ಸ್ಯಾಂಡಲ್ವುಡ್ನಲ್ಲಿ ಫ್ಯಾನ್ ವಾರ್! ದರ್ಶನ್ - ʻಕಿಚ್ಚʼ ಸುದೀಪ್ ಬಗ್ಗೆ ರಕ್ಷಿತಾ ಪ್ರೇಮ್ ದಂಪತಿ ಹೇಳಿದ್ದೇನು?
Sandalwood Star War Update: ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವಿನ ಸಂಘರ್ಷದ ಬಗ್ಗೆ ನಟಿ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. "ದರ್ಶನ್ ಮತ್ತು ಸುದೀಪ್ ಪರಸ್ಪರ ಗೌರವಿಸುತ್ತಾರೆ, ಕಿಡಿಗೇಡಿಗಳು ಹಚ್ಚುವ ಬೆಂಕಿಗೆ ಅಭಿಮಾನಿಗಳು ಬಲಿಯಾಗಬಾರದು" ಎಂದು ಪ್ರೇಮ್ ಹೇಳಿದ್ದಾರೆ.
-
ಸ್ಯಾಂಡಲ್ವುಡ್ನಲ್ಲಿ ಸದ್ಯ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಆರಂಭವಾಗಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಕೆಸರೆರಚಾಟ ಶುರುವಾಗಿದೆ. ಈ ಮಧ್ಯೆ ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ಬಗ್ಗೆ ಗರಂ ಆಗಿರುವ ವಿಜಯಲಕ್ಷ್ಮೀ ದರ್ಶನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿನ ಈ ಬೆಳವಣಿಗೆ ಬಗ್ಗೆ ಸ್ಯಾಂಡಲ್ವುಡ್ ಸ್ಟಾರ್ ಕಪಲ್ ರಕ್ಷಿತಾ ಮತ್ತು ಜೋಗಿ ಪ್ರೇಮ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳಿಗೆ ಪ್ರೇಮ್ ಪ್ರತಿಕ್ರಿಯೆ
"ಸುದೀಪ್ ಅವರು ದರ್ಶನ್ ಬಗ್ಗೆಯಾಗಲೀ, ದರ್ಶನ್ ಕುಟುಂಬದ ಬಗ್ಗೆಯಾಗಲಿ ಎಂದಿಗೂ ನನ್ನ ಮುಂದೆ ಮಾತನಾಡಿಲ್ಲ. ನಡುವೆ ಯಾರೋ ಕೆಲವರು ಕಿತಾಪತಿ ಮಾಡುತ್ತಾರೆ. ಅದಕ್ಕೆ ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ ಗಮನ ಕೊಡಬಾರದು. ಸುದೀಪ್ ಅವರು ಒಂದು ಒಳ್ಳೆಯ ಮಾತು ಹೇಳಿದ್ದಾರೆ, ಏನಂದ್ರೆ, ಸಿನಿಮಾ ಚೆನ್ನಾಗಿದ್ದರೆ ಮಾತ್ರ ಅಭಿಮಾನಿಗಳು ಬರುತ್ತಾರೆ, ಸಿನಿಮಾ ಚೆನ್ನಾಗಿಲ್ಲದಿದ್ದರೆ ಯಾರೂ ಬರೋದಿಲ್ಲ ಅಂತ. ಹೌದು, ಇಲ್ಲಿ ಹೀರೋ, ಹೀರೋಗಿರಿಗಿಂತ ಸಿನಿಮಾ ದೊಡ್ಡದು. ಸುದೀಪ್ ದರ್ಶನ್ ಮನಸ್ತಾಪಕ್ಕೆ ವೈಯಕ್ತಿಕ ಕಾರಣಗಳು ಇರಬಹುದು. ಆದರೆ ಯಾವತ್ತೂ ಕೂಡ ಅವರು ಪರಸ್ಪರ ಕೆಟ್ಟದಾಗಿ ಬೈಯ್ದಾಡಿಕೊಂಡಿಲ್ಲ, ಕೆಟ್ಟದಾಗಿ ಮಾತನಾಡಿಲ್ಲ" ಎಂದು ಪ್ರೇಮ್ ಹೇಳಿದ್ದಾರೆ.
"ಅವರಿಬ್ಬರು ನನಗೆ ತುಂಬಾ ಆತ್ಮೀಯರಾದ ಕಾರಣ, ನನಗೆ ಚೆನ್ನಾಗಿ ಗೊತ್ತಿದ್ದಾರೆ. ʻನಾನು ಸುದೀಪ್ ಜೊತೆ ಸಿನಿಮಾ ಮಾಡುತ್ತೇನೆʼ ಎಂದಾಗ ʻಚೆನ್ನಾಗಿ ಮಾಡಿʼ ಅಂತಲೇ ದರ್ಶನ್ ಹೇಳ್ತಾರೆ. ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ ಅಂದ್ರೆ, ʻಚೆನ್ನಾಗ್ ಮಾಡುʼ ಅಂತ ಸುದೀಪ್ ಹೇಳ್ತಾರೆ. ನಮ್ಮ ಫ್ಯಾಮಿಲಿಗೆ ದರ್ಶನ್ ಹಾಗೂ ಸುದೀಪ್ ಆತ್ಮೀಯರು. ಅವರಿಬ್ಬರ ಜೊತೆಗೂ ನಾನು ಕೆಲಸ ಮಾಡಿದ್ದೇನೆ. ಸುದೀಪ್ ಅವರನ್ನು ಅಣ್ಣನ ಸ್ಥಾನದಲ್ಲಿ ನೋಡುತ್ತೇನೆ. ದರ್ಶನ್ ನನಗೆ ಫ್ರೆಂಡ್ ಮತ್ತು ಆಪ್ತರು. ಯಾರೋ ಕಿಡಿಗೇಡಿಗಳು ಹಚ್ಚು ಬೆಂಕಿಯಿಂದ ಈ ರೀತಿ ಆಗುತ್ತಿದೆ" ಎಂದು ʻಜೋಗಿʼ ಪ್ರೇಮ್ ಹೇಳಿದ್ದಾರೆ.
ರಕ್ಷಿತಾ ಪ್ರೇಮ್ ಏನಂದ್ರು?
"ಸುದೀಪ್ ಅವರ ಸಂದರ್ಶನವನ್ನು ನಾನು ನೋಡ್ತಿದ್ದೆ, ಅದರಲ್ಲಿ, ʻನಾನು ಮತ್ತು ದರ್ಶನ್ ಯಾವತ್ತಾದ್ರೂ ಮೈಕ್ ಹಿಡ್ಕೊಂಡು ಜಗಳ ಆಡಿದ್ದೀವಾʼ ಅಂತ ಕೇಳಿದ್ದರು. ಅಲ್ಲೇ ಎಲ್ಲಾ ಮುಗಿದು ಹೋಯ್ತು ಅನಿಸುತ್ತದೆ. ಅವರ ಉತ್ತರವನ್ನ ಅವರು ನೀಡಿದ್ದಾರೆ. ಸುದೀಪ್ ಅವರು ತುಂಬಾ ಕ್ಲಿಯರ್ ಆಗಿ ಹೇಳಿದ್ದಾರೆ, ಆ ರೀತಿ ಏನು ಇಲ್ಲ ಎಂದು. ನಾವೆಲ್ಲಾ ಪೈರಸಿ ವಿರುದ್ಧ ಹೊರಾಡುತ್ತಿದ್ದೇವೆ, ಅದು ಮಾತ್ರ ಖಂಡಿತ. ಪೈರಸಿ ನಮ್ಮ ದೊಡ್ಡ ಶತ್ರು ಆದರೆ, ತಪ್ಪು ತಿಳುವಳಿಕೆ ಕೂಡ ದೊಡ್ಡ ಶತ್ರು. ಈ ತಪ್ಪು ತಿಳುವಳಿಕೆಗಳನ್ನೆಲ್ಲಾ ಪಕ್ಕಕ್ಕಿಟ್ಟು, 45 ಮತ್ತು ಮಾರ್ಕ್ ಸಿನಿಮಾಗಳಿಗೆ ವಿಶ್ ಮಾಡೋಣ. ಚಿತ್ರರಂಗದಲ್ಲಿ ಸುದೀಪ್ ನನ್ನ ಮೊದಲ ಸ್ನೇಹಿತ. ದರ್ಶನ್ ಹಾಗೂ ಸುದೀಪ್ ಕೂಡ ಸ್ನೇಹಿತರೇ" ಎಂದು ರಕ್ಷಿತಾ ಹೇಳಿದ್ದಾರೆ.