ಬಾಲಿವುಡ್ ಹಾಡನ್ನೂ ಮೀರಿಸುವ ದೃಶ್ಯ ಕಾವ್ಯ: ವರ್ಷಧಾರೆಯ ನಡುವೆ ವಿಶ್ವದ ಅತಿ ಎತ್ತರದ ಸೇತುವೆಯ ಮೇಲೆ ಸಾಗಿದ ವಂದೇ ಭಾರತ್ ರೈಲು; ಅದ್ಭುತ ವಿಡಿಯೊ ನೋಡಿ
Viral Video: ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಗಾರು ಮಳೆಯ ನಡುವೆ ವಂದೇ ಭಾರತ್ ರೈಲು ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆಯ ಮೇಲೆ ಹಾದುಹೋಗುವ ದೃಶ್ಯ ಭಾರಿ ವೈರಲ್ ಆಗಿದೆ. ಮಳೆಯ ಸುರುತ್ತಿರುವ ಹಿನ್ನೆಲೆಯಲ್ಲಿ ದಟ್ಟ ಮಂಜು ಆವರಿಸಿದ್ದು, ಮೋಡವನ್ನು ಸೀಳಿಕೊಂಡು ಸಾಗುವಂತೆ ಭಾಸವಾಗಿದೆ. ಪ್ರಕೃತಿ ಸೌಂದರ್ಯದ ಮಧ್ಯೆ ರೈಲು ಹಾದುಹೋಗುವ ದೃಶ್ಯ ನೋಡಿ ನೆಟ್ಟಿಗರು ʼಇದೇ ಸ್ವರ್ಗʼ ಎಂದು ಬಣ್ಣಿಸಿದ್ದಾರೆ.
ಅದ್ಭುತ ಮಂಜಿನ ನಡುವೆ ಅತಿ ಎತ್ತರದ ಸೇತುವೆಯ ಮೇಲೆ ಸಾಗಿದ ವಂದೇ ಭಾರತ್ ರೈಲು -
ಶ್ರೀನಗರ, ಜು. 29: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಗಿರಿ ಪ್ರದೇಶಗಳ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ. ಅದರಲ್ಲೂ ಹಸುರಿನ ಬೆಟ್ಟದ ಹಿನ್ನೆಲೆಯಲ್ಲಿ ಆವರಿಸುವ ದಟ್ಟ ಮಂಜಿನ ದೃಶ್ಯವನ್ನು ಸವಿಯಲು ಪ್ರವಾಸಿಗರು ಕಾಯುತ್ತಿರುತ್ತಾರೆ. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಗಾರು ಮಂಜಿನ ನಡುವೆ ವಂದೇ ಭಾರತ್ ರೈಲ್ ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆಯ ಮೇಲೆ ಹಾದುಹೋಗುವ ದೃಶ್ಯ ಭಾರಿ ವೈರಲ್ ಆಗಿದೆ. ಮೋಡವನ್ನು ಸೀಳಿಕೊಂಡು ಸಾಗುತ್ತಿರುವುವಂತೆ ರೈಲು ಹಾದು ಹೋಗಿದೆ. ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸುವಂತೆ ಈ ರೈಲು ಕಂಡು ಬಂದಿದ್ದು ಈ ದೃಶ್ಯ (Viral News) ನೋಡಿ ನೆಟ್ಟಿಗರು ʼಸ್ವರ್ಗʼ ಎಂದು ಬಣ್ಣಿಸಿದ್ದಾರೆ.
ಈ ಸುಂದರ ದೃಶ್ಯವನ್ನು ರೈಲ್ವೆ ಸಚಿವಾಲಯವು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಹಸಿರ ಸ್ವರ್ಗ, ಮಂಜಿನಿಂದ ಆವೃತ ವಾದ ಹಿಮಾಲಯದ ಶಿಖರಗಳ ಮಧ್ಯೆ ವಂದೇ ಭಾರತ್ ರೈಲು ಅತಿ ಎತ್ತರದ ಆರ್ಚ್ ಸೇತುವೆಯ ಮೇಲೆ ಚಲಿಸಿದೆ. ಇದು ಭಾರತದ ಶ್ರೇಷ್ಠ ಎಂಜಿನಿಯರಿಂಗ್ ಸಾಧನೆಗಳಲ್ಲಿ ಒಂದು ಎನಿಸಿಕೊಂಡಿದ್ದು, ಈಗ ಅದ್ಭುತ ನೋಟವನ್ನೂ ಒದಗಿಸಿದೆ.
ವಿಡಿಯೊ ನೋಡಿ:
Behold the breathtaking harmony of clouds, monsoon, mountains, the iconic Chenab Bridge, and Vande Bharat. 🚆🇮🇳 pic.twitter.com/SghyAEM5T8
— Ministry of Railways (@RailMinIndia) July 29, 2026
ಉಧಮ್ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಭಾಗವಾಗಿ ನಿರ್ಮಿಸಲಾದ ಚೆನಾಬ್ ರೈಲು ಸೇತುವೆ ಚೆನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿದೆ. ಇದು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಿದ್ದು, ಈ ರಚನೆಯು ಐಫೆಲ್ ಟವರ್ಗಿಂತ ಸುಮಾರು 35 ಮೀಟರ್ ಎತ್ತರದಲ್ಲಿದೆ. ಸೇತುವೆಯ ನಿರ್ಮಾಣವು ಭಾರತೀಯ ರೈಲ್ವೆ ಕೈಗೊಂಡ ಅತ್ಯಂತ ಸವಾಲಿನ ಯೋಜನೆಗಳಲ್ಲಿ ಒಂದಾಗಿತ್ತು. ಇದಕ್ಕಾಗಿ ಎಂಜಿನಿಯರ್ಗಳು 3D ಸ್ಪೇಷಿಯಲ್ ಮಾಡೆಲಿಂಗ್ ಮತ್ತು ಸ್ಯಾಟಲೈಟ್ ಇಮೇಜರಿಯಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿದ್ದಾರೆ. ಈ ಸುಧಾರಿತ ರೈಲು ಸಂಪರ್ಕವು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿದ್ದು, ಕಣಿವೆ ರಾಜ್ಯಕ್ಕೆ ಸಂಪರ್ಕವನ್ನು ವೇಗಗೊಳಿಸಲು ನೆರವಾಗುತ್ತಿದೆ ಪ್ರಯಾಣಿಕರಿಗೆ ಆರಾಮದಾಯಕ ಸೇವೆ ನೀಡುತ್ತಿದೆ.
ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಲಾಕ್ ಮಾಡಿದ ಮ್ಯಾನೇಜರ್!
ಈ ವಿಡಿಯೊ ಆಕರ್ಷಕವಾಗಿರುವ ಸೇತುವೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹಲವರು ಬಣ್ಣಿಸಿದ್ದಾರೆ. ಅನೇಕರು ಈ ನಿರ್ಮಾಣ ಕೌಶಲ್ಯ ಮತ್ತು ಅದರ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಶ್ಲಾಘಿಸಿದ್ದಾರೆ. ವೈರಲ್ ಆಗಿರುವ ದೃಶ್ಯದಲ್ಲಿ ಮಂಜಿನಿಂದ ಆವೃತವಾದ ಹಿಮಾಲಯನ್ ಶಿಖರಗಳು ಹಾಗೂ ಹಚ್ಚ ಹಸಿರಿನ ಕಣಿವೆಗಳ ನಡುವೆ ರೈಲು ಹಾದುಹೋಗುತ್ತಿರುವುದನ್ನು ಕಾಣಬಹುದು. ನೆಟ್ಟಿಗರೊಬ್ಬರು ʼʼಜಗತ್ತಿನ ಅತೀ ಸುಂದರ ದೃಶ್ಯʼʼ ಎಂದು ಕೊಂಡಾಡಿದ್ದಾರೆ.