ಇರಾನ್ ಮಾಜಿ ಸರ್ವಾಧಿಕಾರಿ ಖಮೇನಿ ಭಾರತೀಯ ಮೂಲದವರೆ? ಭಾರತದ ಈ ಗ್ರಾಮದ ನಂಟು ಬೆಳೆದಿದ್ದೇಗೆ?
ಉತ್ತರ ಪ್ರದೇಶದ ಕಿಂತೂರು ಗ್ರಾಮವು ಖೊಮೇನಿ ಅವರ ವಂಶದ ಮೂಲವಾಗಿ ಪ್ರಸಿದ್ಧಿ ಪಡೆದಿದೆ. ಅವರ ಅಜ್ಜ ಸೈಯದ್ ಅಹ್ಮದ್ ಮುಸಾವಿ ಹಿಂದಿ ಭಾರತದಿಂದ ಇರಾನ್ಗೆ ವಲಸೆ ಹೋಗಿ ಅಲ್ಲಿ ನೆಲೆಸಿದ ಪರಿಣಾಮ, ಈ ಗ್ರಾಮವು ಭಾರತ ಮತ್ತು ಇರಾನ್ ನಡುವಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯದ ಪ್ರಮುಖ ಕೊಂಡಿಯಾಗಿ ಇಂದಿಗೂ ಗುರುತಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ -
ಲಖನೌ: ಉತ್ತರ ಪ್ರದೇಶ (Uttar Pradesh) ದ ಬಾರಾಬಂಕಿ (Barabanki) ಜಿಲ್ಲೆಯ 'ಕಿಂತೂರು (Kintoor)' ಎಂಬ ಪುಟ್ಟ ಗ್ರಾಮವು ಇರಾನ್ (Iran) ದೇಶದೊಂದಿಗೆ ಅಚ್ಚರಿಯ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಸಂಬಂಧವನ್ನು ಹೊಂದಿದೆ. 1979ರಲ್ಲಿ ಇರಾನ್ನಲ್ಲಿ ಪಹ್ಲವಿ ರಾಜವಂಶ (Pahlavi dynasty)ದ ಆಳ್ವಿಕೆಯನ್ನು ಉರುಳಿಸಿ ಭೀಕರ ಇಸ್ಲಾಮಿಕ್ ಕ್ರಾಂತಿಯ ನೇತೃತ್ವ ವಹಿಸಿದ್ದ ಅಯತೊಲ್ಲಾ ರುಹೊಲ್ಲಾ ಖೊಮೇನಿ (Ayatollah Ruhollah Khomeini) ಅವರ ಪೂರ್ವಜರ ಮೂಲ ಮನೆ ಈ ಹಳ್ಳಿಯಲ್ಲಿದೆ ಎಂಬುದು ಜಾಗತಿಕವಾಗಿ ಕುತೂಹಲ ಮೂಡಿಸಿದೆ.
ಅಯತೊಲ್ಲಾ ಖಮೇನಿ ಅವರ ಅಜ್ಜ ಸೈಯದ್ ಅಹ್ಮದ್ ಮುಸಾವಿ ಹಿಂದಿ ಅವರು 1790ರಲ್ಲಿ ಇದೇ ಕಿಂತೂರು ಗ್ರಾಮದಲ್ಲಿ ಜನಿಸಿದ್ದರು. ಅಂದು ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಿಗಿ ಹಿಡಿತದಿಂದ ಬೇಸತ್ತ ಅವರು, 1830ರಲ್ಲಿ ಅವಧ್ ನವಾಬರೊಂದಿಗೆ ಇರಾನ್ ದೇಶದ 'ಖೊಮೇನ್' ಗ್ರಾಮಕ್ಕೆ ವಲಸೆ ಹೋಗಿ ಅಲ್ಲಿಯೇ ಕಾಯಂ ಆಗಿ ನೆಲೆಸಿದರು. ಇರಾನ್ನಲ್ಲಿ ನೆಲೆಸಿದ ನಂತರವೂ ಅವರು ತಮ್ಮ ಹೆಸರಿನೊಂದಿಗೆ 'ಹಿಂದಿ' ಎಂಬ ಪ್ರತ್ಯಯವನ್ನು ಉಳಿಸಿಕೊಳ್ಳುವ ಮೂಲಕ ತಮ್ಮ ಭಾರತೀಯ ಪರಂಪರೆ ಮತ್ತು ಮೂಲವನ್ನು ಸದಾ ಗೌರವಿಸುತ್ತಿದ್ದರು. ಮುಸಾವಿ ಹಿಂದಿ ಅವರ ಮೊಮ್ಮಗನಾದ ರುಹೊಲ್ಲಾ ಖಮೇನಿ ಅವರು ಮುಂದೆ ಇರಾನ್ನ ಅತ್ಯಂತ ಪ್ರಭಾವಿ ಆಧ್ಯಾತ್ಮಿಕ ನಾಯಕರಾಗಿ ಬೆಳೆದು ಮಧ್ಯಪ್ರಾಚ್ಯದ ಒಟ್ಟಾರೆ ರಾಜಕೀಯ ಇತಿಹಾಸವನ್ನೇ ಶಾಶ್ವತವಾಗಿ ಬದಲಿಸಿದರು.
ವಿಮಾನದ ಸೀಟುಗಳಲ್ಲಿ ರಕ್ತಸಿಕ್ತ ಬ್ಯಾಗ್, ಪುಟ್ಟ ಶೂಗಳು! ಇಸ್ಲಾಮಾಬಾದ್ಗೆ ಹೊರಟ ಇರಾನ್ ನಿಯೋಗದ ಕಣ್ಣೀರಿನ ಪಯಣ
ಬಾರಾಬಂಕಿಯ ಸ್ಥಳೀಯ ನಿವಾಸಿಗಳ ಪ್ರಕಾರ, ಇಂದಿಗೂ ಇರಾನ್ ಮತ್ತು ಭಾರತದ ನಡುವಿನ ಗಟ್ಟಿಯಾದ ಸಾಂಸ್ಕೃತಿಕ ಸಂಬಂಧಕ್ಕೆ ಈ ಐತಿಹಾಸಿಕ ರಕ್ತಸಂಬಂಧದ ಕೊಂಡಿಯೇ ಪ್ರೇರಣೆಯಾಗಿದೆ. ಇತ್ತೀಚಿನ ಪಶ್ಚಿಮ ಏಷ್ಯಾ ಸಂಘರ್ಷದ ಕಠಿಣ ಸಂದರ್ಭದಲ್ಲೂ ಭಾರತೀಯ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಹಾದುಹೋಗಲು ಇರಾನ್ ಅವಕಾಶ ನೀಡಲು ಈ ಹಳೆಯ ನಂಟೇ ಪ್ರಮುಖ ಕಾರಣ ಎಂದು ಇಲ್ಲಿನ ಜನರು ಭಾವಿಸುತ್ತಾರೆ. ಸದ್ಯ ಇರಾನ್ ಮತ್ತು ಅಮೆರಿಕ ನಡುವೆ ಯುದ್ಧದ ವಾತಾವರಣವಿದ್ದು, ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ವಿಶ್ವದಾದ್ಯಂತ ತೀವ್ರ ಉದ್ವಿಗ್ನತೆ ಸೃಷ್ಟಿಯಾಗಿದೆ. ಈ ಸಂಘರ್ಷವನ್ನು ಶಾಂತಿಯುತವಾಗಿ ತಣಿಸಲು ಈಗ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಉನ್ನತ ಮಟ್ಟದ ಶಾಂತಿ ಮಾತುಕತೆಗಳು ಜರುಗುತ್ತಿವೆ. ಈ ಎಲ್ಲಾ ಜಾಗತಿಕ ಬೆಳವಣಿಗೆಗಳ ನಡುವೆ, ಉತ್ತರ ಪ್ರದೇಶದ ಈ ಪುಟ್ಟ ಗ್ರಾಮವು ಇರಾನ್ನ ಮಹಾನ್ ಕ್ರಾಂತಿಯ ಇತಿಹಾಸದ ಅವಿಭಾಜ್ಯ ಭಾಗವಾಗಿ ಇಂದಿಗೂ ಗುರುತಿಸಿಕೊಂಡಿದೆ.