ಸ್ಮೃತಿ ಅಕಾಡೆಮಿಯಲ್ಲಿ ಫಿಡೆ ರೇಟೆಡ್ ಚೆಸ್ ಟೂರ್ನಮೆಂಟ್; ವಿಜೇತರಿಗೆ 2 ಲಕ್ಷ ರುಪಾಯಿ ನಗದು ಬಹುಮಾನ, 66 ಗ್ರ್ಯಾಂಡ್ ಟ್ರೋಫಿ
Smrti Academy: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹೊಸ್ಕೂರ್ನಲ್ಲಿರುವ ಸ್ಮೃತಿ ಅಕಾಡೆಮಿ ಸಿಬಿಎಸ್ಇ ಸ್ಕೂಲ್ನಲ್ಲಿ ಜುಲೈ 11ರಂದು ಆಲ್ ಇಂಡಿಯಾ ಫಿಡೆ ರೇಟೆಡ್ ರಾಪಿಡ್ ಟೂರ್ನಮೆಂಟ್ನ ಎರಡನೇ ಆವೃತ್ತಿ ನಡೆಯಿತು. ಈ ಅಂತಾರಾಷ್ಟ್ರೀಯ ಚೆಸ್ ಟೂರ್ನಮೆಂಟ್ನಲ್ಲಿ 750ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಬೆಂಗಳೂರಿನ ಹೊಸ್ಕೂರ್ನಲ್ಲಿರುವ ಸ್ಮೃತಿ ಅಕಾಡೆಮಿ ಶಾಲೆಯಲ್ಲಿ ನಡೆದ ಚೆಸ್ ಪಂದ್ಯಾಟ -
ಬೆಂಗಳೂರು, ಜು. 13: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹೊಸ್ಕೂರ್ನಲ್ಲಿರುವ ಸ್ಮೃತಿ ಅಕಾಡೆಮಿ (Smrti Academy) ಸಿಬಿಎಸ್ಇ ಸ್ಕೂಲ್ನಲ್ಲಿ ಜುಲೈ 11ರಂದು ಆಲ್ ಇಂಡಿಯಾ ಫಿಡೆ ರೇಟೆಡ್ ರಾಪಿಡ್ ಟೂರ್ನಮೆಂಟ್ನ ಎರಡನೇ ಆವೃತ್ತಿ ನಡೆಯಿತು. ದಿನವಿಡೀ ಸಂಭ್ರಮದಿಂದ ನಡೆದ ಈ ಅಂತಾರಾಷ್ಟ್ರೀಯ ಚೆಸ್ ಟೂರ್ನಮೆಂಟ್ನಲ್ಲಿ 750ಕ್ಕೂ ಹೆಚ್ಚು ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಮೈತ್ರಿ ಅಕಾಡೆಮಿ ಭವ್ಯವಾದ ಕ್ಯಾಂಪಸ್ನಲ್ಲಿ ಬೆಳಗ್ಗೆಯೇ ಹಬ್ಬದ ಸಂಭ್ರಮ ಉಂಟಾಗಿತ್ತು. ಮಕ್ಕಳಿಂದ ಹಿರಿಯರ ತನಕ ಎಲ್ಲ ವಯೋಮಾನದ ಚೆಸ್ ಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದುದು ವಿಶೇಷವಾಗಿತ್ತು. ಹಲವು ಸುತ್ತುಗಳಲ್ಲಿ ಸಂಜೆಯ ತನಕ ಟೂರ್ನಮೆಂಟ್ ನಡೆಯಿತು.

ವಿಜೇತರಿಗೆ 2 ಲಕ್ಷ ರುಪಾಯಿ ನಗದು ಬಹುಮಾನಗಳನ್ನು ನೀಡಲಾಯಿತು. ಜತೆಗೆ 66 ಗ್ರ್ಯಾಂಡ್ ಟ್ರೋಫಿಗಳು, 45 ಪದಕಗಳನ್ನು ವಿಜೇತರಿಗೆ ವಿತರಿಸಿ ಗೌರವಿಸಲಾಯಿತು. ವಿಶ್ವಾದ್ಯಂತ ಚೆಸ್ ಕ್ರೀಡೆಯನ್ನು ಸಂಘಟಿಸುವ ಅಂತಾರಾಷ್ಟ್ರೀಯ ಚೆಸ್ ಒಕ್ಕೂಟವಾದ ಫಿಡೆಯ ನಿಯಮಾವಳಿಯ ಅನ್ವಯ ಟೂರ್ನಮೆಂಟ್ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭ ಸ್ಮೃತಿ ಅಕಾಡೆಮಿಯ ಸ್ಥಾಪಕ, ನಿರ್ದೇಶಕರಾದ ವಿ. ರವಿಚಂದ್ರನ್ ಅವರು ಮಾತನಾಡಿ, " ಚೆಸ್ ಆಟವು ಆಟಗಾರನ ತರ್ಕಬದ್ಧ ಚಿಂತನೆ, ದೂರದೃಷ್ಟಿ ಮತ್ತು ಯೋಜನಾ ಕೌಶಲ್ಯವನ್ನು ಪರೀಕ್ಷಿಸುತ್ತದೆ. ಎದುರಾಳಿಯ ಮುಂದಿನ ನಡೆಯನ್ನು ಊಹಿಸುವುದು ಮತ್ತು ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸುವುದು ಚದುರಂಗದಲ್ಲಿ ನಿರ್ಣಾಯಕವಾಗುತ್ತದೆ. 750ಕ್ಕೂ ಹೆಚ್ಚು ಸ್ಪರ್ಧಿಗಳು ಈ ಟೂರ್ನಮೆಂಟ್ನಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಇವತ್ತು ಸ್ಮೃತಿ ಅಕಾಡೆಮಿಗೆ ಅವಿಸ್ಮರಣೀಯವಾದ ದಿನವಾಗಿದೆʼʼ ಎಂದು ವಿವರಿಸಿದರು.

ಸ್ಮೃತಿ ಅಕಾಡೆಮಿಯ ಪ್ರಾಂಶುಪಾಲರಾದ ಡಾ. ಅಮುದಾ ಮುನಿರಾಜ್ ಕಾರ್ಯಕ್ರಮದ ರೂಪು ರೇಷೆಗಳು, ಉದ್ದೇಶಗಳನ್ನು ವಿವರಿಸಿದರು. ಚೆಸ್ನಲ್ಲಿ ಕೋಟ್ಯಂತರ ಸಾಧ್ಯತೆಗಳಿರುವ ಆಟದ ಸನ್ನಿವೇಶಗಳಿವೆ. ಪ್ರತಿಯೊಂದು ಆಟವೂ ಹೊಸದಾಗಿರುತ್ತದೆ. ಒಬ್ಬ ಆಟಗಾರನು ತನ್ನದೇ ಆದ ಸೃಜನಶೀಲ ತಂತ್ರಗಳನ್ನು ರೂಪಿಸಲು ಇಲ್ಲಿ ಸಾಕಷ್ಟು ಅವಕಾಶವಿದೆ. ಒಂದು ತಪ್ಪು ನಿರ್ಧಾರ ಆಟದ ಗತಿಯನ್ನೇ ಬದಲಿಸಬಲ್ಲದು. ಆದ್ದರಿಂದ, ಪ್ರತಿ ನಡೆಯಲ್ಲೂ ಏಕಾಗ್ರತೆ ಮತ್ತು ತಾಳ್ಮೆ ಅತ್ಯಗತ್ಯ. ಇದು ಆಟಗಾರರಲ್ಲಿ ಮನೋಬಲವನ್ನು ವೃದ್ಧಿಸುತ್ತದೆ. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅಂಥ ಚದುರಂಗ ಟೂರ್ನಮೆಂಟ್ಗೆ ಮೈತ್ರಿ ಅಕಾಡೆಮಿ ಸಾಕ್ಷಿಯಾಯಿತು.