ಟಾಲಿವುಡ್ ಅಖಾಡಕ್ಕಿಳಿದ ಕನ್ನಡದ ʻಕೆವಿಎನ್ ಪ್ರೊಡಕ್ಷನ್ಸ್ʼ; ಅಣ್ಣ ಚಿರು ಸಿನಿಮಾಗೆ ಕ್ಲ್ಯಾಪ್ ಮಾಡಿದ ಡಿಸಿಎಂ ಪವನ್ ಕಲ್ಯಾಣ್
ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಮೆಗಾಸ್ಟಾರ್ ಚಿರಂಜೀವಿ ಅವರ 158ನೇ ಚಿತ್ರವನ್ನು ನಿರ್ಮಿಸುವ ಮೂಲಕ ಅಧಿಕೃತವಾಗಿ ಟಾಲಿವುಡ್ಗೆ ಲಗ್ಗೆ ಇಟ್ಟಿದೆ. ಹೈದರಾಬಾದ್ನಲ್ಲಿ ನಡೆದ ಅದ್ಧೂರಿ ಮುಹೂರ್ತ ಸಮಾರಂಭದಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು.
-
ಕನ್ನಡದ ನಿರ್ಮಾಣ ಸಂಸ್ಥೆಯಾದ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸ್ಯಾಂಡಲ್ವುಡ್ನಲ್ಲಿ ಮಾತ್ರವಲ್ಲದೆ, ಇಡೀ ದಕ್ಷಿಣ ಚಿತ್ರರಂಗದಲ್ಲೇ ಸಖತ್ ಸೌಂಡ್ ಮಾಡುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ‘ಕೆಡಿ’ ಹಾಗೂ ತಮಿಳು ನಟ ದಳಪತಿ ವಿಜಯ್ ಅವರ ಕೊನೆಯ ಚಿತ್ರ ‘ಜನ ನಾಯಗನ್’ ನಂತಹ ಬಿಗ್ ಬಜೆಟ್ ಸಿನಿಮಾಗಳನ್ನು ಕೈಗೆತ್ತಿಕೊಂಡಿದ್ದ ಕೆವಿಎನ್ ಸಂಸ್ಥೆ, ಈಗ ಅಧಿಕೃತವಾಗಿ ಟಾಲಿವುಡ್ ಅಖಾಡಕ್ಕೂ ಲಗ್ಗೆ ಇಟ್ಟಿದೆ. ಮೆಗಾಸ್ಟಾರ್ ಚಿರಂಜೀವಿ ಅವರ 158ನೇ ಸಿನಿಮಾವನ್ನು ನಿರ್ಮಿಸುವ ಮೂಲಕ ಕೆವಿಎನ್ ಪ್ರೊಡಕ್ಷನ್ಸ್ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದೆ.
ಕ್ಲ್ಯಾಪ್ ಮಾಡಿದ ಪವನ್ ಕಲ್ಯಾಣ್
ಹೈದರಾಬಾದ್ನಲ್ಲಿ ಇಂದು (ಮೇ 21) ಅದ್ಧೂರಿಯಾಗಿ ನೆರವೇರಿದ ‘ಮೆಗಾ 158’ ಚಿತ್ರದ ಮುಹೂರ್ತ ಸಮಾರಂಭಕ್ಕೆ ರಾಜಕೀಯ ಮತ್ತು ಚಿತ್ರರಂಗದ ತಾರೆಯರು ಸಾಕ್ಷಿಯಾದರು. ಚಿತ್ರದ ಮೊದಲ ದೃಶ್ಯಕ್ಕೆ ಚಿರಂಜೀವಿ ಅವರ ಸಹೋದರ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಅಧಿಕೃತವಾಗಿ ಶುಭ ಹಾರೈಸಿದರು. ಮುಹೂರ್ತದ ವೇಳೆ ಚಿರು ಅವರ ಪುತ್ರಿ, ನಿರ್ಮಾಪಕಿ ಸುಷ್ಮಿತಾ ಕೊನಿಡೇಲಾ ಮತ್ತು ಖ್ಯಾತ ನಿರ್ದೇಶಕ ವಿ.ವಿ. ವಿನಾಯಕ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.
Actor Chiranjeevi: ಕೆವಿಎನ್ನ ಹೊಸ ಹೆಜ್ಜೆ; ಅದ್ಧೂರಿಯಾಗಿ ನೆರವೇರಿತು ಚಿರಂಜೀವಿ ಬಿಗ್ ಬಜೆಟ್ ಸಿನಿಮಾ ಮುಹೂರ್ತ
ಇನ್ನು ಹಿರಿಯ ನಿರ್ದೇಶಕರಾದ ಎ. ಕೋದಂಡರಾಮಿ ರೆಡ್ಡಿ, ಬಿ. ಗೋಪಾಲ್ ಹಾಗೂ ಮೆಗಾ ಬ್ರದರ್ ನಾಗಬಾಬು ಅವರು ಜಂಟಿಯಾಗಿ ಚಿತ್ರದ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಬಾಬಿ (ಕೆ.ಎಸ್. ರವೀಂದ್ರ) ಅವರಿಗೆ ಹಸ್ತಾಂತರಿಸಿದರು. ಈ ಹೈ-ಪ್ರೊಫೈಲ್ ಕಾರ್ಯಕ್ರಮದಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಅಲ್ಲು ಅರವಿಂದ್, ದಿಲ್ ರಾಜು, ಕೆ.ಎಸ್. ರಾಮಾರಾವ್, ಬಂಡ್ಲಾ ಗಣೇಶ್ ಹಾಗೂ ನಟಿ, ನಿರ್ಮಾಪಕಿ ನಿಹಾರಿಕಾ ಕೊನಿಡೇಲಾ, ನಿರ್ದೇಶಕರಾದ ಮೆಹರ್ ರಮೇಶ್, ವಸಿಷ್ಠ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಮತ್ತೆ ಒಂದಾಯ್ತು ಚಿರು - ಬಾಬಿ ಕಾಂಬಿನೇಷನ್
ಈ ಹಿಂದೆ ‘ವಾಲ್ತೇರು ವೀರಯ್ಯ’ ರೀತಿಯ ಇಂಡಸ್ಟ್ರಿ ಹಿಟ್ ಸಿನಿಮಾ ನೀಡಿದ್ದ ಚಿರಂಜೀವಿ ಮತ್ತು ನಿರ್ದೇಶಕ ಬಾಬಿ ಕಾಂಬೊದಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಮಲಯಾಳಂ ನಟ ಮೋಹನ್ಲಾಲ್, ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಮತ್ತು ಬಾಲಿವುಡ್ ನಿರ್ದೇಶಕ-ನಟ ಅನುರಾಗ್ ಕಶ್ಯಪ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಮಲಯಾಳಂ ನಟಿ ಅನಸ್ವರಾ ರಾಜನ್ ಅವರು ಚಿರಂಜೀವಿ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
Ram Charan: 'ಪೆದ್ದಿ' ಸೆಟ್ಗೆ ಚಿರಂಜೀವಿ ಸರ್ಪ್ರೈಸ್ ವಿಸಿಟ್; ವಿಡಿಯೋ ವೈರಲ್
ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಅವರು ಅತ್ಯಂತ ಭಾರಿ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಎಸ್. ಥಮನ್ ಸಂಗೀತ ನೀಡುತ್ತಿದ್ದು, ವಿಜಯ್ ಕಾರ್ತಿಕ್ ಕಣ್ಣನ್ ಅವರ ಛಾಯಾಗ್ರಹಣ ಇರಲಿದೆ. ಅವಿನಾಶ್ ಕೊಲ್ಲ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಲಿದ್ದಾರೆ. ರೂಬೆನ್ ಸಂಕಲನಕಾರರಾಗಿ ತಾಂತ್ರಿಕ ತಂಡದಲ್ಲಿದ್ದಾರೆ.