ರಾಜ್ಯ ಬಜೆಟ್ಗೆ ದಿನಾಂಕ ನಿಗದಿ; ದೀರ್ಘಾವಧಿ ಸಿಎಂ ಸಿದ್ದರಾಮಯ್ಯ ಮತ್ತೊಂದು ದಾಖಲೆ ಬರೆಯಲು ಸಜ್ಜು
Karnataka Budget: 2026-27ನೇ ಆರ್ಥಿಕ ವರ್ಷದ ಕರ್ನಾಟಕ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 6ರಂದು ಸಿಎಂ ಸಿದ್ದರಾಮಯ್ಯ ಮುಂಗಡ ಪತ್ರ ಮಂಡಿಸಲಿದ್ದಾರೆ. ಮಾರ್ಚ್ 6ರಿಂದ ಮಾರ್ಚ್ 27ರವರೆಗೆ ನಡೆಯಲಿರುವ ಬಜೆಟ್ ಅಧಿವೇಶನದ ಮೊದಲ ದಿನ ಬಜೆಟ್ ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ) -
ಬೆಂಗಳೂರು, ಫೆ. 12: ಮತ್ತೊಂದು ಬಾರಿ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಜ್ಜಾಗಿದ್ದು, ಅದಕ್ಕಾಗಿ ದಿನಾಂಕ ನಿಗದಿಯಾಗಿದೆ. 2026-27ನೇ ಆರ್ಥಿಕ ವರ್ಷದ ಕರ್ನಾಟಕ ಬಜೆಟ್ (Karnataka Budget) ಅನ್ನು ಮಾರ್ಚ್ 6ರಂದು ಸಿಎಂ ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮಾರ್ಚ್ 6ರಿಂದ ಮಾರ್ಚ್ 27ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 6ರಿಂದ ಬಜೆಟ್ ಅಧಿವೇಶನ ನಡೆಯಲಿದೆ. ಅಧಿವೇಶನದ ಮೊದಲ ದಿನವೇ ಸಿದ್ದರಾಮಯ್ಯ 17ನೇ ಬಜೆಟ್ ಮಂಡಿಸಲಿದ್ದಾರೆ. ಆ ಮೂಲಕ ಮತ್ತೊಂದು ಇತಿಹಾಸ ನಿರ್ಮಿಸಲಿದ್ದಾರೆ.
ಈಗಾಲೇ ಸಿದ್ದರಾಮಯ್ಯ 2026-27ನೇ ಸಾಲಿನ ಆಯವ್ಯಯದ ಪೂರ್ವಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು, ಸರಣಿ ಸಭೆ ಮಾಡುತ್ತಿದ್ದಾರೆ. ಸಚಿವರು, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ಸಿಎಂ ಸಿದ್ದ ರಾಮಯ್ಯ ಅವರ ಎಕ್ಸ್ ಪೋಸ್ಟ್:
2026-27ನೇ ಸಾಲಿನ ಆಯವ್ಯಯದ ಪೂರ್ವಸಿದ್ಧತೆಯ ಹಿನ್ನೆಲೆಯಲ್ಲಿ ಇಂದು "ಹಿಂದುಳಿದ ಜಾತಿ, ವರ್ಗ ಮತ್ತು ಸಮುದಾಯಗಳ ಸಭೆ ನಡೆಸಿ, ಅವರ ಬೇಡಿಕೆಗಳನ್ನು ಆಲಿಸಿದ, ಮುಂಬರುವ ಬಜೆಟ್ನಲ್ಲಿ ಅವುಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದೆ.
— Siddaramaiah (@siddaramaiah) February 12, 2026
ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ 230ಕ್ಕೂ… pic.twitter.com/xTRdXinyem
ಬಜೆಟ್ಗೆ ಪೂರ್ವ ಸಿದ್ಧತೆಯಾಗಿ ವಿವಿಧ ಇಲಾಖೆಗಳ ಸಭೆ
2026-27ನೇ ಸಾಲಿನ ರಾಜ್ಯ ಬಜೆಟ್ಗೆ ಪೂರ್ವ ಸಿದ್ಧತೆಯಾಗಿ ಸಿಎಂ ಸಿದ್ದರಾಮಯ್ಯ ವಸತಿ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಜ್ಞಾನ & ತಂತ್ರಜ್ಞಾನ ಮತ್ತು ಸಣ್ಣ ನೀರಾವರಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ಇಂಧನ ಇಲಾಖೆ, ಯೋಜನೆ, ಕಾರ್ಯಕ್ರಮ ಸಂಯೋಜನೆ & ಸಾಂಖ್ಯಿಕ ಇಲಾಖೆ, ಕಂದಾಯ ಇಲಾಖೆ ಸಚಿವರು, ಅಧಿಕಾರಿಗಳ ಜತೆ ಸಭೆ ನಡೆಸಿ, ಅವರ ಬೇಡಿಕೆಗಳು ಹಾಗೂ ಇಲಾಖೆಯ ಯೋಚನೆ - ಯೋಜನೆಗಳನ್ನು ಆಲಿಸಿದ್ದಾರೆ. ಇಲಾಖೆಗಳ ನೂತನ ಕಾರ್ಯಕ್ರಮಗಳ ಮಾಹಿತಿ ಪಡೆದು, ಅಗತ್ಯ ಅನುದಾನ ಹಾಗೂ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ದೀರ್ಘಾವಧಿ ಸಿಎಂ ದಾಖಲೆ ಹೊತ್ತಿನಲ್ಲೇ ವಿದಾಯದ ಮಾತುಗಳನ್ನಾಡಿದ ಸಿಎಂ ಸಿದ್ದರಾಮಯ್ಯ!
ದೀರ್ಘಾವಧಿ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ
ಈಗಾಗಲೇ ದೀರ್ಘಾವಧಿ ಸಿಎಂ ಎನಿಸಿಕೊಂಡಿರುವ ಸಿದ್ದರಾಮಯ್ಯ ಬಜೆಟ್ ಮಂಡನೆಯಲ್ಲಿಯೂ ದಾಖಲೆ ಬರೆಯಲು ದಿನಗಣನೆ ಆರಂಭವಾಗಿದೆ. ʼಉಳುವವನೇ ಹೊಲದೊಡೆಯʼ ಎಂಬ ಕ್ರಾಂತಿಕಾರಿ ಯೋಜನೆಯನ್ನು ರಾಜ್ಯದಲ್ಲಿ ಪರಿಚಯಿಸಿದ್ದ ದೇವರಾಜ ಅರಸರು ಏಳೂವರೆ ವರ್ಷ ಮುಖ್ಯಮಂತ್ರಿಯಾಗಿದ್ದರು. ಅರಸು ಏಳೂವರೆ ವರ್ಷದ ಆಡಳಿತಾವಧಿಯಲ್ಲಿ 2,792 ದಿನಗಳ ಕಾಲ ಅಧಿಕಾರದಲ್ಲಿದ್ದರು. ಸಿದ್ದರಾಮಯ್ಯ 2013-2018ರ ಅವಧಿಯಲ್ಲಿ ಮೊದಲ ಬಾರಿಗೆ ಸಿಎಂ ಆಗಿದ್ದಾಗ 1,829 ದಿನಗಳ ಕಾಲ ಅಧಿಕಾರದಲ್ಲಿದ್ದರು. ಈಗ ಎರಡನೇ ಅವಧಿಗೆ ಆಡಳಿತದ ಸೂತ್ರ ಹಿಡಿದಿರುವ ಅವರು, ಈ ವರ್ಷದ ಜನವರಿ 6ರಂದು ದೇವರಾಜ ಅರಸರ ದಾಖಲೆಯನ್ನು ಸರಿಗಟ್ಟಿದ್ದರು. ಸಿದ್ದರಾಮಯ್ಯ ಜನವರಿ 6ರಂದು ಮುಖ್ಯಮಂತ್ರಿಯಾಗಿ 7 ವರ್ಷ 240ನೇ ದಿನ ಪೂರೈಸಿಸಿದರು. ಅರಸು 7 ವರ್ಷ 230 ದಿನ ಸಿಎಂ ಆಗಿದ್ದರು.
ಇನ್ನು ಸಿದ್ದರಾಮಯ್ಯ ಈಗಾಗಲೇ 16 ಬಜೆಟ್ ಮಂಡಿಸಿ ರಾಜ್ಯಕ್ಕೆ ಅತಿಹೆಚ್ಚು ಮುಂಗಡ ಪತ್ರ ಕೊಟ್ಟ ದಾಖಲೆಯನ್ನು ಹೊಂದಿದ್ದಾರೆ. 2026-27ರ ತಮ್ಮ 17ನೇ ಬಜೆಟ್ ಮಂಡನೆ ಮೂಲಕ ವಿಶಿಷ್ಟ ದಾಖಲೆ ಮುಡಿಗೇರಿಸಿಕೊಳ್ಳಲಿದ್ದಾರೆ. ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಯಾವೆಲ್ಲ ಯೋಜನೆ ಘೋಷಿಸಲಿದೆ ಎನ್ನುವ ಕುತೂಹಲ ಮೂಡಿದೆ.