Chikkaballapur News: "2028ರಲ್ಲಿ ಎಷ್ಟು ಮತಗಳ ಅಂತರದಲ್ಲಿ ಸೋಲುತ್ತೀಯೋ ಕಾದು ನೋಡು" ಸವಾಲು
"ಇಂತಹ ನಡವಳಿಕೆಯನ್ನು ಒಬ್ಬ ಶಾಸಕ ಬಿಡಿ, ಸಾಮಾನ್ಯ ವ್ಯಕ್ತಿಯೂ ತೋರಿಸುವುದಿಲ್ಲ. ಒಂದು ಜನಾಂಗದ ವಿರುದ್ಧ ಇಷ್ಟೊಂದು ಆಕ್ರೋಶ ಮತ್ತು ನಿಂದನೆ ಮಾಡಿರುವ ಘಟನೆ ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಇಂತಹ ವ್ಯಕ್ತಿ ಯಾವುದೇ ಕ್ಷೇತ್ರದ ಶಾಸಕರಾಗಿರುವುದು ಆ ಕ್ಷೇತ್ರಕ್ಕೆ ಶಾಪವೇ ಸರಿ"
ಮಾನಸಿಕ ಆಸ್ಪತ್ರೆಯಲ್ಲಿ ಇರಬೇಕಾದವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವುದು ಕ್ಷೇತ್ರದ ದುರಂತ ಎಂದು ಸಂಸದ ಡಾ. ಕೆ. ಸುಧಾಕರ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. -
ಚಿಕ್ಕಬಳ್ಳಾಪುರ: ಮಾನಸಿಕ ಆಸ್ಪತ್ರೆಯಲ್ಲಿ ಇರಬೇಕಾದವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವುದು ಕ್ಷೇತ್ರದ ದುರಂತ ಎಂದು ಸಂಸದ ಡಾ.ಕೆ.ಸುಧಾಕರ್(MP Dr K Sudhakar), ಶಾಸಕ ಪ್ರದೀಪ್ ಈಶ್ವರ್(MLA Pardeep Eshwar) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ಪ್ರದೀಪ್ ಈಶ್ವರ್ ಅವರ ವರ್ತನೆ ಒಬ್ಬ ಚುನಾಯಿತ ಪ್ರತಿನಿಧಿಗೆ ತಕ್ಕದ್ದಲ್ಲ ಎಂದು ಕಿಡಿಕಾರಿದರು.
"ಇಂತಹ ನಡವಳಿಕೆಯನ್ನು ಒಬ್ಬ ಶಾಸಕ ಬಿಡಿ, ಸಾಮಾನ್ಯ ವ್ಯಕ್ತಿಯೂ ತೋರಿಸುವುದಿಲ್ಲ. ಒಂದು ಜನಾಂಗದ ವಿರುದ್ಧ ಇಷ್ಟೊಂದು ಆಕ್ರೋಶ ಮತ್ತು ನಿಂದನೆ ಮಾಡಿರುವ ಘಟನೆ ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಇಂತಹ ವ್ಯಕ್ತಿ ಯಾವುದೇ ಕ್ಷೇತ್ರದ ಶಾಸಕರಾಗಿರುವುದು ಆ ಕ್ಷೇತ್ರಕ್ಕೆ ಶಾಪವೇ ಸರಿ" ಎಂದು ಟೀಕಿಸಿದರು.
ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಗಲಾಟೆ ಉಲ್ಲೇಖಿಸಿದ ಅವರು, "ಕನ್ನಡ ಭವನದೊಳಗೆ ಹಾಗೆ ವರ್ತಿಸಿದ್ದರೆ ಪರಿಸ್ಥಿತಿ ಬೇರೆಯೇ ಆಗುತ್ತಿತ್ತು. ಸಾವಿರಾರು ಜನರ ಮಧ್ಯೆ ನಡೆದ ಘಟನೆಯ ಬಳಿಕ ಹೊರಗೆ ಬಂದು ತೋಳು ತಟ್ಟುವುದು, ಮೀಸೆ ತಿರುವುದು, ಕೂದಲು ಕೆದಕುವುದು ಚುನಾ ಯಿತ ಪ್ರತಿನಿಧಿಗೆ ಶೋಭೆ ತರುವ ನಡವಳಿಕೆ ಅಲ್ಲ" ಎಂದು ಹರಿಹಾಯ್ದರು.
"ಇದೇನಾ ನಿಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಹೇಳಿಕೊಡುವ ಸಂಸ್ಕಾರ? ಇಂತಹವರ ಶಾಲೆ ಗಳಲ್ಲಿ ಓದುತ್ತಿರುವ ಮಕ್ಕಳನ್ನು ದೇವರೇ ಕಾಪಾಡಬೇಕು. ಈ ರೀತಿಯ ನಡತೆ ಮತ್ತು ಮಾತುಗಳು ಸಮಾಜಕ್ಕೆ ಯಾವ ಸಂದೇಶ ನೀಡುತ್ತವೆ ಎಂಬುದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳ ಬೇಕು" ಎಂದು ಹೇಳಿದರು.
ರಾಜಕೀಯ ಸವಾಲು ಹಾಕಿದ ಡಾ.ಸುಧಾಕರ್, "ಕುಮಾರಸ್ವಾಮಿ ಅವರಂತಹ ನಾಯಕರು ಇವರ ವಿರುದ್ಧ ಸ್ಪರ್ಧಿಸಲು ಬರುವ ಅಗತ್ಯವೇ ಇಲ್ಲ. ಮೊದಲಿಗೆ ಕಾಂಗ್ರೆಸ್ ಪಕ್ಷವೇ ನಿಮಗೆ ಮತ್ತೆ ಟಿಕೆಟ್ ನೀಡುತ್ತದೆಯೇ ಎಂಬ ಅನುಮಾನವಿದೆ. ಒಂದು ವೇಳೆ ಗತಿಯಿಲ್ಲದೆ ಟಿಕೆಟ್ ನೀಡಿದರೂ, ೨೦೨೮ರ ಚುನಾವಣೆಯಲ್ಲಿ ಎಷ್ಟು ಮತಗಳ ಅಂತರದಲ್ಲಿ ಸೋಲುತ್ತೀಯೋ ಕಾದು ನೋಡು" ಎಂದು ಸವಾಲು ಹಾಕಿದರು.
ಕೆಂಪೇಗೌಡ ಜಯಂತಿ ಗಲಾಟೆ ಮತ್ತು ಅದರ ಬಳಿಕ ನಡೆದ ರಾಜಕೀಯ ಬೆಳವಣಿಗೆಗಳಿಂದ ಚಿಕ್ಕಬಳ್ಳಾಪುರ ರಾಜಕೀಯ ಮತ್ತಷ್ಟು ಕಾವೇರಿದ್ದು, ಮುಂದಿನ ದಿನಗಳಲ್ಲಿ ಈ ಬೆಳವಣಿಗೆಗಳು ಯಾವ ಸ್ವರೂಪ ಪಡೆದುಕೊಳ್ಳಲಿವೆ ಎಂಬ ಕುತೂಹಲ ಮೂಡಿಸಿದೆ.