ವರ್ಷದ ಬಳಿಕ ಮಣಿಪುರದಲ್ಲಿ ರಚನೆಯಾಯ್ತು ಸರ್ಕಾರ; ಮುಖ್ಯಮಂತ್ರಿಯಾಗಿ ಯುನ್ಮಮ್ ಖೇಮ್ಚಂದ್ ಸಿಂಗ್ ಪ್ರಮಾಣ ವಚನ
Government in Manipur: ವರ್ಷದ ರಾಷ್ಟ್ರಪತಿ ಆಡಳಿತದ ಬಳಿಕ ಮಣಿಪುರದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು, ಮುಖ್ಯಮಂತ್ರಿಯಾಗಿ ಯುನ್ಮಮ್ ಖೇಮ್ಚಂದ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಿದರು. ಈ ಮೊದಲು ಎನ್ಡಿಎ ಶಾಸಕಾಂಗ ಪಕ್ಷದ ನಾಯಕ ವೈ. ಖೇಮ್ಚಂದ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷೆ ಎ. ಶಾರದಾ ದೇವಿ ಹಾಗೂ ಪಕ್ಷದ ವೀಕ್ಷಕ ತರುಣ್ ಚುಗ್, ಸಂಬಿತ್ ಪಾತ್ರರ ಸಮ್ಮುಖದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಾಗಿತ್ತು.
ವೈ. ಖೇಮ್ಚಂದ್ ಸಿಂಗ್ (ಸಂಗ್ರಹ ಚಿತ್ರ) -
ಇಂಫಾಲ, ಫೆ. 4: ಎನ್ಡಿಎ ಶಾಸಕಾಂಗ ಪಕ್ಷದ ನಾಯಕ ಯುನ್ಮಮ್ ಖೇಮ್ಚಂದ್ ಸಿಂಗ್ (Y. Khemchand Singh) ಬುಧವಾರ (ಫೆಬ್ರವರಿ 4) ಮಣಿಪುರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯ ಬಿಜೆಪಿ ಮುಖ್ಯಸ್ಥೆ ಎ. ಶಾರದಾ ದೇವಿ ಅವರ ನೇತೃತ್ವದಲ್ಲಿ ಎನ್ಡಿಎ ತಂಡವು ಲೋಕಭವನದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿಯಾಗಿ, ಸರ್ಕಾರ ರಚಿಸುವ ಹಕ್ಕು ಮಂಡಿಸಿತ್ತು. ಅದರಂತೆ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನಿಸಿದ್ದರು. ಕಳೆದ ವರ್ಷ ಫೆಬ್ರವರಿಯಿಂದ ಮಣಿಪುರದಲ್ಲಿ (Manipur) ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು.
ಚುರಾಚಂದಪುರ ಮತ್ತು ಫೆರ್ಝಾವಲ್ ಎಂಬ ಕುಕಿ–ಜೋ ಬಹುಸಂಖ್ಯಾತ ಜಿಲ್ಲೆಗಳ ಇಬ್ಬರು ಶಾಸಕರು ರಾಜ್ಯಪಾಲರ ಭವನದಲ್ಲಿ ಭಲ್ಲಾ ಅವರನ್ನು ಭೇಟಿಯಾದ ಪ್ರತಿನಿಧಿಗಳಲ್ಲಿ ಸೇರಿದ್ದಾರೆ. ʼʼಹೊಸದಾಗಿ ಆಯ್ಕೆಯಾದ ಶಾಸಕಾಂಗ ಪಕ್ಷದ ನಾಯಕ ಖೇಮ್ಚಂದ್ ಮತ್ತು ಬಿಜೆಪಿಯ ತರುಣ್ ಚುಗ್ ಅವರ ಸಮ್ಮುಖದಲ್ಲಿ ನಾವು ರಾಜ್ಯಪಾಲರನ್ನು ಭೇಟಿಯಾದೆವು. ರಾಜ್ಯದಲ್ಲಿ ಜನಪ್ರಿಯ ಸರ್ಕಾರ ರಚಿಸಲು ಎನ್ಡಿಎ ಹಕ್ಕು ಮಂಡಿಸಿತುʼʼ ಎಂದು ಶಾರದಾ ದೇವಿ ತಿಳಿಸಿದರು.
ಮಣಿಪುರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಖೇಮ್ಚಂದ್:
#WATCH | Imphal: BJP Manipur Legislature Party leader Yumnam Khemchand Singh takes oath as the Chief Minister of Manipur
— ANI (@ANI) February 4, 2026
Governor of Manipur Ajay Bhalla administers the oath at the Lok Bhavan. pic.twitter.com/Ri1Et4J0Oa
ʼʼಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಜಿ ಮತ್ತು ಬಿಜೆಪಿ ಈಶಾನ್ಯ ಸಂಯೋಜಕ ಸಂಬಿತ್ ಪಾತ್ರ ಅವರ ಸಮ್ಮುಖದಲ್ಲಿ ನವದೆಹಲಿಯಿಂದ ಆಗಮಿಸಿದ ನಂತರ ಲೋಕ ಭವನದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರ ಮುಂದೆ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಂತೋಷವಾಗಿದೆʼʼ ಎಂದು ಖೇಮ್ಚಂದ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಣಿಪುರದ ಬಿಜೆಪಿ ಶಾಸಕಾಂಗ ಪಕ್ಷವು 62 ವರ್ಷದ ಸಿಂಗ್ ಅವರನ್ನು ತನ್ನ ನಾಯಕನನ್ನಾಗಿ ಆಯ್ಕೆ ಮಾಡಿದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ.
ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಅಂತ್ಯ; ಯುಮ್ನಮ್ ಖೇಮಚಂದ್ ಸಿಂಗ್ ನೂತನ ಸಿಎಂ
37 ಬಿಜೆಪಿ ಶಾಸಕರ ಪೈಕಿ 35 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಪಕ್ಷದ ಕೇಂದ್ರ ವೀಕ್ಷಕ ತರುಣ್ ಚುಗ್, ಈಶಾನ್ಯ ಉಸ್ತುವಾರಿ ಸಂಬಿತ್ ಪಾತ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷೆ ಎ. ಶಾರದಾ ದೇವಿ ಇತರರು ಭಾಗವಹಿಸಿದ್ದರು.
ಮಣಿಪುರದಲ್ಲಿ ಎಟಿ ನಾಯಕನ ಬಂಧನ ಖಂಡಿಸಿ ಉಗ್ರ ಪ್ರತಿಭಟನೆ; ಪೆಟ್ರೋಲ್ ಸುರಿದುಕೊಂಡು ಬೆಂಬಲಿಗರಿಂದ ಬೆದರಿಕೆ
ರಾಷ್ಟ್ರ ರಾಜಧಾನಿ ದೆಹಲಿಯ ಮಣಿಪುರ ಭವನದಲ್ಲಿ ಮತ್ತೊಂದು ಸಭೆ ನಡೆಯಿತು. ಅಲ್ಲಿ ಮಣಿಪುರದ ಎನ್ಡಿಎ ಘಟಕಗಳ ಶಾಸಕರು ರಾಷ್ಟ್ರೀಯ ಪೀಪಲ್ಸ್ ಪಾರ್ಟಿ (ಎನ್ಪಿಪಿ)ಯ ಆರು, ನಾಗಾ ಪೀಪಲ್ಸ್ ಫ್ರಂಟ್ (ಎನ್ಪಿಎಫ್)ನ ಐದು ಮತ್ತು ಮೂವರು ಸ್ವತಂತ್ರ ಶಾಸಕರು ಮತ್ತು ಬಿಜೆಪಿ ಶಾಸಕರು ಹಾಜರಿದ್ದರು. ಅವರು ಸಿಂಗ್ ಅವರನ್ನು ನಾಯಕರನ್ನಾಗಿ ಮತ್ತು ಕುಕಿ ಸಮುದಾಯಕ್ಕೆ ಸೇರಿದ ನೆಮ್ಚಾ ಕಿಪ್ಗೆನ್ ಅವರನ್ನು ಎನ್ಡಿಎ ಶಾಸಕಾಂಗ ಪಕ್ಷದ ಉಪ ನಾಯಕರನ್ನಾಗಿ ಅನುಮೋದಿಸಿದರು.
ಬುಧವಾರ ಸಂಜೆ ರಾಜ್ಯಪಾಲ ರಾಜಭವನದಲ್ಲಿ ಪ್ರಮಾನ ವಚನ ಬೋಧಿಸಿದರು. ʼʼವಿಕಸಿತ ಮಣಿಪುರದ ದೃಷ್ಟಿಕೋನದತ್ತ ಸಾಗುವ ರಾಜಕೀಯ ಪಯಣವು ಸವಾಲುಗಳಿಂದ ಕೂಡಿದೆ. ಆದರೆ, ಈ ಮಹತ್ವಾಕಾಂಕ್ಷಿ ಗುರಿಗಳನ್ನು ಸಾಧಿಸುವತ್ತ ನಮ್ಮ ಆದ್ಯತೆಗಳು ಸದಾ ಕೇಂದ್ರೀಕೃತವಾಗಿರುತ್ತವೆ. ನನ್ನ ಮೇಲೆ ಇಡಲಾದ ನಂಬಿಕೆ, ಜವಾಬ್ದಾರಿ ಮತ್ತು ಗೌರವಕ್ಕೆ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆʼʼ ಎಂದು ಖೇಮ್ಚಂದ್ ಹೇಳಿದ್ದಾರೆ.