ಭಾರತದ ರಕ್ಷಣಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು: ಬಹು ಗುರಿಗಳ ಮೇಲೆ ದಾಳಿ ಮಾಡಬಲ್ಲ ಸುಧಾರಿತ 'ಅಗ್ನಿ' ಕ್ಷಿಪಣಿ ಯಶಸ್ವಿ ಪರೀಕ್ಷೆ
Agni Missile: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿರುವ MIRV ತಂತ್ರಜ್ಞಾನ ಹೊಂದಿದ ಸುಧಾರಿತ ಅಗ್ನಿ ಕ್ಷಿಪಣಿಯ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ನಡೆಸಿದೆ. ಒಂದೇ ವೇಳೆ ಹಲವು ಗುರಿಗಳನ್ನು ನಿಖರವಾಗಿ ಹೊಡೆಯಬಲ್ಲ ಈ ತಂತ್ರಜ್ಞಾನವು ದೇಶದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ.
ಅಗ್ನಿ ಕ್ಷಿಪಣಿ ಪರೀಕ್ಷೆ ಯಶಸ್ವಿ -
ನವದೆಹಲಿ, ಮೇ 9: ಭಾರತವು ರಕ್ಷಣಾ ತಂತ್ರಜ್ಞಾನದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ವಿಶಾಲವಾದ ಪ್ರದೇಶದಲ್ಲಿ ಹರಡಿರುವ ವಿವಿಧ ಗುರಿಗಳನ್ನು ಏಕಕಾಲದಲ್ಲಿ ನಿಖರವಾಗಿ ಧ್ವಂಸಗೊಳಿಸಬಲ್ಲ 'ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಡ್ ರಿ-ಎಂಟ್ರಿ ವೆಹಿಕಲ್' (MIRV) ತಂತ್ರಜ್ಞಾನ ಹೊಂದಿರುವ ಸುಧಾರಿತ ಅಗ್ನಿ ಕ್ಷಿಪಣಿಯ (Agni missile) ಪರೀಕ್ಷಾರ್ಥ ಹಾರಾಟವನ್ನು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಶನಿವಾರ ಘೋಷಿಸಿದೆ.
ಒಡಿಶಾದ ಕರಾವಳಿಯಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪದಿಂದ ಈ ಅತ್ಯಾಧುನಿಕ ಕ್ಷಿಪಣಿಯ ಉಡಾವಣೆ ನಡೆಯಿತು. ಈ ಸುಧಾರಿತ ಅಗ್ನಿ ಕ್ಷಿಪಣಿಯು ಹಾರಾಟದ ಸಮಯದಲ್ಲಿ ವಿವಿಧ ಪೇಲೋಡ್ಗಳನ್ನು ಹೊತ್ತೊಯ್ದು, ಹಿಂದೂ ಮಹಾಸಾಗರದ ವಿವಿಧ ಭಾಗಗಳಲ್ಲಿ ನಿಗದಿಪಡಿಸಲಾಗಿದ್ದ ಗುರಿಗಳನ್ನು ಯಶಸ್ವಿಯಾಗಿ ತಲುಪಿತು. ನೆಲದ ಮೇಲೆ ಮತ್ತು ಹಡಗುಗಳಲ್ಲಿ ಅಳವಡಿಸಲಾಗಿದ್ದ ಹಲವು ಟೆಲಿಮೆಟ್ರಿ ಹಾಗೂ ಟ್ರ್ಯಾಕಿಂಗ್ ಕೇಂದ್ರಗಳು ಕ್ಷಿಪಣಿಯ ಉಡಾವಣೆಯಿಂದ ಹಿಡಿದು ಅದು ಗುರಿ ತಲುಪುವವರೆಗಿನ ಪ್ರತಿಯೊಂದು ಕ್ಷಣವನ್ನೂ ದಾಖಲಿಸಿವೆ. ಈ ಪರೀಕ್ಷೆಯು ಮಿಷನ್ನ ಎಲ್ಲ ಉದ್ದೇಶಗಳನ್ನು ಸಂಪೂರ್ಣವಾಗಿ ಪೂರೈಸಿದೆ ಎಂದು ರಕ್ಷಣಾ ಇಲಾಖೆ ದೃಢಪಡಿಸಿದೆ.
'ಅಗ್ನಿ' ಕ್ಷಿಪಣಿ ಯಶಸ್ವಿ ಪರೀಕ್ಷೆ:
Advanced Agni missile with MIRV (Multiple Independently Targeted Re-Entry Vehicle) system was successfully tested from Dr. APJ Abdul Kalam Island, Odisha on 08th May 2026.
— DRDO (@DRDO_India) May 9, 2026
The missile was flight tested with Multiple payloads, targeted to different targets spatially distributed… pic.twitter.com/W7ufT7pwbt
ರಕ್ಷಣಾ ಸಚಿವರ ಮೆಚ್ಚುಗೆ
ಈ ಯಶಸ್ವಿ ಪ್ರಯೋಗದ ಕುರಿತು ಹರ್ಷ ವ್ಯಕ್ತಪಡಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಇದು ದೇಶದ ಭದ್ರತಾ ಸನ್ನದ್ಧತೆಗೆ ಹೊಸ ಆಯಾಮವನ್ನು ನೀಡಲಿದೆ. ಹೆಚ್ಚುತ್ತಿರುವ ಜಾಗತಿಕ ಮತ್ತು ಪ್ರಾದೇಶಿಕ ಬೆದರಿಕೆಗಳ ನಡುವೆ, ಇಂತಹ ತಂತ್ರಜ್ಞಾನವು ಭಾರತದ ರಕ್ಷಣಾ ಶಕ್ತಿಯನ್ನು ಮತ್ತು ಎದುರಾಳಿಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ" ಎಂದು ಹೇಳಿದ್ದಾರೆ. ಈ ಸಾಧನೆಗಾಗಿ ಅವರು ಡಿಆರ್ಡಿಒ ವಿಜ್ಞಾನಿಗಳು, ಭಾರತೀಯ ಸೇನೆ ಮತ್ತು ದೇಶೀಯ ಕೈಗಾರಿಕಾ ಪಾಲುದಾರರನ್ನು ಅಭಿನಂದಿಸಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರ; 250 ಕಿಲೋ ಮೀಟರ್ ಬೆನ್ನಟ್ಟಿ ಉಗ್ರರ ಬೇಟೆಯಾಡಿದ ಭಾರತೀಯ ಸೇನೆ
TARA ಶಸ್ತ್ರಾಸ್ತ್ರ ವ್ಯವಸ್ಥೆಯ ಪದಾರ್ಪಣೆ
ಅಗ್ನಿ ಕ್ಷಿಪಣಿಯ ಪರೀಕ್ಷೆಯ ಜೊತೆಗೆ, ಭಾರತವು 'ಟ್ಯಾಕ್ಟಿಕಲ್ ಅಡ್ವಾನ್ಸ್ಡ್ ರೇಂಜ್ ಆಗ್ಮೆಂಟೇಶನ್' ಎಂಬ ತನ್ನ ಮೊದಲ ಸ್ವದೇಶಿ ಗ್ಲೈಡ್ ಶಸ್ತ್ರಾಸ್ತ್ರ ವ್ಯವಸ್ಥೆಯ ಮೊದಲ ಹಾರಾಟ ಪರೀಕ್ಷೆಯನ್ನು ಗುರುವಾರ ಯಶಸ್ವಿಯಾಗಿ ನಡೆಸಿದೆ. ಹೈದರಾಬಾದ್ನ ರಿಸರ್ಚ್ ಸೆಂಟರ್ ಇಮಾರತ್ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನವು ಸಾಮಾನ್ಯ ಬಾಂಬ್ಗಳನ್ನು ಅತ್ಯಂತ ನಿಖರವಾಗಿ ಗುರಿ ತಲುಪುವ ಶಸ್ತ್ರಾಸ್ತ್ರಗಳನ್ನಾಗಿ ಪರಿವರ್ತಿಸುತ್ತದೆ.
ಈ ಶಸ್ತ್ರಾಸ್ತ್ರವು ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದರೂ ಅತ್ಯಂತ ಕಡಿಮೆ ವೆಚ್ಚದಾಯಕವಾಗಿದೆ ಎಂಬುದು ವಿಶೇಷ. ಇದು ಶತ್ರುಗಳ ನೆಲದ ನೆಲೆಗಳನ್ನು ಅತ್ಯಂತ ನಿಖರವಾಗಿ ಧ್ವಂಸಗೊಳಿಸಲು ವಾಯುಪಡೆಗೆ ಸಹಕಾರಿಯಾಗಲಿದೆ. ಅಗ್ನಿ ಮತ್ತು ಟಾರಾ ಪರೀಕ್ಷೆಗಳ ಯಶಸ್ಸು ಭಾರತವು ರಕ್ಷಣಾ ಸಾಮಗ್ರಿಗಳಲ್ಲಿ 'ಆತ್ಮನಿರ್ಭರ'ತೆ ಸಾಧಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಈ ಕ್ಷಿಪಣಿ ವ್ಯವಸ್ಥೆಗಳು ಭಾರತೀಯ ವಿಜ್ಞಾನಿಗಳು ಮತ್ತು ದೇಶೀಯ ಕೈಗಾರಿಕೆಗಳ ನಡುವಿನ ಸಮನ್ವಯದ ಫಲವಾಗಿದ್ದು, ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಭಾರತದ ಸ್ಥಾನಮಾನವನ್ನು ಮತ್ತಷ್ಟು ಎತ್ತರಿಸಿವೆ.