ಗಾಯಗೊಂಡ ವಿದೇಶಿ ವ್ಯಕ್ತಿಗೆ ಆರೈಕೆ: ಭಾರತೀಯರ ಹೃದಯವಂತಿಕೆ ಕಂಡು ಪ್ರವಾಸಿಗ ಭಾವುಕ
Viral Video: ಪ್ರಸಿದ್ಧ ಟ್ರಾವೆಲ್ ಇನ್ಫ್ಲುಯೆನ್ಸರ್ ಜಾಕ್ ಹೀಟನ್ ಭಾರತದ ಸೌಂದರ್ಯ ಸವಿಯಲು ಇತ್ತೀಚೆಗೆ ಭೇಟಿ ನೀಡಿದ್ದರು. ಆದರೆ ನಡೆದುಕೊಂಡು ಹೋಗುವಾಗ ಅವರ ಕಾಲಿಗೆ ಪೆಟ್ಟಾಗಿದ್ದು ಇಬ್ಬರು ಯುವಕರು ನೆರವಿಗೆ ಬಂದಿದ್ದಾರೆ. ಅವರು ನನ್ನನ್ನು ತಮ್ಮ ಮನೆಗೆ ಕರೆದೊಯ್ದು, ಬ್ಯಾಂಡೇಜ್ ಸುತ್ತಿದರು. ಆದರೆ ಈ ಸಹಾಯಕ್ಕೆ ಪ್ರತಿಯಾಗಿ ಅವರು ಏನು ಕೇಳಲೇ ಇಲ್ಲ. ನಿಜವಾಗಿಯೂ ಹೃದಯವಂತರೂ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಗಾಯಗೊಂಡ ವಿದೇಶಿ ವ್ಯಕ್ತಿಯ ಆರೈಕೆ ಮಾಡಿದ ಭಾರತೀಯರು -
ದೆಹಲಿ, ಮೇ 1: ಭಾರತದ ಆತಿಥ್ಯವನ್ನು ಹೊಗಳುವ ಅನೇಕ ವಿದೇಶಿಗರಿದ್ದಾರೆ. ಇಲ್ಲಿನ ಆಹಾರ, ಸಂಸ್ಕೃತಿ, ಪ್ರವಾಸಿ ಸ್ಥಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತೀಯರ ಸಹಾಯ ಮನೋಭಾವ ಹಾಗೂ ಔದಾರ್ಯವನ್ನು ತೋರಿಸುವ ದೃಶ್ಯವನ್ನು (Viral Video) ಪ್ರಸಿದ್ಧ ಟ್ರಾವೆಲ್ ಇನ್ಫ್ಲುಯೆನ್ಸರ್ ಒಬ್ಬರು ಶೇರ್ ಮಾಡಿದ್ದಾರೆ. ನಾವು - ನಮ್ಮವರು ಎಂದು ಸಾರುವ ಭಾರತೀಯರ ಮನೋಭಾವಕ್ಕೆ ಇವರು ಫಿದಾ ಆಗಿದ್ದು ಹೃದಯಸ್ಪರ್ಶಿ ಎಂದು ಕರೆದಿದ್ದಾರೆ.
ಪ್ರಸಿದ್ಧ ಟ್ರಾವೆಲ್ ಇನ್ಫ್ಲುಯೆನ್ಸರ್ ಜಾಕ್ ಹೀಟನ್ ಭಾರತದ ಸೌಂದರ್ಯ ಸವಿಯಲು ಇತ್ತೀಚೆಗೆ ಭೇಟಿ ನೀಡಿದ್ದರು. ಆದರೆ ನಡೆದುಕೊಂಡು ಹೋಗುವಾಗ ಅವರ ಕಾಲಿಗೆ ಪೆಟ್ಟಾಗಿದ್ದು, ಇಬ್ಬರು ಯುವಕರು ನೆರವಿಗೆ ಬಂದಿದ್ದಾರೆ. ʼʼಅವರು ನನ್ನನ್ನು ತಮ್ಮ ಮನೆಗೆ ಕರೆದೊಯ್ದು, ನನ್ನ ಆರೈಕೆ ಮಾಡಿದರು. ಬ್ಯಾಂಡೇಜ್ ಸುತ್ತಿದರು. ಆದರೆ ಈ ಸಹಾಯಕ್ಕೆ ಪ್ರತಿಯಾಗಿ ಅವರು ಏನು ಕೇಳಲೇ ಇಲ್ಲ. ನಿಜವಾಗಿಯೂ ಭಾರತೀಯರು ಹೃದಯವಂತರುʼʼ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ವಿಡಿಯೊ ನೋಡಿ:
ʼʼಸೋಷಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ಭಾರತದ ಬಗ್ಗೆ ತಪ್ಪು ಮಾಹಿತಿ ಹರಡುತ್ತದೆ. ಆದರೆ ಇದರಲ್ಲಿ ತೋರಿಸುವ ದೃಶ್ಯಕ್ಕೂ ನನ್ನ ಅನುಭವಕ್ಕೂ ವ್ಯತ್ಯಾಸ ಇದೆ. ಇದಕ್ಕೆ ನಿಮಗೊಂದು ಒಂದು ಉದಾಹರಣೆ ನೀಡುತ್ತೇನೆ. ಇಂದು ಮುಂಜಾನೆ, ನಾನು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಆದರೆ ಆಕಸ್ಮಿಕವಾಗಿ ಬಿದ್ದು ಕಾಲಿಗೆ ಗಾಯವಾಯಿತು. ಅದೇ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಬಂದು ನನಗೆ ಸಹಾಯ ಮಾಡಿದರು. ಅವರು ನನ್ನನ್ನು ತಮ್ಮ ಮನೆಗೆ ಕರೆದೊಯ್ದು ಉಪಚಾರ ಮಾಡಿದರುʼʼ ಎಂದು ವಿವರಿಸಿದ್ದಾರೆ.
ʼʼಪ್ರಯಾಣದ ಆರಂಭದಲ್ಲಿ ರೆಸ್ಟೋರೆಂಟ್ಗೆ ಹೋದಾಗ ಮೆನುವನ್ನು ನೋಡಿ ಗೊಂದಲಕ್ಕೊಳಗಾಗಿದ್ದೆ. ನನಗೆ ಏನೂ ತಿಳಿದಿರಲಿಲ್ಲ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಧಾವಿಸಿ ಅರ್ಥೈಸಿ ವಿವರಣೆ ನೀಡಿದ್ದಾರೆ. ಇಲ್ಲಿನ ಜನರು ನಿಜವಾಗಿಯೂ ಸಹೃದಯ ಉಳ್ಳವರು. ಸಹಾಯ ಮಾಡುವ ಗುಣ ಹೊಂದಿದವರುʼʼ ಎಂದು ಹೊಗಳಿದ್ದಾರೆ. ʼʼಇಲ್ಲಿನ ಉತ್ತಮ ಆಹಾರ ಮತ್ತು ಸುಂದರವಾದ ಭೂದೃಶ್ಯಗಳು, ನಿಜಕ್ಕೂ ಅದ್ಭುತ. ಭಾರತದ ಬಗ್ಗೆ ತಪ್ಪಾಗಿ ಕಲ್ಪಿಸುವ ಬದಲು ಮೊದಲು ನೀವೇ ಅನುಭವಿಸಬೇಕುʼʼʼ ಎಂದು ಹೇಳಿದ್ದಾರೆ.
ಈ ವಿಡಿಯೊಗೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನಾನಾ ಬಗೆಯ ಕಮೆಂಟ್ ಹರಿದು ಬಂದಿದೆ. ಒಬ್ಬರು, ʼʼನೀವು ಭಾರತದ ಎಲ್ಲಿಗೆ ಹೋದರೂ ಖುಷಿ ಖುಷಿಯಾಗಿ ಸಮಯ ಕಳೆಯುತ್ತೀರಿʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಭಾರತದ ಒಳ್ಳೆಯದನ್ನು ಅಮೂಲ್ಯವಾಗಿ ತೆಗೆದುಕೊಳ್ಳಿ. ಕೆಟ್ಟದ್ದನ್ನು ನಿರ್ಲಕ್ಷಿಸಿʼʼ ಎಂದು ಹೇಳಿದ್ದಾರೆ.