ಅಭಿಜಿತ್ ದೀಪ್ಕೆ ಮೈಮೇಲೆ ಮೇಲೆ ಶಾಯಿ ಎರಚಿದ ಮಹಿಳೆ: ʼʼನೀಲಿ ನನ್ನ ಬಣ್ಣ, ಜೈ ಭೀಮ್ʼʼ ಎಂದ ಸಿಜೆಪಿ ಸಂಸ್ಥಾಪಕ
Woman throws ink at Abhijit Dipke: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ ಘಟನೆ ದೆಹಲಿಯಲ್ಲಿ ನಡೆದಿದೆ. 21 ದಿನಗಳ ಉಪಾವಾಸ ಸತ್ಯಾಗ್ರಹದ ನಂತರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.
ಅಭಿಜಿತ್ ದಿಪ್ಕೆ ಮೇಲೆ ಶಾಯಿ ಎರಚಿದ ಮಹಿಳೆ -
ದೆಹಲಿ, ಜು. 18: ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijit Dipke) ಅವರ ಮೇಲೆ ಮಹಿಳೆಯೊಬ್ಬರು ಶಾಯಿ ಎರಚಿದ ಘಟನೆ ಭಾರಿ ಸಂಚಲನ ಮೂಡಿಸಿದೆ. 21 ದಿನಗಳ ಉಪವಾಸ ಸತ್ಯಾಗ್ರಹದ ನಂತರ ಕಾರ್ಯಕರ್ತ ಸೋನಮ್ ವಾಂಗ್ಚುಕ್ (Sonam Wangchuk) ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ ಕೆಲವೇ ಗಂಟೆಗಳ ನಂತರ ನಡೆದ ಈ ಘಟನೆಯು ಪ್ರತಿಭಟನಾ ಸ್ಥಳದಲ್ಲಿ ಗೊಂದಲಕ್ಕೆ ಕಾರಣವಾಯಿತು.
ಸಾಮಾಜಿಕ ಮಾಧ್ಯಮದಲ್ಲಿ ದಿಪ್ಕೆ ಹಂಚಿಕೊಂಡಿರುವ ವಿಡಿಯೊದಲ್ಲಿ ಅವರು ಸಭೆಯೊಂದರಲ್ಲಿ ಮಾತನಾಡುತ್ತಿರುವುದನ್ನು ತೋರಿಸಲಾಗಿದೆ. ಆ ವಿಡಿಯೊದಲ್ಲಿ ಅವರ ಬಲಭಾಗದಲ್ಲಿ ನಿಂತಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಅವರ ಮೇಲೆ ನೀಲಿ ಶಾಯಿ ಎರಚಿದರು. ಇದರಿಂದ ಹತ್ತಿರದಲ್ಲಿ ನಿಂತಿದ್ದ ಕೆಲವು ಜನರ ಉಡುಪಿನ ಮೇಲೂ ಶಾಯಿ ಚಿಮ್ಮಿತು.
ಈ ಘಟನೆಯು ಸ್ವಲ್ಪ ಸಮಯದವರೆಗೆ ಗದ್ದಲಕ್ಕೆ ಕಾರಣವಾಯಿತು. ದೀಪ್ಕೆಯು ಮಹಿಳೆಯ ಕಡೆಗೆ ಸನ್ನೆ ಮಾಡುತ್ತಾ ಹಿಂದೆ ಸರಿದರು. ಆದರೆ ಆ ಮಹಿಳೆ ಅವರ ಮೇಲೆ ಶಾಯಿ ಎಸೆಯಲು ಪ್ರಯತ್ನಿಸುತ್ತಲೇ ಇದ್ದರು. ಕೂಡಲೇ ಬೆಂಬಲಿಗರು ಮಧ್ಯ ಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸಿದರು. ಕೆಲವರು ಶಾಯಿಯನ್ನು ಹಿಡಿದಿದ್ದ ಮಹಿಳೆಯ ಕೈಯನ್ನು ಹಿಡಿದರು. ಇತರರು ಅವರನ್ನು ವೇದಿಕೆಯಿಂದ ದೂರ ಎಳೆದರು. ನಂತರ ಜನಸಮೂಹವು ಮಹಿಳೆಯನ್ನು ಹೊರಗೆ ಕರೆದುಕೊಂಡು ಹೋಯಿತು.
ಇಲ್ಲಿದೆ ವಿಡಿಯೊ:
🚨 A woman throws ink at CJP founder Dipke.pic.twitter.com/pccbA5rvU5
— Happy India 🇮🇳 (@happyindia_) July 18, 2026
ಎಕ್ಸ್ನಲ್ಲಿ ವಿಡಿಯೊ ಹಂಚಿಕೊಂಡ ದೀಪ್ಕೆ, “ನೀಲಿ ನನ್ನ ಬಣ್ಣ, ಜೈ ಭೀಮ್” ಎಂದು ಬರೆದಿದ್ದಾರೆ. ಮಹಿಳೆಯ ಗುರುತು ಮತ್ತು ಅವರ ಕೃತ್ಯದ ಉದ್ದೇಶ ತಿಳಿದುಬಂದಿಲ್ಲ. ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮೂರು ವಾರಗಳಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಸೋನಂ ವಾಂಗ್ಚುಕ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ
ಶನಿವಾರ (ಜುಲೈ18) ಬೆಳಗ್ಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ 21ನೇ ದಿನದಂದು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ಪ್ರತಿಭಟನಾ ಸ್ಥಳದಿಂದ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೈದ್ಯಕೀಯ ಸಲಹೆಯ ಮೇರೆಗೆ ಮತ್ತು ದೆಹಲಿ ಹೈಕೋರ್ಟ್ ಹೊರಡಿಸಿದ ನಿರ್ದೇಶನಗಳಿಗೆ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
59 ವರ್ಷದ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಕರೆತಂದ ನಂತರ ಬೆಳಗ್ಗೆ 7.40ಕ್ಕೆ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ. ಅವರು 20 ದಿನಗಳ ಕಾಲ ಘನ ಆಹಾರ ಸೇವಿಸದೆ ಉಪವಾಸವಿದ್ದರು. ಆಸ್ಪತ್ರೆಗೆ ಅಡ್ಮಿಟ್ ಆದ ಸಮಯದಲ್ಲಿ, ಅವರು ಪ್ರಜ್ಞೆ ಹೊಂದಿದ್ದರು. ಅವರ ನಾಡಿಮಿಡಿತ, ರಕ್ತದೊತ್ತಡ ಮತ್ತು ಉಸಿರಾಟ ಸ್ಥಿರವಾಗಿತ್ತು. ಆದರೆ ನಿರ್ಜಲೀಕರಣದ ಸಮಸ್ಯೆ ಎದುರಿಸುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ.
ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಕೂಡಲೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿರುವುದಾಗಿ ದೀಪ್ಕೆ ಘೋಷಿಸಿದರು. ಮೂವರು ಎಐಎಸ್ಎ ಕಾರ್ಯಕರ್ತರಾದ ನೇಹಾ, ಅಮೀನ್ ಮತ್ತು ಮನೀಶ್ ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ಮುಂದುವರಿಸಿದರು. ಪೊಲೀಸರು ಅವರನ್ನು ಹೊರಹೋಗುವಂತೆ ತಿಳಿಸಲು ಮುಂದಾದಾಗ ಪ್ರತಿಭಟನಾಕಾರರು ಅವರ ಸುತ್ತ ಮಾನವ ಸರಪಳಿಯನ್ನು ರಚಿಸಿದರು.