲ್ಲಿ ಒಂದು ಪ್ರಸಿದ್ಧ ಮಾತಿದೆ. ‘ಸಂಕಟ ಬಂದಾಗ ವೆಂಕಟರಮಣ’ ಎನ್ನುವುದು ಆ ಮಾತು. ನಾವು ಕಷ್ಟ ಬಂದಾಗ ಮಾತ್ರ ದೇವರನ್ನು ನೆನೆಯುತ್ತೇವೆ ಎನ್ನುವುದು ಮಾತಿನ ಅರ್ಥ. ಕಷ್ಟ ಬರದಿದ್ದರೆ ನಾವು ದೇವರನ್ನು ಕೂಡ ನೆನೆಯುವುದಿಲ್ಲ ಎನ್ನುವುದು ಕೂಡ ಮಾತಿನ ಅರ್ಥ. ದೇವರ ಪರಿಸ್ಥಿತಿಯೇ ಹೀಗಿರುವಾಗ ಮಾರ್ಗದರ್ಶಕರ, ಲೈಫ್ ಕೋಚ್ಗಳ ಕಥೆಯೇನಿರಬಹುದು? ನಮ್ಮಲ್ಲಿ ಒಂದು ಮಿಥ್ಯೆ ಆವರಿಸಿಕೊಂಡಿದೆ; ನಾವು ಸೈಕಾಲಜಿರನ್ನು ಕಂಡರೆ ಅಥವಾ ಲೈಫ್ ಕೋಚ್ ನ ಸಹಾಯ ಪಡೆದರೆ ನಮ್ಮಲ್ಲಿ ಏನೋ ಕೊರತೆಯಿದೆ ಎನ್ನುವುದು ಆ ಮಿಥ್ಯೆ. ನಾವೆಷ್ಟೇ ಬಲಿಷ್ಠ ರಿರಲಿ, ನಮ್ಮ ಬದುಕು ಎಷ್ಟೇ ಚೆನ್ನಾಗಿ ಸಾಗುತ್ತಿರಲಿ, ಮಾರ್ಗದರ್ಶಕರ ಸಲಹೆ ಪಡೆಯುವುದರಲ್ಲಿ ತಪ್ಪಿಲ್ಲ. ಅವರ ಸಲಹೆ ಪಡೆದ ಮಾತ್ರಕ್ಕೆ ಎಲ್ಲವೂ ಇನ್ನಷ್ಟು ಉತ್ತಮವಾಗುತ್ತದೆ ಎಂದಲ್ಲ, ನಮ್ಮ ಯಶಸ್ಸು ಸಂಪೂರ್ಣ ನಮ್ಮ ಮೇಲೆ ಅವಲಂಬಿಸಿದೆ.
ಸಲಹೆ ಯಾರು ಎಷ್ಟೇ ಕೊಟ್ಟರೂ ಅದನ್ನು ನಾವು ಸರಿಯಾಗಿ ಪಾಲಿಸದಿದ್ದರೆ ಅದರಿಂದ ಯಾವ ಪ್ರಯೋಜನವೂ ಇರುವುದಿಲ್ಲ. ಶಾಲೆಯಲ್ಲಿ ಶಿಕ್ಷಕರು ಎಲ್ಲಾ ಮಕ್ಕಳಿಗೂ ಪಾಠ ಹೇಳಿಕೊಡುತ್ತಾರೆ. ಆದರೆ ಕೆಲವು ಮಕ್ಕಳು ಮಾತ್ರ ಉತ್ತಮ ಫಲಿತಾಂಶವನ್ನು ತರುತ್ತಾರೆ.
ಕೆಲವರು ಅನುತ್ತೀರ್ಣರಾಗುತ್ತಾರೆ, ಮೆಜಾರಿಟಿ ಓಕೆ ಎನ್ನುವ ಮಟ್ಟದಲ್ಲಿ ಬದುಕುತ್ತಾರೆ. ಹೀಗೇಕೆ? ಅದು ನಾವು ನೀಡುವ ಪ್ರತಿಕ್ರಿಯೆಯ ಮೇಲೆ, ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಲೈಫ್ ಕೋಚ್ ತೆಗೆದುಕೊಂಡ ಮಾತ್ರಕ್ಕೆ ಗೆzವೆಂದು ಬೀಗಬೇಕಿಲ್ಲ, ಅಯ್ಯೋ ಇನ್ನೊಬ್ಬರ ಸಹಾಯ ಪಡೆಯುತ್ತಿದ್ದೇವೆ ಎಂದು ಕೊರಗಬೇಕಿಲ್ಲ. ಅವಶ್ಯಕ ಎನ್ನಿಸಿದ್ದನ್ನು ಮಾಡಲು ಹೆದರಬೇಕಿಲ್ಲ.
ಲೈಫ್ ಕೋಚ್ ಅಥವಾ ಮಾರ್ಗದರ್ಶಕರ ಸಹಾಯ ಬೇಕೆನ್ನಿಸಿದ್ದರೆ ಅದರಲ್ಲಿ ಸಂಕೋಚ ಬೇಡ. ಜಗತ್ತು ಏನೆಂದುಕೊಳ್ಳುತ್ತದೆ ಎನ್ನುವುದು ನಮ್ಮ ಲೆಕ್ಕಾಚಾರದಲ್ಲಿ ಎಂದಿಗೂ ಬರಬಾರದು. ಜಗತ್ತಿನ ಜನರ ಕೆಲಸ ಅವರು ಮಾಡುತ್ತಾರೆ. ನಮ್ಮ ಕೆಲಸ ನಾವು ಮಾಡುತ್ತಾ ಹೋಗೋಣ. ಲೈಫ್ ಕೋಚ್ ನಮಗೆ ಬೇಕಾದ ಉತ್ತೇಜನ ನೀಡುತ್ತಾರೆ.
ಬದುಕಿನ ಬಂಡಿಯನ್ನು ಸರಿದಾರಿಗೆ ತರಲು ಸಹಾಯ ಮಾಡುತ್ತಾರೆ. ಎಲ್ಲದಕ್ಕೂ ಮುಖ್ಯವಾಗಿ ನಮ್ಮ ಭಾವನೆಗಳನ್ನು, ಬೇಕು-ಬೇಡಗಳನ್ನು ಕೇಳಿ, ಸರಿ-ತಪ್ಪುಗಳ ನಿರ್ಧಾರದಲ್ಲಿ ಭಾಗಿಯಾಗು ತ್ತಾರೆ. ಇಂದಿನ ದಿನದಲ್ಲಿ ಕೇವಲ ಹಣವಿದ್ದವರು, ಸೆಲೆಬ್ರಿಟಿಗಳು ಮಾತ್ರ ಲೈಫ್ ಕೋಚ್ ಇಟ್ಟು ಕೊಳ್ಳಬೇಕು, ಇಟ್ಟುಕೊಳ್ಳುತ್ತಾರೆ ಎನ್ನುವ ಮಿಥ್ಯೆ ಕೂಡ ಹಲವರಲ್ಲಿದೆ.
ಹಾಗೇನಿಲ್ಲ, ಲೈಫ್ ಕೋಚ್ ಅಥವಾ ಮಾರ್ಗದರ್ಶಕರ ಸಲಹೆಯನ್ನು ಯಾರು ಬೇಕಾದರೂ ಪಡೆಯಬಹುದು. ಭಾರತ ವೇಗವಾಗಿ ಮುಂದುವರಿಯುತ್ತಿದೆ. ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿದೆ ಎನ್ನುವ ಮಾತುಗಳ ನಡುವೆ ಕೂಡ ನಾವಿನ್ನೂ 2-3 ದಶಕ ಕೆಲವು ವಿಷಯ ಗಳಲ್ಲಿ ಹಿಂದಿದ್ದೇವೆ.
ಮನಶ್ಶಾಸ್ತ್ರಜ್ಞರನ್ನು ಕಾಣುವುದು, ಹಣಕಾಸು ವಿಚಾರದಲ್ಲಿ ಸಲಹೆ ಪಡೆದುಕೊಳ್ಳುವುದು ಎರಡೂ ಇಂದಿಗೂ ಹೆಚ್ಚು ಪ್ರಸಿದ್ಧವಲ್ಲದ ವಿಷಯಗಳು. ಮನಶ್ಶಾಸ್ತ್ರಜ್ಞರನ್ನು ಕಾಣುತ್ತಿದ್ದೇನೆ ಎನ್ನುವುದನ್ನು, ನನಗೆ ಖಿನ್ನತೆಯಿದೆ ಎಂದು ಹೇಳುವುದನ್ನು ನಾನು ಮಧ್ಯಮವರ್ಗದ ಜನರಲ್ಲಿ ಇಲ್ಲಿಯವರೆಗೆ ಕಂಡಿಲ್ಲ.
ಮುಕ್ಕಾಲು ಪಾಲು ಜನರಿಗೆ ಅವರು ಖಿನ್ನತೆಗೆ ಒಳಗಾಗಿzರೆ ಎನ್ನುವುದು ಕೂಡ ಗೊತ್ತಾಗಿರುವುದಿಲ್ಲ. ಅವರಿಗೆ ಸಹಾಯ ಬೇಕಾಗಿರುತ್ತದೆ. ಅದನ್ನು ಕೇಳುವ ಸ್ಥಿತಿಯಲ್ಲೂ ಅವರಿರುವುದಿಲ್ಲ. ಅವರಲ್ಲಿ ರುವ ಖಿನ್ನತೆಯನ್ನು ಗುರುತಿಸಿ ಅದಕ್ಕೊಂದು ಚಿಕಿತ್ಸೆ ನೀಡಬೇಕು. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು? ನಿಮಗೆ ಗೊತ್ತಿರಲಿ ಭಾರತದ ಜನಸಂಖ್ಯೆಯ 15-20 ಪ್ರತಿಶತ ವಯಸ್ಕರಿಗೆ ಈ ರೀತಿಯ ಸಹಾಯದ ಅವಶ್ಯಕತೆಯಿದೆ.
ಹೀಗೆ ಅವಶ್ಯಕತೆಯಿರುವ ಜನರಲ್ಲಿ ತೊಂಬತ್ತೆರಡು ಪ್ರತಿಶತ ಜನರಿಗೆ ಯಾವ ಸಹಾಯವೂ ಸಿಗುವುದಿಲ್ಲ. ವಾರ್ಷಿಕವಾಗಿ 8 ಲಕ್ಷಕ್ಕೂ ಅಧಿಕ ಜನ ಆತ್ಮಹತ್ಯೆಗೆ ಶರಣಾಗುತ್ತಿರುವುದು ಇದನ್ನು ಸ್ಪಷ್ಟಪಡಿಸುತ್ತದೆ. ಜಗತ್ತಿನ ಸೂಯಿಸೈಡ್ ಕ್ಯಾಪಿಟಲ್ ಎನ್ನುವ ಕುಖ್ಯಾತಿ ಕೂಡ ಪಡೆದುಕೊಂಡಿದೆ. ಹಣಕಾಸಿನ ಲೆಕ್ಕಾಚಾರದಲ್ಲಿ ಹೇಳುವುದಾದರೆ 2012ರಿಂದ ಇಲ್ಲಿಯವರೆಗೆ ಈ ಕಾರಣದಿಂದ ಭಾರತಕ್ಕೆ 1 ಟ್ರಿಲಿಯನ್ ಡಾಲರ್ ಹಣ ನಷ್ಟವಾಗಿದೆ.
ಭಾರತದ ವಾರ್ಷಿಕ ಜಿಡಿಪಿ 4 ಟ್ರಿಲಿಯನ್ ಎನ್ನುವುದನ್ನು ನೋಡಿದಾಗ ಇದೆಷ್ಟು ದೊಡ್ಡ ಮೊತ್ತ ಎನ್ನುವ ಅರಿವು ನಿಮಗಾಗಬಹುದು. ಅಭಿವೃದ್ಧಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಪಾಲುದಾರನಾದಾಗ ಮಾತ್ರ ಅಭಿವೃದ್ಧಿಗೆ ಅರ್ಥ ಬರುತ್ತದೆ. ಉಳಿದಂತೆ ಎಲ್ಲವೂ ಕೇವಲ ಆರ್ಥಿಕತೆ ಯ ಲೆಕ್ಕಾಚಾರದ ಅಂಕಿ-ಅಂಶವಾಗಿ ಉಳಿದುಕೊಳ್ಳುತ್ತದೆ.