ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

R T Vittalmurthy Column: ಬರಲಿದ್ದಾರೆಯೇ ಸಿದ್ದು ಸಂಪುಟಕ್ಕೆ ಹೊಸ ಸೇನಾನಿ ?

ಮಂತ್ರಿ ಮಂಡಲದಿಂದ ಯಾರನ್ನಾದರೂ ಕೈ ಬಿಡಲು ಭ್ರಷ್ಟಾಚಾರವೇ ಮಾನದಂಡವಾಗುವುದಾದರೆ ಟಾಪ್ ಲೆವೆಲ್ಲಿನಿಂದಲೇ ಇದನ್ನು ಜಾರಿ ಮಾಡಬೇಕು. ಸಣ್ಣ ಪುಟ್ಟ ಮೀನುಗಳನ್ನು ಬಲಿ ಪಡೆಯುವು ದರಲ್ಲಿ ಅರ್ಥವೇ ಇಲ್ಲ. ಸಂಪುಟ ಪುನರ್ರಚಿಸುವಾಗ ಅದಕ್ಷತೆಯನ್ನು ಮಾನದಂಡ ವಾಗಿಟ್ಟುಕೊಂಡರೆ 6 ರಿಂದ 8 ಮಂದಿಯನ್ನು ಸಚಿವ ಸಂಪುಟದಿಂದ ಕೈ ಬಿಡಬಹುದು ಎಂಬುದು ಸಿದ್ದರಾಮಯ್ಯ ಅವರ ಯೋಚನೆ.

ಬರಲಿದ್ದಾರೆಯೇ ಸಿದ್ದು ಸಂಪುಟಕ್ಕೆ ಹೊಸ ಸೇನಾನಿ ?

ಮೂರ್ತಿಪೂಜೆ

ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ‘ಒನ್ ಮ್ಯಾನ್ ಆರ್ಮಿ’ಯಂತೆ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸದ್ಯದ ಮಂತ್ರಿಮಂಡಲಕ್ಕೆ ಸೇರ್ಪಡೆ ಯಾಗಲಿದ್ದಾರೆ. ಕುತೂಹಲದ ಸಂಗತಿ ಎಂದರೆ ಅವರನ್ನು ಮಂತ್ರಿ ಮಾಡಲು ಸಿಎಂ ಸಿದ್ದರಾಮಯ್ಯ ಉತ್ಸುಕರಾಗಿರುವುದು.

ಅಂದ ಹಾಗೆ, ರಾಜ್ಯ ಸಚಿವ ಸಂಪುಟವನ್ನು ಪುನರ್ರಚಿಸುವ ವಿಷಯ ನನೆಗುದಿಗೆ ಬಿದ್ದಿರುವುದು ಹಳೆಯ ವಿಚಾರ. ಹೀಗೆ ಸಂಪುಟ ಪುನರ್ರಚನೆಯ ಕಾರ್ಯ ನನೆಗುದಿಗೆ ಬೀಳಲು ಹಲವು ಕಾರಣ ಗಳಿವೆ. ಅದರಲ್ಲಿ ಮುಖ್ಯವಾದುದು ಪುನರ್ರಚನೆಗೆ ಅನುಸರಿಸಬೇಕಾದ ಮಾನದಂಡ ಮತ್ತು ಹಾಲಿ ಸಂಪುಟದಿಂದ ಎಷ್ಟು ಮಂದಿಗೆ ಗೇಟ್‌ಪಾಸ್ ಕೊಡಬೇಕು? ಎಂಬುದು.

ಮೂಲಗಳ ಪ್ರಕಾರ, ಸಿದ್ದರಾಮಯ್ಯ ಸಂಪುಟದಲ್ಲಿರುವ ಹನ್ನೆರಡು ಮಂತ್ರಿಗಳಿಗೆ ಗೇಟ್‌ಪಾಸ್ ಕೊಡಬೇಕು ಎಂಬುದು ಕಾಂಗ್ರೆಸ್ ವರಿಷ್ಠರ ಯೋಚನೆ. ಕಾರಣ? ಈ ಮಂತ್ರಿಗಳ ಮೇಲೆ ಕೇಳಿ ಬರುತ್ತಿರುವ ಭ್ರಷ್ಟಾಚಾರದ ಆರೋಪ. ಇವರ ಪೈಕಿ ಬಹುತೇಕರು ತಮ್ಮ ಕೆಲಸಕ್ಕೆ ಪರ್ಯಾಯ ಅಡ್ಡೆಗಳನ್ನು ಸೃಷ್ಟಿಸಿಕೊಂಡು ಅಲ್ಲಿಯೇ ತಮ್ಮ ಕೆಲಸ ಮುಗಿಸಿಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲ, ಇದರ ಭರಾಟೆಯಲ್ಲಿ ಆಡಳಿತ ಕೇಂದ್ರ ವಿಧಾನಸೌಧ, ವಿಕಾಸಸೌಧದ ಕಡೆ ಸುಳಿಯುವುದನ್ನು ಫುಲ್ಲು ಕಡಿಮೆ ಮಾಡಿದ್ದಾರೆ. ಹಾಗಂತ ಇಂಥ ಸಚಿವರ ವಿರುದ್ಧ ಅಸಂಖ್ಯಾತ ಕಾರ್ಯಕರ್ತರು ವರಿಷ್ಠರಿಗೆ ಪತ್ರ ಬರೆಯುತ್ತಲೇ ಇದ್ದಾರೆ, ಮೆಸೇಜು ಕಳಿಸುತ್ತಲೇ ಇದ್ದಾರೆ. ಹೀಗಾಗಿ ಇಂಥ ಒಂದು ಡಜನ್ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು, ಹಿರಿಯರಿಗೆ, ದಕ್ಷರಿಗೆ, ಸರಕಾರದ ಇಮೇಜ್ ಹೆಚ್ಚಿಸಬಲ್ಲವರಿಗೆ ಪ್ರಿಫರೆನ್ಸು ಕೊಟ್ಟರಾಯಿತು ಎಂಬುದು ವರಿಷ್ಠರ ಮಾತು.

ಹಾಗಂತಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲ ಹಲವು ಬಾರಿ ಸಿಎಂ ಸಿದ್ದರಾಮಯ್ಯ ಅವರಿಗೆ ಮೆಸೇಜು ಮುಟ್ಟಿಸಿದ್ದಾರೆ. ಆದರೆ ಇಂಥ ಮೆಸೇಜು ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತಿಲ್ಲ. ಮಂತ್ರಿ ಮಂಡಲದಿಂದ ಯಾರನ್ನಾದರೂ ಕೈ ಬಿಡಲು ಭ್ರಷ್ಟಾಚಾರವೇ ಮಾನದಂಡವಾಗುವುದಾದರೆ ಟಾಪ್ ಲೆವೆಲ್ಲಿನಿಂದಲೇ ಇದನ್ನು ಜಾರಿ ಮಾಡಬೇಕು.

ತಿಮಿಂಗಿಲಗಳನ್ನು ಬಿಟ್ಟು ಸಣ್ಣ ಪುಟ್ಟ ಮೀನುಗಳನ್ನು ಬಲಿ ಪಡೆಯುವುದರಲ್ಲಿ ಅರ್ಥವೇ ಇಲ್ಲ ಎಂಬುದು ಸಿದ್ದರಾಮಯ್ಯ ಅವರ ಯೋಚನೆ. ಹೀಗಾಗಿ ಸಂಪುಟ ಪುನರ್ರಚಿಸುವಾಗ ಅದಕ್ಷತೆ ಯನ್ನು ಮಾನದಂಡವಾಗಿಟ್ಟು ಕೊಂಡರೆ ಆರರಿಂದ ಎಂಟು ಮಂದಿಯನ್ನು ಸಚಿವ ಸಂಪುಟ ದಿಂದ ಕೈ ಬಿಡಬಹುದು ಎಂಬುದು ಸಿದ್ದರಾಮಯ್ಯ ಅವರ ಥಿಂಕಿಂಗು.

ಹೀಗಾಗಿ ಸಂಪುಟ ಪುನರ್ರಚನೆಯ ವಿಷಯದಲ್ಲಿ ವರಿಷ್ಠರು ಮತ್ತು ಸಿದ್ದರಾಮಯ್ಯ ನಡುವೆ ಸಣ್ಣ ಸಂಘರ್ಷ ಮುಂದುವರಿದಿದ್ದು, “ಈಗಲೇ ಬ್ಯಾಡ ಬಿಡ್ರೀ. ನವೆಂಬರ್ ಗೆ ಸರಕಾರ ಬಂದು ಎರಡೂ ವರೆ ವರ್ಷವಾಗುತ್ತದೆ. ಹೀಗಾಗಿ ನಂತರವೇ ಸಂಪುಟ ಪುನರ್ರಚನೆ ಮಾಡಿದ್ರಾಯ್ತು" ಅಂತ ಹೇಳುವಲ್ಲಿಗೆ ಈ ಎಪಿಸೋಡು ತಲುಪಿದೆ. ಆದರೆ ಸಂಪುಟ ಪುನರ್ರಚನೆಯ ಎಪಿಸೋಡು ನಿಂತ ನಿಂತಿದ್ದರೂ ಸಿಎಂ ಸಿದ್ದರಾಮಯ್ಯ ಅವರಿಗೀಗ ತುರ್ತಾಗಿ ಬಿ.ಕೆ.ಹರಿಪ್ರಸಾದ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಉತ್ಸುಕತೆ ಶುರುವಾಗಿದೆ.

ಇದಕ್ಕೆ ಹಲವು ಕಾರಣಗಳಿದ್ದರೂ ಮುಖ್ಯವಾಗಿರುವುದು ಹರಿಪ್ರಸಾದ್ ಅವರ ಚಿಂತನೆ. ಹಲವು ದಶಕಗಳಿಂದ ಮೇಡಂ ಸೋನಿಯಾ ಗಾಂಧಿ ಅವರ ಆಪ್ತ ಬಳಗದಲ್ಲಿರುವ ಹರಿಪ್ರಸಾದ್, ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ವ್ಯವಸ್ಥಿತವಾಗಿ ಹೋರಾಡುತ್ತಾ ಬಂದವರು. ಎಣಿಸಿ ನೋಡಿದರೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ಹೋರಾಟ ನಡೆಸುವ ಮಂತ್ರಿಗಳ ಸಂಖ್ಯೆ ತುಂಬ ಕಡಿಮೆ.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಅವರಂಥ ಮೂರ್ನಾಲ್ಕು ಮಂದಿಯನ್ನು ಹೊರತುಪಡಿಸಿದರೆ ವೈಚಾರಿಕ ಶಸ್ತ್ರಾಸ್ತ್ರ ಗಳೊಂದಿಗೆ ಹೋರಾಟಕ್ಕಿಳಿಯುವ ಶಕ್ತಿಯೇ ಬಹುತೇಕರಿಗಿಲ್ಲ. ಈ ಪೈಕಿ, ಸಚಿವರಾದ ಮಹದೇವಪ್ಪ ಅವರು ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾಗಳನ್ನು ನಡೆಸಿ, ಶೋಷಿತ ಸಮುದಾಯಗಳಿಗೆ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಬಲ ತುಂಬಿದವರು.

ಇನ್ನು ಪ್ರಿಯಾಂಕ್ ಖರ್ಗೆಯವರು ಬಿಜೆಪಿ, ಸಂಘ ಪರಿವಾರದ ದಾಳಿಗೆ ಪ್ರತಿ ದಾಳಿ ಮಾಡುವ ಮೂಲಕ ಗಮನ ಸೆಳೆದವರು. ಹೀಗಾಗಿ ದಿನ ಕಳೆದಂತೆ ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ಹೋರಾಡಲು ಸಿದ್ದರಾಮಯ್ಯ ಅವರಿಗೆ ಸಮರ್ಥ ಸೇನಾನಿಗಳ ಕೊರತೆ ಇದೆ. ಈ ಕೊರತೆಯನ್ನು ಸಾಧ್ಯವಾದಷ್ಟು ಬೇಗ ತುಂಬಬೇಕು ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ.

ಅದರಲ್ಲೂ ದಕ್ಷಿಣ ಕನ್ನಡ ಜಿಯ ರಾಜಕಾರಣ ದಿನ ದಿನಕ್ಕೂ ಸೂಕ್ಷ್ಮವಾಗುತ್ತಾ ನಡೆದಿರುವ ರೀತಿ ಮತ್ತು ಅದನ್ನು ನಿಭಾಯಿಸುವಲ್ಲಿ ತಮ್ಮ ಜತೆಗಿರುವ ಪಡೆ ವಿಫಲವಾಗುತ್ತಿರುವ ರೀತಿ ಸಹಜ ವಾಗಿಯೇ ಸಿದ್ದರಾಮಯ್ಯ ಅವರನ್ನು ಚಿಂತೆಗೀಡು ಮಾಡಿದೆ. ಹಾಗಂತಲೇ ಅವರ ಕಣ್ಣು ಬಿ.ಕೆ.ಹರಿಪ್ರಸಾದ್ ಅವರ ಮೇಲೆ ಬಿದ್ದಿದೆ.

ಅಂದ ಹಾಗೆ, ಸರಕಾರ ಅಸ್ತಿತ್ವಕ್ಕೆ ಬಂದ ಶುರುವಿನಲ್ಲಿ ತಾವು ಮಂತ್ರಿಯಾಗದಂತೆ ಸಿದ್ದರಾಮಯ್ಯ ತಡೆದರು ಎಂಬ ಸಿಟ್ಟು ಹರಿಪ್ರಸಾದ್ ಅವರಲ್ಲಿತ್ತಾದರೂ, ತದನಂತರದ ದಿನಗಳಲ್ಲಿ ತಮಗೆ ಅಡ್ಡಗಾಲು ಹಾಕಿದ ಶಕ್ತಿ ಯಾವುದು ಎಂಬುದು ಹರಿಪ್ರಸಾದ್ ಅವರಿಗೆ ಮನವರಿಕೆಯಾಗಿದೆ.

ಹೀಗಾಗಿ ಅವರೀಗ ಸಿದ್ದರಾಮಯ್ಯ ಅವರ ವಿಷಯದಲ್ಲಿ ಕೂಲ್ ಆಗಿದ್ದಾರಷ್ಟೇ ಅಲ್ಲ, ಸಿದ್ದು ಪಾಳಯದ ಪರಮಾಪ್ತರಾಗಿ ಬದಲಾಗಿದ್ದಾರೆ. ಇದೆಲ್ಲದರಷ್ಟೇ ಮುಖ್ಯವಾಗಿ ದಿಲ್ಲಿ ರಾಜಕಾರಣದ ಪಟ್ಟುಗಳನ್ನು ಕರ್ನಾಟಕದ ಬೇರೆಲ್ಲ ಕಾಂಗ್ರೆಸ್ ನಾಯಕರಿಗಿಂತ ಹೆಚ್ಚಾಗಿ ಕರಗತ ಮಾಡಿ ಕೊಂಡವರು ಹರಿಪ್ರಸಾದ್. ಕರ್ನಾಟಕದಲ್ಲಿ ಸರಕಾರ ಅಸ್ತಿತ್ವಕ್ಕೆ ಬಂದ ಎರಡು ವರ್ಷಗಳ ಅವಧಿಯಲ್ಲಿ ಇದು ಹೈಕಮಾಂಡ್ ಆರ್ಡರ್ ಅಂತ ಬಂದ ಬಹುತೇಕ ಸಂದೇಶಗಳು ನಕಲಿ ಮತ್ತು ಅಂಥ ಆರ್ಡರುಗಳು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಗಮನಕ್ಕೆ ಬಾರದೆಯೇ ರಾಜ್ಯದ ನಾಯಕರ ಮೇಲೆ ಎರಗುತ್ತಿವೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಾಗುತ್ತಿದೆ.

ಹೀಗಿರುವಾಗ ಹರಿಪ್ರಸಾದ್ ಅವರು ಸಂಪುಟಕ್ಕೆ ಬಂದು ತಮ್ಮ ಪಕ್ಕ ಕುಳಿತರೆ ದಿಲ್ಲಿಯಿಂದ ಹಾರಿ ಬರುತ್ತಿರುವ ಹೈಕಮಾಂಡ್ ಆರ್ಡರುಗಳಲ್ಲಿ ಅಸಲಿ ಯಾವುದು, ನಕಲಿ ಯಾವುದು? ಅಂತ ಗೊತ್ತಾಗುತ್ತದೆ. ಇದೇ ರೀತಿ ತಮ್ಮ ವಿರುದ್ಧ ಹೈಕಮಾಂಡ್ ಮಟ್ಟದಲ್ಲಿ ರೂಪುಗೊಂಡಿರುವ ಜಾಲ ಯಾವುದು? ಈ ಜಾಲಕ್ಕೆ ಪ್ರತಿಜಾಲ ಹೆಣೆದು ಕೌಂಟರ್ ಕೊಡುವುದು ಹೇಗೆ? ಎಂಬುದಕ್ಕೂ ಹರಿಪ್ರಸಾದ್ ನೆರವು ಸಿಗುವುದು ನಿಕ್ಕಿ ಎಂಬುದು ಸಿದ್ದು ಲೆಕ್ಕಾಚಾರ.

ಈ ಲೆಕ್ಕಾಚಾರದ ಬೆನ್ನ ಸಂಪುಟಕ್ಕೆ ಸಣ್ಣ ಸೈಜಿನ ಸೂಜಿ ಚುಚ್ಚಲಿರುವ ಅವರು ಸದ್ಯ ಮಂತ್ರಿ ಮಂಡಲದಲ್ಲಿರುವ ಬೋಸರಾಜು ಅವರನ್ನು ಕೈ ಬಿಟ್ಟು ಹರಿಪ್ರಸಾದ್ ಕೈಗೆ ಮಂತ್ರಿಗಿರಿಯ ದಂಡ ಕೊಡಲು ಉದ್ದೇಶಿಸಿದ್ದಾರೆ. ಮೂಲಗಳ ಪ್ರಕಾರ, ಜುಲೈ ತಿಂಗಳ ಅಂತ್ಯದಲ್ಲಿ ಹರಿಪ್ರಸಾದ್ ಮಂತ್ರಿ ಯಾಗುವುದು ನಿಶ್ಚಿತ.

ಇನ್ನು ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಮಂತ್ರಿಯಾದ ನಂತರ ಹರಿಪ್ರಸಾದ್ ವಿಧಾನಪರಿಷತ್ತಿನಲ್ಲಿ ಸಭಾನಾಯಕರಾಗಲಿದ್ದಾರೆ. ಹೀಗೆ ನಾಯಕರಾಗುವ ಅವರ ಅಕ್ಕ-ಪಕ್ಕ ಸಮರ್ಥ ಸೇನಾಧಿಪತಿಗಳ ಪಡೆಯೂ ಇರಲಿದೆ. ಇವತ್ತು ವಿಧಾನ ಪರಿಷತ್ತಿಗೆ ಸರಕಾರ ನಾಮಕರಣ ಮಾಡಲು ನಿರ್ಧರಿಸಿರುವ ನಾಲ್ಕು ಮಂದಿಯ ಪೈಕಿ ಡಿ.ಜಿ.ಸಾಗರ್, ದಿನೇಶ್ ಅಮೀನ್ ಮಟ್ಟು ಹಾಗೂ ರಮೇಶ್ ಬಾಬು ಅವರೇ ಈ ಸೇನಾಧಿಪತಿಗಳು. ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರವಾಗಿ ಹೋರಾಡುತ್ತಾ ಬಂದ ಇವರು ಹರಿಪ್ರಸಾದ್ ಅವರ ಜತೆಗೂಡಿದರೆ ಪರಿಷತ್ತಿನಲ್ಲಿ ಕಾಂಗ್ರೆಸ್ ಸೈನ್ಯ ಬಲಿಷ್ಠವಾಗುತ್ತದೆ ಮತ್ತು ಬಿಜೆಪಿಗೆ ಟಫ್‌ ಫೈಟು ಕೊಡುತ್ತದೆ ಎಂಬುದು ಸಿದ್ದು ಲೆಕ್ಕಾಚಾರ.

ಸಭಾಪತಿ ಹುದ್ದೆಗೆ ಬೋಸರಾಜು?: ಹೀಗೆ ಬಿ.ಕೆ. ಹರಿಪ್ರಸಾದ್ ಅವರನ್ನು ಮಂತ್ರಿ ಮಾಡಲು ಪೂರಕವಾಗಿ ಬೋಸರಾಜು ಮಂತ್ರಿ ಮಂಡಲದಿಂದ ಹೊರಬೀಳುವುದೇನೋ ಸರಿ. ಆದರೆ ಅವರಿಗೆ ಸೂಕ್ತವಾದ ಮತ್ತೊಂದು ಜಾಗ ಕೊಡಬೇಕಲ್ಲ? ಎಷ್ಟೇ ಅದರೂ ಬೋಸರಾಜು ಅವರು ರಾಹುಲ್ ಗಾಂಧಿ ಅವರ ಪರಮಾಪ್ತ. ಹಿಂದೆ ಬಸವರಾಜ ರಾಯರೆಡ್ಡಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಸಿದ್ದು ಬಯಸಿದ್ದರಾದರೂ ಕೊನೆಯ ಗಳಿಗೆಯಲ್ಲಿ ರಾಹುಲ್ ಗಾಂಧಿ ಎಂಟ್ರಿಯಾಗಿದ್ದರಿಂದ ರಾಯರೆಡ್ಡಿ ಹೆಸರು ಹಿಂದೆ ಸರಿದು ಬೋಸರಾಜು ಹೆಸರು ಮುಂದೆ ಬಂದಿತ್ತು.

ಹೀಗೆ ರಾಹುಲ್ ಗಾಂಧಿ ಕೃಪಾಕಟಾಕ್ಷದಿಂದ ಸಂಪುಟಕ್ಕೆ ಸೇರಿದರೂ ಬೋಸರಾಜು ಅವರು ಡಬಾಸ್ ಗಿರಿ ಮಾಡದೆ, ಸಿದ್ದರಾಮಯ್ಯ ಅವರ ಬಯಕೆಗೆ ತಕ್ಕಂತೆ ಟ್ರಬಲ್ ಷೂಟರ್ ಆಗಿ ಕೆಲಸ ಮಾಡುತ್ತಿರುವವರು. ಹೀಗಾಗಿ ನಾಳೆ ಹರಿಪ್ರಸಾದ್ ಅವರಿಗಾಗಿ ಮಂತ್ರಿ ಪದವಿ ತೊರೆದರೂ ಬೋಸರಾಜು ಅವರನ್ನು ವಿಧಾನ ಪರಿಷತ್ತಿನ ಸಭಾಪತಿ ಹುದ್ದೆಗೆ ತರುವುದು ಸಿದ್ದರಾಮಯ್ಯ ಅವರ ಯೋಚನೆ.

ಅಂದ ಹಾಗೆ ವಿಧಾನ ಪರಿಷತ್ತಿಗೆ ನಾಲ್ಕು ಮಂದಿಯನ್ನು ನಾಮಕರಣ ಮಾಡಲು ನಿರ್ಧರಿಸಲಾಗಿದೆಯಲ್ಲ? ಈ ಹೆಸರುಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ ನಂತರ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಕೆಳಗಿಳಿಸುವುದು ಕಾಂಗ್ರೆಸ್ ಯೋಚನೆ. ಹೀಗಾಗಿ ಈಗಿನಿಂದಲೇ ‘ಬೋಸರಾಜು ಲಾವೋ, ಹೊರಟ್ಟಿ ಹಟಾವೋ’ ಯೋಜನೆಯ ನೀಲನಕ್ಷೆ ಕಾಂಗ್ರೆಸ್ ಪಾಳಯದಲ್ಲಿ ರೂಪುಗೊಳ್ಳುತ್ತಿದೆ.

ಒಗ್ಗಟ್ಟಾಗಿರಿ ಅಂದ್ರು ನಡ್ಡಾ: ಈ ಮಧ್ಯೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕರ್ನಾಟಕಕ್ಕೆ ಬಂದಿದ್ದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸ್ಥಳೀಯ ನಾಯಕರಿಗೆ ಒಗ್ಗಟ್ಟಿನ ಮಂತ್ರ ಬೋಧಿಸಿದ್ದಾರಂತೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಬಳಿ ಮಾತನಾಡಿದ ನಡ್ಡಾ, “ನಿಮ್ಮ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗಿರಿ. ಅದೇ ರೀತಿ ಜೆಡಿಎಸ್ ಜತೆ ಸೇರಿ ರಾಜ್ಯದಲ್ಲಿ ಹೋರಾಟಗಳನ್ನು ಸಂಘಟಿಸಿ" ಎಂದು ಹೇಳಿದ್ದಾರೆ.

ಅಂದ ಹಾಗೆ, ಇತ್ತೀಚಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಮಿತ್ರಕೂಟ ಮನೆಯೊಂದು ಮೂರು ಬಾಗಿಲು ಎಂಬಂತಾಗಿತ್ತು. ಬಿಜೆಪಿಯಲ್ಲಿ ವಿಜಯೇಂದ್ರ ವರ್ಸಸ್ ಅಶೋಕ್ ಎಂಬ ಪರಿಸ್ಥಿತಿ ನೆಲೆಸಿದ್ದರೆ, ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡರೆ ನಾವು ಇಂಡಿಪೆಂಡೆಂಟ್ ಅಗಿ ಬೆಳೆಯಬಹುದು ಎಂಬ ಯೋಚನೆ ಬಿಜೆಪಿ ಪಾಳಯದಲ್ಲಿ ಕಾಣಿಸಿತ್ತು.

ಆದರೆ ಪಕ್ಷ ಮತ್ತು ಮಿತ್ರಕೂಟದಲ್ಲಿ ಇಂಥ ಒಡಕಿನ ಧ್ವನಿಗಳು ಕೇಳಿಸಿದ್ದು, ಸಹಜವಾಗಿಯೇ ಬಿಜೆಪಿ ವರಿಷ್ಠರಿಗೆ ಸಿಟ್ಟು ತರಿಸಿದೆ. ಇವತ್ತು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದ ವಿರುದ್ಧ ವ್ಯವಸ್ಥಿತ ಹೋರಾಟ ನಡೆಸಿದರೆ ನಾಳೆ ಸನ್ನಿವೇಶವನ್ನು ಎನ್‌ಕ್ಯಾಶ್ ಮಾಡಿಕೊಳ್ಳಬಹುದು. ಅದರಲ್ಲೂ ಅಧಿಕಾರ ಹಂಚಿಕೆ ಒಪ್ಪಂದದ ಮಾತು ಕಾಂಗ್ರೆಸ್ ಸರಕಾರವನ್ನು ಅಲುಗಾಡಿಸಿದರೆ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ಅಸಂಭವವೇನಲ್ಲ.

ಆದರೆ ಅಂಥ ಪರಿಸ್ಥಿತಿಯನ್ನು ಎದುರಿಸಲು ಒಗ್ಗಟ್ಟು ಬೇಕಲ್ಲ? ಅದೇ ಇಲ್ಲವಾದರೆ ಎನ್‌ಕ್ಯಾಶ್ ಮಾಡಿಕೊಳ್ಳುವುದೇನು? ಅನ್ನುವುದು ಬಿಜೆಪಿ ವರಿಷ್ಠರ ಯೋಚನೆ. ಕಳೆದ ವಾರ ಕರ್ನಾಟಕಕ್ಕೆ ಬಂದ ನಡ್ಡಾ ಇದನ್ನೇ ವಿಜಯೇಂದ್ರ, ಅಶೋಕ್ ಅವರಿಗೆ ಸೂಚ್ಯವಾಗಿ ಹೇಳಿದ್ದಾರೆ. ಇಂಟರೆಸ್ಟಿಂಗ್ ಸಂಗತಿ ಎಂದರೆ, ನಡ್ಡಾ ಬೋಧಿಸಿ ಹೋದ ನಂತರ ಬಿಜೆಪಿ-ಜೆಡಿಎಸ್ ಮಿತ್ರಕೂಟದಲ್ಲಿ ಒಗ್ಗಟ್ಟಿನ ಕುರುಹು ಕಾಣಿಸಿದೆ. ಕೆಎಸ್‌ಸಿಎ ಕ್ರೀಡಾಂಗಣದ ಬಳಿ ನಡೆದ ದುರ್ಘಟನೆ ಪ್ರಕರಣ ಇದೆಯಲ್ಲ? ಈ ಬಗ್ಗೆ ಜೆಡಿಎಸ್‌ನ ಕುಮಾರಸ್ವಾಮಿ, ಬಿಜೆಪಿಯ ವಿಜಯೇಂದ್ರ, ಅಶೋಕ್ ಒಟ್ಟಾಗಿ ಕುಳಿತು ಸರಕಾರದ ವಿರುದ್ಧ ಸಂಘಟಿತ ದಾಳಿ ನಡೆಸಿದ್ದಾರೆ.

ಲಾಸ್ಟ್ ಸಿಪ್: ಆರ್‌ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ದುರ್ಘಟನೆಯ ಬಗ್ಗೆ ಎಲ್ಲರ ಗಮನ ಹರಿದಿರುವಾಗಲೇ ಕರ್ನಾಟಕದ ಶಾಸಕರೊಬ್ಬರಿಗೆ ಇ.ಡಿ ತಗಲಿಕೊಂಡಿರುವ ಅಂಶ ಬಯಲಿಗೆ ಬಂದಿದೆ. ತಮಿಳುನಾಡಿನ ಪ್ರಭಾವಿ ರಾಜಕಾರಣಿಯೊಬ್ಬರ ಜತೆ ಕೈಜೋಡಿಸಿ ಈ ಶಾಸಕರಿಗೆ ಸೇರಿದ ಸಂಸ್ಥೆ ಹಲವು ಅವ್ಯವಹಾರಗಳಲ್ಲಿ ಭಾಗಿಯಾಗಿದೆ ಎಂಬುದು ಇ.ಡಿ ಆರೋಪ. ಮದ್ಯದ ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದ ಈ ಅವ್ಯವಹಾರದ ಹಲವು ಮುಖಗಳನ್ನು ಇ.ಡಿ ಗುರುತಿಸಿದ್ದು, ಈ ಶಾಸಕರಿಗೆ ಸೇರಿದ ಚೆನ್ನೈ ಕಚೇರಿಯ ಮೇಲೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂಬುದು ಲೇಟೆಸ್ಟು ಸುದ್ದಿ.