ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup 2026: ಚಾಂಪಿಯನ್ಸ್‌; ದಾಖಲೆಯ 3ನೇ ಟಿ20 ವಿಶ್ವಕಪ್‌ ಗೆದ್ದ ಭಾರತಕ್ಕೆ ನರೇಂದ್ರ ಮೋದಿ ಅಭಿನಂದನೆ; ಹರಿದುಬಂತು ಶುಭಾಶಯಗಳ ಮಹಾಪೂರ

Narendra Modi: ಸಂಜು ಸ್ಯಾಮ್ಸನ್‌ ಹಾಗೂ ಅಕ್ಷರ್‌ ಪಟೇಲ್‌ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರ ಸಹಾಯದಿಂದ ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 96 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಮೂರನೇ ಬಾರಿಗೆ ಚಾಂಪಿಯನ್‌ ಎನಿಸಿಕೊಂಡಿದೆ. ಇದೀಗ ಟೀಂ ಇಂಡಿಯಾಕ್ಕೆ ಪ್ರಧಾನಿ ಮೋದಿ ಸಹಿತ ಹಲವು ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಮೂರನೇ ಟಿ20 ವಿಶ್ವಕಪ್‌ ಗೆದ್ದ ಭಾರತಕ್ಕೆ ಮೋದಿ ಅಭಿನಂದನೆ

ಟಿಂ ಇಂಡಿಯಾ ಮತ್ತು ನರೇಂದ್ರ ಮೋದಿ -

Ramesh Ballamoole
Ramesh Ballamoole Mar 8, 2026 11:55 PM

ದೆಹಲಿ, ಮಾ. 8: ''ಚಾಂಪಿಯನ್ಸ್‌! ಐಸಿಸಿ ಮೆನ್ಸ್‌ ಟಿ20 ವಿಶ್ವಕಪ್‌ (T20 World Cup 2026) ವಿಜೇತ ಭಾರತ ತಂಡಕ್ಕೆ ಅಭಿನಂದನೆಗಳುʼʼ-ಮಾರ್ಚ್‌ 8ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಮೆನ್ಸ್‌ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಯ 3 ಬಾರಿಗೆ ಜಯ ಗಳಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ ರೀತಿ ಇದು. ನ್ಯೂಜಿಲೆಂಡ್‌ ವಿರುದ್ಧ ಟೀಮ್‌ ಇಂಡಿಯಾ 96 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಮೋದಿ, ಟೀಮ್‌ ವರ್ಕ್‌ನ ಫ್ರತಿಫಲವೇ ಈ ಭರ್ಜರಿ ಗೆಲುವು ಎಂದು ಬಣ್ಣಿಸಿದರು. ʼʼಈ ಗಮನಾರ್ಹ ಗೆಲುವು ಅಸಾಧಾರಣ ಕೌಶಲ್ಯ, ದೃಢ ನಿಶ್ಚಯ ಮತ್ತು ಟೀಂ ವರ್ಕ್‌ನ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ. ಆಟಗಾರರು ಪಂದ್ಯಾವಳಿಯಾದ್ಯಂತ ಅತ್ಯುತ್ತಮ ಪ್ರದರ್ಶನ ತೋರಿಸಿದ್ದಾರೆ. ಈ ಗೆಲುವಿಗೆ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂತಾಗಿದೆ. ವೆಲ್‌ಡನ್‌ ಟೀಮ್‌ ಇಂಡಿಯಾʼʼ ಎಂದು ಮೋದಿ ಹೇಳಿದ್ದಾರೆ.

ಮೋದಿ ಅವರ ಪೋಸ್ಟ್‌:



ಟೀಂ ಇಂಡಿಯಾ ಅಭಿನಂದಿಸಿದ ರಾಹುಲ್‌ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡ ಟೀಂ ಇಂಡಿಯಾಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ʼʼಮತ್ತೊಮ್ಮೆ ಚಾಂಪಿಯನ್‌. ಟೀಂ ಇಂಡಿಯಾ ಅಭೂತಪೂರ್ವ ಜಯ ಸಾಧಿಸಿದೆ. ಸಂಜು ಸ್ಯಾಮ್ಸನ್‌ ಮತ್ತು ಜಸ್‌ಪ್ರೀತ್‌ ಬೂಮ್ರಾ ಸರಣಿಯುದ್ದಕ್ಕೂ ಮಿಂಚು ಹರಿಸಿದ್ದಾರೆ. ಟೀಂ ಇಂಡಿಯಾಕ್ಕೆ ಅಭಿನಂದನೆಗಳು. ಸಂಭ್ರಮಾಚರಿಸಲು ದೇಶಕ್ಕೆ ಮತ್ತೊಂದು ಅವಕಾಶ ಸಿಕ್ಕಿದೆʼʼ ಎಂದು ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ಎಕ್ಸ್‌ ಪೋಸ್ಟ್‌:



ಸಂತಸ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಇನ್ನು ಮುಖ್ಯಮಂತ್ರಿ ಸಿದ್ದಮಯ್ಯ ಕೂಡ ವಿಶ್ವಕಪ್‌ ಸಂತಸ ವ್ಯಕ್ತಪಡಿಸಿದ್ದಾರೆ. ʼʼವಿಶ್ವ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಟಿ20 ವಿಶ್ವಕಪ್ ಪಂದ್ಯಾವಳಿಯ ಮೊದಲ ದಿನದಿಂದಲೇ ಚಾಂಪಿಯನ್ ಆಟವಾಡುತ್ತಾ ಬಂದಿದ್ದ ನಮ್ಮ ತಂಡ ಪ್ರಶಸ್ತಿಗೆ ಅತ್ಯಂತ ಅರ್ಹ ತಂಡವಾಗಿತ್ತು. ಯುವ ಆಟಗಾರರಿಂದಲೇ ತುಂಬಿದ್ದ ಈ ತಂಡ ಅನುಭವದಲ್ಲಿ ಕಡಿಮೆಯಿದ್ದರೂ, ಪ್ರತಿಭಾಶಾಲಿಗಳಿಂದ ಕೂಡಿತ್ತು. ತವರು ಪ್ರೇಕ್ಷಕರ ಬೆಂಬಲ, ಆಟಗಾರರ ಶ್ರಮ ಮತ್ತು ಕೋಟ್ಯಂತರ ಭಾರತೀಯರ ಹಾರೈಕೆ ವಿಶ್ವಕಪ್ ಕಿರೀಟವಾಗಿ ನಮ್ಮವರ ಮುಡಿ ಸೇರಿದೆʼʼ ಎಂದಿದ್ದಾರೆ.

ಸಂಜು ಸ್ಯಾಮ್ಸನ್‌ ಅಬ್ಬರ, ನ್ಯೂಜಿಲೆಂಡ್‌ಗೆ ಆಘಾತ ನೀಡಿ ಮೂರನೇ ಟಿ20 ವಿಶ್ವಕಪ್‌ ಗೆದ್ದ ಭಾರತ!

ʼʼಇಂದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್, ಅದ್ಭುತ ಬೌಲಿಂಗ್, ಅತ್ಯುತ್ತಮ ಕ್ಷೇತ್ರರಕ್ಷಣೆ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ತಂಡ ಶ್ರೇಷ್ಠ ಪ್ರದರ್ಶನ ತೋರಿದೆ. ಉತ್ತಮ ಪ್ರದರ್ಶನ ನೀಡುತ್ತಾ ಫೈನಲ್ ಪಂದ್ಯದ ವರೆಗೆ ಬಂದಿರುವ ನ್ಯೂಜಿಲೆಂಡ್ ತಂಡದ ಸಾಧನೆ ಕೂಡ ಕಡಿಮೆಯೇನಲ್ಲ. ಅವರಿಗೂ ನನ್ನ ಅಭಿನಂದನೆಗಳುʼʼ ಎಂದು ತಿಳಿಸಿದ್ದಾರೆ.

ಮುಂದುವರಿದು, ʼʼಕ್ರಿಕೆಟ್‌ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆ ಮತ್ತೆ ಮುಗಿಲೆತ್ತರದಲ್ಲಿ ರಾರಾಜಿಸುತ್ತಿದೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ದಿನʼʼ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಪೋಸ್ಟ್‌:



ಇವರೊಂದಿಗೆ ವಿವಿಧ ಕ್ಷೇತ್ರಗಳ ಹಲವು ಗಣ್ಯರು ಟೀಂ ಇಂಡಿಯಾದ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ದಾಖಲೆಯ 3ನೇ ಬಾರಿಗೆ ಚಾಂಪಿಯನ್‌ ಆದ ಭಾರತ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.