Roopa Gururaj Column: ಸದ್ದಿಲ್ಲದೆ ನೂರಾರು ಜೀವಗಳನ್ನು ಉಳಿಸಿದ ನೀರಜಾ ಭಾನೋಟ್
ಗುಂಡುಗಳು ಹಾರುತ್ತಿದ್ದರೂ ನೀರಜಾ ತಲೆ ಕೆಡಿಸಿಕೊಳ್ಳಲಿಲ್ಲ. ಮೂವರು ಮಕ್ಕಳಿಗೆ ಗುಂಡು ತಗಲದಂತೆ ಅವರು ತಮ್ಮ ದೇಹವನ್ನೇ ಗುರಾಣಿಯಾಗಿ ಅಡ್ಡ ಹಿಡಿದರು. ಆ ವೇಳೆ ಉಗ್ರರ ಗುಂಡುಗಳಿಗೆ ನೀರಜಾ ಬಲಿಯಾದರು. ಆ ದಾಳಿಯಲ್ಲಿ ನೀರಜಾ ಸೇರಿದಂತೆ 20 ಜನರು ಪ್ರಾಣ ಕಳೆದುಕೊಂಡರು, ಆದರೆ ಉಳಿದ ನೂರಾರು ಪ್ರಯಾಣಿಕರು ನೀರಜಾ ಅವರ ಅಪ್ರತಿಮ ಧೈರ್ಯದಿಂದಾಗಿ ಬದುಕುಳಿದರು.
-
ಒಂದೊಳ್ಳೆ ಮಾತು
1986ರ ಸೆಪ್ಟೆಂಬರ್ 5ರ ಮುಂಜಾನೆ. ಕರಾಚಿ ವಿಮಾನ ನಿಲ್ದಾಣದ ರನ್ ವೇ ಮೇಲೆ ‘ಪ್ಯಾನ್ ಆಮ್ 73’ ವಿಮಾನ ನಿಂತಿತ್ತು. ಮುಂಬೈನಿಂದ ಫ್ರಾಂಕ್ʼಫರ್ಟ್ ಮೂಲಕ ನ್ಯೂಯಾರ್ಕ್ಗೆ ಹೊರಡ ಬೇಕಿದ್ದ ಆ ವಿಮಾನದಲ್ಲಿ ನೂರಾರು ಪ್ರಯಾಣಿಕರಿದ್ದರು. ಅಂದು ಆ ವಿಮಾನದಲ್ಲಿ ಹಿರಿಯ ಪರ್ಸರ್ (ವಿಮಾನ ಪರಿಚಾರಕಿ) ಯಾಗಿ ಕರ್ತವ್ಯದಲ್ಲಿದ್ದವರು 22 ವರ್ಷದ ಭಾರತೀಯ ಯುವತಿ ನೀರಜಾ ಭಾನೋಟ್. ಅಂದು ಮುಂಜಾನೆ ನಡೆದ ಆ ಘಟನೆ ನೀರಜಾರ ಹೆಸರನ್ನು ಇತಿಹಾಸದಲ್ಲಿ ಅಜರಾಮರಗೊಳಿಸುತ್ತವೆ ಎಂದು ಯಾರೂ ಊಹಿಸಿರಲಿಲ್ಲ.
ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನಕ್ಕೆ ನಾಲ್ವರು ಸಶಸ ಪ್ಯಾಲೆಸ್ತೀನಿಯನ್ ಉಗ್ರರು ನುಗ್ಗಿದರು. ವಿಮಾನವನ್ನು ಸೈಪ್ರಸ್ಗೆ ಕೊಂಡೊಯ್ಯಬೇಕೆಂದು ಅವರು ಆಗ್ರಹಿಸಿದರು. ವಿಮಾನದ ಒಳಗೆ ಆತಂಕ ಮನೆಮಾಡಿತ್ತು, ಅಂಥ ಸಮಯದಲ್ಲೂ ನೀರಜಾ ಸಮಯಪ್ರಜ್ಞೆ ಮೆರೆದರು. ಅವರು ರಹಸ್ಯವಾಗಿ ಹೈಜಾಕ್ ಸಂಕೇತವನ್ನು ಪೈಲಟ್ಗಳಿಗೆ ರವಾನಿಸಿದರು.
ಇದರಿಂದಾಗಿ ಪೈಲಟ್ಗಳು ಕಾಕ್ಪಿಟ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ವಿಮಾನವನ್ನು ಹಾರಿಸಲು ಪೈಲಟ್ಗಳೇ ಇಲ್ಲದಂತಾದಾಗ, ವಿಮಾನವು ನೆಲದ ಮೇಲೆಯೇ ಉಳಿಯುವಂತಾಯಿತು. ನಿರಜಾ ಅವರ ಈ ಒಂದು ನಿರ್ಧಾರ ಸಾವಿರಾರು ಜೀವಗಳನ್ನು ಕಾಪಾಡಿತು.
ಇದನ್ನೂ ಓದಿ: Roopa Gururaj Column: ಅಂತರ್ಶಕ್ತಿ ಒಂದೇ ಬದುಕಲು ಪ್ರೇರಣೆ
ಮುಂದಿನ 17 ಗಂಟೆಗಳ ಕಾಲ ವಿಮಾನದ ಒಳಗಿದ್ದ ಪ್ರಯಾಣಿಕರು ಮೃತ್ಯುವಿನ ನೆರಳಿನಲ್ಲಿ ಕಳೆದರು. ಈ ಸಂಕಷ್ಟದ ಸಮಯದಲ್ಲಿ ನೀರಜಾ ಪ್ರತಿಯೊಬ್ಬ ಪ್ರಯಾಣಿಕನಿಗೂ ಧೈರ್ಯ ತುಂಬು ತ್ತಾ, ಅವರಿಗೆ ಆಹಾರ ಮತ್ತು ನೀರನ್ನು ನೀಡುತ್ತಾ ಓಡಾಡುತ್ತಿದ್ದರು. ಉಗ್ರರು ಅಮೆರಿಕನ್ ಪ್ರಜೆ ಗಳನ್ನು ಗುರಿಯಾಗಿಸಲು ಅವರ ಪಾಸ್ʼಪೋರ್ಟ್ಗಳನ್ನು ಸಂಗ್ರಹಿಸಲು ಸೂಚಿಸಿದಾಗ, ನೀರಜಾ ಜಾಣ್ಮೆಯಿಂದ ಅನೇಕ ಪಾಸ್ಪೋರ್ಟ್ʼಗಳನ್ನು ಸೀಟಿನ ಕೆಳಗೆ ಮತ್ತು ಕಸದ ಬುಟ್ಟಿಯಲ್ಲಿ ಅಡಗಿಸಿಟ್ಟರು. ಇದು ಅವರ ಜೀವಕ್ಕೇ ಅಪಾಯ ತರುವ ಕೆಲಸವಾಗಿತ್ತು, ಆದರೂ ಅವರು ಅಂಜಲಿಲ್ಲ. ಸಮಯ ಕಳೆದಂತೆ ಉಗ್ರರಲ್ಲಿ ತಾಳ್ಮೆ ಕಡಿಮೆಯಾಯಿತು. ವಿಮಾನದ ಒಳಗಿನ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಉಗ್ರರು ಏಕಾಏಕಿ ಗುಂಡಿನ ದಾಳಿ ಮತ್ತು ಗ್ರೆನೇಡ್ ದಾಳಿ ನಡೆಸಲಾರಂಭಿಸಿದರು. ಆ ಕ್ಷಣದಲ್ಲಿ ನೀರಜಾ ಮನಸ್ಸು ಮಾಡಿದ್ದರೆ ಮೊದಲು ತಾವೇ ಹೊರಹಾರಿ ಪ್ರಾಣ ಉಳಿಸಿಕೊಳ್ಳಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಅವರು ತುರ್ತು ನಿರ್ಗಮನ ದ್ವಾರವನ್ನು ತೆರೆದು, ಪ್ರಯಾಣಿಕರು ಹೊರ ಹೋಗಲು ದಾರಿ ಮಾಡಿಕೊಟ್ಟರು. ಗುಂಡುಗಳು ಹಾರುತ್ತಿದ್ದರೂ ನೀರಜಾ ತಲೆ ಕೆಡಿಸಿಕೊಳ್ಳಲಿಲ್ಲ. ಮೂವರು ಮಕ್ಕಳಿಗೆ ಗುಂಡು ತಗಲದಂತೆ ಅವರು ತಮ್ಮ ದೇಹವನ್ನೇ ಗುರಾಣಿಯಾಗಿ ಅಡ್ಡ ಹಿಡಿದರು. ಆ ವೇಳೆ ಉಗ್ರರ ಗುಂಡುಗಳಿಗೆ ನೀರಜಾ ಬಲಿಯಾದರು. ಆ ದಾಳಿಯಲ್ಲಿ ನೀರಜಾ ಸೇರಿದಂತೆ 20 ಜನರು ಪ್ರಾಣ ಕಳೆದುಕೊಂಡರು, ಆದರೆ ಉಳಿದ ನೂರಾರು ಪ್ರಯಾಣಿಕರು ನೀರಜಾ ಅವರ ಅಪ್ರತಿಮ ಧೈರ್ಯದಿಂದಾಗಿ ಬದುಕುಳಿದರು.
ಇಂದು ಬದುಕಿರುವ ಆ ಪ್ರತಿಯೊಬ್ಬ ಪ್ರಯಾಣಿಕನೂ ತಾನು ಇಂದು ಉಸಿರಾಡುತ್ತಿರುವುದು ಆ ಅಪರಿಚಿತ ಯುವತಿಯ ತ್ಯಾಗದಿಂದ ಎಂದು ಸ್ಮರಿಸುತ್ತಾರೆ. ನೀರಜಾ ಭಾನೋಟ್ ಅವರ ಈ ಸಾಹಸಕ್ಕಾಗಿ ಭಾರತ ಸರಕಾರವು ಅವರಿಗೆ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ‘ಅಶೋಕ ಚಕ್ರ’ವನ್ನು ಮರಣೋತ್ತರವಾಗಿ ನೀಡಿ ಗೌರವಿಸಿತು.
ಈ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ವ್ಯಕ್ತಿ ನೀರಜಾ. ಪಾಕಿಸ್ತಾನ ಮತ್ತು ಅಮೆರಿಕ ದೇಶಗಳು ಸಹ ಅವರ ತ್ಯಾಗವನ್ನು ಗೌರವಿಸಿವೆ. ನೀರಜಾ ಕೇವಲ ತಮ್ಮ ವೃತ್ತಿಯನ್ನು ನಿರ್ವಹಿಸಲಿಲ್ಲ, ಜತೆಗೆ ಮಾನವೀಯತೆಯ ಪರಮೋಚ್ಚ ಕರ್ತವ್ಯವನ್ನೂ ನಿಭಾಯಿಸಿದರು.
ಧೈರ್ಯ ಎನ್ನುವುದು ಬರೀ ಕೂಗಾಡುವುದಲ್ಲ, ಸಂಕಷ್ಟದ ಸಮಯದಲ್ಲಿ ಶಾಂತವಾಗಿ ನಿಂತು ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು. ಸಂಕಷ್ಟ ಬಂದಾಗ ಸಹಜವಾಗಿ ನಾವು ನಮ್ಮ ಉಳಿವಿನ ಬಗ್ಗೆ ಯೋಚಿಸುತ್ತೇವೆ. ಕೆಲವೊಮ್ಮೆ ತಮ್ಮ ಮಕ್ಕಳನ್ನೇ ಕೈಬಿಟ್ಟು ಹೊರಟುಬಿಡುವ ತಂದೆ-ತಾಯಿಗಳೂ ಇದ್ದಾರೆ. ಆದರೆ ಗುರುತು ಪರಿಚಯ ಇಲ್ಲದ ನೂರಾರು ಜೀವಗಳನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣವಾಗಿಟ್ಟ ನೀರಜಾ ಬದುಕು, ತ್ಯಾಗ ನಮಗೆಲ್ಲ ಪ್ರೇರಣೆಯಾಗಲಿ. ಸಂಕಷ್ಟ ದಲ್ಲಿರುವವರಿಗೆ ಸಾಂತ್ವನ ನೀಡುವಷ್ಟು ಮಾನವೀಯತೆಯಾದರೂ ಉಳಿಯಲಿ.