ಅತ್ಯಾಚಾರ, ಬಲವಂತದ ಮತಾಂತರ ಆರೋಪ; ಹೈಕೋರ್ಟ್ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಲಕ್ನೋದಲ್ಲಿರುವ ಅಲಹಾಬಾದ್ ಹೈಕೋರ್ಟ್ ಪೀಠದಲ್ಲಿ ಮಹಿಳೆಯೊಬ್ಬರು ಮೇಲ್ಛಾವಣಿ ಹತ್ತಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಆತಂಕ ಸೃಷ್ಟಿಸಿದೆ. ಸಾಮೂಹಿಕ ಅತ್ಯಾಚಾರ ಮತ್ತು ಬಲವಂತದ ಮತಾಂತರದ ಆರೋಪಗಳ ಹಿನ್ನೆಲೆಯಲ್ಲಿ ಒತ್ತಡ ಎದುರಿಸುತ್ತಿದ್ದ ಮಹಿಳೆ ಈ ಕ್ರಮಕ್ಕೆ ಮುಂದಾಗಿದ್ದು, ಬಳಿಕ ಅಧಿಕಾರಿಗಳು ಮತ್ತು ವಕೀಲರ ಮಧ್ಯಪ್ರವೇಶದಿಂದ ಮಹಿಳೆ ಮತ್ತು ಮಗುವನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ -
ಅಲಹಾಬಾದ್: ಅಲಹಾಬಾದ್ ಹೈಕೋರ್ಟ್ (Allahabad High Court)ನ ಲಕ್ನೋ ಪೀಠ (Lucknow bench)ದಲ್ಲಿ ಏಪ್ರಿಲ್ 10 ರಂದು ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ಘಟನೆಯೊಂದು ನಡೆದಿದೆ. ಸಂಕಷ್ಟಕ್ಕೊಳಗಾದ ಮಹಿಳೆಯೊಬ್ಬರು ನ್ಯಾಯಾಲಯದ ಕಟ್ಟಡದ ಮೇಲ್ಛಾವಣಿ ಹತ್ತಿ, ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಪ್ರಕರಣವು ಈಗ ಸಾಮೂಹಿಕ ಅತ್ಯಾಚಾರ ಮತ್ತು ಬಲವಂತದ ಮತಾಂತರದ ಗಂಭೀರ ತಿರುವು ಪಡೆದುಕೊಂಡಿದೆ.
ಗೊಂಡಾ (Gonda) ನಿವಾಸಿಯಾದ ಈ ಮಹಿಳೆ, ತನ್ನ ದೂರಿನ ಆಧಾರದ ಮೇಲೆ ಎಫ್ಐಆರ್ (FIR) ದಾಖಲಿಸುವಂತೆ ಒತ್ತಾಯಿಸಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಮದುವೆಯ ನೆಪದಲ್ಲಿ ತನ್ನನ್ನು ಅಪಹರಿಸಿ, ನಂತರ ಹಲವು ವ್ಯಕ್ತಿಗಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮಹಿಳೆಯ ಹೇಳಿಕೆಯಲ್ಲಿ ಏನಿದೆ?
ಮಹಿಯಳೆಯ ಹೇಳಿಕೆಯ ಪ್ರಕಾರ, ಆಕೆ ಮೇಲೆ ಪದೇ ಪದೇ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ, ಬಲವಂತವಾಗಿ ಮತಾಂತರ ಮಾಡಲಾಗಿದೆ ಮತ್ತು ಬಲವಂತದ ಮದುವೆಗೆ ಒತ್ತಾಯಿಸಲಾಗಿದೆ. ಈ ಅವಧಿಯಲ್ಲಿ ತಾನು ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ಅನುಭವಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಮದುವೆಯಾಗಲು ತಿರಸ್ಕರಿಸಿದಕ್ಕೆ ಎಚ್ಐವಿ ಪಾಸಿಟಿವ್ ರಕ್ತ ಇಂಜೆಕ್ಟ್ ಮಾಡಿದ ಪಾಪಿ; ಮನನೊಂದ ಯುವತಿ ಆತ್ಮಹತ್ಯೆ
ನಂತರ ತಾನು ಮಗುವಿಗೆ ಜನ್ಮ ನೀಡಿದ್ದರೂ, ಆರೋಪಿಗಳು ಯಾವುದೇ ಜವಾಬ್ದಾರಿಯನ್ನು ಹೊರಲು ನಿರಾಕರಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಅಲ್ಲದೆ, ಗ್ರಾಮದ ಮುಖಂಡರು ಸೇರಿದಂತೆ ಹಲವರು ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಮತ್ತು ಪ್ರಕರಣವನ್ನು ಮುಂದುವರಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತೆ ಗಂಭೀರವಾಗಿ ಆರೋಪಿಸಿದ್ದಾರೆ.
ಹೈಕೋರ್ಟ್ನಲ್ಲಿ ನಡೆದಿದ್ದೇನು?
ಏಪ್ರಿಲ್ 10 ರಂದು ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ತನ್ನ ದೂರನ್ನು ಹಿಂಪಡೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿ ಮಹಿಳೆ ಲಕ್ನೋದ ಹೈಕೋರ್ಟ್ ಆವರಣ ತಲುಪಿ ಮೇಲ್ಛಾವಣಿಯನ್ನು ಹತ್ತಿದ್ದರು. ಅಷ್ಟೇ ಅಲ್ಲದೆ, ತನ್ನ ಮಗುವನ್ನು ಮೇಲ್ಛಾವಣಿಯಿಂದ ಕೆಳಗೆ ಎಸೆಯುವುದಾಗಿ ಬೆದರಿಕೆ ಹಾಕಲಾಗಿತ್ತು ಮತ್ತು ಮಗುವನ್ನು ಗಾಳಿಯಲ್ಲಿ ತೂಗಾಡಿಸಲಾಗಿತ್ತು ಎಂಬ ಆಘಾತಕಾರಿ ವಿಷಯವನ್ನೂ ಅವರು ಬಹಿರಂಗಪಡಿಸಿದ್ದಾರೆ.
ಸ್ಥಳದಲ್ಲಿದ್ದ ವಕೀಲರು ತಕ್ಷಣ ಮಧ್ಯಪ್ರವೇಶಿಸಿ ಮಗುವಿಗೆ ಯಾವುದೇ ಹಾನಿಯಾಗದಂತೆ ತಡೆದಿದ್ದಾರೆ. ತೀವ್ರ ಆತಂಕ ಮತ್ತು ಒತ್ತಡದ ನಡುವೆ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ತಕ್ಷಣವೇ ನ್ಯಾಯಾಲಯದ ಅಧಿಕಾರಿಗಳು ಮತ್ತು ರಿಜಿಸ್ಟ್ರಾರ್ (ಭದ್ರತೆ) ಸೇರಿದಂತೆ ಭದ್ರತಾ ಸಿಬ್ಬಂದಿಗಳು ಮಹಿಳೆ ಮತ್ತು ಮಗುವನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ಸಂತ್ರಸ್ತೆ ಮಹಿಳೆಯು ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯ ಈ ವಿಚಾರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದಾರೆ.