Dr. Karaveeraprabhu Kyalakonda Column: ಭಾವೈಕ್ಯತೆಯ ಬನಶಂಕರಿ ಯಾತ್ರೆ
ಬನದೇವಿಯ ಸಂಪದದಲ್ಲಿ ಎದ್ದು ಕಾಣುವ ಧವಳ ಶಿಖರ ವನ್ನು ಹೊಂದಿದ ಬನಶಂಕರಿ ದೇವಿಯ ಗುಡಿಯು ದೂರದಿಂದಲೇ ಮನವನ್ನಾಕರ್ಷಿಸುತ್ತದೆ. ಚತುರಸ್ತ ಕಲ್ಲು ಮಂಟಪಗಳಿಂದ ಆವೃತವಾದ ಹರಿದ್ರಾತೀರ್ಥದ ಪಶ್ಚಿಮಕ್ಕೆ ಪೂರ್ವ ಮಹಾ ದ್ವಾರದಿಂದ ಒಳಗೂಡಿನ ಪ್ರಾಕಾರದ ಮಧ್ಯದಲ್ಲಿ ಈ ಶಕ್ತಿದೇವತೆಯ ಗುಡಿ ಇದೆ.
-
ಡಾ.ಕರವೀರಪ್ರಭು ಕ್ಯಾಲಕೊಂಡ
ಬನದ ಹುಣ್ಣಿಮೆ ಮುಂದ ಬನವೆ ನಡುಗೇತಿ
ಬನಶಂಕ್ರಿ ಜಾತ್ರಿ ಬಂದೈತಿ! ತವರಿಂದ
ಕರಿಯಾಕ ಬಂಡಿ ಬರತೈತಿ
ಜನಪದರ ಮನದಿಂದ ಮೂಡಿಬಂದ ಈ ತ್ರಿಪದಿಯು ಜನರೊಂದಿಗೆ ಜಾತ್ರೆಯ ನಂಟು ಎಷ್ಟಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಉತ್ತರ ವಾಹಿನಿಯಾಗಿ ಹರಿಯುವ ಮಲಪಹಾರಿಯ ಸಮೀಪದ ತುಳಸೀಗುಡ್ಡದ ಕೆಳಗೆ ತಿಲಕವನದಲ್ಲಿ ತೆಂಗಿನ ತೋಪು, ಬಾಳೆಯ ಬನಗಳು, ಹಚ್ಚ ಹಸುರಿನ ಹಾಸಿಗೆ, ತಂಪು ಹವೆ, ತಿಳಿಯಾಗಿ ಹರಿಯುವ ಹಸುರಿಗೆ ಉಸಿರಾಗಿರುವ ಸರಸ್ವತಿ ಹಳ್ಳ, ಹರಿದ್ರಾ ತೀರ್ಥ, ತೈಲತೀರ್ಥ, ಹಕ್ಕಿಗಳ ಕಲರವ, ಬರಗಾಲದ ಬಿಸಿಲಿನ ಬೇಗೆಯ ಬಯಲುಸೀಮೆಯಲ್ಲಿ ಬನವಾಸಿಯ ನೆನಪು. ಇದೇ ಬನಶಂಕರಿ ದೇವಿಯ ತಾಣ. ಬನದೇವಿಯ ಸಂಪದದಲ್ಲಿ ಎದ್ದು ಕಾಣುವ ಧವಳ ಶಿಖರ ವನ್ನು ಹೊಂದಿದ ಬನಶಂಕರಿ ದೇವಿಯ ಗುಡಿಯು ದೂರದಿಂದಲೇ ಮನವನ್ನಾಕರ್ಷಿಸುತ್ತದೆ. ಚತುರಸ್ತ ಕಲ್ಲು ಮಂಟಪಗಳಿಂದ ಆವೃತವಾದ ಹರಿದ್ರಾತೀರ್ಥದ ಪಶ್ಚಿಮಕ್ಕೆ ಪೂರ್ವ ಮಹಾ ದ್ವಾರದಿಂದ ಒಳಗೂಡಿನ ಪ್ರಾಕಾರದ ಮಧ್ಯದಲ್ಲಿ ಈ ಶಕ್ತಿದೇವತೆಯ ಗುಡಿ ಇದೆ.
ಮಹಾದ್ವಾರದ ಒಳಗಡೆ ಎತ್ತರವಾದ ಕಲ್ಲಿನ ದೀಪ ಸ್ತಂಭಗಳಿದ್ದು, ಬಲಿಪೀಠ ಮತ್ತು ಧ್ವಜ ಸ್ತಂಭ ಗಳಿವೆ. ವಾಸ್ತು ವಿನ್ಯಾಸ ದೃಷ್ಟಿಯಿಂದ ಮುಖಮಂಟಪ, ಸಭಾಮಂಟಪ ಮತ್ತು ಗರ್ಭಗುಡಿ ಎಂದು ವಿಂಗಡಿಸಬಹುದು. ಸಭಾಮಂಟಪದ ಕೊನೆಯ ಎಡ ಮತ್ತು ಬಲ ಬದಿಗಳಿಂದ ಪ್ರದಕ್ಷಿಣೆ ಪಥದ ಪರಿತಳಿಯಿಂದ ಮೇಲೇರಿ ಬರಲು ಮೆಟ್ಟಿಲುಗಳಿವೆ.
ಶಕ್ತಿದೇವತೆ ಬನಶಂಕರಿ
ಗರ್ಭಗುಡಿಯಲ್ಲಿ ಕಪ್ಪು ಶಿಲೆಯಲ್ಲಿ ಕಲಾಪೂರ್ಣವಾಗಿ ಕೆತ್ತಿದ ಸಿಂಹವಾಹಿನಿಯಾದ ಎಂಟು ಕೈಗಳುಳ್ಳ ದೇವಿಯ ಸುಂದರ ವಿಗ್ರಹ ಭವ್ಯವಾಗಿದೆ. ಬನಶಂಕರಿ ದೇವಿ ನವದುರ್ಗೆಯರಲ್ಲಿ ಒಬ್ಬಳಾಗಿದ್ದು ‘ವನದುರ್ಗೆ’ ಎಂಬ ಪ್ರಭೇದದಲ್ಲಿಯ ಪ್ರಮುಖ ಲಕ್ಷಣಗಳು ಮೂರ್ತಿಶಾಸ್ತ್ರದ ದೃಷ್ಟಿ ಯಿಂದ ನೋಡಿದಾಗ ಸ್ಪಷ್ಟವಾಗುವುವು.
ಇದನ್ನೂ ಓದಿ: Dr Karaveeraprabhu Kyalakonada Column: ಮಾದಕವಸ್ತು ಬಳಕೆ: ಸಮಾಜಕ್ಕೆ ಶಾಪ
ಬನಶಂಕರಿ ದೇವಿಯ ಪ್ರತಿಷ್ಠಾಪನೆ ಶಾಲಿವಾಹನ ಶಕೆ 603ರಲ್ಲಿ ಆಯಿತೆಂಬುದು ಬನದೇವಿಯ ಪೀಠದಲ್ಲಿನ ಶಾಸನದಿಂದ ತಿಳಿಯುವುದು. ಸ್ಕಂದ ಮತ್ತು ಪದ್ಮ ಪುರಾಣಗಳಲ್ಲಿ, ದೇವೀ ಭಾಗವತ ದಲ್ಲಿ ಈ ಶಕ್ತಿದೇವತೆಯ ಬಗ್ಗೆ ಉಖಗಳಿವೆ. ಒಮ್ಮೆ ಬೆಳವಲದ ಈ ಭಾಗದಲ್ಲಿ ಭೀಕರ ಬರಗಾಲ ಬಿತ್ತು. ಬರಗಾಲದ ಬಾಹುಬಂಧನದಲ್ಲಿ ಜನತೆ ತತ್ತರಿಸಿ ಹೋಯಿತು. ಹಸಿವಿನ ಹಾಹಾಕಾರ ಎಡೆ ಎದ್ದಿತು. ಭಕ್ತರಿಗೆ ಬಂದೊದಗಿದ ಕುತ್ತನ್ನು ಕಡಿದು ಹಾಕಲು ಈ ದೇವಿ ತನ್ನ ತನುವಿನಿಂದಲೇ ಕಾಯಿಪ ಸೃಷ್ಟಿಸಿ ನೀಡಿದಳು. ಅದಕ್ಕಾಗಿ ಸ್ಥಳೀಯರು ಈ ದೇವಿಯನ್ನು ‘ಶಾಕಂಬರಿ’ ಎಂದು ಭಕ್ತಿ ಭಾವದಿಂದ ಕರೆಯುವರು.
ಬನಶಂಕರಿ ಜಾತ್ರೆಯ ಬಾಬುದಾರರು
ಬಾದಾಮಿಯ ಬಡಿಗೇರು ಬನಶಂಕರಿ ತೇರು ಕಟ್ಟುವರು. ಚೋಳಚಗುಡ್ಡದ ಕಂಬಾರರು ತೇರಿಗೆ ಬೇಕಾದ ಕಬ್ಬಿಣದ ಬಳೆಗಳನ್ನು ತಯಾರಿಸಿ ಜೋಡಿಸುವರು. ಬಾದಾಮಿಯ ಭಾಗವಾಗಿರುವ ತಟಕೋಟೆಯ ಭಕ್ತರು ತೇರಿಗೆ ಎಣ್ಣೆ ಉಣಿಸಿ, ಸುರುಮಾ ಹಚ್ಚಿ ಸಜ್ಜುಗೊಳಿಸುವರು. ಬೇಲೂರಿನ ಕುಂಬಾರರು ನಂದಾದೀಪಕ್ಕೆ ಬೇಕಾಗುವ ಪಣತಿಗಳನ್ನ ಪೂರೈಸುವರು, ರೋಣ ತಾಲೂಕಿನ ಮೂಡ್ಲಗೇರಿ ಗ್ರಾಮದವರು ತೇರು ಎಳೆಯಲು ಬೇಕಾಗುವ ಹಗ್ಗವನ್ನು ವಿಶೇಷ ಬಂಡಿಯ ಮೇಲೆ ಮೋಜು ಮಜಲುಗಳೊಂದಿಗೆ ಮೆರವಣಿಗೆ ಮಾಡುತ್ತಾ ತರುವರು.
ಘಟಸ್ಥಾಪನೆಯಿಂದ ರಥೋತ್ಸವದ ದಿನದವರೆಗೆ ಚತುರ್ವೇದ ಪಾರಾಯಣ ಮಾಡುವರು. ಇದು ಅಷ್ಟಮಿ ಆರಾಭ್ಯ, ಪೂರ್ಣಿಮಾರ್ಯಂತವಾಗುವುದು. ರಥೋತ್ಸವದ ಮುನ್ನ ನಡೆಯುವ ‘ಪದ ಹಬ್ಬ’ ತುಂಬಾ ವೈಶಿಷ್ಟ್ಯಪೂರ್ಣ. 108 ಪಲ್ಲೆಗಳನ್ನು ಮಾಡಿ ದೇವಿಗೆ ಅರ್ಪಿಸುವರು. ಬಹುಶಃ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸದಾ ಹಸಿರನ್ನೇ ನೀಡಿದುದರ ಫಲ ಇದಾಗಿರಬಹುದು!
ಬನದ ಹುಣ್ಣಿಮೆಯಂದು ಬೆಳಗ್ಗೆ ‘ರಥಾಂಗಹೋಮ’ ಮಾಡುವರು. ಅಂದು ಸಾಯಂಕಾಲ 5 ಗಂಟೆಗೆ ಸಾರ್ವಜನಿಕ ರಥೋತ್ಸವ ಜರಗುವುದು. ಬಾದಾಮಿ ವಡ್ಡರು ತೇರಿನ ಗಾಲಿಗೆ ರಥೋತ್ಸವದ ವೇಳೆ ಸನ್ನಿ ಹಾಕುವುದನ್ನ, ಕಲ್ಲು ಇಡುವುದನ್ನ ಮಾಡುವರು. ಚೋಳಚಗುಡ್ಡದ ಕಮಾಟಿಗರು ಪಲ್ಲಕ್ಕಿ ಹೊರುವರು, ದೀವಟಿಗೆ ಹಿಡಿಯುವರು.
ಭಜಂತ್ರಿಯವರು ಚೌಡಕಿ ಬಾರಿಸುವರು, ಶಹನಾಯಿ ವಾದನ ಮಾಡುವರು. ಇವರೆಲ್ಲರ ಜತೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಡೊಳ್ಳಿನ ಮೇಳ, ಭಜನೆಮೇಳ, ನಂದಿಕೋಲು, ಹೆಜ್ಜೆ ಕುಣಿತ ತಂಡಗಳು ಜಾನಪದ ಸೊಗಡಿನ ಸಿರಿಯನ್ನು ಅನಾವರಣಗೊಳಿಸುವುವು.
ರಥೋತ್ಸವದ ವೇಳೆ ಲಕ್ಷಾಂತರ ಜನರು, ಮೈ ಮನ ಮರೆತು ‘ಬಾದಾಮಿ ಬನಶಂಕರಿ ಶಂಭುಕೊ’ ಎನ್ನುತ್ತಾ ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆಯುವ ದೃಶ್ಯ ಹೃದಯಂಗಮ. ಭಕ್ತಿಯ ಮಹಾಪೂರ ವನ್ನೇ ತಾಯಿಯ ಮೇಲೆ ಇಲ್ಲಿಯ ಭಕ್ತರು ಹರಿಸುವರು. ಜಾತಿ, ಮತ, ಪಂಥಗಳ ಭೇದಭಾವದ ಬಾಹುಗಳ ಬಂಧನದಲ್ಲಿ ಬಂಧಿತರಾಗದೇ ಸರ್ವ ಸಮಾಜಗಳ ಜನರು, ಭಾವೈಕ್ಯತೆಯಿಂದ ಆಚರಿ ಸುವ ಜಾತ್ರೆ ಇದಾಗಿದೆ. ದೇವಾಲಯದಲ್ಲಿ ಎಲ್ಲರಿಗೂ ಮುಕ್ತ ಪ್ರವೇಶವಿದೆ.
ನೋಡಬನ್ನಿ ಬೆಡಗಿನ ಜಾತ್ರೆ
ಮುಂಗಾರು ಸುಗ್ಗಿ ಮುಗಿದು, ಹಿಂಗಾರು ಮಾಗಿ ಶೃಂಗಾರವಾಗಿರುವಾಗ ಸಂಭ್ರಮ-ಸಡಗರಗಳಿಂದ ಬರುವ ಬನಶಂಕರಿ ಜಾತ್ರೆ ಬಯಲುಸೀಮೆಯ ಅತಿದೊಡ್ಡ ಜಾತ್ರೆಗಳಂದಾಗಿದೆ. ತಿಂಗಳುಗಟ್ಟಲೆ ನಡೆಯುವ ಅಪರೂಪದ ಜಾತ್ರೆಯಿದು.
ವರ್ಷವಿಡೀ ‘ವನಪುರಿ’ಯಾಗಿರುವ ಈ ಕ್ಷೇತ್ರದಲ್ಲಿ ಜಾತ್ರೆ ವೇಳೆಗೆ ಹೊಚ್ಚಹೊಸ ‘ಮಾಯಾನಗರಿ’ ನಿರ್ಮಾಣಗೊಳ್ಳುವುದು. ಈ ಮಾಯಾನಗರಿಯಲ್ಲಿ ರಸ್ತೆಗಳು, ಕ್ರಾಸುಗಳು, ಕೂಟಗಳು, ಕಾಲುದಾರಿ ಗಳು ಇರುವವು. ಚಿತ್ರಮಂದಿರಗಳು, ನಾಟಕ ರಂಗಮಂದಿರಗಳು, ಸರ್ಕಸ್ ಕಂಪನಿಗಳು, ಕಟ್ಟಿಗೆಯ ಅಡ್ಡೆಗಳು, ಅಂದದ ಮನೆಗೆ ಬೇಕಾಗುವ ಚೆಂದದ ಬಾಗಿಲುಗಳು, ಹೋಟೆಲ್ಗಳು, ಪಾನ್ ಶಾಪ್ಗಳು, ಬೆಂಡು-ಬತ್ತಾಸು, ಲಡ್ಡು, ಚುರುಮರಿ ಸಾಲು ಅಂಗಡಿಗಳು, ಅಮ್ಮಿನಗಡದ ಕರದಂಟು, ಧಾರವಾಡ ಪೇಡೆ, ಬೆಳಗಾಂವ್ ಕುಂದಾ ಮಾರುವ ಮಳಿಗೆಗಳು, ತಂದೆ-ತಾಯಿಗಳ ಕಿಸೆ ಖಾಲಿ ಮಾಡಿಸುವ ಗೊಂಬೆ ಅಂಗಡಿಗಳು, ಬಾಂಡೆ ಅಂಗಡಿಗಳು, ತೊಟ್ಟಿಲು ಬಟ್ಟಲು, ಟ್ರಂಕು ಮಾರುವ ಮಳಿಗೆಗಳು, ಬಣ್ಣ ಬಣ್ಣದ ಬಾರುಕೋಲು, ಗೆಜ್ಜೆಸರ, ಗಂಟೆ ಬಾಸಿಂಗ, ಜುಲಾ, ಕೋಡೆನು, ಕರ್ಣಿ ಹಣೆಗೆಜ್ಜೆ ಗೊಂಡೆ ಇರುವ ರೈತಾಪಿ ಜನರ ಅಂಗಡಿಗಳು, ವಿಭಿನ್ನ ಬಗೆಯ ಬಳೆಗಳನ್ನು ಮಾರಾಟ ಮಾಡುವ ಬಳೆಗಾರ ಚನ್ನಯ್ಯರು, ಉಡದಾರ, ಶಿವದಾರ, ಕಾಶಿದಾರ, ಲಿಂಗು, ಪೀಠಕ, ವಿಭೂತಿ, ರುದ್ರಾಕ್ಷಿ, ಕ್ರಿಯಾಗಟ್ಟಿ ಮಾರಾಟದ ಮಳಿಗೆಗಳು, ಭಂಡಾರ, ಕುಂಕುಮ ಮಾರುವ ನೂಕುಬಂಡಿ ಅಂಗಡಿಗಳು, ಸಂಜೆಯ ರಂಗಿಗೆ ಜೋಲಿ ಹೊಡೆಸುವ ‘ಗುಂಡಿನ ಅಂಗಡಿಗಳು’, ಮಸ್ತರಾಮ ಮರಾಠಿ ಖಾನಾವಳಿ ಗಳು, ಬರ್ಮಾ ಬಜಾರುಗಳು, ಕಿವಿ ಕೊರೆಯುವ ರಿಕಾರ್ಡುಗಳು... ಒಂದೇ ಎರಡೇ ಎ!
ಇಂಥದ್ದನ್ನು ಮತ್ತಾವ ಜಾತ್ರೆಯಲ್ಲೂ ನೋಡಲು ಸಾಧ್ಯವಿಲ್ಲ. ಅದಕ್ಕೆ ಬನಶಂಕರಿ ಜಾತ್ರೆ ಕುರಿತು ಹೀಗೊಂದು ನಾಣ್ಣುಡಿ ಪ್ರಚಲಿತದಲ್ಲಿದೆ- ‘ಬನಶಂಕರಿ ಜಾತ್ರ್ಯಾಗ ಅಪ್ಪ-ಅವ್ವನ ಬಿಟ್ಟು ಎಲ್ಲಾ ಸಿಗತೈತಿ...’. ಇದು ಅಕ್ಷರಶಃ ಸತ್ಯ.
ದಂಗುಗೊಳಿಸುವ ದನದ ಜಾತ್ರೆ
ಕಳಸ ಇಳಿಯುವ ದಿನದಂದು ದನದ ಜಾತ್ರೆಗೆ ನಾಂದಿ ಹಾಡಲಾಗುತ್ತದೆ. ಬಾದಾಮಿ ಬಂಡೆಗಳ ಮುಂದೆ ಎಪಿಎಂಸಿ ಎದುರಿನ ಬಯಲಿನಲ್ಲಿ ಸೇರುವ ದನಗಳ ದೃಶ್ಯ ನಯನ ಮನೋಹರ. ದೂರ ದೂರದ ಊರಿಂದ ಭಿನ್ನ ಭಿನ್ನ ಜಾತಿಯ ದನಗಳು ಜಾತ್ರೆಗೆ ಬರುತ್ತವೆ. ಮಸ್ತ ಮೇಸಿದ ಹರೆಯದ ಹೋರಿಗಳು ಜಾತ್ರೆಯ ಆಕರ್ಷಣೆ. ಕೊರೆಯುವ ಚಳಿಯಲ್ಲೂ ಅವುಗಳ ಮೈತಿಕ್ಕಿ ಮಿಂಚುವಂತೆ ಮಾಡುವ, ರೈತರು ಮತ್ತು ನೋಡುಗರನ್ನು ಆಯಸ್ಕಾಂತದಂತೆ ಆಕರ್ಷಿಸುವ ಕೇಂದ್ರಗಳು, ಲಕ್ಷ ಲಕ್ಷ ಕಿಮ್ಮತ್ತಿನ ಜೋಡಿಗಳು.
ದನದ ಜಾತ್ರಾ ಸಮಿತಿ ನೀಡುವ ಬಹುಮಾಗಳು, ನಂತರ ನಡೆಯುವ ವ್ಯಾಪಾರ ವಹಿವಾಟುಗಳು- ಇವು ದನದ ಜಾತ್ರೆಯ ವೈಶಿಷ್ಟ್ಯಗಳು. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬನಶಂಕರಿ ಯಲ್ಲಿರುವ ಈ ಬನದತಾಯಿಗೆ ನೂರೆಂಟು ಹೆಸರು. ವನದುರ್ಗೆ, ಬನಶಂಕರಿ ಬಾಳವ್ವ, ಬನದವ್ವ, ಸುಂಕವ್ವ, ಶಾಕಂಬರಿ, ಶಿರಿವಂತಿ, ಹೂವಕ್ಕ. ಚೌಡಮ್ಮ ಮುಂತಾದ ಹೆಸರುಗಳಿಂದ ತಾಯಿಯನ್ನು ಕರೆಯುತ್ತಾರೆ. ರೈತರ ಆರಾಧ್ಯ ದೈವವಾಗಿರುವ ಈ ದೇವಿಯ ಜಾತ್ರೆಯಲ್ಲಿ ಮಣ್ಣಿನ ಮಕ್ಕಳ ಸಂಭ್ರಮ ಮುಗಿಲು ಮುಟ್ಟುತ್ತದೆ. ಅಂದಹಾಗೆ ನೀವೂ ಒಂದ್ಬಾರಿ ಬನ್ರಲಾ... ಈ ಬೆಡಗಿನ ಜಾತ್ರೆಗೆ...!