ಪಿಒಕೆ ಕುರಿತು ಪ್ರಕಟಿಸಿದ್ದ ಅಮೆರಿಕದ ಪತ್ರಿಕೆಗೆ ಭಾರತ ತಿರುಗೇಟು; 'ಪಾಕಿಸ್ತಾನದ ಕಾಶ್ಮೀರ' ಅಲ್ಲ, 'ಪಾಕ್ ಆಕ್ರಮಿತ ಕಾಶ್ಮೀರ ಎಂದು ಸ್ಪಷ್ಟನೆ
ಪಿಒಕೆ ಕುರಿತು ಪ್ರಕಟಿಸಿದ ವರದಿಯಲ್ಲಿ "ಪಾಕಿಸ್ತಾನದ ಕಾಶ್ಮೀರ" ಎಂಬ ಪದಪ್ರಯೋಗ ಬಳಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. "ಪಾಕಿಸ್ತಾನ ಆಕ್ರಮಿತ ಕಾಶ್ಮೀರ" ಎಂಬುದೇ ಸರಿಯಾದ ಉಲ್ಲೇಖ ಎಂದು ಭಾರತ ಸ್ಪಷ್ಟಪಡಿಸಿದೆ. ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ದಮನದಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ವರದಿಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಎಐ ರಚಿತ ಚಿತ್ರ -
ವಾಷಿಂಗ್ಟನ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಕುರಿತು ಪ್ರಕಟಿಸಿದ ವರದಿಯ ಶೀರ್ಷಿಕೆಯಲ್ಲಿ ಬಳಸಿದ ಪದಪ್ರಯೋಗಕ್ಕೆ ಭಾರತವು ದಿ ನ್ಯೂಯಾರ್ಕ್ ಟೈಮ್ಸ್ (NYT) ಪತ್ರಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಪದಪ್ರಯೋಗವು ತಪ್ಪು ಹಾಗೂ ದಾರಿತಪ್ಪಿಸುವಂತದ್ದು ಎಂದು ಭಾರತ ತಿಳಿಸಿದೆ. ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, "ಪಾಕಿಸ್ತಾನದ ಕಾಶ್ಮೀರ ಎಂಬ ಪ್ರದೇಶವೇ ಇಲ್ಲ. ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮಾತ್ರ" ಎಂದು ಸ್ಪಷ್ಟಪಡಿಸಿದೆ.
ರಾಯಭಾರ ಕಚೇರಿಯು, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಹಾಗೂ ಅವಿನಾಭಾವ ಅಂಗಗಳಾಗಿದ್ದು, ಅವುಗಳ ಕೆಲವು ಭಾಗಗಳನ್ನು ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಪುನರುಚ್ಚರಿಸಿದೆ. ಅಲ್ಲದೆ, ಆ ಪ್ರದೇಶದ ಜನರ ವಿರುದ್ಧ ಪಾಕಿಸ್ತಾನ ಹಿಂಸಾಚಾರ ಮತ್ತು ದಮನ ನಡೆಸುತ್ತಿದೆ ಎಂದು ಆರೋಪಿಸಿದೆ.
ವರದಿಯಲ್ಲಿ ಏನಿತ್ತು?
ಪಿಒಕೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಆರಂಭವಾದ ವೇಳೆ ನಡೆದ ಹಿಂಸಾಚಾರ ಕುರಿತು ಅಮೆರಿಕದ ಪತ್ರಿಕೆ ವರದಿ ಪ್ರಕಟಿಸಿತ್ತು. ವರದಿಯಲ್ಲಿ ಪಿಒಕೆಯನ್ನು "ಪಾಕಿಸ್ತಾನದ ಆಡಳಿತದಲ್ಲಿರುವ ಕಾಶ್ಮೀರ" ಎಂದು ಉಲ್ಲೇಖಿಸಲಾಗಿತ್ತು. ಇದೇ ಪದಪ್ರಯೋಗಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.
ವರದಿಯಲ್ಲಿ, ಪಿಒಕೆಯ ಮೀರ್ಪುರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದಿರುವುದಾಗಿ ಉಲ್ಲೇಖಿಸಲಾಗಿದೆ. ಪಾಕಿಸ್ತಾನದ ಸ್ವತಂತ್ರ ಮಾನವ ಹಕ್ಕುಗಳ ಆಯೋಗ ಕೂಡ ಹಿಂಸಾಚಾರವನ್ನು ಖಂಡಿಸಿ, ಘಟನೆ ಕುರಿತು ಸ್ವತಂತ್ರ ತನಿಖೆಗೆ ಆಗ್ರಹಿಸಿರುವುದಾಗಿ ವರದಿ ತಿಳಿಸಿದೆ.
Misleading and incorrect headline by @nytimes. There is no Pakistani Kashmir, only Pakistan occupied Kashmir.
— India in USA (@IndianEmbassyUS) July 29, 2026
The Union Territories of Jammu & Kashmir and Ladakh, have been, are and will always remain an integral and inalienable part of India. Pakistan has illegally occupied…
30ಕ್ಕೂ ಹೆಚ್ಚು ಮಂದಿ ಬಲಿ
ಮೂಲಗಳ ಪ್ರಕಾರ, ಪಾಕಿಸ್ತಾನದ ಭದ್ರತಾ ಪಡೆಗಳು ಪ್ರತಿಭಟನಾಕಾರರ ವಿರುದ್ಧ ನಡೆಸಿದ ದಮನ ಕ್ರಮದಲ್ಲಿ 30ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದು, 33ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಜಂಟಿ ಅವಾಮಿ ಆಕ್ಷನ್ ಸಮಿತಿಯ ಕೇಂದ್ರ ಸಮಿತಿಯ ಸದಸ್ಯ ಉಮರ್ ನಜೀರ್ ಅವರ ಸಹೋದರ ಉಸ್ಮಾನ್ ನಜೀರ್ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿಭಟನೆಗೆ ಕಾರಣವೇನು?
ಕಳೆದ ಕೆಲವು ವಾರಗಳಿಂದ ಪಿಒಕೆಯಲ್ಲಿ ಜೀವನೋಪಾಯ ವೆಚ್ಚ ಏರಿಕೆ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಆಡಳಿತದ ನಿರ್ಲಕ್ಷ್ಯ, ರಾಜಕೀಯ ತಾರತಮ್ಯ ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಸಾವಿರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ವೇಳೆ ರಷ್ಯಾದಲ್ಲಿದ್ದರೂ ಬಿಹಾರದ ಯುವಕನ ಹೆಸರಲ್ಲಿ ಪ್ರಕರಣ: ಪೊಲೀಸರಿಂದ ನಡೆಯಿತಾ ಯಡವಟ್ಟು?
ಜಂಟಿ ಅವಾಮಿ ಆಕ್ಷನ್ ಸಮಿತಿಯ ನೇತೃತ್ವದಲ್ಲಿ ರಾವಲಕೋಟ್ನಿಂದ ಮುಜಾಫರಾಬಾದ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿತ್ತು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಬಲಪ್ರಯೋಗ ನಡೆಸಿದ ಪರಿಣಾಮ ಹಿಂಸಾಚಾರ ಭುಗಿಲೆದ್ದಿದೆ ಎಂದು ವರದಿಯಾಗಿದೆ.
ಭಾರತದ ನಿಲುವು
ಭಾರತದ ಪ್ರಕಾರ, ಪಿಒಕೆಯಲ್ಲಿ ನಡೆಯುತ್ತಿರುವ ಚುನಾವಣೆಗಳು ಪಾಕಿಸ್ತಾನದ ಅಕ್ರಮ ಆಕ್ರಮಣವನ್ನು ಮರೆಮಾಚುವ ಪ್ರಯತ್ನವಾಗಿದೆ. ಅಲ್ಲದೆ, ಅಲ್ಲಿನ ಜನರ ಮೇಲೆ ನಡೆಯುತ್ತಿರುವ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಮರೆಮಾಚಲು ಇಂತಹ ಚುನಾವಣೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಭಾರತ ಆರೋಪಿಸಿದೆ.
ಇತ್ತೀಚೆಗೆ ಭಾರತವು, ಪಿಒಕೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಪಾಕಿಸ್ತಾನದ ದಶಕಗಳ ಕಾಲದ ಶೋಷಣೆ, ಆಡಳಿತಾತ್ಮಕ ದಮನ ಹಾಗೂ ಜನರ ಹಕ್ಕುಗಳ ನಿರಂತರ ನಿರ್ಲಕ್ಷ್ಯದ ಪರಿಣಾಮ ಎಂದು ಹೇಳಿತ್ತು.
ಭಾರತವು ಮತ್ತೊಮ್ಮೆ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಸಂಪೂರ್ಣವಾಗಿ ಭಾರತದ ಅವಿಭಾಜ್ಯ ಅಂಗಗಳಾಗಿದ್ದು, ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಪ್ರದೇಶಗಳ ಮೇಲೂ ಭಾರತಕ್ಕೆ ಹಕ್ಕು ಇದೆ ಎಂಬ ತನ್ನ ನಿಲುವನ್ನು ಪುನರುಚ್ಚರಿಸಿದೆ.ಲೋಕಸಭಾ