ಸೆ 22 ರಂದು ಜಪಾನ್ ಎದುರು ಟಿ20ಐ ಪಂದ್ಯವನ್ನು ಆಡಲಿರುವ ಟೀಮ್ ಇಂಡಿಯಾ!
ಏಷ್ಯಾ ಕ್ರೀಡಾಕೂಟದ ಆರಂಭಕ್ಕೆ ಇನ್ನು ಕೆಲವೇ ದಿನಗಳ ಬಾಕಿ ಇದೆ. ಸೆಪ್ಟೆಂಬರ್ 22ರಂದು ಭಾರತ ತಂಡ, ಜಪಾನ್ ವಿರುದ್ಧ ಟಿ20ಐ ಪಂದ್ಯದಲ್ಲಿ ಸೆಣಸಲಿದೆ. ತೊಚಿಗಿ ಪ್ರಿಫೆಕ್ಚರ್ನಲ್ಲಿ ನಡೆಯಲಿರುವ ಈ ಪಂದ್ಯ, ಭಾರತ-ಜಪಾನ್ ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷಾಚರಣೆಯ ಸ್ಮರಣಾರ್ಥವಾಗಿ ಆಯೋಜಿಸಲಾಗುತ್ತಿದೆ. ಈ ಪಂದ್ಯವು ಕ್ರಿಕೆಟ್ ಅನ್ನು ಹೊಸ ಭೌಗೋಳಿಕ ಪ್ರದೇಶಕ್ಕೆ ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಲಿದೆ.
ಜಪಾನ್ ವಿರುದ್ಧ ಮೊದಲ ಬಾರಿ ಟಿ20ಐ ಪಂದ್ಯವನ್ನು ಆಡಲಿರುವ ಭಾರತ. -
ನವದೆಹಲಿ: ಮುಂಬರುವ 2026ರ ಏಷ್ಯಾ ಕ್ರೀಡಾಕೂಟದ (Asian Games) ಕ್ರಿಕೆಟ್ ಅಭಿಯಾನ ಆರಂಭಿಸುವ ಕೆಲವೇ ದಿನಗಳ ಮುನ್ನ ಭಾರತ ತಂಡ, ಮೊದಲ ಬಾರಿ ಜಪಾನ್ ಪ್ರವಾಸ ಕೈಗೊಂಡು ಆತಿಥೇಯರ ವಿರುದ್ಧ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು (IND vs JAP) ಆಡಲಿದೆ. ಸೆಪ್ಟೆಂಬರ್ 22ರಂದು ನಡೆಯಲಿರುವ ಈ ಪಂದ್ಯ, ಕ್ರಿಕೆಟ್ನ ಅತಿದೊಡ್ಡ ಬಹು-ಕ್ರೀಡಾ ವೇದಿಕೆಯಾದ ಏಷ್ಯನ್ ಗೇಮ್ಸ್ಗೆ ಭಾರತದ ಸಿದ್ಧತೆಯ ಭಾಗವಾಗಲಿದೆ.
ತೊಚಿಗಿ ಪ್ರಿಫೆಕ್ಚರ್ನ ಸಾನೊ ಇಂಟರ್ನ್ಯಾಷನಲ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿರುವ ಈ ವಿಶೇಷ ಪಂದ್ಯ ಭಾರತ ಮತ್ತು ಜಪಾನ್ ನಡುವಿನ 75 ವರ್ಷಗಳ ರಾಜತಾಂತ್ರಿಕ ಸಂಬಂಧದ ಸಂಭ್ರಮಾಚರಣೆಯ ಉದ್ಘಾಟನಾ ಕಾರ್ಯಕ್ರಮವಾಗಲಿದೆ. ಉಭಯ ದೇಶಗಳ ನಡುವಿನ ಕ್ರೀಡಾ ಸಂಬಂಧ ಹಾಗೂ ಜನರ ನಡುವಿನ ಸಂಪರ್ಕವನ್ನು ಬಲಪಡಿಸುವ ಉದ್ದೇಶದ ‘ಸ್ಪೋರ್ಟ್ 75’ ಉಪಕ್ರಮದ ಭಾಗವಾಗಿಯೂ ಈ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಶುಕ್ರವಾರ (ಸೆಪ್ಟೆಂಬರ್ 4) ಖಚಿತಪಡಿಸಿದೆ.
ಜಪಾನ್ ಪ್ರಧಾನಿ ಸನಾಯೆ ತಕೈಚಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ಶೃಂಗಸಭೆಯಲ್ಲಿ ತಲುಪಿದ ಒಪ್ಪಂದದ ಬಳಿಕ ಈ ಪಂದ್ಯ ಆಯೋಜನೆಯಾಗಿದೆ. 2036ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸುವ ಭಾರತದ ಮಹತ್ವಾಕಾಂಕ್ಷೆಯನ್ನೂ ಈ ಉಪಕ್ರಮ ಪರಿಗಣಿಸಿದೆ.
ನಕಲಿ ಜನನ ಪ್ರಮಾಣ ಪತ್ರ: ಭಾರತ ಅಂಡರ್-19 ತಂಡದ ರೋಹಿತ್ ಯಾದವ್ಗೆ 2 ವರ್ಷ ನಿಷೇಧ!
ಭಾರತದ ಪಾಲಿಗೆ ಈ ಪಂದ್ಯ ಕುತೂಹಲಕಾರಿ ಸಮಯದಲ್ಲಿ ನಡೆಯಲಿದೆ. ಸೆಪ್ಟೆಂಬರ್ 19ರಂದು ಕ್ರಿಕೆಟ್ ಸ್ಪರ್ಧೆ ಆರಂಭವಾಗಲಿರುವ ನಾಗೋಯಾ ಏಷ್ಯನ್ ಗೇಮ್ಸ್ನಲ್ಲಿ ಭಾರತ ಪುರುಷರ ತಂಡ ನೇರವಾಗಿ ಕ್ವಾರ್ಟರ್ಫೈನಲ್ ಪ್ರವೇಶಿಸಲಿದೆ. ಮತ್ತೊಂದೆಡೆ, ಜಪಾನ್ ತಂಡ ಸೆಪ್ಟೆಂಬರ್ 24ರಂದು ನಿಸ್ಶಿನ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ಹೀಗಾಗಿ, ಭಾರತ ಏಷ್ಯನ್ ಗೇಮ್ಸ್ಗೆ ಪ್ರವೇಶಿಸಿದ ಬಳಿಕ ಮತ್ತು ಜಪಾನ್ ತನ್ನ ಅಭಿಯಾನ ಆರಂಭಿಸುವ ಮೊದಲು ಈ ಪಂದ್ಯ ನಡೆಯಲಿದೆ. ದ್ವಿಪಕ್ಷೀಯ ಸಂಬಂಧಗಳ ಸಂಭ್ರಮಾಚರಣೆಯೇ ಪಂದ್ಯದ ಪ್ರಮುಖ ಉದ್ದೇಶವಾಗಿದ್ದರೂ, ಈ ವೇಳಾಪಟ್ಟಿಯಿಂದ ಪಂದ್ಯಕ್ಕೆ ಹೆಚ್ಚುವರಿ ಸ್ಪರ್ಧಾತ್ಮಕ ಮಹತ್ವವೂ ದೊರೆತಿದೆ.
ʻನಿಮ್ಮ ನೆಚ್ಚಿನ ಆಟಗಾರರಿಗೆ ಚಾನ್ಸ್ ಕೊಟ್ಟಿದ್ದೀರಿʼ: ಗೌತಮ್ ಗಂಭೀರ್ ವಿರುದ್ಧ ಎಸ್ ಬದ್ರಿನಾಥ್ ಕಿಡಿ!
ವಿಶ್ವ ರ್ಯಾಂಕಿಂಗ್ನಲ್ಲಿ 41ನೇ ಸ್ಥಾನದಲ್ಲಿರುವ ಜಪಾನ್, ಹಾಲಿ ವಿಶ್ವ ಚಾಂಪಿಯನ್ ಭಾರತವನ್ನು ತನ್ನದೇ ತವರಿನಲ್ಲಿ ಎದುರಿಸುವ ಅಪರೂಪದ ಅವಕಾಶ ಪಡೆಯಲಿದೆ. ಭಾರತೀಯ ಕ್ರಿಕೆಟ್ಗೂ ಇದು ಮಹತ್ವದ ಹೆಜ್ಜೆಯಾಗಿದ್ದು, ಸಾಂಪ್ರದಾಯಿಕವಾಗಿ ಕ್ರಿಕೆಟ್ಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲದ ಪ್ರದೇಶದಲ್ಲಿ ಕ್ರೀಡೆಯನ್ನು ಮತ್ತಷ್ಟು ವಿಸ್ತರಿಸುವ ಪ್ರಯತ್ನಕ್ಕೆ ಇದು ಮತ್ತೊಂದು ಸೇರ್ಪಡೆಯಾಗಿದೆ.
‘ಐತಿಹಾಸಿಕ ಕ್ಷಣದ ಭಾಗವಾಗುತ್ತಿರುವುದಕ್ಕೆ ಬಿಸಿಸಿಐಗೆ ಸಂತಸ’: ದೇವಜಿತ್ ಸೈಕಿಯಾ
ಭಾರತ ಮತ್ತು ಜಪಾನ್ ನಡುವಿನ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ‘ಕ್ರಿಕೆಟ್ಗೆ ಮಹತ್ವದ ಕ್ಷಣ’ ಎಂದು ಬಿಸಿಸಿಐ ಗೌರವ ಕಾರ್ಯದರ್ಶಿ ದೇವಜಿತ್ ಸೈಕಿಯಾ ಬಣ್ಣಿಸಿದ್ದಾರೆ. ಕ್ರಿಕೆಟ್ನ ಸಾಂಪ್ರದಾಯಿಕ ಬಲಿಷ್ಠ ರಾಷ್ಟ್ರಗಳ ಹೊರತಾಗಿ ಮತ್ತೊಂದು ದೇಶಕ್ಕೆ ಭಾರತ ತನ್ನ ರಾಷ್ಟ್ರೀಯ ತಂಡವನ್ನು ಕೊಂಡೊಯ್ಯುತ್ತಿರುವುದು ವಿಶೇಷ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.
“ಭಾರತ ಮತ್ತು ಜಪಾನ್ ಪುರುಷರ ತಂಡಗಳು ಜಪಾನ್ನಲ್ಲಿ ನಡೆಯಲಿರುವ ವಿಶೇಷ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವ ಈ ಐತಿಹಾಸಿಕ ಸಂದರ್ಭದ ಭಾಗವಾಗುತ್ತಿರುವುದಕ್ಕೆ ಬಿಸಿಸಿಐಗೆ ಸಂತಸವಿದೆ. ಇದು ಕ್ರಿಕೆಟ್ಗೆ ಮಹತ್ವದ ಕ್ಷಣ. ಭಾರತ ತಂಡವನ್ನು ಹೊಸ ಭೂಪ್ರದೇಶಕ್ಕೆ ಕೊಂಡೊಯ್ಯುವುದರ ಜೊತೆಗೆ, ಜಪಾನ್ ಹಾಗೂ ಪೂರ್ವ ಏಷ್ಯಾದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ಕ್ರಿಕೆಟ್ನ್ನು ಪರಿಚಯಿಸುವ ಅವಕಾಶವನ್ನು ಈ ಪಂದ್ಯ ಒದಗಿಸುತ್ತದೆ,” ಎಂದು ದೇವಜಿತ್ ಸೈಕಿಯಾ ತಿಳಿಸಿದ್ದಾರೆ.