ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಮೂತ್ರಕೋಶದ ಕಲ್ಲು: ತಿಳಿದುಕೊಳ್ಳಿ ಆಯುರ್ವೇದದ ಸೊಲ್ಲು

ಭಾರತದಲ್ಲಿ ಸುಮಾರು 12 ಪ್ರತಿಶತ ಜನರ ಶತ್ರು ಈ ಅಶ್ಮರೀ! ಈ ಶತ್ರುವು ಸಹಿಸಲಾಗದ ನೋವು ಮತ್ತು ದುಃಖವನ್ನು ನೀಡುತ್ತದೆ. ನೋಡನೋಡುತ್ತಾ ಇದು ಇಷ್ಟು ಹೆಚ್ಚಾಗಲು ಕಾರಣ ಏನು ಗೊತ್ತೇ? ಬನ್ನಿ, ಮೂತ್ರಕೋಶದಲ್ಲಿ ಕಲ್ಲು ಬೆಳೆಯಲು ಆಯುರ್ವೇದದ ಶಾಸ್ತ್ರದಲ್ಲಿ ಹೇಳಿರುವ ಕೆಲವು ಪ್ರಮುಖ ಕಾರಣಗಳನ್ನು ತಿಳಿದು ಅದನ್ನು ತಿದ್ದಿಕೊಳ್ಳಲು ಪ್ರಯತ್ನ ಮಾಡೋಣ.

ಮೂತ್ರಕೋಶದ ಕಲ್ಲು: ತಿಳಿದುಕೊಳ್ಳಿ ಆಯುರ್ವೇದದ ಸೊಲ್ಲು

ಸ್ವಾಸ್ಥ್ಯವೆಂಭ ಸ್ವಾತಂತ್ರ್ಯ

ಎಂಥಾ ಕಲ್ಲು ಮನಸ್ಸೋ ನಿಂದು?’‘ ಎಂದು ಕೆಲವರು ಆಗಾಗ ಉದ್ಗರಿಸುವುದನ್ನು ನೀವು ಕೇಳಿರ ಬಹುದು. ಈ ‘ಕಲ್ಲು’ತನದಿಂದ ಎಷ್ಟೋ ಸಂಸಾರಗಳು ಮಣ್ಣುಪಾಲಾಗಿರುವುದಿದೆ. ಇದೇ ರೀತಿ ಯಾಗಿ ಮತ್ತೊಂದು ‘ಕಲ್ಲಿ’ನಿಂದ ಬಹಳಷ್ಟು ಜನ ನರಳುತ್ತಿದ್ದಾರೆ! ಅದ್ಯಾವುದು ಗೊತ್ತೇ- ಮೂತ್ರ ಕೋಶದ ಕಲ್ಲು/ಕಿಡ್ನಿ ಸ್ಟೋನ್! ಇದನ್ನು ಆಯುರ್ವೇದದಲ್ಲಿ ‘ಅಶ್ಮರೀ ’ ಎಂದು ಕರೆಯುತ್ತಾರೆ.

ಭಾರತದಲ್ಲಿ ಸುಮಾರು 12 ಪ್ರತಿಶತ ಜನರ ಶತ್ರು ಈ ಅಶ್ಮರೀ! ಈ ಶತ್ರುವು ಸಹಿಸಲಾಗದ ನೋವು ಮತ್ತು ದುಃಖವನ್ನು ನೀಡುತ್ತದೆ. ನೋಡನೋಡುತ್ತಾ ಇದು ಇಷ್ಟು ಹೆಚ್ಚಾಗಲು ಕಾರಣ ಏನು ಗೊತ್ತೇ? ಬನ್ನಿ, ಮೂತ್ರಕೋಶದಲ್ಲಿ ಕಲ್ಲು ಬೆಳೆಯಲು ಆಯುರ್ವೇದದ ಶಾಸ್ತ್ರದಲ್ಲಿ ಹೇಳಿರುವ ಕೆಲವು ಪ್ರಮುಖ ಕಾರಣಗಳನ್ನು ತಿಳಿದು ಅದನ್ನು ತಿದ್ದಿಕೊಳ್ಳಲು ಪ್ರಯತ್ನ ಮಾಡೋಣ.

ಅಶ್ಮರೀ ರೋಗವು ಈ ಕೆಳಕಂಡ ಕಾರಣಗಳಿಂದ ಉತ್ಪತ್ತಿಯಾಗುತ್ತದೆ: 1. ಹಸಿವಿಲ್ಲದೆ ಇದ್ದರೂ ತಿನ್ನುವುದು! ಇದನ್ನು ಆಯುರ್ವೇದದಲ್ಲಿ ‘ಅಧ್ಯಶನ’ ಎಂದು ಕರೆಯುತ್ತಾರೆ. ಅಂದರೆ, ಹಿಂದೆ ಸೇವಿಸಿದ ಆಹಾರವು ಜೀರ್ಣವಾದ ಮೇಲೆಯೇ ನಮಗೆ ಮತ್ತೆ ಹಸಿವು ಕಾಣಿಸಿಕೊಳ್ಳುತ್ತದೆ. ನಮಗೆ ಹಸಿವೆ ಇಲ್ಲ ಎಂದರೆ ಅರ್ಥ ನಾವು ಮುಂಚೆ ಸೇವಿಸಿದ ಆಹಾರವು ಇನ್ನೂ ನಮ್ಮ ಜಠರದಲ್ಲಿ ಜೀರ್ಣವಾಗುತ್ತಿದೆ ಅಂತ. ಹಸಿವೆ ಇಲ್ಲದಿದ್ದಾಗ ತಿನ್ನುವುದು ಅನಾರೋಗ್ಯಕರ. ಇದರಿಂದ ಆಹಾರವು ಸರಿಯಾಗಿ ಜೀರ್ಣವಾಗದೆ ಬೇರೆ ಬೇರೆ ರೀತಿಯ ತೊಂದರೆಗಳು ಉದ್ಭವಿಸುತ್ತವೆ.

2. ಅದೇ ರೀತಿ ಪದೇಪದೆ ತಿನ್ನುವುದು ಸಹ ಒಂದು ಮುಖ್ಯ ಕಾರಣ. ಆಯುರ್ವೇದದ ಪ್ರಕಾರ ನಾವು ಒಂದು ದಿನದಲ್ಲಿ 2 ಅಥವಾ 3 ಆಹಾರ ಕಾಲಗಳನ್ನು ನಿಗದಿಗೊಳಿಸಿ, ಆ ಸಮಯದಲ್ಲಿ ಮಾತ್ರವೇ ಆಹಾರವನ್ನು ಸ್ವೀಕರಿಸತಕ್ಕದ್ದು. ಎರಡು ಆಹಾರ ಕಾಲಗಳ ನಡುವೆ ತಿನ್ನುವುದನ್ನು ಮಾಡಬಾರದು! ಏನನ್ನೇ ಸೇವಿಸಬೇಕೆನಿಸಿದರೂ ಅದನ್ನು ನಿಗದಿತ ಆಹಾರ ಕಾಲದಲ್ಲಿಯೇ ಸಂಯೋಜಿಸಿಕೊಳ್ಳಬೇಕು. ಉದಾಹರಣೆಗೆ, ಇವತ್ತು ಸ್ವಲ್ಪ ಆಲೂಗಡ್ಡೆ ಚಿ ತಿನ್ನುವ ಮನಸ್ಸಾಗಿದೆ ಎಂದರೆ, ಅದರ ಸ್ವಲ್ಪ ಪ್ರಮಾಣವನ್ನು ಊಟದ ಜತೆಯ ಸೇರಿಸಿಕೊಂಡು ತಿನ್ನುವುದು ಹೆಚ್ಚಾಗಿ ತೊಂದರೆ ತರದು.

ಇದನ್ನೂ ಓದಿ: Dr Sadhanashree Column: ಪಂಚಕರ್ಮವು ಆಗದಿರಲಿ ನಿಮ್ಮ ಜೀವನದ ಅಯ್ಯೋ, ನಮ್ಮ ಕರ್ಮ !

ಅದರ ಬದಲಿಗೆ, ಆಹಾರ ಕಾಲದ ಮಧ್ಯೆ, ಯಾವುದೋ ಸಮಯದಲ್ಲಿ, ಇನ್ನೂ ಹಿಂದೆ ತಿಂದ ಆಹಾರವು ಜೀರ್ಣಗೊಳ್ಳುತ್ತಿರುವ ಸಮಯದಲ್ಲಿ ಆಲೂಗಡ್ಡೆ ಚಿಪ್ಸ್ ಅನ್ನು ಸೇವಿಸಿದರೆ, ಅದು ಖಂಡಿತ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ಹಾಗಾಗಿ ಮಧ್ಯೆ ಮಧ್ಯೆತಿನ್ನುವುದನ್ನು ವರ್ಜಿಸಲೇಬೇಕು.‌

3. ಅಂತೆಯೇ, ಬಾಯಾರಿಕೆ ಇಲ್ಲದಿzಗಲೂ ಪದೇ ಪದೆ ನೀರನ್ನು ಕುಡಿಯುತ್ತಿರುವುದು ಅಶ್ಮರಿಯ ಅತ್ಯಂತ ಮುಖ್ಯ ಕಾರಣ. ಇಂದಿನ ಕಾಲದಲ್ಲಿ ಈ ಅಭ್ಯಾಸವು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಯಾರನ್ನು ಕೇಳಿದರೂ “ಬೆಳಗ್ಗೆ ಎದ್ದ ಕೂಡಲೇ ಲೀಟರ್‌ಗಟ್ಟಲೆ ನೀರು ಕುಡಿದೆ" ಎಂದು ಹೇಳು ವವರೇ!

ಇಂಥವರನ್ನು ನಾವು ಕ್ಲಿನಿಕ್‌ನಲ್ಲಿ ಸಾಮಾನ್ಯವಾಗಿ ಕಾಣಬಹುದು. ಆಯುರ್ವೇದದ ಪ್ರಕಾರ ಬಾಯಾರಿಕೆ ಇಲ್ಲದಿzಗ ಸೇವಿಸುವ ಅತಿಯಾದ ನೀರು ಹಲವಾರು ರೋಗಗಳಿಗೆ ಕಾರಣವಾಗುತ್ತದೆ. ಇದಕ್ಕೆ ಚಿಕ್ಕದಾದ ಒಂದು ಅಲರ್ಜಿಯಿಂದ ಹಿಡಿದು ಮಧುಮೇಹದಂಥ ಭಯಂಕರ ವ್ಯಾಧಿಗಳನ್ನು ಸೃಷ್ಟಿಸುವ ಶಕ್ತಿಯಿದೆ. ಈ ದುರಭ್ಯಾಸವನ್ನು ಪಾಲಿಸಲು ಇಡೀ ದಿನ ಅಲಾರ್ಮ್‌ಗಳನ್ನು ಇಟ್ಟು ಕೊಂಡು, ನೆನಪಿಸಿಕೊಂಡು ನೀರು ಕೊಡುವ ಅವಶ್ಯಕತೆ ಇಲ್ಲ. ದೇಹಕ್ಕೆ ಬೇಕಾದಾಗ, ಬಾಯಾ ರಿಕೆಯ ಮೂಲಕ ದೇಹವೇ ನಿಮಗೆ ನೀರಿನ ಅವಶ್ಯಕತೆಯನ್ನು ತಿಳಿಸುತ್ತದೆ. ಅದರಂತೆ ನಡೆದರೆ ಸಾಕು.

4. ಮೀನಿನಂಥ ಜಲೀಯ ಪ್ರಾಣಿಗಳ ಮಾಂಸವನ್ನು ಅತಿಯಾಗಿ ಸೇವಿಸುವುದು ಸಹ ಮೂತ್ರ ಕೋಶದ ಕಲ್ಲನ್ನು ಉತ್ಪಾದನೆ ಮಾಡುತ್ತದೆ. ಮಾಂಸವನ್ನು ಸೇವಿಸುವಾಗಲು ಬಹಳ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ. ಹಸಿವೆಯನ್ನು ಗಮನಿಸಿ, ಜೀರ್ಣಶಕ್ತಿಗೆ ತಕ್ಕಂತೆ ಸೇವಿಸುವುದು ಉತ್ತಮ. ಮಾಂಸ ಸೇವನೆಯು ವಾರಕ್ಕೆ ಒಂದು ಬಾರಿಗಿಂತ ಜಾಸ್ತಿ ಇರದಿರಲಿ. ರಾತ್ರಿ ಅಂತೂ ಬೇಡವೇಬೇಡ. ವ್ಯಾಯಾಮ ಮಾಡುವ, ಜೀರ್ಣಶಕ್ತಿ ಚೆನ್ನಾಗಿ ಇರುವ ವ್ಯಕ್ತಿಗಳು ಮಾತ್ರ ಮಾಂಸ ಸೇವನೆಗೆ ಅರ್ಹರು!

5. ಕಫವನ್ನು ಹೆಚ್ಚು ಮಾಡುವಂಥ ಆಹಾರವನ್ನು ಅತಿಯಾಗಿ ಸೇವಿಸುವುದು ಸಹ ಅಶ್ಮರಿಗೆ ಒಂದು ಮುಖ್ಯ ಕಾರಣ. ಉದಾಹರಣೆಗೆ, ಮೊಸರಿನ ಅತಿಯಾದ ಸೇವನೆ. ಕೇಳಿ ಆಶ್ಚರ್ಯವಾಯಿತೆ? ಆಯು ರ್ವೇದದ ಪ್ರಕಾರ ಮೊಸರನ್ನು ಬಹಳ ಜಾಗರೂಕತೆಯಿಂದ ಬಳಸತಕ್ಕದ್ದು. ಮೊಸರಿನ ಸೇವನೆಗೆ ಹಲವಾರು ನಿಷೇಧಗಳಿವೆ. ಉದಾಹರಣೆಗೆ, ಇದನ್ನು ವಸಂತ, ಗ್ರೀಷ್ಮ ಮತ್ತು ಶರತ್ ಋತುಗಳಲ್ಲಿ ಬಳಸಬಾರದು.

ರಾತ್ರಿಯ ಆಹಾರದ ಜತೆ ಮೊಸರು ಸುತರಾಂ ವರ್ಜ್ಯ. ದೇಹದಲ್ಲಿ ಕಫ ಮತ್ತು ಪಿತ್ತಗಳ ವಿಕೃತಿ ಇರುವವರಿಗೂ ಮೊಸರು ನಿಷಿದ್ಧ. ಶೋಥ, ಪ್ರಮೇಹ, ಕುಷ್ಠ, ವಿಸರ್ಪ, ಜ್ವರ ಮುಂತಾದ ವ್ಯಾಧಿಗಳಲ್ಲಿ ಮೊಸರನ್ನು ಸೇವಿಸಲೇಬಾರದು. ಅಂತೆಯೇ, ಅಶ್ಮರಿ ರೋಗದಲ್ಲೂ ಮೊಸರಿನ ಅನಿಯಮಿತ ಬಳಕೆಯಿಂದ ತೊಂದರೆ ಹೆಚ್ಚಾಗುವುದರ ಜತೆಗೆ ಸಮಸ್ಯೆ ಮರುಕಳಿಸುವ ಸಾಧ್ಯತೆ ಯೂ ಹೆಚ್ಚಾಗುತ್ತದೆ. ಮೊಸರನ್ನು ಸೇವಿಸುವ ಸರಿಯಾದ ಕ್ರಮವೆಂದರೆ- ಇದನ್ನು ಕೇವಲ ಮಳೆಗಾಲ ಮತ್ತು ಚಳಿಗಾಲಗಳಲ್ಲಿ, ಮಧ್ಯಾಹ್ನ ಊಟದೊಂದಿಗೆ ಬಳಸಬಹುದು.

ಬಳಸುವಾಗ ಸ್ವಲ್ಪ ಹೆಸರುಬೇಳೆ ಕಟ್ಟು , ಕಲ್ಲುಸಕ್ಕರೆ, ಜೇನುತುಪ್ಪ ಅಥವಾ ನೆಲ್ಲಿಪುಡಿಗಳನ್ನು ಸೇರಿಸಿ ಬಳಸಬೇಕು. ಅಯ್ಯೋ ಇಷ್ಟೊಂದೆಲ್ಲ ತಲೆಬಿಸಿ ಯಾಕಪ್ಪ?! ಅಂದರೆ, ಮೊಸರಿಗೆ ಅರ್ಧ ಅಂಶದಷ್ಟು ನೀರನ್ನು ಹಾಕಿ, ಚೆನ್ನಾಗಿ ಕಡೆದು, ಮಜ್ಜಿಗೆ ಮಾಡಿಕೊಂಡು, ಸ್ವಲ್ಪ ಒಗ್ಗರಣೆ ಹಾಕಿ ಅದನ್ನು ನಿತ್ಯವೂ ಏನೂ ತೊಂದರೆ ಇಲ್ಲದೆ ಬಳಸಬಹುದು.

6. ಇನ್ನು, ನಿದ್ದೆ ವಿಷಯವನ್ನು ಹೇಳಬೇಕಾದರೆ ಪ್ರಾಕೃತವಾಗಿ ರಾತ್ರಿ ಬೇಗ ಮಲಗಿ, ಬೆಳಗ್ಗೆ ಸೂರ್ಯೋದಯದ ಮುನ್ನ ಏಳುವುದು ಸ್ವಾಸ್ಥ್ಯಕರ. ಆದರೆ, ರಾತ್ರಿ ಜಾಗರಣೆ ಮಾಡಿ ಹಗಲು ನಿದ್ದೆ ಮಾಡುವುದು ಅಥವಾ ರಾತ್ರಿಯೂ ನಿದ್ದೆ ಮಾಡಿ ದಿನದಲ್ಲಿಯೂ ಆಹಾರದ ನಂತರ ಮಲಗುವುದು- ಈ ರೀತಿಯ ಅಭ್ಯಾಸಗಳಿಂದ ಮೂತ್ರಕೋಶದಲ್ಲಿ ಕಲ್ಲು ಆಗುವ ಸಾಧ್ಯತೆಗಳು ಹೆಚ್ಚುತ್ತವೆ.

7. ಆಹಾರದಲ್ಲಿ ಸದಾ ಷಡ್ರಸಗಳ ಸಂತುಲನ ಇರಬೇಕು. ಮಧುರ-ಆಮ್ಲ-ಲವಣ-ಕಟು-ತಿಕ್ತ ಮತ್ತು ಕಷಾಯ ರಸಗಳು ನಿಮ್ಮ ಭೋಜನದಲ್ಲಿ ಹಿತಮಿತವಾಗಿ ಸಂಯೋಜನೆಗೊಂಡಿರಬೇಕು. ಮಧುರ ರಸವು ಅತಿ ಹೆಚ್ಚು ಪ್ರಮಾಣದಲ್ಲಿ ಮತ್ತು ಕಷಾಯ ರಸವು ಅತಿ ಕಡಿಮೆ ಪ್ರಮಾಣದಲ್ಲಿ ಮಿಳಿತ ವಾಗಿರಬೇಕು. ಆದರೆ, ಯಾವುದೋ ಒಂದೇ ರಸವನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುವುದು ಅದರಲ್ಲೂ ಅತಿಯಾಗಿ ಕೇವಲ ಖಾರ ಮತ್ತು ಹುಳಿ ಪ್ರಧಾನವಾದ ಆಹಾರವನ್ನು ಹೆಚ್ಚಾಗಿ ಸೇವಿಸು ವುದರಿಂದ ಅಶ್ಮರಿಯ ಸಮಸ್ಯೆಯು ಪ್ರಾರಂಭವಾಗುತ್ತದೆ.

8. ಅತಿಯಾದ ವ್ಯಾಯಾಮವೂ ಆರೋಗ್ಯಕ್ಕೆ ಹಾನಿಕರ. ಮೂತ್ರಕೋಶದ ಕಲ್ಲಿನ ಉಗಮಕ್ಕೆ ಇದು ನೇರ ಕಾರಣ ಎಂದರೆ ತಪ್ಪಾಗದು. ಆಯುರ್ವೇದದ ಪ್ರಕಾರ ನಮ್ಮ ಅರ್ಧ ಶಕ್ತಿಯಷ್ಟೇ ವ್ಯಾಯಾಮ ವನ್ನು ಮಾಡತಕ್ಕದ್ದು. ಅದರಲ್ಲೂ ಗ್ರೀಷ್ಮ ಋತು ಮತ್ತು ವರ್ಷ ಋತುವಿನಲ್ಲಿ- ಅಂದರೆ ಬೇಸಗೆ ಕಾಲ ಮತ್ತು ಮಳೆಗಾಲದಲ್ಲಿ ನಮ್ಮ ದೇಹಶಕ್ತಿಯು ಅತ್ಯಂತ ಕಡಿಮೆ ಇರುವ ಸಂದರ್ಭದಲ್ಲಿ ವ್ಯಾಯಾಮವನ್ನು ಅತಿ ಮೃದುವಾಗಿ ಮಾಡತಕ್ಕದ್ದು. ಇದನ್ನು ಪಾಲಿಸದೆ ಮನ ಬಂದಂತೆ ನಮ್ಮ ದೇಹದ ಬಲವನ್ನು ಗಮನಿಸದೆ ಮಾಡುವ ವ್ಯಾಯಾಮದಿಂದ ಅಶ್ಮರಿಯಷ್ಟೇ ಅಲ್ಲದೆ ಅನೇಕ ವ್ಯಾಧಿಗಳು ಚಿಗುರೊಡೆಯುತ್ತವೆ.

9. ಜಿಡ್ಡಿನ ಅಂಶ ಇಲ್ಲದ ಒಣ ಆಹಾರದ ಸೇವನೆಯೂ ಈ ರೋಗಕ್ಕೆ ಮುಖ್ಯ ಕಾರಣ. ತುಪ್ಪ ತಿಂದರೆ ತೊಂದರೆಯಾಗುತ್ತದೆ ಎಂದು ನಂಬಿ ನಾವೆಲ್ಲರೂ ಅಮೃತ ಸಮನಾದ ಈ ಒಳ್ಳೆಯ ಜಿಡ್ಡನ್ನು ಮರೆತುಬಿಟ್ಟಿದ್ದೇವೆ. ಒಳ್ಳೆಯ ಜಿಡ್ಡಿನಂಶವಿರದ ಆಹಾರವು ಎಂದಿಗೂ ತೊಂದರೆದಾಯಕ. ಹಸಿವನ್ನು ಗಮನಿಸಿ, ಜೀರ್ಣಶಕ್ತಿ ಚೆನ್ನಾಗಿದ್ದಾಗ, ಬಿಸಿ ಆಹಾರದಲ್ಲಿ ಕನಿಷ್ಠ ಒಂದು ಚಮಚ ಹಸುವಿನ ತುಪ್ಪವನ್ನು ಸೇರಿಸಿಕೊಂಡರೆ ಅದು ಸದಾ ರಕ್ಷಾಕವಚವಾಗಿ ನಮ್ಮನ್ನು ಕಾಪಾಡುತ್ತದೆ.

ಇನ್‌ಸ್ಟಂಟ್ ಆಹಾರಗಳು, ಟಿನ್ಡ್/ಕ್ಯಾ ಆಹಾರ ಮತ್ತು ಡೀಹೈಡ್ರೇಟೆಡ್ (ಒಣಗಿಸಿದ) ಆಹಾರಗಳು ಸಹ ಇದೇ ಗುಂಪಿಗೆ ಸೇರಿದ್ದು, ಇವು ಆರೋಗ್ಯವನ್ನು ಹಾಳುಮಾಡುವುದರಲ್ಲಿ ಸಂಶಯವಿಲ್ಲ.

10. ಮತ್ತೊಂದು ಮುಖ್ಯವಾದ ಕಾರಣವೆಂದರೆ ಮಲ ಮತ್ತು ಮೂತ್ರ ವೇಗಗಳನ್ನು ಬಲವಂತವಾಗಿ ತಡೆಯುವುದು ಅಥವಾ ಪ್ರಯತ್ನಪೂರ್ವಕವಾಗಿ ಹೊರಹಾಕುವುದರಿಂದಲೂ ಅಶ್ಮರೀ ರೋಗವು ಕಾಣಿಸಿಕೊಳ್ಳುತ್ತದೆ. ಕೆಲಸದ ಒತ್ತಡ/ಪ್ರಯಾಣ/ಆಲಸ್ಯ ಅಥವಾ ಪರಿಸ್ಥಿತಿಗಳಿಂದ ನಾವು ಸುಮಾರು ಬಾರಿ ಮಲ ಮತ್ತು ಮೂತ್ರದ ವೇಗಗಳನ್ನು ತಡೆಯುತ್ತೇವೆ. ಆಯುರ್ವೇದದ ಪ್ರಕಾರ ಇದು ಹಲವಾರು ರೋಗಗಳಿಗೆ ನಾಂದಿ. ಹಾಗಾಗಿ ವೇಗಧಾರಣೆ ಇರಲಿ ಅಥವಾ ಬಲವಂತವಾಗಿ ಇಲ್ಲದ ವೇಗವನ್ನು ಉದೀರಣೆ ಮಾಡುವುದು ಸಹ ಸ್ವಾಸ್ಥ್ಯ ನಾಶಕ.

11. ಅತಿಯಾದ ಮದ್ಯಪಾನ ಮತ್ತು ತೀಕ್ಷ್ಣ ಔಷಧಿಗಳ ಅನಿಯಮಿತ ಸೇವನೆಯೂ ಅಶ್ಮರಿ ರೋಗಕ್ಕೆ ಕಾರಣವಾಗಬಹುದು. ತಲೆನೋವಿಗೊಂದು ಮಾತ್ರೆ, ಹೊಟ್ಟೆ ನೋವಿಗೊಂದು, ವಾಂತಿಗೊಂದು, ಬೇಧಿಗೊಂದು ಮಾತ್ರೆ- ಹೀಗೆ ಸಣ್ಣ ಸಣ್ಣ ವಿಷಯಗಳಿಗೂ ಮಾತ್ರೆಗಳನ್ನು ನುಂಗುವ ಜನರಿಗೆ ಅಶ್ಮರಿ ರೋಗವು ಕಟ್ಟಿಟ್ಟಬುತ್ತಿ ಆಗುತ್ತದೆ.

12. ಕಾಲಕಾಲಕ್ಕೆ ಪಂಚಕರ್ಮದ ಶೋಧನ- ಅಂದರೆ ಚಿಕಿತ್ಸೋಪಾಯ ವಾಂತಿ/ಬೇಧಿ ಇತ್ಯಾದಿ ಗಳನ್ನು ಮಾಡಿಸುವ ಮೂಲಕ ಶರೀರವನ್ನು ಶುದ್ಧಿಗೊಳಿಸುವ ಕ್ರಿಯೆ- ಇದನ್ನು ಮಾಡದೇ ಇರುವು ದರಿಂದಲೂ ಶರೀರದಲ್ಲಿ ಕಫ ಪ್ರಧಾನವಾದ ದೋಷಗಳು ಹೆಚ್ಚಾಗಿ ಅಶ್ಮರೀ ರೋಗವನ್ನು ಉಂಟು ಮಾಡುತ್ತವೆ.

13. ‘ಉಷ್ಣಂ ಅಶ್ನೀಯಾತ್’ ಅನ್ನುವುದು ಆಯುರ್ವೇದದ ಸೂತ್ರ. ಸದಾ ಉಷ್ಣವಿರುವ ಅಂದರೆ ಬಿಸಿ ಇರುವ ಆಹಾರವು ಆರೋಗ್ಯವನ್ನು ಕಾಪಾಡುತ್ತದೆ. ಇದಕ್ಕೆ ವಿರುದ್ಧವಾದ ಐಸ್ ಕ್ರೀಮ್, ಜ್ಯೂಸ್, ಮಿಲ್ಕ್ ಶೇಕ್, ಸ್ಮೂದೀಸ್ ಅಥವಾ ಫ್ರಿಜ್‌ನಲ್ಲಿ ಶೇಖರಿಸಿ ಸೇವಿಸುವ ಆಹಾರಗಳು ಸಹ ಮೂತ್ರಪಿಂಡದ ಕಲ್ಲುಗಳನ್ನು ಹೆಚ್ಚು ಮಾಡುತ್ತವೆ. ಅಂತೆಯೇ ತಂಪಾದ ಪಾನೀಯಗಳ ಅನಿಯಮಿತ ಸೇವನೆಯೂ ಇದಕ್ಕೆ ಮುಖ್ಯ ಕಾರಣ. ‌

14. ಮಧುರ ರಸ ಪ್ರಧಾನವಾದ ಆಹಾರವನ್ನು ಹೆಚ್ಚಾಗಿ ಸೇವಿಸುವುದು. ಉದಾಹರಣೆಗೆ, ಕಬ್ಬಿನ ಹಾಲು, ಮೊಸರು, ಎಳ್ಳಿನ ಸಿಹಿ ಪದಾರ್ಥಗಳು ಇವು ಸಹ ಮುಖ್ಯ ಕಾರಣವಾಗುತ್ತವೆ.

15. ಹುಳಿಬಂದ ಹಿಟ್ಟಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು ಅದರಲ್ಲೂ ವಿಶೇಷವಾಗಿ ರಾತ್ರಿ ಸಮಯದಲ್ಲಿ, ಜೀರ್ಣಶಕ್ತಿ ಕಡಿಮೆ ಇದ್ದಾಗ ಸೇವಿಸುವುದು ಒಳ್ಳೆಯದಲ್ಲ. ಉದಾಹರಣೆಗೆ, ನಿತ್ಯವೂ ತಿಂಡಿಗೆ ಇಡ್ಲಿ/ದೋಸೆಗಳನ್ನು ಸೇವಿಸುವುದು ಅಥವಾ ರಾತ್ರಿ ಪುನಃ ಚಪಾತಿ/ದೋಸೆ/ಇಡ್ಲಿಗಳನ್ನು ಸೇವಿಸುವ ಅಭ್ಯಾಸವು ಹಲವರಿಗೆ ತೊಂದರೆ ಮಾಡಬಹುದು.

16. ವಿರುದ್ಧ ಆಹಾರಗಳನ್ನು ಸೇವಿಸುವುದೂ ರೋಗೋತ್ಪತ್ತಿಗೆ ಒಂದು ಕಾರಣ. ಉದಾಹರಣೆಗೆ, ಮೊಸರಿನ ಜತೆಗೆ ಕರಿದ ಪದಾರ್ಥಗಳನ್ನು ಸೇವಿಸುವುದು. ಬಾಳೆಹಣ್ಣಿನೊಂದಿಗೆ ಹಾಲನ್ನು ಸೇವಿಸುವುದು, ಮೊಸರನ್ನಕ್ಕೆ ಹಾಲನ್ನು ಬೆರೆಸುವುದು, ಮೊಸರನ್ನು ಬಿಸಿ ಮಾಡುವುದು ಅಥವಾ ಬಿಸಿ ಅಡುಗೆಗೆ ಬಳಸುವುದು, ಜೇನುತುಪ್ಪವನ್ನು ಬಿಸಿನೀರಿನಲ್ಲಿ ಸೇವಿಸುವುದು, ಹಾಲಿನ ಜತೆ ಉಪ್ಪು ಅಥವಾ ಖಾರದ ಖಾದ್ಯಗಳನ್ನು ಸೇವಿಸುವುದು- ಈ ರೀತಿಯ ಪರಸ್ಪರ ಒಂದಕ್ಕೊಂದು ಹೊಂದದ ಪದಾರ್ಥಗಳನ್ನು ಒಮ್ಮೆಗೆ ಸೇವಿಸುವುದರಿಂದಲೂ ಕಲ್ಲಿನ ಸಮಸ್ಯೆ ಹೆಚ್ಚಾಗುತ್ತದೆ.

17. ಅತಿಯಾದ ಪ್ರಯಾಣ/ರಾತ್ರಿ ಪ್ರಯಾಣ ಮತ್ತು ಹಾಳಾದ ರಸ್ತೆಗಳಲ್ಲಿ ಅನಿಯಮಿತ ಪ್ರಯಾಣ ದಿಂದಲೂ ಅಶ್ಮರಿ ರೋಗ ಕಾಣಿಸಿಕೊಳ್ಳಬಹುದು. ಮೇಲೆ ಹೇಳಿದ ಕಾರಣಗಳಿಂದ ದೇಹದಲ್ಲಿ ಅದರಲ್ಲೂ ವಿಶೇಷವಾಗಿ ಮೂತ್ರಕೋಶದಲ್ಲಿ ಕಲ್ಲು ಹೇಗೆ ಉತ್ಪತ್ತಿಯಾಗುತ್ತದೆ ಎಂಬ ವಿಶೇಷ ವಿಷಯವನ್ನು ಈಗ ತಿಳಿದುಕೊಳ್ಳೋಣ. ಮೇಲೆ ಹೇಳಿದ ಕೆಲವು ಕಾರಣಗಳಿಂದ ಜಠರದಲ್ಲಿ ಕಫ ಪ್ರಧಾನವಾದ ದೋಷಗಳು ಸ್ವಲ್ಪ ಸ್ವಲ್ಪವೇ ಶೇಖರಣೆಗೊಳ್ಳಲು ಪ್ರಾರಂಭವಾಗುತ್ತದೆ.

ಇನ್ನುಳಿದ ಕೆಲವು ಕಾರಣಗಳಿಂದ ಜಠರದಲ್ಲಿರುವ ಈ ತ್ರಿದೋಷಗಳು ಮೂತ್ರಕೋಶವನ್ನು ತಲುಪುತ್ತವೆ. ಉದಾಹರಣೆಗೆ, ಅತಿಯಾದ ನೀರು ಸೇವನೆ, ಅತಿಯಾದ ವ್ಯಾಯಾಮ, ಅತಿಯಾದ ಪ್ರಯಾಣಗಳು ಮೂತ್ರಕೋಶಕ್ಕೆ ದೋಷಗಳನ್ನು ತಂದುಬಿಡುತ್ತವೆ. ಯಾವ ರೀತಿ ಬೇಸಗೆಯಲ್ಲಿ ಕೆಸರುಮಿಶ್ರಿತ ನೀರಿನಿಂದ, ಬಿಸಿಲು ಮತ್ತು ಗಾಳಿಗೆ ಅದರಲ್ಲಿರುವ ನೀರು ಆವಿಯಾಗಿ ಕೆಸರು ಗಟ್ಟಿಯಾಗುತ್ತದೆಯೋ,

ಅದೇ ರೀತಿ ಬಹಳ ಸಮಯದಿಂದ ಮೂತ್ರಕೋಶದಲ್ಲಿ ಶೇಖರಣೆಯಾಗಿದ್ದ ದೋಷಗಳು ವಾತ ದೋಷದಿಂದ ಒಣಗಿ, ಪಿತ್ತ ದೋಷದ ಶಾಖದಿಂದ ಮತ್ತಷ್ಟು ಗಟ್ಟಿಯಾಗಿ ಕಲ್ಲಿನ ಸ್ವರೂಪವನ್ನು ತಳೆಯುತ್ತವೆ.

ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು- ಹೆಚ್ಚಾಗಿ ನೀರು ಕುಡಿದರೆ ಬಾಡಿ ಕ್ಲೀನಾಗಿ, ಕಲ್ಲಿನ ಸಮಸ್ಯೆ ನಿವಾರಣೆಯಾಗಬೇಕಲ್ಲವೇ? ಅಂತ. ನೋಡಿ ಸ್ನೇಹಿತರೆ, ಮಳೆಗಾಲದಲ್ಲಿ ಮಾತ್ರ ನದಿಯ ನೀರು ಕೆಂಪಾಗಿ ಕಾಣಲು ಕಾರಣವೇನು? ಮಳೆಗಾಲದಲ್ಲಿ ಅತಿಯಾದ ನೀರು ಮತ್ತು ರಭಸದಿಂದ ಅದು ಹರಿಯುವಾಗ ಅಕ್ಕ ಪಕ್ಕದ ಮಣ್ಣನ್ನೆ ಕೊಚ್ಚಿಕೊಂಡು ಹೋಗುವುದರಿಂದ ಮಳೆಗಾಲದಲ್ಲಿ ನೀರು ಕೆಂಪಾಗಿ ಕಾಣುತ್ತದೆ. ಅಲ್ಲವೇ? ಇದೇ ರೀತಿ ನಮ್ಮ ಶರೀರದಲ್ಲಿಯೂ ಆಗುತ್ತದೆ.

ಶರೀರಕ್ಕೆ ನೀರು ಎಷ್ಟು ಬೇಕು ಅಷ್ಟು ಮಾತ್ರ ಕುಡಿಯತಕ್ಕದ್ದು. ಆದರೆ, ಅeನದಿಂದ ಅತಿಯಾದ ನೀರನ್ನು ಸೇವಿಸಲು ನಾವು ಪ್ರಾರಂಭಿಸಿದರೆ ಈ ಹೆಚ್ಚಾದ ನೀರು ಮೂತ್ರದ ರೂಪದಲ್ಲಿ ದೇಹದಿಂದ ಹೊರಗೆ ಹೋಗಲೇಬೇಕು. ಜಠರದ ಮೂಲಕವೇ ಈ ಅತಿಯಾದ ನೀರು ಹರಿಯುತ್ತದೆ. ಜಠರದ ಕೊನೆಯ ಭಾಗದಲ್ಲಿ ಆಹಾರದ ಪಚನಾನಂತರ ಅಧಿಕವಿರುವ ನೀರಿನಂಶವು ಅಲ್ಲಿಂದ ಸಣ್ಣ ಸಣ್ಣ ರಂಧ್ರಗಳಿಂದ ಹೀರಿಕೊಂಡು, ಮೂತ್ರಕೋಶಕ್ಕೆ ಹೋಗುತ್ತದೆ.

ಹೀಗೆ ಹೋಗುವಾಗ ಜಠರದಲ್ಲಿ, ನಾನು ಮೇಲೆ ಹೇಳಿದ ಕಾರಣಗಳಿಂದ ಶೇಖರಣೆಗೊಂಡ ದೋಷ ಗಳು ಕೂಡ ಅದರ ಜತೆ ಹೋಗಿ ಮೂತ್ರಕೋಶದಲ್ಲಿ ಸೇರಿಕೊಂಡು ಮುಂದೊಂದು ದಿನ ಕಗಿ ಪರಿವರ್ತನೆಗೊಳ್ಳುತ್ತದೆ. ಮೂತ್ರದಲ್ಲಿ ಕಲ್ಲಿನ ಉತ್ಪತ್ತಿ ಆಗುವ ಸಮಯದಲ್ಲಿ ಅಥವಾ ಕಲ್ಲು ಪೂರ್ಣವಾಗಿ ಉತ್ಪತ್ತಿಯಾದ ನಂತರ ಕೆಲವು ಲಕ್ಷಣಗಳನ್ನು ನಾವು ಗಮನಿಸಬಹುದು:

ಕೆಳ ಹೊಟ್ಟೆಯಲ್ಲಿ ನೋವು

ಮೂತ್ರ ಪ್ರವೃತ್ತಿಯಾಗುವಾಗ ಉರಿ

ಆಹಾರ ರುಚಿಸದೇ ಇರುವುದು

ಕಷ್ಟದಿಂದ ಮೂತ್ರ ಪ್ರವೃತ್ತಿಯಾಗುವುದು

ಮೂತ್ರದಲ್ಲಿ ವಾಸನೆ

ಒಮ್ಮೆ ಕಲ್ಲು ಉಂಟಾದ ನಂತರ, ಮೂತ್ರ ವಿಸರ್ಜಿಸುವಾಗ ಹೊಕ್ಕಳಿನಲ್ಲಿ ಮತ್ತು ಮೂತ್ರಮಾರ್ಗ ದಲ್ಲಿ ತೀವ್ರವಾದ ನೋವು

ಕೆಲವೊಮ್ಮೆ ರಕ್ತಯುಕ್ತ ಮೂತ್ರ ಪ್ರವೃತ್ತಿ

ಮೂತ್ರವು ಸಣ್ಣ ಸಣ್ಣ ಕಣಗಳಿಂದ ಕೂಡಿರುವುದು

ಓಡಿದಾಗ, ನಡೆದಾಗ, ಬಿಸಿಲಿಗೆ ಹೋದಾಗ ಇತ್ಯಾದಿ ಸಂದರ್ಭಗಳಲ್ಲಿ ನೋವು ಹೆಚ್ಚಾಗುವುದು

ದೇಹದ ಉಷ್ಣಾಂಶ ಹೆಚ್ಚಾದ ಅನುಭವ.

ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ವೈದ್ಯರ ಸಲಹೆಯನ್ನು ಪಡೆಯುವುದು ಮುಖ್ಯ. ಜತೆಗೆ, ಮೇಲೆ ಹೇಳಿದಂಥ ಎಲ್ಲಾ ಕಾರಣಗಳನ್ನು ತ್ಯಜಿಸತಕ್ಕದ್ದು. ಕಾಲಕಾಲಕ್ಕೆ ಹಸಿವೆ ಇದ್ದಾಗ ಮಾತ್ರ ಆಹಾರವನ್ನು ಸೇವಿಸಬೇಕು. ನಿಯಮಿತವಾದ ವ್ಯಾಯಾಮ ಮಾಡಬೇಕು. ಪ್ರತಿ ದಿನವೂ ಸ್ನಾನದ ಮೊದಲು ಮೈಗೆ ಎಣ್ಣೆ ಹಚ್ಚಿ ನಂತರ ಸ್ನಾನ ಮಾಡಬೇಕು.

ವೈದ್ಯರ ಸಲಹೆಯ ಮೇರೆಗೆ ಆಹಾರದಲ್ಲಿ ಸೌತೆಕಾಯಿ, ಹುರುಳಿ, ಬಾಳೆದಿಂಡು, ಬೂದುಗುಂಬಳ, ನುಗ್ಗೆ ಸೊಪ್ಪು, ನೆಗ್ಗಿಲ ಮುಳ್ಳು, ಪಡವಲಕಾಯಿ, ಮಜ್ಜಿಗೆ, ಎಳನೀರು, ಒಣದ್ರಾಕ್ಷಿ, ದಾಳಿಂಬೆ, ಬಾರ್ಲಿ ಮುಂತಾದವುಗಳನ್ನು ಸಮಯೋಚಿತವಾಗಿ ಬಳಸತಕ್ಕದ್ದು.

ಹೀಗೆ ಮಾಡಿದ್ದೇ ಆದರೆ ದೇಹದಲ್ಲಿ ಕಲುಷಿತಗೊಂಡ ನೀರು ನಿಧಾನವಾಗಿ ತಿಳಿಯಾಗಿ, ಜಠರ ಮತ್ತು ಮೂತ್ರಾಶಯಗಳು ಸ್ವಚ್ಛಗೊಂಡು ತನ್ಮೂಲಕ ಮೂತ್ರಕೋಶದಲ್ಲಿ ಸಂಭವಿಸಬಹುದಾದ ಕಲ್ಲನ್ನು ತಡೆಯುವುದರ ಜತೆಗೆ, ಈಗಾಗಲೇ ಉಂಟಾದ ಕಲ್ಲನ್ನು ಕೂಡ ಸುಲಭವಾಗಿ ಕರಗಿಸಬಹುದು. ಬನ್ನಿ ಆಯುರ್ವೇದೋಕ್ತ ಶಿಸ್ತಿನ ಜೀವನವನ್ನು ನಮ್ಮದಾಗಿಸಿಕೊಳ್ಳೋಣ.