''ಇರಾನ್ನಿಂದ ಕೂಡಲೇ ನಿರ್ಗಮಿಸಿ'': ಕದನ ವಿರಾಮದ ಬೆನ್ನಲ್ಲೇ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ
ಅಮೆರಿಕ-ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಇರಾನ್ನಲ್ಲಿ ಇರುವ ಭಾರತೀಯರಿಗೆ ತಕ್ಷಣ ದೇಶ ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ. ಭದ್ರತಾ ಪರಿಸ್ಥಿತಿ ಇನ್ನೂ ಅನಿಶ್ಚಿತವಾಗಿರುವುದರಿಂದ, ರಾಯಭಾರ ಕಚೇರಿಯ ಮಾರ್ಗದರ್ಶನದಲ್ಲಿ ಸುರಕ್ಷಿತವಾಗಿ ಹೊರಬರಲು ಸೂಚಿಸಲಾಗಿದೆ. ಸುಮಾರು 7,500 ಭಾರತೀಯರು ಇನ್ನೂ ಇರಾನ್ನಲ್ಲಿದ್ದಾರೆ. ಕದನ ವಿರಾಮದ ಅವಧಿಯಲ್ಲಿ ಸುರಕ್ಷಿತವಾಗಿ ನಿರ್ಗಮಿಸಲು ಭಾರತ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಏ. 8: ಅಮೆರಿಕ ಮತ್ತು ಇರಾನ್ (America-Iran) ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಇರಾನ್ನಲ್ಲಿ ನೆಲೆಸಿರುವ ಭಾರತೀಯ (Indian) ಪ್ರಜೆಗಳಿಗೆ ಭಾರತೀಯ ರಾಯಭಾರ ಕಚೇರಿಯು ಬುಧವಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅಲ್ಲಿರುವ ಎಲ್ಲ ಭಾರತೀಯರು ಕೂಡಲೇ ದೇಶವನ್ನು ತೊರೆಯುವಂತೆ ಈ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಮನ್ವಯ ಸಾಧಿಸಲು ರಾಯಭಾರ ಕಚೇರಿಯು ಕೆಲವು ಸಹಾಯವಾಣಿ ಸಂಖ್ಯೆಗಳನ್ನು ಸಹ ಪ್ರಕಟಿಸಿದೆ.
"ಏಪ್ರಿಲ್ 7ರಂದು ನೀಡಿದ್ದ ಸೂಚನೆಯ ಮುಂದುವರಿದ ಭಾಗವಾಗಿ, ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇರಾನ್ನಲ್ಲಿರುವ ಭಾರತೀಯರು ರಾಯಭಾರ ಕಚೇರಿಯ ಮಾರ್ಗದರ್ಶನದೊಂದಿಗೆ ಶೀಘ್ರವಾಗಿ ದೇಶದಿಂದ ನಿರ್ಗಮಿಸಲು ಸೂಚಿಸಲಾಗಿದೆ" ಎಂದು ಪ್ರಕಟಣೆ ತಿಳಿಸಿದೆ. ಅಲ್ಲದೆ, ರಾಯಭಾರ ಕಚೇರಿಯೊಂದಿಗೆ ಮುಂಚಿತವಾಗಿ ಸಮಾಲೋಚನೆ ನಡೆಸದೆ ಯಾವುದೇ ಅಂತಾರಾಷ್ಟ್ರೀಯ ಭೂ ಗಡಿಗಳನ್ನು ಸಂಪರ್ಕಿಸಬಾರದು ಎಂದು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.
ಭಾರತೀಯ ರಾಯಭಾರ ಕಚೇರಿಯ ಸೂಚನೆ:
Indian Embassy in Iran advises Indian nationals to expeditiously exit the country, in coordination with the Embassy and using only the approved routes suggested by the mission. #india #iran pic.twitter.com/fDVR1XkstB
— Sikkim Media (@SikkimMedia) April 8, 2026
ಸರ್ಕಾರಿ ಮೂಲಗಳ ಪ್ರಕಾರ, ಪ್ರಸ್ತುತ ಸಂಘರ್ಷ ಪೀಡಿತ ಪ್ರದೇಶಗಳಿಂದ ಹೊರಬರಲು ಬಯಸುವ ನಾಗರಿಕರನ್ನು ಉದ್ದೇಶಿಸಿ ಈ ಸಲಹೆ ನೀಡಲಾಗಿದೆ. ಕದನ ವಿರಾಮದಿಂದಾಗಿ ತಕ್ಷಣದ ಬಾಂಬ್ ದಾಳಿಯ ಭೀತಿ ಕಡಿಮೆಯಾಗಿರುವುದರಿಂದ, ದಕ್ಷಿಣದ ಬಂದರ್ ಅಬ್ಬಾಸ್ನಂತಹ ಸ್ಥಳಗಳಿಂದ ಅರ್ಮೇನಿಯಾ ಗಡಿಯವರೆಗೆ ಸುಮಾರು 1,500 ಕಿಲೋಮೀಟರ್ ಪ್ರಯಾಣಿಸಲು ಈಗ ಅನುಕೂಲ ಪರಿಸ್ಥಿತಿ ಇದೆ ಎಂದು ಹೇಳಲಾಗಿದೆ. ಸುಮಾರು 7,500 ಭಾರತೀಯರು ಇಂದಿಗೂ ಇರಾನ್ನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.
ಇರಾನ್ ಜತೆ ಟ್ರಂಪ್ 2 ವಾರಗಳ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ತೈಲ ಬೆಲೆಯಲ್ಲಿ ಭಾರಿ ಕುಸಿತ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ದಾಳಿಯ ಎಚ್ಚರಿಕೆಯನ್ನು ಹಿಂಪಡೆದು ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಯುದ್ಧಕ್ಕೆ ತಾತ್ಕಾಲಿಕ ವಿರಾಮ ನೀಡಿ, ಹೊರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಸಮ್ಮತಿಸಿದೆ. ಏಪ್ರಿಲ್ 10ರಂದು ಇಸ್ಲಾಮಾಬಾದ್ನಲ್ಲಿ ಎರಡೂ ದೇಶಗಳ ನಡುವೆ ಶಾಂತಿ ಮಾತುಕತೆಗಳು ನಡೆಯಲಿವೆ. ಈ ಮಧ್ಯಂತರ ಅವಧಿಯ ಲಾಭ ಪಡೆದು ಸುರಕ್ಷಿತವಾಗಿ ಹೊರಬರಲು ಭಾರತ ಸರ್ಕಾರ ತನ್ನ ಪ್ರಜೆಗಳಿಗೆ ಈ ತುರ್ತು ಕರೆ ನೀಡಿದೆ.