IPL 2026 Tickets: ಈಡೇರಿದ ಶಾಸಕರ ಬೇಡಿಕೆ; ಪ್ರತಿ ಐಪಿಎಲ್ ಪಂದ್ಯಕ್ಕೂ ಸಿಗುತ್ತೆ 3 ಟಿಕೆಟ್!
ಶಾಸಕರಿಗೆ ಐಪಿಎಲ್ ಪಂದ್ಯಗಳಿಗ ತಲಾ 3 ಟಿಕೆಟ್ ಸಿಗಲಿದೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ 2 ಟಿಕೆಟ್ ಜತೆಗೆ ಹೆಚ್ಚುವರಿ 2 ಟಿಕೆಟ್ ಖರೀದಿಗೆ ಅವಕಾಶ ಇರುತ್ತದೆ. ಇನ್ನು ಕೆಎಸ್ಸಿಎ ವ್ಯವಹಾರಗಳಲ್ಲಿ ಅತಿಯಾದ ಹಸ್ತಕ್ಷೇಪ ಮಾಡಲ್ಲ ಎಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಕ್ರೀಡಾಂಗಣದಲ್ಲಿ ಆಸನ ಸಂಖ್ಯೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆಎಸ್ಸಿಎಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಆರ್ಸಿಬಿ ಜೆರ್ಸಿ ಕೊಡುಗೆ ನೀಡಿದ ಕೆಎಸ್ಸಿಎ ಪದಾಧಿಕಾರಿಗಳು. -
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯಗಳ ಟಿಕೆಟ್ಗಾಗಿ (IPL 2026 Tickets) ಬೇಡಿಕೆ ಇಟ್ಟಿದ್ದ ಶಾಸಕರಿಗೆ ಸಿಹಿಸುದ್ದಿ ಸಿಕ್ಕಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೆಎಸ್ಸಿಎ ಪದಾಧಿಕಾರಿಗಳು, ಆರ್ಸಿಬಿ ಹಾಗೂ ಡಿಎನ್ಎ ಸಂಸ್ಥೆಯ ಪ್ರತಿನಿಧಿಗಳ ಜತೆ ಸೋಮವಾರ ಮಹತ್ವದ ಸಭೆ ನಡೆಸಿದ್ದು, ಪ್ರತಿ ಶಾಸಕರಿಗೆ ತಲಾ ಮೂರು ಟಿಕೆಟ್ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಒಪ್ಪಿಗೆ ನೀಡಿದೆ.
ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ತಲಾ 5 ಟಿಕೆಟ್ ನೀಡಬೇಕು ಎಂಬ ಬೇಡಿಕೆಯನ್ನು ಸದನದಲ್ಲಿ ಶಾಸಕರು ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಭೆ ನಡೆಸಿದ್ದಾರೆ. ಈ ಮೊದಲು ಒಬ್ಬ ಶಾಸಕರಿಗೆ ಎರಡು ಟಿಕೆಟ್ ನೀಡಲು ನಿರ್ಧರಿಸಲಾಗಿತ್ತು. ಆದರೆ ಇಂದಿನ ಸಭೆಯ ಚರ್ಚೆಯ ಬಳಿಕ ಮತ್ತೊಂದು ಟಿಕೆಟ್ ಹೆಚ್ಚಳ ಮಾಡಲಾಗಿದ್ದು, ಅಂತಿಮವಾಗಿ ಮೂರು ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ.
ಐಪಿಎಲ್ ಪಂದ್ಯಕ್ಕೆ 3, ಅಂತಾರಾಷ್ಟ್ರೀಯ ಮ್ಯಾಚ್ಗೆ 2 ಟಿಕೆಟ್
ಈ ಬಗ್ಗೆ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು. ಶಾಸಕರಿಗೆ ಐಪಿಎಲ್ ಪಂದ್ಯಗಳ 3 ಟಿಕೆಟ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2 ಟಿಕೆಟ್ ಉಚಿತವಾಗಿ ನೀಡಲು ಒಪ್ಪಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2 ಹೆಚ್ಚುವರಿ ಟಿಕೆಟ್ ಅನ್ನು ಖರೀದಿಸಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
Held a meeting with representatives from the Karnataka State Cricket Association, including President Shri Venkatesh Prasad, DNA Entertainment Networks MD Shri Venkat, Chief Communication Officer Shri Vinay Mruthyunjay, and Royal Challengers Bengaluru CEO Shri Rajesh Menon at my… pic.twitter.com/gzDxL9akUi
— DK Shivakumar (@DKShivakumar) March 30, 2026
IPL 2026 Tickets: ಶಾಸಕರು ಐಪಿಎಲ್ ಉಚಿತ ಟಿಕೆಟ್ ಕೇಳುವುದು ತಪ್ಪು: ಡಿ.ಕೆ. ಸುರೇಶ್ ಅಸಮಾಧಾನ
ಆಸಕ್ತಿ ಇಲ್ಲದಿದ್ದರೆ ಟಿಕೆಟ್ ನೀಡುವುದಿಲ್ಲ
ಕೆಎಸ್ಸಿಎ ಪದಾಧಿಕಾರಿಗಳು, ಆರ್ಸಿಬಿ ಹಾಗೂ ಡಿಎನ್ಎ ಸಂಸ್ಥೆಯ ಪ್ರತಿನಿಧಿಗಳ ಜತೆಗಿನ ಸಭೆ ಬಗ್ಗೆ ಕೇಳಿದಾಗ, ಶಾಸಕರಿಗೆ ಕ್ರಿಕೆಟ್ ಪಂದ್ಯಗಳ ಟಿಕೆಟ್ ವಿತರಣೆ ಕುರಿತು ಇಂದು ನಾನು ಚರ್ಚೆ ಮಾಡಿದೆ. ಕಳೆದ ವಾರ ಮೊದಲ ಪಂದ್ಯದ ಟಿಕೆಟ್ ಮಾರಾಟವಾಗಿದ್ದ ಹಿನ್ನೆಲೆಯಲ್ಲಿ 2 ಟಿಕೆಟ್ ನೀಡಲು ಒಪ್ಪಿದ್ದರು. ಇಂದು ಮತ್ತೆ ಸಭೆ ಮಾಡಿದ್ದೇವೆ. ಕ್ರಿಕೆಟ್ ಸಂಸ್ಥೆಯವರು ಅನೇಕ ಒಪ್ಪಂದಗಳನ್ನು ಮಾಡಿಕೊಂಡಿರುತ್ತಾರೆ. ಹೀಗಾಗಿ ಈ ತೀರ್ಮಾನಕ್ಕೆ ಬರಲಾಗಿದೆ. ಇದರೊಂದಿಗೆ ಈ ವಿಚಾರ ಇಲ್ಲಿಗೆ ಅಂತ್ಯಗೊಳಿಸಲಾಗುತ್ತಿದೆ. ಯಾರಿಗಾದರೂ ಐಪಿಎಲ್ ಟಿಕೆಟ್ ಬಗ್ಗೆ ಆಸಕ್ತಿ ಇಲ್ಲವಾದರೆ, ಅವರು ಈ ಬಗ್ಗೆ ನಮಗೆ ಲಿಖಿತ ರೂಪದಲ್ಲಿ ನೀಡಲಿ, ನಾವು ಅವರಿಗೆ ಟಿಕೆಟ್ ನೀಡುವುದಿಲ್ಲ. ಇಲ್ಲಿ ಯಾರಿಗೂ ಬಲವಂತವಿಲ್ಲ ಎಂದು ಡಿಸಿಎಂ ಹೇಳಿದರು.
ಶಾಸಕರು ಹೆಚ್ಚಿನ ಟಿಕೆಟ್ಗಳಿಗೆ ಬೇಡಿಕೆ ಇಟ್ಟಿದ್ದ ಬಗ್ಗೆ ಕೇಳಿದಾಗ, ಅನೇಕ ಬೇಡಿಕೆಗಳು ಬರುತ್ತವೆ. ಎಲ್ಲವನ್ನು ಈಡೇರಿಸಲು ಆಗುವುದಿಲ್ಲ. ಅವರ ಬೇಡಿಕೆಗಳ ಆಧಾರದ ಮೇಲೆ ಚರ್ಚೆ ಮಾಡಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಈ ತೀರ್ಮಾನ ಮಾಡಲಾಗಿದೆ. ನಾನು ರಾಜಸ್ಥಾನ, ಮುಂಬೈ, ದೆಹಲಿ, ಕೊಲ್ಕತ್ತಾ ಹಾಗೂ ಗುಜರಾತ್ ಅಧಿಕಾರಿಗಳ ಜತೆಗೂ ಚರ್ಚೆ ಮಾಡಿದ್ದು, ಸುಮಾರು 50-60% ಟಿಕೆಟ್ಗಳನ್ನು ಸರ್ಕಾರಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ವರ್ಗದವರಿಗೆ ವಿತರಣೆ ಮಾಡಲಾಗುತ್ತಿದೆ. ಅವರಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಹಸ್ತಕ್ಷೇಪ ಕಡಿಮೆ ಇದೆ ಎಂದರು.
ಕ್ರೀಡಾಂಗಣದಲ್ಲಿ ಆಸನ ಸಂಖ್ಯೆ ಹೆಚ್ಚಳ
ಇನ್ನು ಚಿನ್ನಸ್ವಾಮಿ ಕ್ರಿಡಾಂಗಣದ ಬಗ್ಗೆಯೂ ಚರ್ಚೆ ಮಾಡಲಾಗಿದ್ದು, ಯಾವ ರೀತಿ ಆಸನಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಮಾತನಾಡಿದ್ದೇವೆ. ಬೇರೆ ಕಡೆ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಗುರುತಿಸಲು ಜಿಬಿಎ ಆಯುಕ್ತರ ಜತೆ ಚರ್ಚೆ ಮಾಡಲಾಗಿದೆ. ಈ ಕುರಿತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದ್ದೇವೆ. ಅವರು ಪ್ರಸ್ತಾವನೆ ಸಲ್ಲಿಸಿದ ಬಳಿಕ ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಿ ಅಗತ್ಯ ಅನುಮತಿ ನೀಡಲಾಗುವುದು. 20 ಸಾವಿರ ಆಸನಗಳ ಸಂಖ್ಯೆ ಹೆಚ್ಚಳ ಮಾಡಿದರೆ ಜನರಿಗೂ ಅನುಕೂಲವಾಗಲಿದೆ” ಎಂದು ತಿಳಿಸಿದರು.
ಕೆಎಸ್ಸಿಎ ವ್ಯವಹಾರಗಳಲ್ಲಿ ಅತಿಯಾದ ಹಸ್ತಕ್ಷೇಪ ಮಾಡಲ್ಲ
ಐಪಿಎಲ್ ಪಂದ್ಯಾವಳಿಯಲ್ಲಿ ಶಾಸಕರು ಹಾಗೂ ಸಚಿವರಿಗೆ ಪ್ರತ್ಯೇಕ ಗ್ಯಾಲರಿ ಮಾಡಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, ನಾನು ಆ ವಿಚಾರಕ್ಕೆಲ್ಲಾ ಹೋಗುವುದಿಲ್ಲ. ಅದು ಕೆಎಸ್ಸಿಎ ಪದಾಧಿಕಾರಿಗಳಿಗೆ ಬಿಟ್ಟ ವಿಚಾರ. ಅವರ ವ್ಯವಹಾರಗಳಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುವುದಿಲ್ಲ. ನಾವು ಶಾಸಕರು, ಸಂಸದರಾಗಿರಬಹುದು. ಶಾಸಕರಿಂದ ಟಿಕೆಟ್ ಮನವಿ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಉಳಿದಂತೆ ಬೇರೆ ವಿಚಾರದಲ್ಲಿ ನಾನು ಹೋಗುವುದಿಲ್ಲ ಎಂದು ತಿಳಿಸಿದರು.
ಈಗಾಗಲೇ ಸರ್ಕಾರ ಕ್ರೀಡಾಂಗಣ ನಿರ್ಮಾಣ ಮಾಡಲು ಮುಂದಾಗಿದ್ದು, ಕೆಎಸ್ಸಿಎಗೂ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ನೀಡಲಾಗುವುದೇ ಎಂದು ಕೇಳಿದಾಗ, ನಾವು ಈಗಾಗಲೇ ಕೆಎಸ್ಸಿಎ ಅವರಿಗೆ 25 ಎಕರೆ ಜಾಗ ನೀಡಿದ್ದೇವೆ, ತುಮಕೂರು, ಮೈಸೂರಿನಲ್ಲಿ ಜಾಗ ನೀಡಿದ್ದೇವೆ. ಬೆಂಗಳೂರಿನಲ್ಲಿ ಕೆಎಚ್ಬಿ ವತಿಯಿಂದಲೂ ಕ್ರೀಡಾಂಗಣ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸೂರ್ಯನಗರದಲ್ಲಿ ನಿರ್ಮಾಣ ಮಾಡುತ್ತಿರುವುದು ಎಲ್ಲರಿಗೂ ಅನುಕೂಲವಾಗಲಿ ಎಂದು ಎಲ್ಲಾ ಕ್ರೀಡೆಗಳಿಗೆ ಪ್ರಯೋಜನವಾಗುವಂತೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಾಳೆಯಿಂದ ಉಪಚುನಾವಣೆ ಪ್ರಚಾರದಲ್ಲಿ ಭಾಗಿ
ಉಪಚುನಾವಣೆ ಪ್ರಚಾರದ ಬಗ್ಗೆ ಕೇಳಿದಾಗ, ಹೋಗಲೇಬಕಲ್ಲವೇ, ಇಂದೇ ಹೋಗಬೇಕಿತ್ತು. ಮುಖ್ಯಮಂತ್ರಿಗಳು ಬಾಗಲಕೋಟೆಗೆ ತೆರಳಿದ್ದಾರೆ. ನಾನು ಹಾಗೂ ಸುರ್ಜೇವಾಲ ಅವರು ನಾಳೆ ದಾವಣಗೆರೆ ಹೋಗುತ್ತಿದ್ದು, ಕೆಲವು ಸಭೆಗಳಿವೆ. ನಾಡಿದ್ದು ಬಾಗಲಕೋಟೆಗೆ ತೆರಳಲಿದ್ದೇನೆ. ನಂತರ ಎರಡೂ ಕ್ಷೇತ್ರಗಳಿಗೆ ಮತ್ತೊಂದು ಸುತ್ತು ತೆರಳಿ ಪ್ರಚಾರ ಮಾಡುತ್ತೇನೆ. ಏ.5-6ರಂದು ಕೇರಳ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಈಸ್ಟರ್ ಹಾಗೂ ಗುಡ್ ಫ್ರೈಡೆ ಹಿನ್ನೆಲೆಯಲ್ಲಿ ಕೇರಳ ಪ್ರವಾಸವನ್ನು 5ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು.
ಗ್ಯಾಸ್ ಅಭಾವ ಹೆಚ್ಚುತ್ತಿರುವ ಬಗ್ಗೆ ಕೇಳಿದಾಗ, ಮಂಗಳವಾರ ಬೆಳಗ್ಗೆ 9.30ಕ್ಕೆ ನಾನು ಹಾಗೂ ಸುರ್ಜೇವಾಲ ಅವರು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ವಿಚಾರವಾಗಿ ಮಾತನಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ನುಡಿದಂತೆ ನಡೆಯುತ್ತದೆ
ನಿನ್ನೆ ಅಸ್ಸಾಂನಲ್ಲಿ ಖರ್ಗೆ ಅವರು ಗ್ಯಾರಂಟಿ ಯೋಜನೆ ಘೋಷಣೆ ಮಾಡಿರುವ ಬಗ್ಗೆ ಕೇಳಿದಾಗ, ಅವರು ಘೋಷಣೆ ಪ್ರಟಿಸಿದ ಬಳಿಕ ನಾನು ಭಾಷಣಗಳನ್ನು ಮಾಡಿ ಬಂದಿದ್ದೇನೆ. ನಾವು ನುಡಿದಂತೆ ನಡೆಯುತ್ತೇವೆ. ನಾವು ಭೂಮಿ ಹಕ್ಕು ಘೋಷಣೆ ಮಾಡಿದ್ದೇವೆ. 25 ಲಕ್ಷದವರೆಗೂ ಆರೋಗ್ಯ ಕಾರ್ಯಕ್ರಮ ಘೋಷಿಸಿದ್ದೇವೆ. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಕೇವಲ ತಮ್ಮ ಕಾರ್ಯಕರ್ತರಿಗೆ 1200 ರೂ. ಮಾಸಿಕ ನೀಡುತ್ತಿದೆ. ನಾವು ಎಲ್ಲಾ ಫಲಾನುಭವಿಗಳಿಗೂ ಯೋಜನೆ ನೀಡಲಿದ್ದೇವೆ. ಅಸ್ಸಾಂ ಮಾತ್ರವಲ್ಲ ದೇಶದ ಯಾವುದೇ ರಾಜ್ಯದಲ್ಲೇ ಆಗಲಿ ನಾವು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಬಿಜೆಪಿಯವರಂತೆ ಜನರ ಖಾತೆಗೆ 15 ಲಕ್ಷ ಹಾಕುತ್ತೇವೆ, ಅಚ್ಛೇದಿನ ತರುತ್ತೇವೆ ಎಂದು ಸುಳ್ಳು ಭರವಸೆ ನೀಡುವುದಿಲ್ಲ. ಅಚ್ಛೇದಿನ ಎಲ್ಲಿ ಬಂತು? ನಿಮ್ಮ ಯಾರ ಖಾತೆಗೂ 15 ಲಕ್ಷ ಬರಲಿಲ್ಲ” ಎಂದು ತಿಳಿಸಿದರು.
ಅಸ್ಸಾಂ ಪಾರಂಪರಿಕ ಆಹಾರ ಸವಿದು ಆನಂದಿಸಿದಿರಾ ಎಂದು ಕೇಳಿದಾಗ, “ಹೌದು, ನಾನು ಅಸ್ಸಾಂಗೆ ಬಹಳಷ್ಟು ಬಾರಿ ಹೋಗಿದ್ದೇನೆ. ಆದರೆ ಅಲ್ಲಿನ ಸ್ಥಳೀಯ ಆಹಾರ ತಿಂದಿರಲಿಲ್ಲ. ಈ ಬಾರಿ ಸ್ಥಳೀಯ ಆಹಾರ ಸೇವಿಸಿದೆ. ನಾನು ಸಸ್ಯಹಾರವನ್ನು ಸವಿದೆ, ನಮ್ಮ ಸ್ನೇಹಿತರು ಮಾಂಸಹಾರವನ್ನು ಆನಂದಿಸಿ ಸವಿದರು” ಎಂದರು.
ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದ ಬಗ್ಗೆ ಕೇಳಿದಾಗ, “ದೇವರನ್ನು ಭೇಟಿ ಮಾಡಿ ಪ್ರಾರ್ಥನೆ ಮಾಡಬೇಕು, ನಿಮ್ಮನ್ನು ಕೇಳಬೇಕಲ್ಲವೇ? ಎಂದರು.
ಅಸ್ಸಾಂ ಚುನಾವಣೆ ಗೆಲ್ಲುವ ವಿಶ್ವಾಸ ಇದೆಯೇ ಎಂದು ಕೇಳಿದಾಗ, “ಖಂಡಿತವಾಗಿಯೂ, ಅಮಿತ್ ಶಾ ಅವರು ಮರನೇ ಎರಡರಷ್ಟು ಬಹುಮತ ಪಡೆಯುವುದಾಗಿ ಹೇಳುತ್ತಿದ್ದಾರೆ. ನಾನು ಹೇಳುತ್ತಿದ್ದೇನೆ ನಾವು ಮೂರನೇ ಎರಡರಷ್ಟು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ, ಅವರು ಮೂರನೇ ಒಂದರಷ್ಟು ಕ್ಷೇತ್ರ ಗೆಲ್ಲುತ್ತಾರೆ ಎಂದು ಹೇಳಿದರು.