ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅವನು ಸ್ನೇಹಿತನಾಗಿದ್ದ, ಪಶ್ಚಾತ್ತಾಪವಿಲ್ಲ: ಭಯೋತ್ಪಾದಕನ ಜತೆಗಿನ ಗೆಳೆತನದ ಬಗ್ಗೆ ಆಲಿಯಾ ಭಟ್‌ ಸಹೋದರ ರಾಹುಲ್ ಭಟ್‌ ಹೇಳಿದ್ದೇನು?

Rahul Bhatt: ಆಲಿಯಾ ಭಟ್‌ ಸಹೋದರ ರಾಹುಲ್ ಭಟ್ ನಟನಾಗಬೇಕೆಂಬ ಕನಸು ಕಂಡವರು. ಆದರೆ 2008ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ಡೇವಿಡ್ ಹೆಡ್ಲಿಯೊಂದಿಗೆ ಸ್ನೇಹ ಬೆಳೆಸಿದ್ದರಿಂದ ತೀವ್ರ ಆಘಾತಕ್ಕೊಳಗಾಗಿದ್ದರು. ಈ ಬಗ್ಗೆ ಅವರು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ಭಯೋತ್ಪಾದಕನ ಜತೆಗಿನ ಸ್ನೇಹದ ಬಗ್ಗೆ ರಾಹುಲ್ ಭಟ್‌ ಹೇಳಿದ್ದೇನು?

ರಾಹುಲ್‌ ಭಟ್‌ ಕುಟುಂಬ.

Profile Ramesh B Apr 30, 2025 5:47 PM

ಮುಂಬೈ: ಖ್ಯಾತ ನಿರ್ದೇಶಕ ಮಹೇಶ್ ಭಟ್‌ (Mahesh Bhatt) ಪುತ್ರ ಮತ್ತು ಆಲಿಯಾ ಭಟ್‌ (Alia Bhatt) ಸಹೋದರ ರಾಹುಲ್ ಭಟ್ (Rahul Bhatt) ನಟನಾಗಬೇಕೆಂಬ ಕನಸು ಕಂಡವರು. ಆದರೆ 2008ರ ಮುಂಬೈ ಭಯೋತ್ಪಾದಕ ದಾಳಿಯ (Mumbai Terror Attack) ಆರೋಪಿ ಡೇವಿಡ್ ಹೆಡ್ಲಿಯೊಂದಿಗೆ (David Headley) ಸ್ನೇಹ ಬೆಳೆಸಿದ್ದರಿಂದ ತೀವ್ರ ಆಘಾತಕ್ಕೊಳಗಾಗಿದ್ದರು. 2009ರಲ್ಲಿ ರಾಹುಲ್ ಭಟ್ ಮತ್ತು ಡೇವಿಡ್ ಹೆಡ್ಲಿಯ ನಡುವೆ ಸ್ನೇಹವಿತ್ತು ಎಂದು ಆರೋಪಿಸಲಾಗಿತ್ತು. ರಾಹುಲ್ ಭಟ್ ಎಂದಿಗೂ ಭಯೋತ್ಪಾದನೆ ಪ್ರಕರಣದಲ್ಲಿ ಆರೋಪಿಯಾಗಿರಲಿಲ್ಲ. ಆದರೆ ಹೆಡ್ಲಿಯೊಂದಿಗಿನ ಸ್ನೇಹದಿಂದಾಗಿ ಅವರು ಸಾಕ್ಷಿಯಾಗಿದ್ದರು. ಇತ್ತೀಚೆಗೆ ಸಂದರ್ಶನದಲ್ಲಿ ರಾಹುಲ್ ತಮ್ಮ ಅತ್ಯಂತ ಘೋರ ಆಘಾತ ಮತ್ತು ಅನುಭವಿಸಿದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

"ನಾನೇ ಅತಿಯಾಗಿ ಬಳಲಿದವನು. ನನ್ನ ಗುರುತನ್ನು ಕೊಂದು ಹಾಕಲಾಯಿತು. ನನ್ನ ವ್ಯಕ್ತಿತ್ವವನ್ನು ಹತ್ಯೆ ಮಾಡಲಾಯಿತು. ಯಾಕೆ, ಯಾವ ಕಾರಣಕ್ಕೆ? ನಾನು ಏನೂ ಮಾಡಿರಲಿಲ್ಲ. ನಾನು ಏನಾದರೂ ಮಾಡಿದ್ದರೆ, ನನ್ನ ಅಪರಾಧವನ್ನು ಒಪ್ಪಿಕೊಂಡು ಶಿಕ್ಷೆಗೆ ಒಳಗಾಗುವ ಧೈರ್ಯ ನನ್ನಲ್ಲಿದೆ. ಆದರೆ ನಾನು ಏನೂ ಮಾಡಿರಲಿಲ್ಲ, ಆದರೂ ಎಲ್ಲವನ್ನೂ ಎದುರಿಸಬೇಕಾಯಿತು. ಇಂದಿಗೂ ಎಲ್ಲವೂ ನೆನಪಿದೆ" ಎಂದು ರಾಹುಲ್‌ ಬೇಸರ ವ್ಯಕ್ತಪಡಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: Hafiz Saeed: 26/11 ಮುಂಬೈ, ಪೆಹಲ್ಗಾಮ್‌ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಅಡಗುತಾಣ ಪತ್ತೆ

ರಾಹುಲ್ ಬಹಿರಂಗಪಡಿಸಿದಂತೆ, ಇಂದಿಗೂ ಅವರಿಗೆ ಡಿಎಂನಲ್ಲಿ ನಿಂದನೀಯ ಸಂದೇಶಗಳು ಬರುತ್ತವೆ. "ದೇಶದ್ರೋಹಿ ಎಂದು ಕರೆಯಲ್ಪಡುವುದು ನೋವುಂಟು ಮಾಡುತ್ತದೆ. ಏನೂ ಮಾಡದಿದ್ದರೂ ನೂವುಂಟು ಮಾಡುತ್ತಿದ್ದಾರೆ. ಮನುಷ್ಯರ ಮೇಲಿನ ನಂಬಿಕೆ ಕಳೆದುಕೊಳ್ಳುತ್ತೀರಿ" ಎಂದು ಅವರು ಹೇಳಿದ್ದಾರೆ. ಗುಪ್ತಚರ ಇಲಾಖೆಗಳು ತಮ್ಮನ್ನು ನ್ಯಾಯಯುತವಾಗಿ ನಡೆಸಿಕೊಂಡರೂ, ಕೆಲವು ಮಾಧ್ಯಮಗಳು ಸತ್ಯವನ್ನು ತಿರುಚಿದವು ಎಂದು ಅವರು ತಿಳಿಸಿದ್ದಾರೆ.

"ಎಲ್ಲವೂ ಬಹಿರಂಗವಾಗಿದೆ, ನಾನು ಎಂದಿಗೂ ಆರೋಪಿಯಾಗಿರಲಿಲ್ಲ. ಮೊದಲ ದಿನದಿಂದಲೂ ನಾನು ಸಾಕ್ಷಿಯಾಗಿದ್ದೆ. ಒಂದು ವೇಳೆ ಏನಾದರೂ ಇದ್ದಿದ್ದರೆ, ನಾನು ಇಲ್ಲಿ ಕುಳಿತಿರುತ್ತಿದ್ದೆನಾ? ಇದು ದೊಡ್ಡ ಪ್ರಕರಣವಾಗಿತ್ತು. ಏನಾದರೂ ಸತ್ಯವಿದ್ದರೆ, ಅವರು ನನ್ನನ್ನು ಜೈಲಿಗೆ ಕಳುಹಿಸಿರುತ್ತಿದ್ದರು" ಎಂದು ರಾಹುಲ್ ಹೇಳಿದ್ದಾರೆ.

ಪ್ರಕರಣದಲ್ಲಿ ಆರೋಪಿಯಾಗದಿದ್ದರೂ "ಹೆಡ್ಲಿಯ ಸ್ನೇಹಿತ" ಎಂಬ ಟ್ಯಾಗ್ ತಮ್ಮ ಜೀವನದುದ್ದಕ್ಕೂ ಕಾಡುತ್ತದೆ ಎಂದು ರಾಹುಲ್ ಒಪ್ಪಿಕೊಂಡಿದ್ದಾರೆ. "ನಾನೇನು ಮಾಡಲಿ? ಅವನು ನನ್ನ ಸ್ನೇಹಿತನಾಗಿದ್ದ. ಈಗ ಏನೇ ಹೇಳಿದರೂ, ಅವನು ನನ್ನ ಸ್ನೇಹಿತನಾಗಿದ್ದ. ಅವನ ನಿಜವಾದ, ದುರುದ್ದೇಶಪೂರಿತ ಉದ್ದೇಶಗಳು ನನಗೆ ತಿಳಿದಿರಲಿಲ್ಲ. ಈ ಬಗ್ಗೆ ಯಾವುದೇ ಕೋಪವಿಲ್ಲ. ಎಲ್ಲವನ್ನೂ ಮತ್ತೆ ಎದುರಿಸಬೇಕಾದರೆ, ನಾನು ಎದುರಿಸುತ್ತೇನೆ. ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ನಾನು ಬಹಳಷ್ಟು ಕಲಿತಿದ್ದೇನೆ. ಕಷ್ಟಗಳು ನನಗೆ ಪಾಠ ಕಲಿಸಿವೆ. ಈಗ ನನಗೆ ಯಾವುದಕ್ಕೂ ಭಯವಿಲ್ಲ. ಏನೂ ಮಾಡದಿದ್ದರೆ ಯಾಕೆ ಭಯಪಡಬೇಕು?" ಎಂದು ಅವರು ಹೇಳಿದ್ದಾರೆ. ಆದರೆ ಈ ಘಟನೆಯಿಂದಾಗಿ ತಾವು ಯಾರನ್ನು ಭೇಟಿಯಾಗುತ್ತೇವೆ ಮತ್ತು ವೃತ್ತಿಪರವಾಗಿ ಯಾರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂಬ ಬಗ್ಗೆ ಸಂಶಯಾತ್ಮಕ ಮನೋಭಾವ ಬೆಳೆದಿದೆ ಎಂದು ರಾಹುಲ್ ತಿಳಿಸಿದ್ದಾರೆ.