ಜಮೀನಿಗಾಗಿ ಕಿರಿಕ್; ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ, ಆರೋಪಿ ಅರೆಸ್ಟ್!
ಬಿಹಾರದ ಗೋಪಾಲ್ಗಂಜ್ ಜಿಲ್ಲೆಯ ಬೆಲ್ಸಂದ್ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರ ಹಿರಿಯ ಸಹೋದರ ವಿಜಯೇಂದ್ರನಾಥ್ ತಿವಾರಿ ಅವರ ಮೇಲೆ ಕೊಡಲಿಯಿಂದ ಮಾರಣಾಂತಿಕ ದಾಳಿ ನಡೆಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ವಿಜಯೇಂದ್ರನಾಥ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
-
ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರ ಹಿರಿಯ ಸಹೋದರ ವಿಜಯೇಂದ್ರನಾಥ್ ತಿವಾರಿ ಅವರ ಮೇಲೆ ಕೊಡಲಿಯಿಂದ ಭೀಕರವಾಗಿ ದಾಳಿ ನಡೆಸಿ, ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬಿಹಾರದ ಗೋಪಾಲ್ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವಿಜಯೇಂದ್ರನಾಥ್ ತಿವಾರಿ ಆರೋಗ್ಯ ಸ್ಥಿತಿ ಸ್ಥಿರ
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಜೂನ್ 21ರಂದು ಮಾಧೋಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಲ್ಸಂದ್ ತಿವಾರಿ ತೋಲಾದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸದರ್-2 ಉಪವಿಭಾಗೀಯ ಪೊಲೀಸ್ ಅಧಿಕಾರಿ ಮತ್ತು ಮಾಧೋಪುರ ಠಾಣಾಧಿಕಾರಿ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಗಾಯಗೊಂಡ ವಿಜಯೇಂದ್ರನಾಥ್ ತಿವಾರಿ ಅವರನ್ನು ಮೊದಲು ಗೋಪಾಲ್ಗಂಜ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಪಾಟ್ನಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ನಿಯಂತ್ರಣದಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜಮೀನು ವಿವಾದದ ಹಿನ್ನೆಲೆಯಲ್ಲಿ ಗಲಾಟೆ
ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ, ಸಾಕ್ಷ್ಯ ಸಂಗ್ರಹಿಸಲು ವಿಧಿವಿಜ್ಞಾನ ಪ್ರಯೋಗಾಲಯದ ತಂಡವನ್ನು ಸ್ಥಳಕ್ಕೆ ಕರೆಯಿಸಲಾಗಿದೆ. ದಾಳಿಗೆ ಬಳಸಲಾದ ಕೊಡಲಿ ಹಾಗೂ ರಕ್ತಸಿಕ್ತವಾಗಿದ್ದ ಆರೋಪಿ ಧರಿಸಿದ್ದ ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಿಂದ ಈ ದಾಳಿಯು ಬಹುಕಾಲದ ಜಮೀನು ವಿವಾದದ ಹಿನ್ನೆಲೆಯಲ್ಲಿ ನಡೆದಿದೆ ಎಂಬುದು ತಿಳಿದುಬಂದಿದೆ.
ಪಕ್ಕದ ಮನೆಯವನಿಂದಲೇ ಕೃತ್ಯ
ವಿಜಯೇಂದ್ರನಾಥ್ ತಿವಾರಿ ಅವರ ಪಕ್ಕದ ಮನೆಯ ರಾಜೇಶ್ ಸಾಹ್ ಎಂಬಾತನೇ ಈ ದಾಳಿ ನಡೆಸಿದ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಸದ್ಯ ಆರೋಪಿ ರಾಜೇಶ್ ಸಾಹ್ನನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಆ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಹಜ ಸ್ಥಿತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Chandrahas Controversy: ವೇದಿಕೆ ಮೇಲೆ ಅಶ್ಲೀಲ ಹಾಡು; ನಟ ಚಂದ್ರಹಾಸ್ ವಿರುದ್ಧ ಕೇಸ್ ದಾಖಲು
ಸರ್ನೇಮ್ ಚೇಂಜ್ ಮಾಡಿಕೊಂಡಿದ್ದ ಪಂಕಜ್
ಪಂಕಜ್ ತ್ರಿಪಾಠಿ ಬಿಹಾರದ ಗೋಪಾಲ್ಗಂಜ್ ಜಿಲ್ಲೆಯ ಬೆಲ್ಸಂದ್ ಗ್ರಾಮದಲ್ಲಿ ಪಂಡಿತ್ ಬನಾರಸ್ ತಿವಾರಿ ಮತ್ತು ಹೇಮವಂತಿ ತಿವಾರಿ ದಂಪತಿಗೆ ಜನಿಸಿದರು. ಇವರು ನಾಲ್ಕು ಜನ ಒಡಹುಟ್ಟಿದವರಲ್ಲಿ ಅತ್ಯಂತ ಕಿರಿಯವರಾಗಿದ್ದು, ಇಬ್ಬರು ಹಿರಿಯ ಸಹೋದರರು (ವಿಜಯೇಂದ್ರನಾಥ್ ತಿವಾರಿ ಸೇರಿದಂತೆ) ಮತ್ತು ಒಬ್ಬ ಹಿರಿಯ ಸಹೋದರಿ ಸಬಿತಾ ತಿವಾರಿ ಇದ್ದಾರೆ. ಪಂಕಜ್ ತ್ರಿಪಾಠಿ ಅವರು ಶಾಲಾ ದಿನಗಳಲ್ಲೇ ತಮ್ಮ ಸರ್ನೇಮ್ ಅನ್ನು 'ತಿವಾರಿ'ಯಿಂದ 'ತ್ರಿಪಾಠಿ' ಎಂದು ಬದಲಾಯಿಸಿಕೊಂಡಿದ್ದರು ಎನ್ನಲಾಗಿದೆ.