1,000 ರುಪಾಯಿ ಕಾಣೆಯಾಗಿದ್ದಕ್ಕೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿ; ಸರ್ಕಾರಿ ಶಾಲೆಯಲ್ಲಿ ಅಮಾನವೀಯ ಘಟನೆ
Students punished over missing money: ಬಮನ್ವಾಸ್ ಉಪವಿಭಾಗದ ಲಿವಾಲಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆಯ ಆರೋಪಗಳು ಕೇಳಿ ಬಂದ ನಂತರ ಗ್ರಾಮಸ್ಥರು ಮತ್ತು ಪೋಷಕರು ಪ್ರತಿಭಟನೆ ನಡೆಸಿ, ಮುಖ್ಯ ದ್ವಾರಕ್ಕೆ ಬೀಗ ಹಾಕಿದರು. ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.
ಸಾಂದರ್ಭಿಕ ಚಿತ್ರ -
ಜೈಪುರ, ಜು. 16: ಶಾಲಾ ಶಿಕ್ಷಕಿಯೊಬ್ಬರ ಹಣ ಕಾಣೆಯಾಗಿದ್ದಕ್ಕೆ ಹುಟುಕಾಟ ಪ್ರಾರಂಭಿಸಿದ ಸಮಯದಲ್ಲಿ 9 ಮತ್ತು 11 ನೇ ತರಗತಿಯ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಲಾಗಿರುವ ಆಘಾತಕಾರಿ ಘಟನೆ ರಾಜಸ್ಥಾನದ (Rajasthan) ಸವಾಯಿ ಮಾಧೋಪುರದ ಸರ್ಕಾರಿ ಶಾಲೆಯಲ್ಲಿ (government school) ನಡೆದಿದೆ. ಈ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಮನ್ವಾಸ್ ಉಪವಿಭಾಗದ ಲಿವಾಲಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆಯ ಆರೋಪಗಳು ಕೇಳಿ ಬಂದ ನಂತರ ಗ್ರಾಮಸ್ಥರು ಮತ್ತು ಪೋಷಕರು ಪ್ರತಿಭಟನೆ ನಡೆಸಿ, ಮುಖ್ಯ ದ್ವಾರಕ್ಕೆ ಬೀಗ ಹಾಕಿದರು. ಮಂಗಳವಾರ (ಜು.14) ಈ ಘಟನೆ ನಡೆದಿದ್ದು, ಹಿಂದಿ ಶಿಕ್ಷಕಿ ಸರಸ್ವತಿ ಮೀನಾ ಅವರ ಸುಮಾರು 1,000 ರೂಪಾಯಿ ಕಾಣೆಯಾಗಿದೆ. 9 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ಅನುಮಾನಗೊಂಡ ಮೀನಾ ಅವರು ಹುಡುಕಾಟ ನಡೆಸಿದರು. ಈ ವೇಳೆ ಹುಡುಗಿಯರಿಂದ ಬಟ್ಟೆ ತೆಗೆಯುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಈ ವಿಷಯದ ಬಗ್ಗೆ ವಿಚಾರಣೆ ನಡೆಸಿದ ನಂತರ, ಶಿಕ್ಷಣ ಇಲಾಖೆಯು ಆರೋಪಿ ಶಿಕ್ಷಕಿಯನ್ನು ಅಮಾನತುಗೊಳಿಸಿದೆ ಮತ್ತು ಶಾಲಾ ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಪತ್ರ ಬರೆದಿದೆ. ಆದರೆ, ಆರೋಪಗಳನ್ನು ನಿರಾಕರಿಸಿದ ಶಿಕ್ಷಕಿ ಮೀನಾ, “ಸುಮಾರು 1,000 ರೂ. ಕಾಣೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಪ್ರಶ್ನಿಸಲಾಯಿತು. ಬಟ್ಟೆ ತೆಗೆಯುವಂತೆ ಒತ್ತಾಯಿಸಲಾಗಿದೆ ಎಂಬ ಆರೋಪಗಳು ಆಧಾರರಹಿತವಾಗಿವೆ. ಮಹಿಳಾ ಶಿಕ್ಷಕಿಯಾಗಿ, ವಿದ್ಯಾರ್ಥಿನಿಯರನ್ನು ಮಾತ್ರ ಪ್ರಶ್ನಿಸುವುದು ಸೂಕ್ತವೆಂದು ನಾನು ಪರಿಗಣಿಸಿದೆ” ಎಂದು ಹೇಳಿದರು.
ಶಾಲೆಯಲ್ಲಿ ತಮಿಳುನಾಡು ಸಿಎಂ ವಿಜಯ್ ಭಾಷಣ ನೇರಪ್ರಸಾರ: ಮುಖ್ಯ ಶಿಕ್ಷಕಿ ಅಮಾನತು
ಕಾಣೆಯಾದ ಹಣದ ಹುಡುಕಾಟದ ಸಮಯದಲ್ಲಿ ಹುಡುಗಿಯರನ್ನು ಬಟ್ಟೆ ತೆಗೆಯಲು ಕೇಳಲಾಯಿತು. ಇದರಿಂದ ಅವರಿಗೆ ಮಾನಸಿಕ ತೊಂದರೆ ಉಂಟಾಯಿತು ಎಂದು ವಿದ್ಯಾರ್ಥಿನಿಯರು ಮತ್ತು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಮನೆಗೆ ಹಿಂದಿರುಗಿದ ನಂತರ ವಿದ್ಯಾರ್ಥಿನಿಯರು ತಮ್ಮ ಕುಟುಂಬಗಳಿಗೆ ಮಾಹಿತಿ ನೀಡಿದ್ದು, ಗ್ರಾಮದಲ್ಲಿ ಆಕ್ರೋಶಕ್ಕೆ ಕಾರಣವಾಯಿತು.
ಬುಧವಾರ (ಜು.15) ಬೆಳಗ್ಗೆ, ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಮತ್ತು ಪೋಷಕರು ಶಾಲೆಯ ಮುಂದೆ ಜಮಾಯಿಸಿ, ಅದರ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಮುಖ್ಯ ಬ್ಲಾಕ್ ಶಿಕ್ಷಣ ಅಧಿಕಾರಿ (ಸಿಬಿಇಒ) ಪ್ರತಿಭಾ ಮೀನಾ ಕೂಡ ಸ್ಥಳಕ್ಕೆ ತಲುಪಿ, ವಿದ್ಯಾರ್ಥಿನಿಯರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದರು. ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೊದಲು ಘಟನೆಯ ವಿವರಗಳನ್ನು ಅವರು ಸಂಗ್ರಹಿಸಿದರು.
ಜಿಲ್ಲಾ ಶಿಕ್ಷಣಾಧಿಕಾರಿಗಳ ಕೇಂದ್ರ ಕಚೇರಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಆರೋಪಿ ಶಿಕ್ಷಕಿಯ ವಿರುದ್ಧ ಇಲಾಖಾ ವಿಚಾರಣೆ ಆರಂಭಿಸಲಾಗಿದೆ ಎಂದು ಭರತ್ಪುರ ವಿಭಾಗದ ಶಾಲಾ ಶಿಕ್ಷಣದ ಜಂಟಿ ನಿರ್ದೇಶಕ ದಲ್ವೀರ್ ಸಿಂಗ್ ತಿಳಿಸಿದ್ದಾರೆ.
1958ರ ರಾಜಸ್ಥಾನ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ನಿಯಮ 13ರ ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ ಎಂದು ಸಿಂಗ್ ಹೇಳಿದರು. ಅಮಾನತು ಅವಧಿಯಲ್ಲಿ, ಅವರ ಪ್ರಧಾನ ಕಚೇರಿಯನ್ನು ರಾಜಖೇರಾ (ಧೋಲ್ಪುರ) ದಲ್ಲಿರುವ ಸಿಬಿಇಒ ಕಚೇರಿಗೆ ಸ್ಥಳಾಂತರಿಸಲಾಗಿದೆ.