ಚಿಕ್ಕನಾಯಕನಹಳ್ಳಿಯ ಜೀರ್ಣೋದ್ಧಾರಗೊಂಡ ಹಜರತ್ ಸೈಯದ್ ಪೀರಾಕ್ ಶಾ ಖಾದ್ರಿ ದರ್ಗಾ ಜ.15ಕ್ಕೆ ಉದ್ಘಾಟನೆ
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ದಶಕಗಳ ಇತಿಹಾಸವಿರುವ ಹಜರತ್ ಸೈಯದ್ ಪೀರಾಕ್ ಶಾ ಖಾದ್ರಿ ದರ್ಗಾ ಶಿಥಿಲಗೊಂಡಿದ್ದ ಕಾರಣ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಸದ್ಯ ದರ್ಗಾದ ವಿನ್ಯಾಸ, ಬಣ್ಣದ ಕೆಲಸ ಹಾಗೂ ಆವರಣದ ಸೌಂದರ್ಯೀಕರಣದ ಕೆಲಸಗಳು ಅತಿ ವೇಗವಾಗಿ ಸಾಗುತ್ತಿದ್ದು, ಜ.15ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ಚಿಕ್ಕನಾಯಕನಹಳ್ಳಿ ಪಟ್ಟಣದ ಹಜರತ್ ಸೈಯದ್ ಪೀರಾಕ್ ಶಾ ಖಾದ್ರಿ ದರ್ಗಾ. -
ಚಿಕ್ಕನಾಯಕನಹಳ್ಳಿ, ಜ.13: ಪಟ್ಟಣದ ಭಾವೈಕ್ಯತೆಯ ಕೇಂದ್ರವಾಗಿರುವ ಹಾಗೂ ಇಲ್ಲಿನ (Chikkanayakanahalli News) ಜಾಮೀಯ ಮಸೀದಿ ಆವರಣದಲ್ಲಿರುವ ಹಜರತ್ ಸೈಯದ್ ಪೀರಾಕ್ ಶಾ ಖಾದ್ರಿ ದರ್ಗಾದ ಜೀರ್ಣೋದ್ಧಾರ ಕಾರ್ಯವು ಇದೀಗ ಭರದಿಂದ ಸಾಗುತ್ತಿದೆ. ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಜ. 15 ರಂದು ದರ್ಗಾವು ಭವ್ಯವಾಗಿ ಲೋಕಾರ್ಪಣೆಗೊಳ್ಳಲಿದೆ.
ದಶಕಗಳ ಇತಿಹಾಸವಿರುವ ಈ ಪವಿತ್ರ ದರ್ಗಾವು ಶಿಥಿಲಗೊಂಡಿದ್ದ ಕಾರಣ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಸದ್ಯ ದರ್ಗಾದ ವಿನ್ಯಾಸ, ಬಣ್ಣದ ಕೆಲಸ ಹಾಗೂ ಆವರಣದ ಸೌಂದರ್ಯೀಕರಣದ ಕೆಲಸಗಳು ಅತಿ ವೇಗವಾಗಿ ಸಾಗುತ್ತಿದ್ದು, ಜ.15 ರಂದು ಗುರುವಾರ ನವೀಕೃತ ದರ್ಗಾದ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀಗಂಧದ (ಸಂದಲ್) ಮೆರವಣಿಗೆಯು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀಗಂಧವನ್ನು ದರ್ಗಾಕ್ಕೆ ಅರ್ಪಿಸುವ ಮೂಲಕ ಉರುಸ್ ಸಂಭ್ರಮಕ್ಕೆ ಚಾಲನೆ ಸಿಗಲಿದೆ.
Tumkur News: ಸರ್ಕಾರಿ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನೀಡಿ: ರಾಜ್ಯಾಧ್ಯಕ್ಷ ಸುಧಾಕರ್ ಆಗ್ರಹ
ಜ. 16ರಂದು ಶುಕ್ರವಾರ ದರ್ಗಾ ಹಾಗೂ ಜಾಮೀಯ ಮಸೀದಿ ಆವರಣದಲ್ಲಿ ವಿಶೇಷವಾಗಿ "ಸೌಹಾರ್ದತೆಯ ಸಂಗಮ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಧರ್ಮದ ಮುಖಂಡರು, ಮಠಾಧೀಶರು ಮತ್ತು ಗಣ್ಯರು ಭಾಗವಹಿಸಲಿದ್ದು, ಪಟ್ಟಣದ ಶಾಂತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರಲಿದ್ದಾರೆ. ಜಾತಿ-ಮತ ಭೇದವಿಲ್ಲದೆ ಎಲ್ಲಾ ಸಮುದಾಯದ ಜನರು ಒಂದೆಡೆ ಸೇರುವ ಈ ಸಂಗಮವು ಸೌಹಾರ್ದತೆಗೆ ಸಾಕ್ಷಿಯಾಗಲಿದೆ. ಲೋಕಾರ್ಪಣೆ ಮತ್ತು ಉರುಸ್ ಅಂಗವಾಗಿ ವಿಶೇಷ ಪ್ರಾರ್ಥನೆ ಮತ್ತು ಬೃಹತ್ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದರ್ಗಾ ಆಡಳಿತ ಮಂಡಳಿ ಕೋರಿದೆ.