Astro Tips: ಬುಧವಾರ ಈ ವಸ್ತುಗಳಲ್ಲಿ ಒಂದನ್ನು ಖರೀದಿಸಿದರೂ ಹೆಚ್ಚಾಗುತ್ತದೆ ಮನೆ ಸಂಪತ್ತು
ಬುಧವಾರವನ್ನು ಗಣೇಶನ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಗಣೇಶನ ಮೂರ್ತಿ, ಚಿನ್ನ, ಗುಲಾಬಿ ಹೂವು, ನವಿಲು ಗರಿ, ಹಳದಿ ವಸ್ತ್ರ ಮತ್ತು ಆಮೆಯ ಪ್ರತಿಮೆಗಳನ್ನು ಖರೀದಿಸಿದರೆ ಮನೆಗೆ ಶುಭ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ಬರುತ್ತದೆ ಎಂಬ ನಂಬಿಕೆ ಇದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಮೇ 13: ಹಿಂದೂ ಸಂಪ್ರದಾಯದಲ್ಲಿ (Hindu Traditions) ಪ್ರತಿಯೊಂದು ದಿನಕ್ಕೂ ವಿಶೇಷ ಮಹತ್ವ ನೀಡಲಾಗಿದೆ. ಕೆಲವು ದಿನಗಳನ್ನು ಶುಭವೆಂದು ಪರಿಗಣಿಸಿದರೆ, ಇನ್ನೂ ಕೆಲವು ದಿನಗಳಲ್ಲಿ ಪ್ರಮುಖ ಕಾರ್ಯಗಳನ್ನು ಮಾಡಬಾರದು ಎಂಬ ನಿಯಮ ಇದೆ. ಮನೆಗೆ ಹೊಸ ವಸ್ತುಗಳನ್ನು ತರಬೇಕಾದರೂ ವಾರ ಹಾಗೂ ದಿನಗಳನ್ನು ಗಮನಿಸುವ ಪದ್ಧತಿ ಅನೇಕ ಮನೆಗಳಲ್ಲಿ ಕಾಣಬಹುದು. ಮುಹೂರ್ತವನ್ನು ಪ್ರತಿಯೊಂದು ಖರೀದಿಗೂ ನೋಡಬೇಕೆಂದಿಲ್ಲದಿದ್ದರೂ, ಕೆಲವು ವಸ್ತುಗಳನ್ನು ನಿರ್ದಿಷ್ಟ ದಿನದಲ್ಲಿ ಖರೀದಿಸಿದರೆ ಅದರಿಂದ ಶುಭ ಫಲ ಸಿಗುತ್ತದೆ ಎನ್ನುವ ನಂಬಿಕೆ ಇದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಾರದ ಪ್ರತಿಯೊಂದು ದಿನವೂ ಒಂದೊಂದು ದೇವತೆಗೆ ಸಮರ್ಪಿತವಾಗಿದೆ. ಬುಧವಾರವನ್ನು ವಿಶೇಷವಾಗಿ ಶ್ರೀ ಗಣೇಶನ ದಿನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ದಿನ ಕೆಲವು ವಸ್ತುಗಳನ್ನು ಖರೀದಿಸಿದರೆ ಮನೆಗೆ ಶುಭ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ಬರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದ್ರೆ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ ಬುಧವಾರ ಯಾವ ವಸ್ತುಗಳನ್ನು ಮನೆಗೆ ತಂದ್ರೆ ಒಳ್ಳೆಯದಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಗಣೇಶನ ಮೂರ್ತಿ ಅಥವಾ ಫೋಟೋ
ಮನೆಗೆ ಗಣೇಶನ ಮೂರ್ತಿ ಅಥವಾ ಫೋಟೊ ತರಬೇಕೆಂದಿದ್ದರೆ ಬುಧವಾರ ಅತ್ಯುತ್ತಮ ದಿನವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಅಲಂಕಾರಗೊಂಡ ಗಣಪತಿಯ ಮೂರ್ತಿಯನ್ನು ಮನೆಗೆ ತಂದ ನಂತರ ಪೂಜೆ ಸಲ್ಲಿಸುವುದು ಶುಭಕರ. ಹಾಗೆಯೇ ಗಣೇಶನ ಚಿತ್ರವಿರುವ ಗಡಿಯಾರ ಅಥವಾ ಅಲಂಕಾರಿಕ ವಸ್ತುಗಳನ್ನು ಖರೀದಿಸುವುದೂ ಉತ್ತಮ ಎಂದು ನಂಬಲಾಗಿದೆ.
ಗುಲಾಬಿ ಹೂವು
ಬುಧವಾರ ಗುಲಾಬಿ ಹೂವು ಅಥವಾ ಅದರ ದಳಗಳನ್ನು ಖರೀದಿಸುವುದು ಶುಭ ಸಂಕೇತವೆಂದು ಹೇಳಲಾಗುತ್ತದೆ. ಈ ಹೂವನ್ನು ದೇವರಿಗೆ ಅರ್ಪಿಸುವುದು, ಮನೆಯಲ್ಲಿ ಅಲಂಕಾರಕ್ಕೆ ಬಳಸುವುದು ಅಥವಾ ಉಡುಗೊರೆಯಾಗಿ ನೀಡುವುದು ಸಂತೋಷ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ನಂಬಿಕೆ ಇದೆ.
ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬೇಸತ್ತಿದ್ದೀರಾ? ಹಾಗಾದ್ರೆ ಮಂಗಳವಾರ ಈ ಒಂದು ವಸ್ತು ದಾನ ಮಾಡಿ ಸಾಕು
ಚಿನ್ನದ ಖರೀದಿ
ಚಿನ್ನವನ್ನು ಖರೀದಿಸಲು ಬುಧವಾರವನ್ನು ಉತ್ತಮ ದಿನವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಬುಧವಾರ ಖರೀದಿಸಿದ ಚಿನ್ನವನ್ನು ಮೊದಲು ಗಣೇಶನ ಮುಂದೆ ಇಟ್ಟು ಪೂಜೆ ಮಾಡಿದರೆ ಧನಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
ನವಿಲು ಗರಿ
ನವಿಲು ಗರಿಯನ್ನು ಶುಭ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ನವಿಲು ಗರಿಯನ್ನು ಮನೆಗೆ ತರಬೇಕೆಂದಿದ್ದರೆ ಬುಧವಾರದ ದಿನವೇ ಆಯ್ಕೆ ಮಾಡುವುದು ಉತ್ತಮ.
ಹಳದಿ ಬಣ್ಣದ ವಸ್ತ್ರ
ಹಳದಿ ಬಣ್ಣವನ್ನು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬುಧವಾರ ಹಳದಿ ಬಣ್ಣದ ಬಟ್ಟೆಗಳನ್ನು ಖರೀದಿಸುವುದು ಅಥವಾ ಧರಿಸುವುದರಿಂದ ಗಣೇಶನ ಕೃಪೆ ದೊರೆಯುತ್ತದೆ ಎಂದು ನಂಬಲಾಗಿದೆ. ಈ ದಿನ ಹಳದಿ ವಸ್ತ್ರ ಧರಿಸಿ ಹೊರಗೆ ಹೋದರೆ ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ.
ಆಮೆಯ ಪ್ರತಿಮೆ
ಶಾಸ್ತ್ರದಲ್ಲಿ ಆಮೆಗೆ ವಿಶೇಷ ಸ್ಥಾನವಿದೆ. ಮನೆಯಲ್ಲಿ ಆಮೆಯ ಪ್ರತಿಮೆ ಅಥವಾ ಮೂರ್ತಿಯನ್ನು ಇಡುವುದರಿಂದ ಸುಖ, ಶಾಂತಿ ಮತ್ತು ಅಭಿವೃದ್ಧಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ವಿಷ್ಣುವಿನ ಅವತಾರಗಳಲ್ಲಿ ಒಂದಾಗಿ ಆಮೆಯನ್ನು ಪರಿಗಣಿಸುವ ಕಾರಣ, ಬುಧವಾರ ಇದನ್ನು ಮನೆಗೆ ತರುವುದು ವಿಶೇಷ ಶುಭವೆಂದು ನಂಬಲಾಗಿದೆ.