Cyber Crime: ಡಿಸಿಗೂ ತಟ್ಟಿದ್ದ ಸೈಬರ್ ಕಳ್ಳರ ಕಾಟ; ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ವಾಟ್ಸ್ಆ್ಯಪ್ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ
Yadgir News: ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೆಸರು ಬಳಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣ ವರದಿಯಾಗಿದ್ದು, ಭಾರಿ ಸದ್ದು ಮಾಡುತ್ತಿದೆ. ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರ ಫೋಟೊ ಬಳಸಿಕೊಡು ಅವರ ಹೆಸರಿನಲ್ಲಿ ವಾಟ್ಸ್ಆ್ಯಪ್ ಖಾತೆ ತೆರೆದಿರುವ ಆರೋಪಿ ಇಲಾಖೆಯ ಹಲವು ಅಧಿಕಾರಿಗಳಿಗೆ ಹಣ ನೀಡುವಂತೆ ಸಂದೇಶ ಕಳುಹಿಸಿದ್ದಾನೆ. ಈ ಸಂದೇಶಕ್ಕೆ ಪ್ರತಿಕ್ರಿಯಿಸಿ ಆರೋಗ್ಯ ಇಲಾಖೆ ಅಧಿಕಾರಿಯೋರ್ವರು 50 ಸಾವಿರ ರೂ. ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ವಾಟ್ಸ್ಆ್ಯಪ್ ಡಿಪಿಯಲ್ಲಿ ಜಿಲ್ಲಾಧಿಕಾರಿ ಹೆಸರು ಮತ್ತು ಫೋಟೊ ಬಳಸಿ ಮೊಬೈಲ್ ಸಂಖ್ಯೆ 84922021308, 84886912413 ಮೂಲಕ ನಕಲಿ ಖಾತೆಗಳನ್ನು ರಚಿಸಿ ಸಂದೇಶ ರವಾನಿಸಲಾಗಿತ್ತು.
ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮತ್ತು ಸಾಂದರ್ಭಿಕ ಚಿತ್ರ -
Ramesh B
Oct 30, 2025 5:31 PM
ಯಾದಗಿರಿ, ಅ. 30: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ (Cyber Crime) ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ರಾಜಕೀಯ ನಾಯಕರು, ಸಿನಿಮಾ ತಾರೆಯರು ಹಾಗೂ ಅಧಿಕಾರಿಗಳು ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದೀಗ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ (Harshal Bhoyar) ಹೆಸರು ಬಳಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣ ವರದಿಯಾಗಿದೆ. ಸದ್ಯ ಈ ವಿಚಾರ ಭಾರಿ ಸದ್ದು ಮಾಡುತ್ತಿದೆ (Yadgir News). ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರ ಫೋಟೊ ಬಳಸಿಕೊಡು ಅವರ ಹೆಸರಿನಲ್ಲಿ ವಾಟ್ಸ್ಆ್ಯಪ್ ಖಾತೆ ತೆರೆದಿರುವ ಆರೋಪಿ ಇಲಾಖೆಯ ಹಲವು ಅಧಿಕಾರಿಗಳಿಗೆ ಹಣ ನೀಡುವಂತೆ ಸಂದೇಶ ಕಳುಹಿಸಿದ್ದಾನೆ.
ಈ ಸಂದೇಶಕ್ಕೆ ಪ್ರತಿಕ್ರಿಯಿಸಿ ಆರೋಗ್ಯ ಇಲಾಖೆ ಅಧಿಕಾರಿಯೋರ್ವರು 50 ಸಾವಿರ ರೂ. ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ವಾಟ್ಸ್ಆ್ಯಪ್ ಡಿಪಿಯಲ್ಲಿ ಜಿಲ್ಲಾಧಿಕಾರಿ ಹೆಸರು ಮತ್ತು ಫೋಟೊ ಬಳಸಿ ಮೊಬೈಲ್ ಸಂಖ್ಯೆ 84922021308, 84886912413 ಮೂಲಕ ನಕಲಿ ಖಾತೆಗಳನ್ನು ರಚಿಸಿ, ತುರ್ತು ಕಾರ್ಯಕ್ಕೆ ಹಣ ಬೇಕಿದೆ. ತಕ್ಷಣ ಕಳುಹಿಸಿ ಎಂದು ಸಂದೇಶ ರವಾನಿಸಲಾಗಿತ್ತು. ಇದನ್ನು ಕಂಡ ಅಧಿಕಾರಿಯೊಬ್ಬರು ಹಣ ಕಳುಹಿಸಿದ್ದರು. ಇನ್ನೂ ಕೆಲವರು ಅನುಮಾನಗೊಂಡು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ.
ಈ ಸಂಬಂಧ ಈಗಾಗಲೇ ಪ್ರಕರಣ ಕೂಡ ದಾಖಲಾಗಿದ್ದು, ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್ ಮೂಲಕ ನಕಲಿ ಮೊಬೈಲ್ ಸಂಖ್ಯೆಯಿಂದ ಹೆಸರು ಮತ್ತು ಭಾವಚಿತ್ರವನ್ನು ಬಳಸಿ ಅಧಿಕಾರಿಗಳಿಂದ ಹಣ ಕೇಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಡಿಸಿ ಹರ್ಷಲ್ ಭೋಯರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಸದ್ಯ ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಸುದ್ದಿಯನ್ನೂ ಓದಿ: Rajendra Singh Babu: ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುಗೆ 4.37 ಲಕ್ಷ ವಂಚನೆ; ಡಬ್ಬಿಂಗ್ ನೆಪದಲ್ಲಿ ಖಾತೆಯಿಂದ ಹಣ ದೋಚಿದ ಸೈಬರ್ ಕಳ್ಳರು
ಮಾಜಿ ಸಿಎಂ ಸದಾನಂದ ಗೌಡ ಬ್ಯಾಂಕ್ ಖಾತೆ ಹ್ಯಾಕ್
ಬೆಂಗಳೂರು: ಕೆಲವು ದಿನಗಳ ಹಿಂದೆ ಖದೀಮರು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಖಾತೆಯನ್ನು ಹ್ಯಾಕ್ ಮಾಡಿದ್ದರು. ಸದಾನಂದ ಗೌಡ ಅವರ ಬ್ಯಾಂಕ್ ಖಾತೆ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದ್ದು, ಸೈಬರ್ ಕಳ್ಳರು 3 ಲಕ್ಷ ರೂ. ಹಣವನ್ನು ದೋಚಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಬೆಂಗಳೂರಿನ ಆರ್ಎಂವಿ ಎಕ್ಸ್ಟೆನ್ಷನ್ನ ಬಿಬಿಎಂಪಿ ಪಾರ್ಕ್ನಲ್ಲಿ ಆಯೋಜಿಸಿದ್ದ75 ಪೌರ ಕಾರ್ಮಿಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಈ ಬಗ್ಗೆ ಮಾತನಾಡಿದ್ದರು.
ʼʼನನ್ನ 3 ಅಕೌಂಟ್ ಹ್ಯಾಕ್ ಮಾಡಿದ್ದಾರೆ. ಅದರಲ್ಲಿದ್ದ ತಲಾ ಒಂದೊಂದು ಲಕ್ಷ ರೂ. ಎಗರಿಸಿದ್ದಾರೆ. ಸುಮಾರು 3 ಲಕ್ಷ ರೂ. ಹಣ ಹೋಗಿದೆ. ಎಚ್ಡಿಎಫ್ಸಿ, ಎಸ್ಬಿಐ ಹಾಗೂ ಆಕ್ಸಿಸ್ ಬ್ಯಾಂಕ್ನ ಖಾತೆಯಲ್ಲಿದ್ದ ಹಣ ಕಳವಾಗಿದೆ. ಯುಪಿಐ ಮೂಲಕ ಹ್ಯಾಕ್ ಮಾಡಿ ಹಣ ಕಳವು ಮಾಡಿದ್ದು ಸೈಬರ್ ಕ್ರೈಂಗೆ ದೂರು ನೀಡಿದ್ದೇನೆʼʼ ಎಂದು ಮಾಹಿತಿ ನೀಡಿದ್ದರು.