Anti-Terrorism Day: ಭಯೋತ್ಪಾದನಾ ವಿರೋಧಿ ದಿನ
ಭಾರತವು ದಶಕಗಳಿಂದಲೂ ಗಡಿಯಾಚೆಗಿನ ಮತ್ತು ದೇಶದೊಳಗಿನ ಭಯೋತ್ಪಾದನೆಯಿಂದ ತತ್ತರಿಸಿದೆ. ಮುಂಬೈ ದಾಳಿ, ಸಂಸತ್ ಭವನದ ಮೇಲಿನ ದಾಳಿ, ಪುಲ್ವಾಮಾ ದಾಳಿಯಂತಹ ಘಟನೆಗಳು ನಮ್ಮ ಸೈನಿಕರ ಮತ್ತು ಅಮಾಯಕ ನಾಗರಿಕರ ರಕ್ತವನ್ನು ಹರಿಸಿವೆ. ಈ ಎಲ್ಲ ಹುತಾತ್ಮರ ತ್ಯಾಗವನ್ನು ಸ್ಮರಿಸುವ ಮತ್ತು ಅವರ ಕುಟುಂಬಗಳ ಪರವಾಗಿ ನಿಲ್ಲುವ ಕರ್ತವ್ಯವನ್ನು ಈ ದಿನ ನಮಗೆ ನೆನಪಿಸು ತ್ತದೆ.
-
ವಿನುತಾ ಹೆಗಡೆ ಶಿರಸಿ
ಭಯೋತ್ಪಾದನೆ ಕೇವಲ ಒಂದು ದೇಶ, ಧರ್ಮಕ್ಕೆ ಸೀಮಿತವಾದ ಸಮಸ್ಯೆಯಲ್ಲ
ಭಾರತದ ಇತಿಹಾಸದ ಪುಟಗಳಲ್ಲಿ ಮೇ 21 ಕೇವಲ ಒಂದು ದಿನಾಂಕವಲ್ಲ, ಅದು ದೇಶದ ಆತ್ಮಕ್ಕೆ ಎದುರಾದ ಕ್ರೌರ್ಯದ ನೆನಪು ಮತ್ತು ದೇಶದ ಭದ್ರತೆಗಾಗಿ ಕಂಕಣಬದ್ಧರಾಗಲು ಪ್ರೇರೇಪಿಸುವ ಕಹಳೆ. 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಭಾರತದ ಅತ್ಯಂತ ಕಿರಿಯ ಹಾಗೂ ದೂರದೃಷ್ಟಿಯ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಭಯೋತ್ಪಾದಕರ ಆತ್ಮಹತ್ಯಾ ಬಾಂಬ್ ದಾಳಿಗೆ ಬಲಿಯಾದರು.
ಈ ಅತ್ಯಂತ ಕರಾಳ ಘಟನೆಯ ಹಿನ್ನೆಲೆಯಲ್ಲಿ, ಅಂದಿನ ವಿ.ಪಿ.ಸಿಂಗ್ ಸರಕಾರವು ಮೇ 21ಅನ್ನು ‘ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ’ ಎಂದು ಘೋಷಿಸಿತು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಈ ದಿನದಂದು ದೇಶಾದ್ಯಂತ ಶಾಂತಿ, ಸಾಮರಸ್ಯ ಮತ್ತು ದೇಶದ ಏಕತೆಯನ್ನು ಕಾಪಾಡುವ ದೃಢ ಸಂಕಲ್ಪವನ್ನು ತೊಡಲಾಗುತ್ತದೆ.
ಈ ದಿನದ ಆಚರಣೆಯ ಮೂಲ ಉದ್ದೇಶ ಸಮಾಜದಲ್ಲಿ ಶಾಂತಿ ಮತ್ತು ಮಾನವೀಯತೆಯನ್ನು ಬಿತ್ತಿ, ಹಿಂಸಾಚಾರದ ವಿರುದ್ಧ ಧ್ವನಿ ಎತ್ತುವುದಾಗಿದೆ. ವಿಶೇಷವಾಗಿ ಯುವ ಪೀಳಿಗೆಯನ್ನು ಪ್ರಲೋಭನೆ ಮತ್ತು ತಪ್ಪು ದಾರಿಗಳ ಕಡೆಗೆ ಸೆಳೆಯುವ ಭಯೋತ್ಪಾದಕ ಜಾಲಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮುಖ್ಯ ಗುರಿ. ಭಯೋತ್ಪಾದನೆಯು ಕೇವಲ ಒಂದು ದೇಶ ಅಥವಾ ಧರ್ಮಕ್ಕೆ ಸೀಮಿತವಾದ ಸಮಸ್ಯೆಯಲ್ಲ, ಅದು ಜಾಗತಿಕ ಪಿಡುಗು.
ಇದನ್ನೂ ಓದಿ: terrorist: ವಿದ್ಯಾರ್ಥಿಗೆ ʼಟೆರರಿಸ್ಟ್ʼ ಎಂದ ಪಿಇಎಸ್ ವಿವಿ ಉಪನ್ಯಾಸಕ ಅಮಾನತು
ಭಾರತವು ದಶಕಗಳಿಂದಲೂ ಗಡಿಯಾಚೆಗಿನ ಮತ್ತು ದೇಶದೊಳಗಿನ ಭಯೋತ್ಪಾದನೆಯಿಂದ ತತ್ತರಿಸಿದೆ. ಮುಂಬೈ ದಾಳಿ, ಸಂಸತ್ ಭವನದ ಮೇಲಿನ ದಾಳಿ, ಪುಲ್ವಾಮಾ ದಾಳಿಯಂತಹ ಘಟನೆಗಳು ನಮ್ಮ ಸೈನಿಕರ ಮತ್ತು ಅಮಾಯಕ ನಾಗರಿಕರ ರಕ್ತವನ್ನು ಹರಿಸಿವೆ. ಈ ಎಲ್ಲ ಹುತಾತ್ಮರ ತ್ಯಾಗವನ್ನು ಸ್ಮರಿಸುವ ಮತ್ತು ಅವರ ಕುಟುಂಬಗಳ ಪರವಾಗಿ ನಿಲ್ಲುವ ಕರ್ತವ್ಯವನ್ನು ಈ ದಿನ ನಮಗೆ ನೆನಪಿಸುತ್ತದೆ.
ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನದಂದು ದೇಶದ ಎಲ್ಲ ಸರಕಾರಿ ಕಚೇರಿಗಳು, ಶಾಲೆಗಳು, ಕಾಲೇಜುಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಭಯೋತ್ಪಾದನಾ ವಿರೋಧಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಗುತ್ತದೆ. ಹಿಂಸೆಯನ್ನು ತ್ಯಜಿಸಿ, ದೇಶದ ಸಂವಿಧಾನ ಮತ್ತು ಅಖಂಡತೆ ಯನ್ನು ಎತ್ತಿ ಹಿಡಿಯುವ ಶಪಥವನ್ನು ನಾಗರಿಕರು ಮಾಡುತ್ತಾರೆ. ಕೇವಲ ಭಾಷಣ ಅಥವಾ ಪ್ರತಿಜ್ಞೆಗೆ ಸೀಮಿತವಾಗದೆ, ನಾವಿರುವ ಸಮಾಜದಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಜಾಗರೂಕರಾಗಿರುವುದು ಮತ್ತು ದೇಶದ ಕಾನೂನು ಸುವ್ಯವಸ್ಥೆಗೆ ಸಹಕರಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ.
ಹಿಂಸೆಯ ಮಾರ್ಗದಿಂದ ಅಭಿವೃದ್ಧಿ ಸಾಧ್ಯವಿಲ್ಲ
ಇಂದಿನ ಡಿಜಿಟಲ್ ಯುಗದಲ್ಲಿ ಭಯೋತ್ಪಾದನೆಯ ಸ್ವರೂಪವೂ ಬದಲಾಗಿದೆ. ಸೈಬರ್ ಭಯೋ ತ್ಪಾದನೆ, ಸುಳ್ಳು ಸುದ್ದಿಗಳ ಮೂಲಕ ಸಮಾಜದಲ್ಲಿ ದ್ವೇಷ ಬಿತ್ತುವುದು ಮತ್ತು ಸಾಮಾಜಿಕ ಜಾಲ ತಾಣಗಳ ಮೂಲಕ ಯುವಕರನ್ನು ದಾರಿ ತಪ್ಪಿಸುವ ಕೆಲಸಗಳು ನಡೆಯುತ್ತಿವೆ. ಇಂತಹ ಸಂದರ್ಭ ದಲ್ಲಿ ವೈಚಾರಿಕತೆ, ಶಿಕ್ಷಣ ಮತ್ತು ಸೌಹಾರ್ದತೆಯೇ ಭಯೋತ್ಪಾದನೆಗೆ ಅತ್ಯಂತ ದೊಡ್ಡ ಅಸ್ತ್ರಗಳಾಗುತ್ತವೆ. ಯಾವುದೇ ದೇಶದ ಪ್ರಗತಿಯು ಆ ದೇಶದಲ್ಲಿರುವ ಶಾಂತಿ ಮತ್ತು ಸ್ಥಿರತೆಯ ಮೇಲೆ ಆಧಾರಿತವಾಗಿರುತ್ತದೆ.
ಹಿಂಸೆಯ ಮಾರ್ಗದಿಂದ ಅಭಿವೃದ್ಧಿ ಸಾಧ್ಯವಿಲ್ಲ, ಕೇವಲ ವಿನಾಶ ಮಾತ್ರ ಸಾಧ್ಯ ಎಂಬ ಸಂದೇಶ ವನ್ನು ಜಗತ್ತಿಗೆ ಸಾರಲು ಈ ದಿನ ಪ್ರೇರಣೆಯಾಗಿದೆ. ಭಾರತವನ್ನು ಭಯೋತ್ಪಾದನಾ ಮುಕ್ತ ಮತ್ತು ಸುರಕ್ಷಿತ ರಾಷ್ಟ್ರವನ್ನಾಗಿ ಮಾಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎನ್ನುವುದೇ ಈ ದಿನದ ನಿಜವಾದ ಆಶಯ.