Readers Colony: ಜಗತ್ತು ವಿನಾಶದತ್ತ ..?!
ಬೆಂಗಳೂರಿನಲ್ಲಿ ಕಾಲ್ತುಳಿತಕ್ಕೆ ಕಾರಣವಾಗುವಷ್ಟು ಭಾರಿ ಸಂಖ್ಯೆಯ ಜನರನ್ನು ಸೇರಿಸುವಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವನ್ನೂ ಅಲ್ಲಗಳೆಯಲಾಗದು. ಅಹಮದಾಬಾದ್ ದುರಂತಕ್ಕೆ ವಿಮಾನದ ತಾಂತ್ರಿಕ ದೋಷ ಕಾರಣವಾಗಿರುವ ಸಾಧ್ಯತೆ ಇದೆ. ಇರಾನಿನ ಅಣು ಸೌಕರ್ಯಗಳನ್ನು ಗುರಿಯಾಗಿಟ್ಟುಕೊಂಡು ಇಸ್ರೇಲ್ ನಡೆಸಿರುವ ದಾಳಿಯು ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಯಾದೀತು.


ಓದುಗರ ಓಣಿ
ಬೆಂಗಳೂರಿನಲ್ಲಿ ಕಾಲ್ತುಳಿತಕ್ಕೆ ಕಾರಣವಾಗುವಷ್ಟು ಭಾರಿ ಸಂಖ್ಯೆಯ ಜನರನ್ನು ಸೇರಿಸುವಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವನ್ನೂ ಅಲ್ಲಗಳೆಯಲಾಗದು. ಅಹಮದಾಬಾದ್ ದುರಂತಕ್ಕೆ ವಿಮಾನದ ತಾಂತ್ರಿಕ ದೋಷ ಕಾರಣವಾಗಿರುವ ಸಾಧ್ಯತೆ ಇದೆ. ಇರಾನಿನ ಅಣು ಸೌಕರ್ಯಗಳನ್ನು ಗುರಿಯಾಗಿಟ್ಟುಕೊಂಡು ಇಸ್ರೇಲ್ ನಡೆಸಿರುವ ದಾಳಿಯು ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಯಾದೀತು.
ಇದನ್ನೆಲ್ಲ ಗಮನಿಸಿದರೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿಯುತ್ತ ಹೋದಂತೆ ಜಗತ್ತು ಇಷ್ಟಿಷ್ಟೇ ವಿನಾಶದೆಡೆಗೆ ಸಾಗುತ್ತಿದೆ ಎಂಬ ಆತಂಕ ಮೂಡುತ್ತದೆಯಲ್ಲವೇ? ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಭಾಯಿಸುವಲ್ಲಿ ಮತ್ತು ರೋಗ-ರುಜಿನಗಳನ್ನು ನಿವಾರಿಸುವಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಕೊಡುಗೆ ಅಪಾರ ಎಂಬುದನ್ನು ಒಪ್ಪುತ್ತಲೇ, ಜನಸಂಖ್ಯೆಯ ಹೆಚ್ಚಳ ಸ್ವಯಂಕೃತ ಎಂಬ ಸತ್ಯವನ್ನೂ, ರೋಗ- ರುಜಿನಗಳ ಹೆಚ್ಚಳದಲ್ಲಿ ವಿಜ್ಞಾನದ ಕೊಡುಗೆಯೂ ಇದೆ ಎಂಬ ವಾಸ್ತವವನ್ನೂ, ಮಾತ್ರವಲ್ಲ, ವಿಜ್ಞಾನ-ತಂತ್ರಜ್ಞಾನಗಳು ಮಾನಸಿಕ ಕ್ಷೋಭೆ-ಅಸ್ವಾಸ್ಥ್ಯಗಳನ್ನು ಹೆಚ್ಚಿಸುತ್ತಿವೆ ಎಂಬ ತಥ್ಯವನ್ನೂ, ಯಾಂತ್ರಿಕ ಬುದ್ಧಿಮತ್ತೆಯು ಮನುಷ್ಯನನ್ನು ಮಾನಸಿಕವಾಗಿ ತನ್ನ ಗುಲಾಮನನ್ನಾಗಿ ಪರಿವರ್ತಿಸತೊಡಗಿದೆ ಎಂಬ ನಿಜಸಂಗತಿಯನ್ನೂ ನಾವು ಒಪ್ಪಿಕೊಳ್ಳಬೇಕು ತಾನೆ? ಈ ಎಲ್ಲ ವಿಷಮ ಸ್ಥಿತಿಗಳೂ ಹೀಗೇ ಉಲ್ಬಣಿಸುತ್ತ ಸಾಗಿದಾಗ ಕೊನೆಗೆ ನಿವ್ವಳವಾಗಿ ಜಗತ್ತಿಗೆ ಸುಖ, ಭದ್ರತೆಗಳ ಬದಲು ಆತಂಕ, ಅಭದ್ರತೆ, ವಿನಾಶ ಇವುಗಳೇ ಲಭ್ಯ!
ಇದನ್ನೂ ಓದಿ: Vishwavani Editorial: ಇದು ಪ್ರಶಂಸಾರ್ಹ ಬೆಳವಣಿಗೆ
ಜೀವನವಿಡೀ ಪರಿಸರದೊಡನೆ ಒಂದಾಗಿ ಹೊಂದಿಕೊಂಡು ಬಾಳುತ್ತಿದ್ದ ತಥಾಕಥಿತ ಹಿಂದುಳಿದ ಮಾನವನ ಜೀವನವೇ ನೆಮ್ಮದಿದಾಯಕವೂ ಸುಖಕರವೂ ಆಗಿತ್ತೆಂದು ಈಗ ನಮಗೆ ಅನಿಸುತ್ತಿದೆ ಯಲ್ಲವೇ? ಯಂತ್ರಗಳ ದಾಸ್ಯಕ್ಕೆ ಒಳಪಡದ, ಆಧುನಿಕತೆಯ ಅನಿಷ್ಟಗಳನ್ನು ಹೊಂದಿರದ ಆದರ್ಶ-ಸುಖೀ ಸಮಾಜವಾಗಿ ಗಾಂಧೀಜಿ ಬಣ್ಣಿಸಿ ಪ್ರತಿಪಾದಿಸಿದ ‘ಹಿಂದ್ ಸ್ವರಾಜ್’ ಇಂದಿಗೂ, ಮುಂದೂ ಪ್ರಸ್ತುತವೆನಿಸುತ್ತಿಲ್ಲವೇ?
- ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
ಲಾಭ ಜನರಿಗೆ ಸಿಗಲಿ
ಸೂರ್ಯಕಾಂತಿ, ಸೋಯಾಬೀನ್ ಮತ್ತು ತಾಳೆ ಎಣ್ಣೆಗಳಂಥ ಸಂಸ್ಕರಿಸಿದ ಖಾದ್ಯತೈಲಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಇತ್ತೀಚೆಗೆ ಕೇಂದ್ರ ಸರಕಾರವು ಶೇ.20ರಿಂದ ಶೇ.10ಕ್ಕೆ ಇಳಿಸಿದೆ. ಇದರ ಪರಿಣಾಮವಾಗಿ ಖಾದ್ಯತೈಲಗಳ ಮಾರಾಟದ ಬೆಲೆ ಕಡಿಮೆ ಆಗಲೇಬೇಕು. ಒಂದು ಅಂದಾಜಿನ ಪ್ರಕಾರ, ಸಂಸ್ಕರಿಸಿದ ತಾಳೆ ಎಣ್ಣೆಯ ಬೆಲೆ ಲೀಟರ್ಗೆ 8-9 ರುಪಾಯಿಯಷ್ಟು, ಸೂರ್ಯಕಾಂತಿ ಮತ್ತು ಸೋಯಾಬೀನ್ ಎಣ್ಣೆಗಳ ಬೆಲೆ ಲೀಟರ್ಗೆ 12-15 ರುಪಾಯಿಯಷ್ಟು ಕಡಿಮೆಯಾಗ ಬಹುದು.
ದೇಶೀಯ ಸಂಸ್ಕರಣಾ ಉದ್ಯಮವನ್ನು ಉತ್ತೇಜಿಸುವಲ್ಲಿ, ಸ್ಥಳೀಯ ವ್ಯವಹಾರಗಳನ್ನು ಬೆಂಬಲಿಸು ವಲ್ಲಿ ಮತ್ತು ರೈತರಿಗೆ ನ್ಯಾಯಯುತ ಬೆಲೆಗಳನ್ನು ಖಚಿತಪಡಿಸುವಲ್ಲಿ ಈ ನೀತಿಯು ಪ್ರಯೋಜನ ಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದಾಗ್ಯೂ, ಈ ನೀತಿಯ ಪ್ರಯೋಜನಗಳು ಸಾಮಾನ್ಯ ಜನರನ್ನು ತಲುಪಬೇಕಾದರೆ, ಅದರ ಮೇಲ್ವಿಚಾರಣೆ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಸರಕಾರವು ಖಾತ್ರಿಪಡಿಸಿಕೊಳ್ಳಬೇಕು.
ಮಧ್ಯವರ್ತಿಗಳು ಅಥವಾ ಚಿಲ್ಲರೆ ವ್ಯಾಪಾರಿಗಳು ಇದರ ಪ್ರಯೋಜನಗಳನ್ನು ಬಳಸಿಕೊಳ್ಳದಂತೆ ತಡೆಯುವುದು ಬಹಳ ಮುಖ್ಯ. ಆದ್ದರಿಂದ, ಪಾರದರ್ಶಕ ಬೆಲೆ ನಿಗದಿ ಮತ್ತು ಕಟ್ಟುನಿಟ್ಟಾದ ಅನುಸರಣೆಯ ಮೇಲ್ವಿಚಾರಣೆ ಅತ್ಯಗತ್ಯ. ಖಾದ್ಯ ತೈಲಗಳ ಬೆಲೆ ಇಳಿಕೆಯ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಗ್ರಾಹಕ ವ್ಯವಹಾರಗಳ ಸಚಿವಾಲಯವು, ಖಾದ್ಯತೈಲ ಸಂಘಗಳು ಮತ್ತು ಉದ್ಯಮವನ್ನು ಆಗ್ರಹಿಸಿದರೆ ಒಳಿತು.
- ಡಾ. ವಿಜಯಕುಮಾರ್ ಎಚ್.ಕೆ., ರಾಯಚೂರು
ಸಂಕ್ಷಿಪ್ತ ಚಿತ್ರಣ
ಶಿಶಿರಕಾಲ’ ಅಂಕಣವು (ಜೂನ್ 13) ರಾಜಕಾರಣಿಗಳ ಹಗ್ಗಜಗ್ಗಾಟದ ಒಂದು ಸಂಕ್ಷಿಪ್ತ ಚಿತ್ರಣವನ್ನು ಕೊಟ್ಟಂ ತಿದೆ. ಒಮ್ಮೆ ರಾಜಕೀಯವನ್ನು ಪ್ರವೇಶಿಸಿದವರು, ಏನೇ ಆದರೂ, ಎಂಥದೇ ಪರಿಸ್ಥಿತಿ ಬಂದರೂ, ಇನ್ನೇನು ಯಮಧರ್ಮರಾಯ ಹಗ್ಗ ಹಿಡಿದು ನಿಂತಿದ್ದಾನೆ ಎನ್ನುವಾಗಲೂ ರಾಜಕಾರಣವನ್ನು ಮಾತ್ರ ಬಿಡಲೊಲ್ಲರು ಎಂಬುದು ಸತ್ಯ. ಇವರಿಗೆ ವಯಸ್ಸಿನ ಹಂಗೂ ಇರದು, ಯಾರು ಏನಂದುಕೊಂಡಾರು ಎಂಬ ಗೊಡವೆಯೂ ಇರದು. ರಾಜಕೀಯ/ ಅಧಿಕಾರದ ಸುತ್ತ ಸದಾ ಗಿರಕಿ ಹೊಡೆಯುತ್ತಿರುವುದು ಇವರ ಜಾಯಮಾನ.
ಒಮ್ಮೆ ‘ರಾಜಕಾರಣಿ’ ಎಂಬ ಹಣೆಪಟ್ಟಿ ಲಗತ್ತಿಸಿಕೊಂಡ ಮೇಲೆ ಅನುಯಾಯಿಗಳಿಗೇನೂ ಕೊರತೆಯಾಗದು, ಸದಾ ಜನಜಂಗುಳಿ. ಅವರು ಜೈಕಾರ ಕೂಗಿದ್ದು, ಇವರು ಹೇಳಿದ್ದು, ಮಾಡಿದ್ದು, ಮೂಸಿದ್ದು, ಉಂಡಿದ್ದು, ಬಿಟ್ಟಿದ್ದು ಎಲ್ಲವೂ ಸುದ್ದಿ! ಅಂಥವರ ‘ರದ್ದಿ’ಯೂ ಸುದ್ದಿಯ ಸರಕೇ! ಇದು ವಿಶ್ವದೆಲ್ಲೆಡೆಯ ಚಿತ್ರಣವಾದರೂ ನಮ್ಮ ದೇಶದಲ್ಲಿ ತುಸು ಜಾಸ್ತಿ.
‘ರಾಜಕಾರಣವೇ ಸರಿಯಿಲ್ಲ’ ಎನ್ನುತ್ತ, ಹೋದಲ್ಲಿ-ಬಂದಲ್ಲಿ-ಕುಳಿತಲ್ಲಿ ಅಷ್ಟೇಕೆ ನಿದ್ರೆಯಲ್ಲೂ ರಾಜಕೀಯದ ಕನಸನ್ನೇ ಕಾಣುತ್ತಿರುವವರು ನಮ್ಮ ರಾಜಕಾರಣಿಗಳು. ಅಧಿಕಾರದಲ್ಲಿದ್ದಾಗ ಇವರಿಗೆ ಎಷ್ಟು ಮಾನ್ಯತೆ ಇರುತ್ತದೋ, ಅದು ಕೈಬಿಟ್ಟ ಮೇಲೂ ‘ಮಾಜಿ’ ಹೆಸರಿನಲ್ಲಿ ಬಹುತೇಕ ಸೌಲಭ್ಯ ಗಳನ್ನು ಅನುಭವಿಸುತ್ತಾರೆ. ಎಲ್ಲಾದರೂ ಒಂದು ಚೂರು ಕಡಿಮೆಯಾದರೂ ಬಹುದೊಡ್ಡ ರಾದ್ಧಾಂತ ಮಾಡುತ್ತಾರೆ. ತಮಗೆ ಗನ್ಮ್ಯಾನ್ ಕೊಟ್ಟಿಲ್ಲವೆಂದು ಮಾಜಿ ಶಾಸಕರೊಬ್ಬರು ದೂರು ಕಳಿಸಿದ್ದು ಇದಕ್ಕೆ ತಾಜಾ ಉದಾಹರಣೆ. ಇಂಥ ಚಿತ್ರಣವನ್ನು ಕಂಡ ನಮ್ಮಂಥವರಿಗೆ ‘ಶಿಶಿರಕಾಲ’ ಅಂಕಣ ಬರಹವು ಕೊಂಚ ವಿಭಿನ್ನ ಅನುಭವವನ್ನು ನೀಡುತ್ತದೆ. ಕಾರಣ, ಅಂಕಣಕಾರ ಶಿಶಿರ್ ಹೆಗಡೆಯವರು ಅಮೆರಿಕದ ಮಾಜಿ ರಾಷ್ಟ್ರಪತಿಯವರ ಉದಾಹರಣೆಯನ್ನು ಕೊಟ್ಟು, ಅವರು ರಾಜಕೀಯದಿಂದ ನಿವೃತ್ತಿ ಹೊಂದಿ ತಮ್ಮ ಮೂಲನೆಲೆಗೆ ಹೋಗಿ ಸರಳ ಬದುಕು ಸಾಗಿಸಿದ ಪರಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಇದು ನಮ್ಮ ದೇಶದಲ್ಲಿ ಸಾಧ್ಯವೇ? ಅಧಿಕಾರಾವಧಿ ಮುಗಿದ ನಂತರವೂ ಸರಕಾರಿ ನಿವಾಸವನ್ನು ಖಾಲಿ ಮಾಡದೆ, ಹಲವು ಕಾರಣಗಳನ್ನು ನೀಡಿ ವರ್ಷಗಟ್ಟಲೆ ಅಲ್ಲೇ ಉಳಿದು, ನಂತರ ಒತ್ತಾಯಪೂರ್ವಕವಾಗಿ ಜಾಗವನ್ನು ಖಾಲಿಮಾಡಬೇಕಾಗಿ ಬಂದ ರಾಜಕಾರಣಿಗಳೂ ನಮ್ಮಲ್ಲಿದ್ದಾರೆ.
ನಮ್ಮ ‘ರಾಜಕಾರಣಿ’ ಎಂದರೆ, ಅದೇನೋ ವಿಶಿಷ್ಟ ಸ್ಥಾನವನ್ನು ಅಲಂಕರಿಸುವ ಹಕ್ಕುಳ್ಳವರು ಎಂಬ ಭಾವನೆ ಲಾಗಾಯ್ತಿನಿಂದಲೂ ಇದೆ. ಹೀಗಾಗಿ, ಇಂದು ರಾಜಕಾರಣದ ಪ್ರವೇಶಕ್ಕೆ ಎಲ್ಲಿಲ್ಲದ ನೂಕುನುಗ್ಗಲು! ಹೇಗಾದರೂ ಮಾಡಿ, ಗ್ರಾಮ ಪಂಚಾಯತಿ ಚುನಾವಣೆಯ ಲ್ಲಾದರೂ ಸ್ಪಽಸಿ ಗೆದ್ದು, ಸಾಮಾನ್ಯ ಸದಸ್ಯ ಎನಿಸಿಕೊಂಡು, ಮುಂದೆ ಒಂದೊಂದೇ ಮೆಟ್ಟಿಲು ಏರುತ್ತಾ ಶಾಸಕ, ಸಂಸದ, ಸಚಿವ ಎನಿಸಿಕೊಂಡವರ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟು ಸಿಗುತ್ತವೆ.
ಹಾಗಂತ ಈ ಕ್ಷೇತ್ರಕ್ಕೆ ಬರಲು ನಿಗದಿತ ಶಿಕ್ಷಣ, ವಿಶೇಷ ಪದವಿ, ಪ್ರಮಾಣ ಪತ್ರ ಇವ್ಯಾವುದೂ ಬೇಕಾಗಿಯೇ ಇಲ್ಲ; ‘ರಾಜಕೀಯ’ವನ್ನು ಮಾಡಲು ಬಂದರೆ ಸಾಕು. ಮುಂದಿನದೆಲ್ಲ ತನ್ನಿಂದ ತಾನೇ ಸಲೀಸಾಗಿ ನಡೆಯುತ್ತಿರುತ್ತದೆ!
- ಶಂಕರನಾರಾಯಣ ಭಟ್, ಮಾಡಗೇರಿ