ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ಬ್ರಹ್ಮಾಂಡ ಗುರುವಿಗೂ ಉತ್ತರ ಗೊತ್ತಿಲ್ಲದ ಪ್ರಶ್ನೆಗಳು !

ಭೂಮಿಯ ಸಮುದ್ರದ ಒಳಗಿನ ನೆಲವನ್ನು ಮ್ಯಾಪಿಂಗ್ ಮಾಡಿ, ಆಲ ಅಗಲ ತಿಳಿದಾಗಿದೆ. ಅಣು ವನ್ನು ವಿಭಜಿಸಿ ನೋಡಿ ಆಗಿದೆ. ಚಂದ್ರನ ಮೇಲೆ ಕಾಲಿಟ್ಟಾಗಿದೆ, ಆ ಬಗ್ಗೆ ಅನುಮಾನವೂ ಇದೆ. ಜೀವತಂತು ಡಿಎನ್‌ಎ ರಚನೆಯನ್ನು ತಿಳಿದಾಗಿದೆ. ಇಂಟರ್ನೆಟ್, ಮೊಬೈಲ್, ಸ್ಯಾಟಲೈಟ್, ಕೃತಕ ಬುದ್ಧಿಮತ್ತೆ.. ಹೀಗೆ ಪಟ್ಟಿಯೇ ಉದ್ದ. ಹಾಗಾದರೆ ನಮಗೆ ಎಲ್ಲವೂ ತಿಳಿದಿದೆಯೇ? ಕೆಲ ವೊಂದಿಷ್ಟು ದೊಡ್ಡ ದೊಡ್ಡ ಪ್ರಶ್ನೆಗಳಿವೆ. ಅವುಗಳನ್ನು ನಿಖರವಾಗಿ, ದ್ವಂದ್ವವಿಲ್ಲದೆ ವಿವರಿಸಲು ವಿಜ್ಞಾನಕ್ಕೆ ಇಂದಿಗೂ ಸಾಧ್ಯವಾಗಿಲ್ಲ. ಇಂದಿಗೂ ಅವು ಬಗೆಹರಿಯದ ರಹಸ್ಯಗಳು.

ಬ್ರಹ್ಮಾಂಡ ಗುರುವಿಗೂ ಉತ್ತರ ಗೊತ್ತಿಲ್ಲದ ಪ್ರಶ್ನೆಗಳು !

ಶಿಶಿರಕಾಲ

shishirh@gmail.com

ಮನುಷ್ಯರಾದ ನಮಗೆ ಏನೇನೆಲ್ಲ ಗೊತ್ತಿದೆ, ಎಷ್ಟೆ ತಿಳಿದಿದೆ ಎಂಬುದನ್ನು ಗಮನಿಸಿದಾಗ ಆಶ್ಚರ್ಯ ವಾಗುತ್ತದೆ. ಈಗ ಎರಡು ವರ್ಷದ ಹಿಂದಿನ ಸುದ್ದಿ. ಅಮೆರಿಕನ್ನರು ಅಂತರಿಕ್ಷಕ್ಕೆ ಬಿಟ್ಟ ಹಬಲ್ ಟೆಲಿಸ್ಕೋಪ್ ಮೂಲಕ, ಅತ್ಯಂತ ದೂರದ ನಕ್ಷತ್ರವೊಂದು ಇರುವುದು ತಿಳಿಯಿತು. ಎಷ್ಟು ದೂರ? ವಿಸ್ತರಿಸುತ್ತಿರುವ ಬ್ರಹ್ಮಾಂಡವನ್ನು ಒಂದು ಕ್ಷಣ ನಿಲ್ಲಿಸಿ ಭೂಮಿ ಮತ್ತು ಆ ನಕ್ಷತ್ರದ ನಡುವಿನ ದೂರ ಲೆಕ್ಕ ಹಾಕಿದರೆ, 28 ಬಿಲಿಯನ್ ಜ್ಯೋತಿರ್ವರ್ಷ! ಎಷ್ಟಪ್ಪಾ ಅಂದರೆ ಬೆಳಕಿಗೆ ಅಷ್ಟು ದೂರ ಕ್ರಮಿಸಲು 2800 ಕೋಟಿ ವರ್ಷ ಬೇಕು.

ಆ ನಕ್ಷತ್ರ ಮತ್ತು ನಮ್ಮ ನಡುವೆ ಲಕ್ಷಾಂತರ ನಕ್ಷತ್ರಗಳಿವೆ; ಆದರೂ ಬೆಳಕಿನ ಬಾಗುವಿಕೆ, ಗುರುತ್ವಾ ಕರ್ಷಣೆ ಇತ್ಯಾದಿ ಏನೇನೋ ಕಾರಣಗಳಿಂದ ಅದರ ಇರುವಿಕೆ ನಮಗೆ ಈಗ ತಿಳಿದಿದೆ. ಅಷ್ಟು ದೂರದ ನಕ್ಷತ್ರಕ್ಕೊಂದು ಹೆಸರನ್ನು ಇಟ್ಟು ಕೂಡ ಆಗಿದೆ- Earendel. ಇಂಥದ್ದೆಲ್ಲ ಸುದ್ದಿ ಬಂದಾಗ ಮನುಷ್ಯನಿಗೆ ತಿಳಿಯಲು, ಕಂಡುಹಿಡಿಯಲು ಇನ್ನೇನು ಉಳಿಯಿತು ಎಂಬ ಪ್ರಶ್ನೆ ಮೂಡುತ್ತದೆ. ಚಂದ್ರನ ಮೇಲೆ ಕಾಲಿಟ್ಟಾಯಿತು,

ಭೂಮಿಯ ಸಮುದ್ರದ ಒಳಗಿನ ನೆಲವನ್ನು ಮ್ಯಾಪಿಂಗ್ ಮಾಡಿ, ಆಲ ಅಗಲ ತಿಳಿದಾಗಿದೆ. ಅಣು ವನ್ನು ವಿಭಜಿಸಿ ನೋಡಿ ಆಗಿದೆ. ಚಂದ್ರನ ಮೇಲೆ ಕಾಲಿಟ್ಟಾಗಿದೆ, ಆ ಬಗ್ಗೆ ಅನುಮಾನವೂ ಇದೆ. ಜೀವತಂತು ಡಿಎನ್‌ಎ ರಚನೆಯನ್ನು ತಿಳಿದಾಗಿದೆ. ಇಂಟರ್ನೆಟ್, ಮೊಬೈಲ್, ಸ್ಯಾಟಲೈಟ್, ಕೃತಕ ಬುದ್ಧಿಮತ್ತೆ.. ಹೀಗೆ ಪಟ್ಟಿಯೇ ಉದ್ದ. ಹಾಗಾದರೆ ನಮಗೆ ಎಲ್ಲವೂ ತಿಳಿದಿದೆಯೇ? ಕೆಲ ವೊಂದಿಷ್ಟು ದೊಡ್ಡ ದೊಡ್ಡ ಪ್ರಶ್ನೆಗಳಿವೆ. ಅವುಗಳನ್ನು ನಿಖರವಾಗಿ, ದ್ವಂದ್ವವಿಲ್ಲದೆ ವಿವರಿಸಲು ವಿಜ್ಞಾನಕ್ಕೆ ಇಂದಿಗೂ ಸಾಧ್ಯವಾಗಿಲ್ಲ. ಇಂದಿಗೂ ಅವು ಬಗೆಹರಿಯದ ರಹಸ್ಯಗಳು.

ಇದನ್ನೂ ಓದಿ: Shishir Hegde Column: ಮ್ಯಾಚ್‌ ಮುಗಿದ ಮೇಲೆ ಟಿವಿ ʼಆರ್‌ ಸಿ ಬಿʼ ಡಿ

ಕೆಲವು ಪ್ರಶ್ನೆಗಳನ್ನು ವಿವರಿಸಲು 2-3‌ ಸಿದ್ಧಾಂತಗಳಿವೆ. ಆದರೂ ‘ಇದಮಿತ್ಥಂ’ ಎನ್ನುವಂತಿಲ್ಲ! ಈ ಪಟ್ಟಿಯಲ್ಲಿ ಮೊದಲನೆಯದೇ ‘ಜೀವ ಪ್ರಜ್ಞೆ’. ಬದುಕಿರುವ ನಮಗೆಲ್ಲರಿಗೂ ನಾವು ಬದುಕಿದ್ದೇವೆ ಎಂಬ ಪ್ರಜ್ಞೆಯಿದೆ. ಪ್ರತಿ ನಿತ್ಯ ಬೆಳಗ್ಗೆ ಎzಕ್ಷಣ ‘ಇದು ನಾನು’ ಎಂಬ ಪ್ರಜ್ಞೆ ನಮಗೆಲ್ಲರಿಗೂ ಇರುತ್ತದೆ ಅಲ್ಲವೇ? ನಾವು ಯೋಚಿಸುತ್ತೇವೆ, ಅನುಭವಿಸುತ್ತೇವೆ, ಕನಸು ಕಾಣುತ್ತೇವೆ, ಬೇಸರಿಸಿ ಕೊಳ್ಳುತ್ತೇವೆ, ಪ್ರೀತಿಸುತ್ತೇವೆ, ದ್ವೇಷಿಸುತ್ತೇವೆ, ಏನೇನೋ ನಿರ್ಧಾರಗಳನ್ನು ತೆಗೆದುಕೊಳ್ಳು ತ್ತೇವೆ ಇತ್ಯಾದಿ.

ಮಿದುಳಿನಲ್ಲಿ ಸುಮಾರು ಎಂಟೂವರೆ ಸಾವಿರ ಕೋಟಿ ನರಕೋಶಗಳಿವೆ (ನ್ಯೂರಾನ್) ಎಂಬುದು ಲೆಕ್ಕಾಚಾರ. ಅವುಗಳು ವಿದ್ಯುತ್ ಮತ್ತು ರಾಸಾಯನಿಕಗಳನ್ನು ಬಳಸಿ ಒಂದಕ್ಕೊಂದು ಸಂವಹಿಸು ತ್ತವೆ ಎಂಬುದು ವಿಜ್ಞಾನಕ್ಕೆ ಗೊತ್ತು. ಖುಷಿಯಾದಾಗ ಮಿದುಳಿನ ಈ ಭಾಗ ಬೆಳಗುತ್ತದೆ; ಬೇಸರ ವಾದಾಗ, ನೋವಾದಾಗ, ಮಿದುಳಿನ ಇಂತಿಂಥ ಜಾಗದಲ್ಲಿ ಸಿಗ್ನಲ್‌ಗಳು ಕಾಣಿಸುತ್ತವೆ ಎಂಬುದು ಗೊತ್ತು.

ಆದರೆ ಮಿದುಳಿನ ಇಂತಿಂಥ ಭಾಗದ ನರಕೋಶಗಳು ಜಾಗೃತವಾದಾಗ ನಮಗೆ ಪ್ರೀತಿ, ದ್ವೇಷ, ಅಸೂಯೆ, ನೋವು, ಸುಖ ಇತ್ಯಾದಿಯ ಅನುಭವ ಏಕಾಗುತ್ತದೆ? ನಮ್ಮೊಳಗೆ ಭಾವನೆಗಳು ಹೇಗೆ ಹುಟ್ಟುತ್ತವೆ? ಆ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಮಿದುಳಿನ ಒಳಗಿನ ಭೌತಿಕ ಪ್ರಕ್ರಿಯೆಗಳು ಮತ್ತು ವಸ್ತುನಿಷ್ಠ-ಅಸ್ತಿತ್ವದ ಅನುಭವ ಇವೆರಡನ್ನು ಜೋಡಿಸುವ ಪ್ರಜ್ಞೆಯ ಬಗ್ಗೆ ವಿಜ್ಞಾನ ಉತ್ತರಿಸು ವುದಿಲ್ಲ.

ವಿಜ್ಞಾನದಲ್ಲಿ ಇದನ್ನು the hard problem of consciousness ಎಂದು ಕರೆಯುವುದು. ನಮಗೆಲ್ಲ ರಿಗೂ ಪ್ರಜ್ಞೆಯ ಇರುವಿಕೆಯ ಅನುಭವ ನಿರಂತರ. ಆದರೆ ಏಕೆ ಮತ್ತು ಹೇಗೆ? ಅಷ್ಟೇ ಅಲ್ಲ, ಈ ‘ಜೀವ ಪ್ರಜ್ಞೆ’ ಎನ್ನುವುದು ಎಲ್ಲ ಜೀವವರ್ಗದಲ್ಲಿಯೂ ಇದೆ. ಅದು ಪ್ರಾಣಿಗಳಲ್ಲಿ ಹೇಗಿದೆ, ಕೀಟ ಗಳಲ್ಲಿ, ಎರೆಹುಳುವಿನಲ್ಲಿ, ಜೇನುನೊಣದಲ್ಲಿ, ಇರುವೆ, ಆನೆಯಲ್ಲಿ ಹೇಗಿದೆ? ಹುಲ್ಲು, ಗಿಡಗಳಲ್ಲಿ? Consciousness- ಪ್ರಜ್ಞೆ ಎಂಬುದು ಸುಲಭದಲ್ಲಿ ಎಲ್ಲರ ನಿರಂತರ ಅನುಭವ ದಲ್ಲಿದ್ದರೂ ಅದು ಹೇಗೆ ಸಾಧ್ಯವೆಂಬುದು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.

ಮಿದುಳಿನ ನರಕೋಶಗಳು ಸಾಮೂಹಿಕವಾಗಿ ಜತೆಯಲ್ಲಿ ಕೆಲಸಮಾಡುವುದರಿಂದ ಪ್ರಜ್ಞೆ ಉಂಟಾಗುತ್ತದೆ ಎಂಬ ವಿವರಣೆ ನೀಡುವುದಾದರೆ ಅವುಗಳು ಇಡೀ ಒಂದು ವ್ಯವಸ್ಥೆಯಾಗಿ ಕೆಲಸ ಮಾಡುವುದು ಹೇಗೆ ಎಂಬುದೇ ಪ್ರಜ್ಞೆಯ ಬಗೆಗಿನ ಉತ್ತರವಿಲ್ಲದ ಪ್ರಶ್ನೆ.

ಸಮಯದ ವಿಷಯಕ್ಕೇ ಬನ್ನಿ. ಕೈಗಡಿಯಾರದಲ್ಲಿ, ಮೊಬೈಲ್‌ನಲ್ಲಿ ಗಳಿಗೆಗೊಮ್ಮೆ ಟೈಮ್ ಎಷ್ಟಾಯ್ತು ಎಂದು ನೋಡಿಕೊಳ್ಳುತ್ತೇವೆ. ನಮ್ಮ ದಿನಚರಿ, ಬದುಕು ಗಡಿಯಾರದ ಸಮಯಕ್ಕೆ ಅನುಗುಣವಾಗಿ ನಡೆಯುತ್ತದೆ. ಸೆಕೆಂಡ್, ನಿಮಿಷ, ಗಂಟೆ, ದಿನ, ವರ್ಷ, ದಶಕ, ಶತಮಾನ ಇತ್ಯಾದಿ. ಸಮಯ ಎನ್ನುವುದು ನದಿಯಲ್ಲಿ ಹರಿಯುವ ನೀರಿನಂತೆ.

ಅದಕ್ಕೊಂದು ಗತಿಯಿದೆ. ಏಕಮುಖ. ಯಾರಿಗೂ ನಿಲ್ಲುವುದಿಲ್ಲ ಕಾಲ! ಆದರೆ ಅಸಲಿಗೆ ಟೈಮ್- ಸಮಯ ಎಂದರೆ ಏನು? ವಿಜ್ಞಾನಿ ಐನ್‌ಸ್ಟೀನ್ ‘ಸಮಯ ಎನ್ನುವುದು ಕೋಲಿನಂತೆ ಬಾಗುತ್ತದೆ’ ಎಂದು ವಾದಿಸಿದ. ‘ಅತ್ಯಂತ ದೊಡ್ಡ ವಸ್ತುವಿನ ಹತ್ತಿರ ಸಮಯವೇ ನಿಧಾನವಾಗುತ್ತದೆ’ ಎಂದು ಪ್ರತಿಪಾದಿಸಿದ. ಇವತ್ತು ಅಂತರಿಕ್ಷದಲ್ಲಿರುವ ಗಗನಯಾನಿಗೆ ಕೆಳಗೆ ಭೂಮಿಯಲ್ಲಿರುವವರಿಗಿಂತ ಸ್ವಲ್ಪ ನಿಧಾನದಲ್ಲಿ ವಯಸ್ಸಾಗುತ್ತದೆ ಎಂಬುದು ಈಗ ನಿರ್ವಿವಾದ.

ಬ್ರಹ್ಮನ ಒಂದು ದಿನ- ಕಲ್ಪ ಎಂದರೆ ಭೂಮಿಯ 432 ಕೋಟಿ ವರ್ಷ ಎಂಬುದಿದೆ. Black Hole- ಕಪ್ಪುರಂಧ್ರದೊಳಕ್ಕೆ ಸಮಯವೇ ನಿಂತು ಹೋಗುತ್ತದೆಯಂತೆ. ಇತ್ತ ಕ್ವಾಂಟಮ್ ಮೆಕ್ಯಾನಿಕ್ಸ್‌ ನಲ್ಲಿ, ಪರಮಾಣು ಮಟ್ಟದಲ್ಲಿ ಕೂಡ ಸಮಯವೇ ಮಾಯವಾಗಿಬಿಡುತ್ತದೆ. ಅಲ್ಲಿ ಒಂದೇ ಸಮಯದಲ್ಲಿ ಇಲೆಕ್ಟ್ರಾನ್ ಎರಡು ಜಾಗದಲ್ಲಿರಲು ಸಾಧ್ಯ ಎಂಬುದು ವಾದ.

ಅತ್ಯಂತ ಚಿಕ್ಕ ಪರಮಾಣುವಿನ ಹಂತದಿಂದಾಚೆ ಮತ್ತು ಬ್ರಹ್ಮಾಂಡದ ಹಂತದಲ್ಲಿ ಸಮಯವೆನ್ನು ವುದು ನಿರ್ದಿಷ್ಟವಲ್ಲ, ಅವು ನಾವು ಕಟ್ಟುವ ಗಡಿಯಾರದಂತೆ ವಿವರಣೆಗೆ ನಿಲುಕುವುದಿಲ್ಲ. ಅದೇನೇ ಇರಲಿ, ಸಮಯ ಎನ್ನುವುದು ನಮ್ಮೆಲ್ಲರ ಅನುಭವಕ್ಕೆ ಬರುವಂಥದ್ದು. ನಾವು ಅದರಲ್ಲಿಯೇ ಬದುಕುವುದು. ಸಮಯ ಅನುಭವಕ್ಕೆ ಬರುವುದಷ್ಟೇ ಅಲ್ಲ, ಅದು ಕಳೆಯುತ್ತಿದೆ ಎಂದು ಬೇಸರವಾಗುತ್ತದೆ.

ಕೆಲವು ಭೌತಶಾಸ್ತ್ರಜ್ಞರು ಸಮಯ ಎನ್ನುವುದು ಮಾಯೆ ಎನ್ನುತ್ತಾರೆ. ಭೂಮಿಯ ಅಕ್ಷಾಂಶ-ರೇಖಾಂಶದಂತೆ ಸಮಯವೂ ಒಂದು ಕಲ್ಪನೆ ಎನ್ನುತ್ತದೆ ವಿಜ್ಞಾನ. ಸಮಯ ನಮ್ಮೆಲ್ಲರ ಬದುಕನ್ನು ನಿರ್ದೇಶಿಸುತ್ತದೆ. ಆದರೆ ಸಮಯವೆಂದರೆ ಏನು ಎಂಬುದಕ್ಕೆ ವಿಜ್ಞಾನದಲ್ಲಿ ‘ಇದಮಿತ್ಥಂ’ ಎಂಬ ಏಕ ಉತ್ತರವಿಲ್ಲ!

ನಾವು ಹೆಚ್ಚು ಕಡಿಮೆ ಬದುಕಿನ ಒಂದು ಮೂರಾಂಶ ನಿದ್ರೆಯಲ್ಲಿ ಕಳೆಯುತ್ತೇವೆ. ಕೆಲವರ ನಿದ್ರೆ ಎಂದರೆ ಹೇಗೆ? ಮೂಗು ಕತ್ತರಿಸಿಕೊಂಡು ಹೋದರೂ ತಿಳಿಯದು. ನಾಗರಿಕತೆಗಿಂತ ಮೊದಲು ಈ ರೀತಿ ಕಾಡಿನಲ್ಲಿ ಅಥವಾ ಕಾಡುಪ್ರಾಣಿಗಳಿರುವಲ್ಲಿ ಮಲಗಿದರೆ ಏನಾಗಬಹುದು ಎಂಬ ಕಲ್ಪನೆಯ ಜತೆ ಯೋಚಿಸಿದರೆ ಈ ರೀತಿ ಸತ್ತಂತೆ, ದಾಟಿರದಂತೆ ದಿನದ ಶೇ.30 ಬಿದ್ದು ನಿದ್ರಿಸುವುದು ವಿಕಾಸ ವಾದಕ್ಕೂ ಅಪವಾದ. ಹಾಗೆ ನೋಡಿದರೆ ನಿದ್ರಿಸುವ ರೀತಿ ಜೀವಪರವಲ್ಲ. ಹುಲಿ ಸಿಂಹಗಳಿರುವ ಕಾಡಿನಲ್ಲಿ, ರಾತ್ರಿಯ ಕತ್ತಲಲ್ಲಿ ನಿದ್ರಾಸ್ಥಿತಿಯಷ್ಟು ದುರ್ಬಲ ಸ್ಥಿತಿ ಇನ್ನೊಂದಿಲ್ಲ.

ಆದರೂ ನಿದ್ರೆಯನ್ನು ವಿಕಸನ ಕೈಬಿಡಲಿಲ್ಲ. ಚಿಂಪಾಂಜಿ, ಮಂಗಗಳಿಗೂ 8-9 ತಾಸಿನ ನಿದ್ರೆ ಬೇಕೇ ಬೇಕು. ನಿದ್ರಿಸಿದಾಗ ಇಡೀ ದೇಹರಚನೆ ಹೇಗೆ ಪುನರುಜ್ಜೀವನಗೊಳ್ಳುತ್ತದೆ ಎಂಬುದು ಇಂದಿನ ವಿಜ್ಞಾನಕ್ಕೆ ಗೊತ್ತು. ನಿದ್ರೆಯ ಸ್ಥಿತಿಗಳು, ಹಂತಗಳು, ಯಾವ ಹಂತದಲ್ಲಿ ಎಷ್ಟು ಎದೆಬಡಿತ, ರಕ್ತ ಸಂಚಲನೆ, ಮಾಂಸಖಂಡದ ರಿಪೇರಿ ಇತ್ಯಾದಿ ತಿಳಿದಿದೆ. ಆದರೆ ಆ ಕೆಲಸಕ್ಕೆ ಅಷ್ಟು ರಿಸ್ಕ್ ತೆಗೆದು ಕೊಂಡು ದೇಹವೆಂಬ ಕಾರ್ಖಾನೆಯನ್ನೇ ಬಂದ್ ಮಾಡಿಕೊಳ್ಳುವುದು ಏಕೆ? 75 ವರ್ಷ ಬದುಕಿದರೆ ಅದರಲ್ಲಿ 25 ವರ್ಷ ನಿದ್ರಿಸಿ ಕಳೆಯುವ ನಾವು ಕನಸು ಯಾವ ಉದ್ದೇಶಕ್ಕೆ, ಏಕೆ ಮತ್ತು ಹೇಗೆ ಹುಟ್ಟುತ್ತದೆ? ನಿದ್ರಿಸಿದಾಗ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ವಿಶ್ರಾಂತಿ ಪಡೆಯು ತ್ತೇವೆ ಎಂಬುದು ಗೊತ್ತು. ಮನಸ್ಸು, ಮಿದುಳಿನ ಕಸ ಕಡ್ಡಿಗಳನ್ನೆಲ್ಲ ಸ್ವಚ್ಛ ಮಾಡುವುದು ನಿದ್ರೆ ಎಂಬುದು ಗೊತ್ತು.

ಬೆಳಗ್ಗೆ ಎದ್ದಾಕ್ಷಣ ದೇಹ ಮಾತ್ರವಲ್ಲ, ಮಾನಸಿಕವಾಗಿ ಕೂಡ ನವೀಕೃತಗೊಂಡಿರುತ್ತೇವೆ. ಇದೆಲ್ಲದರ ನಡುವೆ ಕನಸೇಕೆ ಬೀಳುವುದು? ಕನಸು ಮಾನಸಿಕ ಸ್ವಚ್ಛತಾ ಕಾರ್ಯದ ಅಡ್ಡಪರಿ ಣಾಮ. ಅನುಭವವೇ? ಕನಸೇಕೆ ಅಷ್ಟು ಸತ್ಯವೆನಿಸುತ್ತಿರುತ್ತದೆ? ಜನಕ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ದರ್ಬಾರ್ ನಡೆಸುತ್ತಿದ್ದಾಗ ನಿದ್ರೆಗೆ ಜಾರಿಬಿಟ್ಟನಂತೆ.

ನಿದ್ರೆಯಲ್ಲಿ ಅವನ ರಾಜ್ಯವಿಡೀ ದುರ್ಭಿಕ್ಷೆಗೆ ಒಳಗಾಗಿ, ಯಾರಿಗೂ ಊಟಕ್ಕಿಲ್ಲದ ಸ್ಥಿತಿ. ಅವನಿಗೂ ಗತಿಯಿಲ್ಲದೆ ಅಲೆಯುತ್ತಿದ್ದಾಗ ಯಾರೋ ಒಂದು ರೊಟ್ಟಿ ಕೊಟ್ಟರು. ಅವನು ಇನ್ನೇನು ತಿನ್ನಬೇಕು, ಅಷ್ಟರಲ್ಲಿ ಆಕಾಶದಲ್ಲಿದ್ದ ಹದ್ದು ಅವನ ಆಹಾರವನ್ನು ಕಿತ್ತು ತೆಗೆದುಕೊಂಡು ಹೋಗಿ ಬಿಡುತ್ತದೆ. ಆಗ ಜನಕ ಮಹಾರಾಜ ‘ಹಾ’ ಎಂದು ಕೂಗಿ ಎಚ್ಚರಗೊಳ್ಳುತ್ತಾನೆ. ಆಗ ಅವನಿಗೆ ಅನುಮಾನ ಶುರುವಾಗುತ್ತದೆ. ತಾನು ಅಂಥ ಸ್ಥಿತಿಯಲ್ಲಿದ್ದದು ನಿಜವೇ ಅಥವಾ ಈಗ ನಾನು ರಾಜನಾಗಿರುವುದು ಸತ್ಯವೇ, ಯಾವುದು ಕನಸು, ಯಾವುದು ಎಚ್ಚರ.

ಮಧ್ಯಾಹ್ನ ಮಲಗಿ ಎದ್ದಾಗ ಕೆಲವೊಮ್ಮೆ ಎಲ್ಲಿದ್ದೇವೆ, ಎಷ್ಟು ಗಂಟೆ ಎಂಬ ಅರಿವಾಗಲು ಸುಮಾರು ಹೊತ್ತು ಬೇಕಾಗುತ್ತದೆ. ಬೆಳಗಿನ ಜಾವದ ಕನಸು, ನಿದ್ರೆ ಇವಕ್ಕೆಲ್ಲ ಏಕೆ ಎಂಬುದಕ್ಕೆ ಉತ್ತರವಿದೆ. ಹೇಗೆ ಎಂಬುದಕ್ಕೆ ‘ಇದಮಿತ್ಥಂ’ ಎಂಬ ಏಕ ಉತ್ತರವಿಲ್ಲ!

ನೆನಪಿನ ಶಕ್ತಿಗೂ ನಿದ್ರೆಗೂ ಸಂಬಂಧವಿದೆ. ಸರಿಯಾದ ನೆನಪಿನ ಶಕ್ತಿಗೆ ಸರಿಯಾಗಿ ನಿದ್ರಿಸಬೇಕು ಎನ್ನುತ್ತದೆ ವಿಜ್ಞಾನ. ನಮಗೆ ಏನೇನೋ ನೆನಪಿರುತ್ತದೆ. ಬಾಲ್ಯದಲ್ಲಿ ಶಾಲೆಗೆ ಹೋಗುವ ದಾರಿ, ಅಲ್ಲಿನ ಯಾವುದೋ ಒಂದು ಗಿಡದ ಹೂವು, ಅಮ್ಮನ ನಗು, ಅಪ್ಪನ ಬೆವರು ವಾಸನೆ, ಯಾರದ್ದೇ ಮದುವೆ, ಏನೇನೆಲ್ಲ ನೆನಪಿರುತ್ತದೆಯಲ್ಲ!

ಈ ನೆನಪು ಎಂಬುದು ಎಲ್ಲಿ ಯಾವ ರೀತಿಯಲ್ಲಿ ಶೇಖರಣೆಯಾಗಿರುತ್ತದೆ ಎಂಬುದೂ ನಿಗೂಢ. ಮಿದುಳಿನ ಯಾವ ಭಾಗದಲ್ಲಿ ಪೆಟ್ಟು ಬಿದ್ದರೆ ನೆನಪು ಹೋಗುತ್ತದೆ ಎಂಬುದು ಗೊತ್ತು. ಸಿನಿಮಾ ಗಳಲ್ಲಿ ಹೀರೋಯಿನ್ನಿಗೆ ಅಪಘಾತದಲ್ಲಿ ಹೋದ ನೆನಪಿನ ಶಕ್ತಿ, ಕಾಲು ಜಾರಿ ಬಾವಿಕಟ್ಟೆಗೆ ತಲೆ ಬಡಿದಾಗ ಬರುತ್ತದೆ.

ರೇಡಿಯೋ, ರಿಮೋಟ್ ಇವೆಲ್ಲ ಒಂದು ಕಡೆ ಬಡಿದಾಗ ಸರಿಯಾಗುವಂತೆ. ಆದರೆ ನೆನಪು ಅಸಲಿಗೆ ಹಾಗೆ ಕೆಲಸ ಮಾಡುವುದಿಲ್ಲ. ಮಿದುಳಿನ ಹಿಪೋಕ್ಯಾಂಪಸ್ ಮತ್ತಿತರ ಭಾಗಗಳಲ್ಲಿ ನೆನಪಿನ ಶಕ್ತಿ ಯಿದೆ ಎಂದು ತಿಳಿದಿದೆ. ಆ ಭಾಗಕ್ಕೆ ತೊಂದರೆಯಾದಾಗ ಅದು ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಗೊತ್ತು. ಆದರೆ ಪ್ರಶ್ನೆ ಅದಕ್ಕಿಂತ ಮೂಲದ್ದು.

ಹಲಸಿನ ಹಣ್ಣಿನ ಪರಿಮಳ, ಕೆ.ಆರ್.ಮಾರುಕಟ್ಟೆಯ ತರಕಾರಿ ಕೊಳೆತ ವಾಸನೆ ಇವೆಲ್ಲ ನೆನಪಿರು ತ್ತದೆಯಲ್ಲ- ಆ ವಾಸನೆ ನಮ್ಮ ಮಿದುಳಿನಲ್ಲಿ ಯಾವ ರೀತಿ ಶೇಖರಿಸಲ್ಪಡುತ್ತದೆ? ಕಂಪ್ಯೂಟರಿನ ಡಿನಲ್ಲಿ ಒಂದು ಫೋಟೋ ಶೇಖರಣೆಯಾಗುವುದು ಮತ್ತು ಅದೇ ನೆನಪಿನ ಶಕ್ತಿಯಲ್ಲಿ ಇರುವುದು ಒಂದೇ ಅಲ್ಲ. ನೆನಪಿರಲಿ, ನೆನಪು ಬಗೆಹರಿಯದ ಪ್ರಶ್ನೆ. ನೆನಪು ಶೇಖರಣೆಯಾಗುವುದು ಹೇಗೆ, ಬೇಕೆಂದಾಗ ಅನಾಯಾಸವಾಗಿ, ಅನೈಚ್ಛಿಕವಾಗಿ ನೆನಪಾಗುವುದು ಹೇಗೆ? ಇದಕ್ಕೂ ‘ಇದಮಿತ್ಥಂ’ ಎಂಬ ಏಕ ಉತ್ತರವಿಲ್ಲ!

ಜೀವ ವಿಕಸನ ಸಿದ್ಧಾಂತ ಎಲ್ಲರಿಗೂ ಗೊತ್ತು. ಆದರೆ ಮೊಟ್ಟ ಮೊದಲಬಾರಿಗೆ ಜೀವ ಹುಟ್ಟಿದ್ದು ಹೇಗೆ? ರಾಸಾಯನಿಕಗಳ ಆಕಸ್ಮಿಕ ಸನ್ನಿವೇಶದಿಂದ ಮೊದಲು ಜೀವ ಹುಟ್ಟಿತು ಎಂಬುದು ಸಿದ್ಧಾಂತ. ವಿಜ್ಞಾನಿಗಳು ಅದೆಷ್ಟೋ ವರ್ಷದಿಂದ ಪ್ರಯೋಗಶಾಲೆಗಳಲ್ಲಿ ಭೌತಿಕ ವಸ್ತುಗಳನ್ನು ಬಳಸಿ ಜೀವವೊಂದನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಬ್ರಹ್ಮಾಂಡದಲ್ಲಿ ನಾವು ಭೂಮಿಯವರು ಮಾತ್ರ ಜೀವಿಯೇ? ಬೇರೆ ಕಡೆ ಜೀವಿಗಳಿಲ್ಲವೇ? ಇನ್ನು, ಭೂಮಿಯಲ್ಲಿರುವ ಜೀವಿಗಳ ಎಷ್ಟು ವೈವಿಧ್ಯ? ಏಕೆ ಕೆಲವು ಪ್ರಾಣಿಗಳು ಬುದ್ಧಿವಂತ, ಇನ್ನು ಕೆಲವು ಪ್ರಾಣಿಗಳು ದಡ್ಡ? ಕಾಗೆಗೆ ಏಳು ವರ್ಷದ ಮಗು ವಿನಷ್ಟು ಬುದ್ಧಿಯಿರುತ್ತದಂತೆ. ಡಾಲಿನ್, ಆಕ್ಟೋಪಸ್, ಕತ್ತೆ ಇವೆಲ್ಲವುಗಳ ಬುದ್ಧಿವಂತಿಕೆಯ ಬಗ್ಗೆ ಕೇಳಿರುತ್ತೇವೆ.

ಒಂದೊಂದು ಪ್ರಾಣಿಯ ಬುದ್ಧಿವಂತಿಕೆ, ಪ್ರಜ್ಞೆ ಒಂದೊಂದು ರೀತಿ. ಏಕೆ ಹಾಗೆ? ನಾವು ಏನೋ ಒಂದು ಸಮಸ್ಯೆಯಲ್ಲಿ ಸಿಕ್ಕಿರುತ್ತೇವೆ ಅಥವಾ ಯೋಚನೆಯಲ್ಲಿರುತ್ತೇವೆ. ಆಮೇಲೆ ಸ್ವಲ್ಪ ಸಮಯದ ನಂತರ ಯೋಚಿಸುವುದನ್ನು ನಿಲ್ಲಿಸುತ್ತೇವೆ. ಆಗ ಅದೆಲ್ಲಿಂದಲೋ ಒಮ್ಮಿಂದೊಮ್ಮೆಲೆ ಉಪಾಯ, ಪರಿಹಾರ ಇತ್ಯಾದಿ ತಲೆಗೆ ಹೊಳೆದುಬಿಡುತ್ತದೆ. ಹೇಗೆ? ಈ ಉಪಾಯ, ಪರಿಹಾರ ಇದೆಲ್ಲ ಬರುವುದು ಎಲ್ಲಿಂದ? ಗುರುತ್ವಾಕರ್ಷಣೆ ಹೇಗೆ ಕೆಲಸಮಾಡುತ್ತದೆ, ಏಕಿದೆ? ಸತ್ತ ನಂತರ ಜೀವ ಪ್ರಜ್ಞೆಗೆ ಏನಾಗುತ್ತದೆ? ಹೀಗೆ ಒಂದೇ ಉತ್ತರವಿಲ್ಲದ, ಸಿದ್ಧಾಂತವೇ ಉತ್ತರವಾಗಿರುವ ಅಸಂಖ್ಯ ಪ್ರಶ್ನೆಗಳಿವೆ. ಅಲ್ಲ ಸತ್ಯ ಎನ್ನುವುದು ‘ಇದಮಿತ್ಥಂ’ ಎಂಬ ಏಕ ಉತ್ತರವಲ್ಲ!

ಸುಮಾರು 460 ಕೋಟಿ ವರ್ಷದ ಹಿಂದೆ ಭೂಮಿ ಹುಟ್ಟಿತು. 1380 ಕೋಟಿ ವರ್ಷದ ಹಿಂದೆ ಬ್ರಹ್ಮಾಂಡ ಸೃಷ್ಟಿಯಾಯಿತು. ಇದು ಸಿದ್ಧಾಂತ. ಈ ಲೆಕ್ಕಾಚಾರಕ್ಕೆ ಅದರದೇ ಆದ ಸಾಕ್ಷ್ಯ-ಪುರಾವೆ ಗಳಿವೆ. ಬಿಗ್‌ಬ್ಯಾಂಗ್- ಮಹಾಸ್ಫೋಟದ ಸಿದ್ಧಾಂತ ಸದ್ಯ ನಮ್ಮ ಬಹುತೇಕ ಬಾಹ್ಯಾಕಾಶ ಗ್ರಹಿಕೆ ಗಳಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ.

ಈ ಸಿದ್ಧಾಂತದ ಪ್ರಕಾರ ಸಮಯ ಮತ್ತು ಆಕಾಶ ಇವೆರಡೂ ಹುಟ್ಟಿದ್ದು ಆ ಗಳಿಗೆಯ ನಂತರ. ಆದರೆ ಅದಕ್ಕಿಂತ ಮೊದಲು? ಏನಿತ್ತು, ಹೇಗಿತ್ತು? ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಆ ಪ್ರಶ್ನೆ ಕೇಳಿದರೆ, ಉತ್ತರ ದಿಕ್ಕಿನ ಉತ್ತರಕ್ಕೆ ಏನಿದೆ ಎಂದು ಕೇಳಿದಂತೆ ಎಂಬುದು ವಾದ. ಈ ಬ್ರಹ್ಮಾಂಡ ನಾವು ತಿಳಿದಂತೆ ಇಲ್ಲ ಎಂಬ ಸಿದ್ಧಾಂತಗಳೂ ಹಲವಿವೆ.

ಸಮಾನಾಂತರ ಜಗತ್ತುಗಳಿವೆ, ಸಮಯ ಪುನರಾವರ್ತನೆಯಾಗುತ್ತದೆ, ‘ಕ್ವಾಂಟಮ್ ಸುರಂಗ’ ಇತ್ಯಾದಿ. ಒಂದೊಂದೂ ತಲೆ ಕೆಟ್ಟು ಚಮಡಾ ಗೆಬರಿಕೊಳ್ಳುವಂಥ ಸಿದ್ಧಾಂತಗಳು. ಇವುಗಳಲ್ಲಿ ಯಾವುದೂ ಸುಳ್ಳು ಎಂದು ಹೇಳುವಂತಿಲ್ಲ. ಬ್ರಹ್ಮಾಂಡ ಹೇಗೆ, ಯಾವ ಉದ್ದೇಶಕ್ಕೆ ಹಿಗ್ಗುತಿದೆ? ಅಷ್ಟಕ್ಕೂ ಈ ಜಗತ್ತು ಏಕಿದೆ? ಆದರೆ ಏಕಿದೆ? ಈ ಪ್ರಶ್ನೆಗೆ ತತ್ವಜ್ಞಾನಿಗಳಲ್ಲಿಯೂ, ವಿಜ್ಞಾನಿ ಗಳಲ್ಲಿಯೂ ‘ಇದಮಿತ್ಥಂ’ ಎಂಬ ಏಕ ಉತ್ತರವಿಲ್ಲ!

ಭೂಮಿಯಿಂದ ಅತ್ಯಂತ ದೂರದ ನಕ್ಷತ್ರ ಏರೆಂಡೆಲ್ 2800 ಕೋಟಿ ಜ್ಯೋತಿರ್ವರ್ಷದಲ್ಲಿದೆ ಎಂದು ಹೇಳಿದೆನಲ್ಲ. ಬ್ರಹ್ಮಾಂಡಕ್ಕಿಂತ ದೊಡ್ಡದಿದೆ ಎಂದಾಯಿತಲ್ಲ. ಬ್ರಹ್ಮಾಂಡದಲ್ಲಿ ನಮ್ಮ ಲೆಕ್ಕಕ್ಕೆ ಸಿಕ್ಕಿರುವಂತೆ 7 ಹಿ 10ಪಿಪಿ (ಹತ್ತರ ಇಪ್ಪತ್ತೆರಡನೇ ಘಾತ) ದಷ್ಟು ನಕ್ಷತ್ರಗಳಿವೆ. ಗ್ಯಾಲಕ್ಸಿಗಳೇ 2 ಹಿ 10ಬಿಪಿ ರಷ್ಟು ಇದೆ. ಆದರೇನು ಗೊತ್ತೇ? ಇವಿಷ್ಟೂ ನಕ್ಷತ್ರಗಳು, ಅವುಗಳ ಗ್ರಹ, ಉಪಗ್ರಹಗಳು, ಧೂಮಕೇತು, ಕ್ಷುದ್ರಗ್ರಹಗಳು, ನಕ್ಷತ್ರಪುಂಜಗಳು ಎಲ್ಲವನ್ನೂ ಬೂಂದಿ ಲಾಡಿನಂತೆ ಒಟ್ಟಿಗೆ ಸೇರಿಸಿ ಕಟ್ಟಿದರೆಂದುಕೊಳ್ಳಿ(!).

ಅದು ಬ್ರಹ್ಮಾಂಡದ ಶೇ.5 ಮಾತ್ರ. ಇನ್ನುಳಿದ ಶೇ.95ರಷ್ಟು ಭಾಗದಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ನಮ್ಮ ಇಂದಿನ ಗ್ರಹಿಕೆಯ ಪ್ರಕಾರ ಆ ಶೇ.95ರಲ್ಲಿ ಶೇ. 27ರಷ್ಟು ಭಾಗ Dark Matter - ಕಪ್ಪು ವಸ್ತು ಆವರಿಸಿಕೊಂಡಿದೆ. ಬೆಳಕನ್ನು ನುಂಗಿ ಹಾಕುವ, ಸಮಯವೇ ನಿಲ್ಲುವ ವಸ್ತು. ಅದಕ್ಕೆ ಗುರುತ್ವಾ ಕರ್ಷಣೆ ಇದೆ. ಗ್ಯಾಲಕ್ಸಿಗಳ ರಚನೆಗೆ ಅದು ಮುಖ್ಯ ಕಾರಣ. ಆದರೆ ಕಪ್ಪುರಂಧ್ರ ಎಂದರೆ ಏನು, ಅದು ಯಾವುದರಿಂದ ಮಾಡಲ್ಪಟ್ಟಿದೆ ಇತ್ಯಾದಿ ಪ್ರಶ್ನೆಗೆ ಉತ್ತರವಿಲ್ಲ.

ಇನ್ನು ಉಳಿದ ಶೇ.68 ಭಾಗ. ಅದು Dark Energy - ಕಪ್ಪು ಶಕ್ತಿ. ಅದು Black Hole ಕಪ್ಪುರಂಧ್ರದಂತೆ ಅಲ್ಲ. ಬ್ರಹ್ಮಾಂಡ ಹಿಗ್ಗುತ್ತಿರಲು ಆ ಭಾಗ ಕಾರಣ. ಆದರೆ ಅದೇನು? ಏಕೆ, ಎತ್ತ? ಊಹು, ಗೊತ್ತಿಲ್ಲ. ನಮಗೆ ಬ್ರಹ್ಮಾಂಡದ ಅರಿವಿಗೆ ಬರುವ ಶೇ.5ರಷ್ಟರಲ್ಲಿಯೂ ಗೊತ್ತಿರುವುದು ಅಷ್ಟಕ್ಕಷ್ಟೇ. ಇಂಥ ಅದೆಷ್ಟೋ ಪ್ರಶ್ನೆಗಳಿಗೆ ವಿಜ್ಞಾನಿಗಳಲ್ಲಿ ಉತ್ತರವಿಲ್ಲ.

ಅದನ್ನು ವಿಜ್ಞಾನಿಗಳೇ ಒಪ್ಪಿಕೊಂಡುಬಿಡುತ್ತಾರೆ. ಇಲ್ಲವೇ, ಕೆಲವಕ್ಕೆ ಬ್ರಹ್ಮಾಂಡ ಗುರೂಜಿಯಂತೆ ಏನೇನೋ ಉತ್ತರಿಸಿ ಗೊಂದಲ ಎಬ್ಬಿಸಿಬಿಡುತ್ತಾರೆ. ಎಲ್ಲವುದನ್ನೂ ತಿಳಿದುಕೊಳ್ಳಬೇಕು ಎನ್ನುವುದು ಮನುಷ್ಯನ ಗೀಳು. ಎಲ್ಲವೂ ನಮ್ಮ ಗ್ರಹಿಕೆ, ಲೆಕ್ಕಾಚಾರ, ನಂಬಿಕೆಗಳಿಗೆ ಹೊಂದಿಕೆಯಾಗಬೇಕು.

ಗ್ರಹಿಕೆಗೆ ಸಿಕ್ಕಿಲ್ಲವೆಂದರೆ ಗ್ರಹಿಸುವಿಕೆಯ ತಪ್ಪು ಎಂಬ ನಂಬಿಕೆ. ಗ್ರಾಹ್ಯವಾಗದಾಗ ಗ್ರಹಿಸುವ ವಿಧಾನ ವನ್ನು ಅನುಮಾನಿಸುತ್ತೇವೆ. ಎಲ್ಲವೂ ನಮ್ಮ ಅಳತೆ ಅಂದಾಜಿಗೆ ಸಿಗಬೇಕು. ಆದರೆ ಈ ಪ್ರಶ್ನೆಗಳಿಗೆ ಉತ್ತರಗಳು ಬೇಕೇ, ಅವಶ್ಯಕವಿದೆಯೇ? ನಾವು ಕೇಳಿಕೊಳ್ಳುವ ಎ ಪ್ರಶ್ನೆಗಳಂತೆ- ಈ ಪ್ರಶ್ನೆಗೂ ಉತ್ತರ- ‘ಗೊತ್ತಿಲ್ಲ’.