Shishir Hegde Column: ಮ್ಯಾಚ್ ಮುಗಿದ ಮೇಲೆ ಟಿವಿ ʼಆರ್ ಸಿ ಬಿʼ ಡಿ
ದಿನಗಳೆದಂತೆ ಜನರು ಹೆಚ್ಚು ಹೆಚ್ಚು ದರ್ಶಕರಾಗುತ್ತಿದ್ದಾರೆ. ಟಿವಿಯ ಮುಂದೆ 3-4 ತಾಸು, ಜತೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇನ್ನೊಂದಿಷ್ಟು ತಾಸು. ಭಾರತದಲ್ಲಿ ಸ್ಮಾರ್ಟ್ ಫೋನ್ ಉಳ್ಳವರು ಸರಾಸರಿ 5 ತಾಸು ಪ್ರತಿದಿನ ಮೊಬೈಲ್ನಲ್ಲಿ ಕಳೆಯುತ್ತಿದ್ದಾರೆ. ಮೊಬೈಲ್ ಅಥವಾ ಟಿವಿ ದೃಶ್ಯ ವ್ಯವಸ್ಥೆ- ಅದರೊಳಗಿರುವವರು ದೃಶ್ಯರು- ಹೊರಗಿರುವವರು ದರ್ಶಕರು. ದರ್ಶಕರ ಸಂಖ್ಯೆ ಅತ್ಯಧಿಕ. ದರ್ಶಕನಿಗೆ ಈ ವ್ಯವಸ್ಥೆಯಲ್ಲಿ ಯಾವುದೇ ವೈಯಕ್ತಿಕ ಐಡೆಂಟಿಟಿ- ಗುರುತು ಇರುವುದಿಲ್ಲ.


ಶಿಶಿರಕಾಲ
shishirh@gmail.com
ಪೂಜ್ಯ ಓಶೋ ರಜನೀಶ್ ಅವರು ‘ಅಷ್ಟಾವಕ್ರ ಗೀತೆ’ಯ ಕುರಿತು ವ್ಯಾಖ್ಯಾನಿಸುವಾಗ ಹೇಳಿರುವ ಕೆಲವು ವಿಷಯಗಳು ಈ ಹೊತ್ತಿನಲ್ಲಿ ಪ್ರಸ್ತುತವೆನಿಸುತ್ತವೆ. ಓಶೋ ಹೇಳುವಂತೆ ಜಗತ್ತಿನ ವ್ಯಕ್ತಿ ಗಳನ್ನು ಮೂರು ವಿಭಾಗವಾಗಿ ವಿಂಗಡಿಸಬಹುದು. ದೃಶ್ಯರು, ದರ್ಶಕರು ಮತ್ತು ದ್ರಷ್ಟರು. ಯಾರಿವರು ಮತ್ತು ಏನಿದು ವಿಂಗಡಣೆ? ಮೊದಲನೇ ಗುಂಪಿನವರು- ‘ದೃಶ್ಯರು’. ಸೆಲೆಬ್ರಿಟಿಗಳು.
ಈ ವರ್ಗದವರು ತಾವೇ ದೃಶ್ಯವಾದವರು. ದೃಶ್ಯರು ಎಂದರೆ ಇವರು ಒಂದಿಂದು ರೀತಿಯಲ್ಲಿ ಸ್ವ-ಪ್ರದರ್ಶಕರು. ಏನೋ ಒಂದು ಪ್ರದರ್ಶನವೇ ಅವರ ಶಕ್ತಿ, ಬದುಕು. ಅವರ ನಿತ್ಯ ಬದುಕಿನ ಪ್ರಯತ್ನ ಗಳೆಲ್ಲ ಏನಿದ್ದರೂ ಇದರ ಸುತ್ತ. ನಾನು ಜನರಿಗೆ ಹೇಗೆ ಕಾಣಿಸಿಕೊಳ್ಳುತ್ತೇನೆ? ನಾನು ಜನರಿಗೆ ಒಳ್ಳೆಯವನಾಗಿ ಕಾಣಿಸಿಕೊಳ್ಳುವುದು ಹೇಗೆ? ಸುಂದರವಾಗಿ, ಉತ್ತಮನಾಗಿ, ಶ್ರೇಷ್ಠನಾಗಿ, ಸುರದ್ರೂಪಿ ಯಾಗಿ, ಅಥವಾ ಮುಂದಾಳುವಾಗಿ, ಶಕ್ತಿಯುತನಾಗಿ, ಬುದ್ಧಿವಂತನಾಗಿ, ನಾಯಕನಾಗಿ, ಪ್ರಭಾವಿ ಯಾಗಿ ಇತ್ಯಾದಿ- ಒಟ್ಟಾರೆ ಜನರಿಗೆ ಕಾಣಿಸಿಕೊಳ್ಳುವುದು ಹೇಗೆ? ಈ ವಿಚಾರವೇ ಈ ವರ್ಗದ-‘ದೃಶ್ಯ’ ವಾದವರ ಬದುಕನ್ನು ನಿರ್ದೇಶಿಸುತ್ತಿರುತ್ತದೆ.
ಚಲನ ಚಿತ್ರ ನಟ-ನಟಿಯರು, ಕ್ರಿಕೆಟ್ ಪಟುಗಳು, ರಾಜಕಾರಣಿಗಳು, ಈಗೀಗ ವಾರ್ತಾ ವಾಚಕರು. ಒಟ್ಟಾರೆ ದಿನಬೆಳಗಾದರೆ, ಸಂಜೆಯಾದರೆ ಟಿವಿಯಲ್ಲಿ ಕಾಣಿಸಿಕೊಳ್ಳುವವರು ಈ ವರ್ಗದವರು. ಎರಡನೆಯ ವರ್ಗದವರು- ‘ದರ್ಶಕರು’. ಇವರದ್ದೇ ದೊಡ್ಡ ಗುಂಪು. ಒಂದಿಂದರ ಹಿಂಬಾಲಕರು, ಅಭಿಮಾನಿ ಸಂಘದವರು, ಫ್ಯಾನ್ಗಳು, ಇವರೆಲ್ಲ ಈ ವರ್ಗಕ್ಕೆ ಸೇರುವವರು. ಈ ದರ್ಶಕರಿಲ್ಲದಿದ್ದರೆ ಮೊದಲನೇ ವರ್ಗವಾದ ‘ದೃಶ್ಯ’ರಿಲ್ಲ.
ಇದನ್ನೂ ಓದಿ: Shishir Hegde Column: ಮೆಚ್ಚಬೇಕು ಇಲ್ಲ ಚಚ್ಚಬೇಕು: ಇದು ಸಾ.ಜಾ.ಡೆಮೋಕ್ರಸಿ
ಒಂದು ವೇಳೆ ಕ್ರಿಕೆಟ್ ಆಟವನ್ನು ನೋಡುವವರೇ ಇಲ್ಲ ಎಂದಿಟ್ಟುಕೊಳ್ಳಿ. ಯಾರೆಂದರೆ ಯಾರೂ ನೋಡದಿದ್ದರೆ ಕ್ರಿಕೆಟ್ ಸೆಲೆಬ್ರಿಟಿಗಳು ಇರುತ್ತಿದ್ದರೇ? ರಾಜಕಾರಣಿಗಳು, ಮುಖ್ಯಮಂತ್ರಿ ಇವರೆಲ್ಲ ಚುನಾವಣಾ ಪ್ರಚಾರಕ್ಕೆ ಯಾವುದೋ ಊರಿಗೆ ಹೋದಾಗ, ರಸ್ತೆಯಲ್ಲಿ ಹಿಂಬಾಲಕರೇ ಇಲ್ಲದಿದ್ದರೆ? ಹಿಂಬಾಲಕನಿಲ್ಲದೆ ನಾಯಕನಿಲ್ಲ. ದರ್ಶಕನಿಲ್ಲದೆ ದೃಶ್ಯರೇ ಇಲ್ಲ. ಯಾರೇ ರಾಜಕಾರಣಿಯಾಗಲಿ, ಅವನಿಗೊಂದು ಹಿಂ‘ಬಾಲ’ಕರ ಗುಂಪು ಜತೆಯಾಗಿ ಬಿಡುತ್ತದೆ.
ಪರದೆಯ ಮೇಲೆ ಹೀರೋಯಿನ್ ಕುಣಿಯುತ್ತಿದ್ದಾಳೆ, ಹೀರೋ ಫೈಟ್ ಮಾಡುತ್ತಿದ್ದಾನೆ ಎಂದರೆ ನೋಡುವವರು, ವಿಸಿಲ್ ಹೊಡೆಯುವವರು ಇದ್ದರೆ ಮಾತ್ರ. ಹೀರೋ ಸಭೆಯಲ್ಲಿ ಬಂದು ಕೈ ಬೀಸಿದಾಗ ಕೂಗಿ ಉನ್ಮಾದಕ್ಕೊಳಗಾಗುವ ಅಭಿಮಾನಿಗಳು ಅಥವಾ ದರ್ಶಕರು ಬೇಕೇ ಬೇಕು. ರಾಜಕಾರಣಿ ಸೋತು ಬಿಟ್ಟರೆ, ಸಿನಿಮಾ ನಟ ಫ್ಲಾಪ್ ಆಗಿಬಿಟ್ಟರೆ, ಆತ ಕಳೆದುಕೊಳ್ಳುವುದು ತನ್ನ ದರ್ಶಕರನ್ನು. ಆತನಿಗೆ ಅದಕ್ಕಿಂತ ದೊಡ್ಡ ಭಯ ಇನ್ನೊಂದಿಲ್ಲ. ಆ ಕಳೆದುಕೊಳ್ಳುವ ಭಯ ದಿಂದಲೇ ನಿರಂತರ ಜಾಗೃತವಾಗಿರುತ್ತಾನೆ.
ಚುನಾವಣೆ, ಒಲಿಂಪಿಕ್, ವಿಶ್ವಕಪ್, ಧಾರಾವಾಹಿ, ಸಿನಿಮಾ, ಕಿರುಚಾಟದ ಪ್ರೈಮ್ಟೈಮ್ ವಾರ್ತೆ ಇವೆಲ್ಲ ದೃಶ್ಯ ವ್ಯವಸ್ಥೆಯ ಭಾಗಗಳು-ಪ್ರದರ್ಶನಗಳು. ಇವನ್ನೆಲ್ಲ ನಿರ್ವಹಿಸುವ ರಾಜಕಾರಣಿಗಳು, ನಟರು, ಟಿವಿ ಆಂಕರ್ ಇವರೆಲ್ಲ ‘ದೃಶ್ಯ’ರು. ಇವರನ್ನು ಹಿಂಬಾಲಿಸುವವರು ದರ್ಶಕರು. ಓಶೋ ಈ ದೃಶ್ಯ ಮತ್ತು ದರ್ಶಕರ ಬಗ್ಗೆ ಹೇಳುವಾಗ ಕೊಡುವ ಕುದುರೆ ರೇಸ್ನ ಉದಾಹರಣೆ ಮಜವಾಗಿದೆ.
ಕುದುರೆ ರೇಸ್ ವ್ಯವಸ್ಥೆ, ಕುದುರೆ ಸವಾರ, ಕುದುರೆ ಇವೆಲ್ಲ ದೃಶ್ಯ. ಅದನ್ನು ನೋಡುವವನು, ದುಡ್ಡು ಕಟ್ಟಿ ಜೂಜಾಡುವವನು ದರ್ಶಕ. ದರ್ಶಕ ಎಂದೂ ದೃಶ್ಯನಾಗಲಾರ. ಕುದುರೆ ಬಾಲಕ್ಕೆ ದುಡ್ಡು ಕಟ್ಟಲು ಬಂದವನು ರೇಸ್ ಟ್ರ್ಯಾಕ್ನಲ್ಲಿ ಓಡಿದರೆ ಅವನನ್ನು ನೋಡಲು ಕುದುರೆ ಬಂದು ನಿಲ್ಲುವುದಿಲ್ಲ..!
ಈಗೀಗ ದಿನಗಳೆದಂತೆ ಜನರು ಹೆಚ್ಚು ಹೆಚ್ಚು ದರ್ಶಕರಾಗುತ್ತಿದ್ದಾರೆ. ಟಿವಿಯ ಮುಂದೆ ಮೂರರಿಂದ ನಾಲ್ಕು ತಾಸು, ಜತೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇನ್ನೊಂದಿಷ್ಟು ತಾಸು. ಭಾರತದಲ್ಲಿ ಸ್ಮಾರ್ಟ್ ಫೋನ್ ಉಳ್ಳವರು ಸರಾಸರಿ ಐದು ತಾಸು- ಪ್ರತಿದಿನ ಮೊಬೈಲ್ನಲ್ಲಿ ಕಳೆಯುತ್ತಿದ್ದಾರೆ.
ಮೊಬೈಲ್ ಅಥವಾ ಟಿವಿ ದೃಶ್ಯ ವ್ಯವಸ್ಥೆ- ಅದರೊಳಗಿರುವವರು ದೃಶ್ಯರು- ಹೊರಗಿರುವವರು ದರ್ಶಕರು. ದರ್ಶಕರ ಸಂಖ್ಯೆ ಅತ್ಯಧಿಕ. ದರ್ಶಕನಿಗೆ ಈ ವ್ಯವಸ್ಥೆಯಲ್ಲಿ ಯಾವುದೇ ವೈಯಕ್ತಿಕ ಐಡೆಂಟಿಟಿ- ಗುರುತು ಇರುವುದಿಲ್ಲ. ವಿರಾಟ್ ಕೊಹ್ಲಿ ಮೈದಾನದಲ್ಲಿ ನೆರೆದಿರುವ ತಮ್ಮ ಫ್ಯಾನ್ ಗಳತ್ತ ಕೈ ಬೀಸುವಾಗ, ಮಂತ್ರಿ ಚುನಾವಣಾ ಸಭೆಯಲ್ಲಿ ಕೈ ಬೀಸುವಾಗ ಅಲ್ಲಿರುವ ಯಾರಿಗೂ ವೈಯಕ್ತಿಕ ಗುರುತು ಎನ್ನುವುದು ಇಲ್ಲ.
ಮತದಾರರು, ಅಭಿಮಾನಿಗಳು ಎಂಬ ಗುಂಪಿನ ಗುರುತೇ ದರ್ಶಕನ ಗುರುತು. ನಿಮಗೆ ಬ್ರಿಟನ್ ಯುವರಾಣಿ ಡಯಾನಾ ಸತ್ತ ಘಟನೆಯ ವಿವರ ನೆನಪಿರಬಹುದು. ಬ್ರಿಟಿಷ್ ರಾಜಮನೆತನ ಅಲ್ಲಿಂದಿಲ್ಲಿಗೂ ದೃಶ್ಯವಾಗಿಯೇ ಇದ್ದ ವ್ಯವಸ್ಥೆ. ಅಲ್ಲಿ ಡಯಾನಾ ಕೂಡ. ಆಕೆಯ ಸಾವು ಸಂಭವಿ ಸಿದ್ದು ಯಾರೋ ಒಬ್ಬ ಪಾಪರಾಜಿ (ಪ್ರಭಾವಿಗಳ ಬೆನ್ನುಬೀಳುವ ಸ್ವತಂತ್ರ ಪತ್ರಕರ್ತ/ಸ್ವತಂತ್ರ ಛಾಯಾಗ್ರಾಹಕ) ಅವಳ ಬೆನ್ನು ಹತ್ತಿದ್ದರಿಂದ. ಅವಳ ಬಗೆಗಿನ ಯಾವುದೇ ಸುದ್ದಿಗೆ ಅಷ್ಟು ಹಿಂಬಾಲಕರಿದ್ದರು- ದರ್ಶಕರಿದ್ದರು.
ಈ ದರ್ಶಕನ ವ್ಯವಸ್ಥೆಯೇ ಆಕೆಯನ್ನು ಬಲಿತೆಗೆದುಕೊಂಡಿತು. ನೀವು ಸೋಷಿಯಲ್ ಮೀಡಿಯಾ ಬಳಸುವವರಾದರೆ ಈ ದೃಶ್ಯ ನೋಡಿಯೇ ಇರುತ್ತೀರಿ. ಮುಂಬೈನ ರಸ್ತೆಗಳಲ್ಲಿ, ವಿಮಾನ ನಿಲ್ದಾಣ ದೆದುರು ಸಿನಿಮಾ ನಟ-ನಟಿಯರು, ನಡೆದು ಬರುತ್ತಿರುತ್ತಾರೆ. ಅವರು ಬರುವುದನ್ನೇ ರೀಲ್ಸ್ ಮಾಡಿ ಹಾಕುವ ಪಾಪರಾಜಿಗಳಿದ್ದಾರೆ.
ನೀವು ಅಂಥ ಪೋ ಅನ್ನು ಒಮ್ಮೆ ನೋಡಿ. ಕೋಟಿ ಕೋಟಿ ಜನ ಆ ವಿಡಿಯೋ ನೋಡಿರುತ್ತಾರೆ, ಲೈಕ್ ಒತ್ತಿರುತ್ತಾರೆ, ಇಲ್ಲವೇ ಬಾಯಿಗೆ ಬಂದಂತೆ ಬರೆದಿರುತ್ತಾರೆ. ಇವರೆಲ್ಲರೂ ದರ್ಶಕರೇ. ಸೋಷಿ ಯಲ್ ಮೀಡಿಯಾದಲ್ಲಿ- ಸಾಮಾನ್ಯ ಬಳಕೆದಾರರು ದರ್ಶಕರು. ಹಿಂಬಾಲಕರು- ಫಾಲೋವರ್ಸ್ ಜಾಸ್ತಿಯಾ ದಂತೆ ವ್ಯಕ್ತಿ ದರ್ಶಕನಿಂದ ದೃಶ್ಯವಾಗುತ್ತಾ ಹೋಗುತ್ತಾನೆ.
ದರ್ಶಕನಾದವನು ದೃಶ್ಯರೊಂದಿಗೆ ಗುರುತಿಸಿಕೊಂಡು ದೃಶ್ಯವಾಗಲು ಹಂಬಲಿಸುತ್ತಾನೆ. ಈಗ ಇವಿಷ್ಟು ಹಿನ್ನೆಲೆಯನ್ನು ದೃಶ್ಯರು ಮತ್ತು ದರ್ಶಕರು ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೆಲವೊಂದು ಘಟನೆಗಳನ್ನು ನೆನಪಿಸಿಕೊಳ್ಳೋಣ. ಮೊದಲನೆಯದಾಗಿ ವರನಟ ಡಾ.ರಾಜ್ ಕುಮಾರ್ ವಿಧಿವಶರಾದಾಗ ನಡೆದ ಘಟನೆ. ಆ ದಿನ ಸಾಗರೋಪಾದಿಯಾಗಿ ಅಭಿಮಾನಿಗಳು ಸೇರಿದ್ದರು.
ಅವರಲ್ಲಿ ಕೆಲವರ ನಡೆ ಹೇಗಿತ್ತೆಂದರೆ ಅವರೇ ಪೂಜಿಸಿದ ರಾಜಕುಮಾರ್ ಒಪ್ಪದ ರೀತಿಯಲ್ಲಿ, ಆ ದಿನ ಐದಾರು ಮಂದಿ ಸತ್ತರು, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ವಿಷ್ಣುವರ್ಧನ್ ತೀರಿಕೊಂಡಾಗ? ಇನ್ನು ನಮ್ಮೆಲ್ಲರ ನೆಚ್ಚಿನ ನಟ ಪುನೀತ್ ರಾಜ್ಕುಮಾರ್ ತೀರಿಕೊಂಡಾಗ ನಡೆದದ್ದೆಲ್ಲ ತಿಳಿದೇ ಇದೆ. ಇಂಥ ಅದೆಷ್ಟೋ ಘಟನೆಯಲ್ಲಿ ಹೋದ ಜೀವಗಳಿಗೆ ಯಾವ ಬೆಲೆಯಿದೆ? ಹಾಗೆ ತೀರಿಕೊಂಡ ಅಭಿಮಾನಿಗಳ ಹೆಸರು ಯಾರಿಗೆ ನೆನಪಿರುತ್ತದೆ? ಹಾಗೆ ಬಂದ ಸಾವಿಗೆ ಅರ್ಥವೇ ನಿದೆ? ಅವರನ್ನು ನೆನಪಿಡಲು ಅವೇನು ಸ್ವಾತಂತ್ರ್ಯ ಹೋರಾಟಕ್ಕೆ, ದೇಶ ಉಳಿಸಲು ಹೋದ ಜೀವಗಳಲ್ಲ. ಅಂತೆಯೇ ಈ ನಟರಿಗೆ ಅವರು ಯಾರೂ ಪರಿಚಯದವರೂ ಅಲ್ಲ, ಅವರ ಹೆಸರೂ ಗೊತ್ತಿಲ್ಲ.
ಬೆಂಗಳೂರಿನಲ್ಲಿ ಕಾಲ್ತುಳಿತದಲ್ಲಿ ಸತ್ತವರ ಹೆಸರು ವಿರಾಟ್ ಕೊಹ್ಲಿಗೆ ಗೊತ್ತಿತ್ತೇ? ಇದೆಲ್ಲ ಕೇವಲ ವಿಷಯದ ಸ್ಪಷ್ಟತೆಗೆ ತೆಗೆದುಕೊಂಡ ಉದಾಹರಣೆಗಳು. ಹೇಗಿದೆ ನೋಡಿ- ವ್ಯಕ್ತಿ ಹೆಚ್ಚು ದೃಶ್ಯ ವಾಗುತ್ತಿದ್ದಂತೆ- ಸೆಲೆಬ್ರಿಟಿಯಾಗುತ್ತಿದ್ದಂತೆ ಆತನಿಗೆ ದರ್ಶಕರದ್ದೇ ಕಾಟ. ಅಭಿಮಾನಿಗಳೆಂದರೆ ದೇವರು ಎನ್ನುವ ನಟ ಎಂ.ಜಿ.ರೋಡ್ನಲ್ಲಿ ಸಾಮಾನ್ಯರಂತೆ ನಡೆಯಲು ಸಾಧ್ಯವೇ? ದರ್ಶಕರು ಬೇಕು- ಆದರೆ ದೂರವೇ ಇಡಬೇಕಾದ ಪರಿಸ್ಥಿತಿ.
ಹಾಗಂತ ಕೆಲವು ದರ್ಶಕರು, ಹಿಂಬಾಲಕರು ಸೆಲೆಬ್ರಿಟಿಗಳಿಗೆ ಹತ್ತಿರವಾಗುತ್ತಾರೆ. ಅಂಥವರು ಯಾವುದೇ ಹಂತಕ್ಕೆ- ಯಾವುದೇ ಕೆಲಸಕ್ಕೆ ಮುಂದಾದ ಉದಾಹರಣೆ ಸಾಕಷ್ಟಿದೆ. ಯಾವುದೆಂದು ಈಗಾಗಲೇ ನೀವು ಅಂದಾಜಿಸಿರಬಹುದು- ವಿಷಯ ಕೋರ್ಟಿನಲ್ಲಿದೆ. ಅಭಿಮಾನಿಗಳು ಪರಸ್ಪರ ಹೊಡೆದಾಡುವುದು ಇವೆಲ್ಲ ಇದರದೇ ಮುಂದುವರಿದ ಭಾಗ. ತಾವು ನಂಬಿದ ದೃಶ್ಯಕ್ಕೆ- ನಾಯಕ ನಿಗಾಗಿ ದರ್ಶಕ ಜೀವ ಬೇಕಾದರೂ ಬಿಡಬಲ್ಲ ಹಂತಕ್ಕೆ ಹೋಗಬಲ್ಲ..!
ಕೆಲವೊಮ್ಮೆ ಒಂದು ವರ್ಗದ ‘ದೃಶ್ಯ’ರು ಇನ್ನೊಂದು ವರ್ಗದವರನ್ನು ಬಳಸಿಕೊಳ್ಳಲು ಮುಂದಾ ಗುವುದಿದೆ. ಉದಾಹರಣೆಗೆ, ಆರ್ಸಿಬಿ ಕಪ್ ಗೆದ್ದ ಘಟನೆ! ಇಂದು ಸೂಕ್ಷ್ಮವನ್ನು ಗಮನಿಸಬಹುದು. ಕ್ರಿಕೆಟ್ ತಂಡ- ಆಟಗಾರರು ಇವರೆಲ್ಲ ದೃಶ್ಯರು. ಈ ತಂಡ ಗೆದ್ದದ್ದು, ಕಪ್ ಪಡೆದದ್ದು ಇವು ಯಾವುದೂ ಕರ್ನಾಟಕ ಸರಕಾರಕ್ಕೆ- ರಾಜಕಾರಣಿಗಳಿಗೆ ಸಂಬಂಧವೇ ಇಲ್ಲದ ವಿಷಯ. ಆರ್ಸಿಬಿ ಕರ್ನಾಟಕ ಸರಕಾರದ ಮಾನ್ಯತೆ ಪಡೆದ ತಂಡವಲ್ಲ.
ಕ್ರೀಡಾ ಸಚಿವರು ಆರ್ಸಿಬಿ ಕೋಚ್ ಏನಲ್ಲ. ಆರ್ಸಿಬಿ ಹೆಸರಿನಲ್ಲಿ ‘ಬೆಂಗಳೂರು’ ಎಂಬ ಶಬ್ದ ಬಿಟ್ಟರೆ ಅಲ್ಲಿ ಕನ್ನಡಿಗರದ್ದು ಎನುವುದು ಏನಿದೆ? ನಾನು ಕೂಡ ಕ್ರಿಕೆಟ್- ಆರ್ಸಿಬಿ- ವಿರಾಟ್ ಕೊಹ್ಲಿ ಅಭಿಮಾನಿಯೇ. ಅದು ನಮ್ಮದೇ ತಂಡ ಎಂದು ಭಾವಿಸಿದವನೇ. ಆದರೆ ಅದು ಕ್ರಿಕೆಟ್ ಅಭಿಮಾನಿಗಳ ಭಾವನೆ. ಕೆಲವೊಮ್ಮೆ ಅದೆಲ್ಲ ಕೃತಕವಾಗಿ ಹುಟ್ಟಿಸಿದ ಭಾವನೆಗಳು ಎಂದೆನಿಸಿ ದರೂ ಅದು ನಮ್ಮದೇ ತಂಡ ಎಂಬುದು ಕನ್ನಡಿಗರಲ್ಲಿ ವ್ಯಾಪಕವಾಗಿದೆ.
ವಿಜಯ್ ಮಲ್ಯ ದೇಶ ಬಿಟ್ಟು ಹೋದ ಮೇಲೆ ಅದನ್ನು ಯಾರು ನಡೆಸುತ್ತಿದ್ದಾರೆ ಎಂದೇ ಬಹು ಜನರಿಗೆ ತಿಳಿದಿಲ್ಲ- ಆದರೂ ಅದು ನಮ್ಮದೇ ತಂಡ. ಆದರೆ ಕರ್ನಾಟಕ ಸರಕಾರಿ ವ್ಯವಸ್ಥೆಗೂ ಆರ್ಸಿಬಿಗೂ ಎಲ್ಲಿಯ ಸಂಬಂಧವಪ್ಪಾ? ಎತ್ತಣ ಕೋಣ, ಎತ್ತಣ ಸೂಜಿ ಡಬ್ಬಣ? ಆರ್ಸಿಬಿ, ಕ್ರಿಕೆಟ್ ಆಟಗಾರರು ಇಲ್ಲಿ ದೃಶ್ಯರು. ಕ್ರಿಕೆಟ್ ಅಭಿಮಾನಿಗಳು ದರ್ಶಕರು. ಅದೇ ಅಭಿಮಾನಿಗಳು ರಾಜಕಾರಣಿಗಳೆಂಬ ದೃಶ್ಯರ ದರ್ಶಕರೂ ಹೌದು. ಹೀಗೆ ಎರಡು ದೃಶರು ಜತೆಯಾದದ್ದು.
ಇಲ್ಲಿ ಅವಶ್ಯಕತೆ ಏನು? ದೃಶ್ಯರ ಅವಶ್ಯಕತೆ- ದರ್ಶಕರು. ಇದನ್ನು ಬೇರೆ ಯಾವ ರೀತಿಯಲ್ಲೂ ವಿಶ್ಲೇಷಿಸಲು ಸಾಧ್ಯವೇ ಇಲ್ಲ. ಪರಸ್ಪರ ಅವಶ್ಯಕತೆ ಕೂಡ ದರ್ಶಕ ಕೇಂದ್ರಿತ.ಕಾಲ್ತುಳಿತವಾದದ್ದು ಅತ್ಯಂತ ಖೇದಕರ ವಿಷಯ. ಅದಾಗಬಾರದಿತ್ತು. ಈಗಾಗಲೇ ಮೀಡಿಯಾದಲ್ಲಿ ಯಾರ ತಪ್ಪು ಎಂಬ ಚರ್ಚೆ ನಡೆಯುತ್ತಿದೆ.
ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಇದರ ಬಗ್ಗೆ ತನಿಖೆ ನಡೆಯಲಿದೆ ಎಂದಿದ್ದಾರೆ. ತನಿಖೆ ನಡೆಯುತ್ತದೆ- ಅನುಮಾನವಿಲ್ಲ. ಯಾರದು ತಪ್ಪು ಎಂದೂ ಗೊತ್ತಾಗುತ್ತದೆ. ಇಲ್ಲ ಒಂದಿಷ್ಟು ಮಂದಿ ಪೊಲೀಸರನ್ನು ಗುರುತಿಸಿ ಅಮಾನತಿ’ನಂಥ ಘನಘೋರ ಶಿಕ್ಷೆಯನ್ನೂ ಕೊಡಲಾಗುತ್ತದೆ. ಇದೆಲ್ಲ ಹೀಗೆಯೇ ನಡೆಯುವುದು ಎಂಬುದರಲ್ಲಿ ಅನುಮಾನವಿಲ್ಲ. ಅದಕ್ಕಿಂತ ದೊಡ್ಡ ಶಿಕ್ಷೆ ಕೊಟ್ಟರೂ, ಸಂತ್ರಸ್ತರಿಗೆ ಹತ್ತು ಲಕ್ಷ ಬದಲು ಇಪ್ಪತ್ತೈದು ಲಕ್ಷ ಪರಿಹಾರ ಕೊಟ್ಟರೂ ಅಷ್ಟೆ.
ಆಮೇಲೆ ಏನು? ಹೋದ ಜೀವ ಒಂದು ಕಡೆ- ಗಾಯಗೊಂಡವರಲ್ಲಿ ಶಾಶ್ವತ ಅಂಗವೈಕಲ್ಯವಾದರೆ? ಆ ಗುರುತೇ ಇಲ್ಲದ ಅಭಿಮಾನಿ ಜೀವಮಾನವಿಡೀ ಅಂಥದ್ದೊಂದು ಗುರುತನ್ನು ಇಟ್ಟುಕೊಂಡು ಬದುಕಬೇಕಲ್ಲ. ಜೀವ ಕಳೆದುಕೊಂಡವರ ಕುಟುಂಬದವರು ಮುಂದಿನ ವರ್ಷದ ಐಪಿಎಲ್ ಸೀಸನ್ನಲ್ಲಿಯೇ ವರ್ಷಾಂತಿಕದ ನೋವು ಅನುಭವಿಸಬೇಕಲ್ಲ.
ತಪ್ಪು ಹೋದವರದ್ದೋ, ಪೊಲೀಸರದೋ, ಸರಕಾರದ್ದೋ, ಇನ್ಯಾರದ್ದೋz ಎಂಬುದು ಇಲ್ಲಿನ ಚರ್ಚೆಯಲ್ಲ. ಹೀಗೊಂದು ಖೇದಕರ ಘಟನೆ ನಡೆಯಿತಲ್ಲ ಎಂಬುದು ಮಾತ್ರ. ಅದಕ್ಕೆ ಮೂಲ ಕಾರಣ? ಇದೆಲ್ಲದಕ್ಕೆ ಕಾರಣವಾಗಿದ್ದು ಯಾರ ಯಾವ ಅವಶ್ಯಕತೆ? ಈಗ ಮೂರನೇ ರೀತಿಯ- ಗುಂಪಿನ ವ್ಯಕ್ತಿಗಳ ಬಗ್ಗೆ ಹೇಳಬೇಕು. ಆಗ ಮಾತ್ರ ಲೇಖನ ಪೂರ್ಣವಾಗುತ್ತದೆ.
ಮೂರನೇ ವರ್ಗದವರು- ದ್ರಷ್ಟರು. ದ್ರಷ್ಟರು ಎಂದರೆ ಸರ್ವಜ್ಞರು- ಬುದ್ಧ, ಮಹಾವೀರ, ಕೃಷ್ಣ, ರಾಮರು. ಆದರೆ ಇಂದಿನ ಜನ ಸಾಮಾನ್ಯರಲ್ಲಿಯೂ ದ್ರಷ್ಟರು ಇದ್ದಾರೆ. ಅವರು ಈ ಲೇಖನಕ್ಕೆ ಪ್ರಸ್ತುತ. ಅವರು- ದರ್ಶಕ ಮತ್ತು ದೃಶ್ಯ ಇಬ್ಬರನ್ನೂ ಹೊರನಿಂತು ಸಮಚಿತ್ತದಲ್ಲಿ ನೋಡುವಂಥ ವರು. ಇವರು ಇಪ್ಪತ್ನಾಲ್ಕು ಗಂಟೆಯ ಬ್ರೇಕಿಂಗ್ ನ್ಯೂಸ್ ಅನ್ನು ತಾಸುಗಟ್ಟಲೆ- ದಿನಗಟ್ಟಲೆ ಸಿನಿಮಾ ರೀತಿ ನೋಡುವವರಲ್ಲ.
ಬದಲಿಗೆ ನಿತ್ಯ 9 ಗಂಟೆಯ ಪ್ರೈಮ್ ಸುದ್ದಿ ಒಂದಿಷ್ಟು ಸಮಯ ನೋಡುವವರು, ಸರಿಯಾದ ಮಾಹಿತಿಗೆ ಮಾರನೆಯ ದಿನದ ಪತ್ರಿಕೆ, ವೆಬ್ಸೈಟ್ ಓದುವವರು. ಇವರು ಒಳ್ಳೆಯ ಸಿನಿಮಾ ಬಂದರೆ ಹೋಗಿ ನೋಡಿ, ಖುಷಿ ಪಟ್ಟು ಬರುವವರು. ಆದರೆ ನಟ ತಮ್ಮೂರಿಗೆ ಬಂದಿದ್ದಾನೆ ಎಂದು ಮರ ಹತ್ತಿ ಕೂರುವವರಲ್ಲ ಅಥವಾ ಕಾಲುವೆ ಹಾರುವವರಲ್ಲ.
ಇವರಿಗೆ ಸೆಲೆಬ್ರಿಟಿ ಎಂದರೇನು ಮತ್ತು ತಾವೇನು ಎಂಬ ಸ್ಪಷ್ಟತೆ ಇದೆ. ಅಲ್ಲಿ ಯಾವುದೇ ಗೊಂದಲ ವಿಲ್ಲ. ಇವರು ಚುನಾವಣೆಯ ಚರ್ಚೆಗಳಲ್ಲಿ ಭಾಗಿಯಾಗುವವರು, ಯೋಗ್ಯರಿಗೆ ಮತ ಚಲಾಯಿಸು ವವರು. ಆದರೆ ತಮಗಿಷ್ಟವಾದ ಮಂತ್ರಿ ಮಾಡಿದ್ದೆಲ್ಲ ಸರಿ, ಆತ ತಪ್ಪೇ ಮಾಡುವವನಲ್ಲ ಇಂದು ಹೇಳುವವರಲ್ಲ.
ಇವರಿಷ್ಟದ ರಾಜಕಾರಣಿ, ಸನ್ಯಾಸಿ, ಪ್ರಭಾವಿ ಯಾರೇ ತಪ್ಪುಮಾಡಿದರೂ ಅದನ್ನು ತಪ್ಪು ಎಂದು ಗುರುತಿಸುವವರು. ಇವರು ಯಕ್ಷಗಾನ, ನಾಟಕ ಮುಗಿದ ನಂತರ ಗ್ರೀನ್ ರೂಮ್ಗೆ ಹೋಗದೆ, ನೇರವಾಗಿ ಮನೆಸೇರುವವರು. ಯಾವುದೇ ದೃಶ್ಯವನ್ನು ತಮ್ಮ ಗುರುತಾಗಿಸಿಕೊಳ್ಳದವರು. ನಟರನ್ನು ನಟರನ್ನಾಗಿ ಮಾತ್ರ, ರಾಜಕಾರಣಿಯನ್ನು ರಾಜಕಾರಣಿಯಾಗಿ ಮಾತ್ರ ಕಾಣುವವರು.
ಮನರಂಜಕನನ್ನು ಅಂತೆಯೇ ನೋಡುವವರು. ಇವರಿಗೆ ಸೆಲೆಬ್ರಿಟಿಯ ಜತೆಗಿನ ಫೋಟೋ, ಸೆಲ್ಫಿ, ಆಟೋಗ್ರಾ- ಇವು ಯಾವುದಕ್ಕೂ ಅರ್ಥವಿಲ್ಲ ಎಂಬುದು ಗೊತ್ತು. ಇವರಿಗೆ ದೃಶ್ಯರೆಲ್ಲರೂ ಇಷ್ಟವೇ, ಆದರೆ ಇವರು ಕುರಿ ಮಂದೆಯಲ್ಲ. ತಮ್ಮದೇ ಸ್ವತಂತ್ರ ನಿಲುವುಳ್ಳವರು, ಸ್ವಾಭಿಮಾನದವರು, ತಮಗೇನು ಬೇಕು ಎಂಬುದರ ಸ್ಪಷ್ಟತೆ ಇರುವವರು. ನಾನಿಲ್ಲಿ ದೃಶ್ಯರು ಕೆಟ್ಟವರು, ದರ್ಶಕರು ದಡ್ಡರು, ಇದೆಲ್ಲವನ್ನೂ ಸಮಚಿತ್ತದಲ್ಲಿ ಕಾಣುವ ದ್ರಷ್ಟರು ಬುದ್ಧಿವಂತರು ಎಂಬಿತ್ಯಾದಿ ಆರೋಪಿ ಸುತ್ತಿಲ್ಲ.
ಅವೆಲ್ಲವೂ ಅವರವರ ವೈಯಕ್ತಿಕ ಅವಶ್ಯಕತೆಗಳು. ಯಾವುದೂ ಸಾರ್ವತ್ರಿಕವಲ್ಲ. ಇಲ್ಲಿನ ವಿಷಯ ಕೇಂದ್ರ ದರ್ಶಕ. ಸೆಲಿಬ್ರಿಟಿಯಾಗುವುದು- ದೃಶ್ಯವಾಗುವುದಕ್ಕೆ ಬುದ್ಧಿವಂತಿಕೆ, ಏನೋ ಒಂದು ವಿಶೇಷತೆ ಬೇಕು. ದರ್ಶಕನಾಗಲಿಕ್ಕೆ ಯಾವುದೇ ಅರ್ಹತೆಯ ಮಾನದಂಡವಿಲ್ಲ. ತನಗೆ ತಾನೇ ಅಭಿಮಾನಿ ಎಂದು ಆರೋಪಿಸಿಕೊಂಡರೆ ಆಯ್ತು. ನಾನು ಇವರ ಫ್ಯಾನ್, ಹಿಂಬಾಲಕ ಎಂದು ಘೋಷಿಸಿಕೊಂಡರಾಯಿತು.
ಆದರೆ ದರ್ಶಕನಾಗುವುದು- ಹಿಂಬಾಲಕನಾಗಿ ಜೀವ ಕಳೆದುಕೊಳ್ಳುವ ಸ್ಥಿತಿಗೆ ಮುಟ್ಟುವುದು, ಅವೆಲ್ಲದಕ್ಕೂ ಸ್ವಾತಂತ್ರ್ಯ, ಮೋಜು ಎಂಬ ಶಬ್ದಾರೋಪ ಮಾಡುವುದು ಸರಿಯಲ್ಲ. ಹಿಂಬಾಲಕ ರಾಗಬೇಕೋ ಅಥವಾ ದ್ರಷ್ಟರಾಗಬೇಕೋ ಅದು ವ್ಯಕ್ತಿಗತ ಸ್ವಾತಂತ್ರ್ಯ. ಕೊನೆಯಲ್ಲಿ: ದ್ರಷ್ಟರು ಯಾರು? ಇವರು ಆರ್ಸಿಬಿ ಹದಿನೆಂಟು ವರ್ಷದ ನಂತರ ಕಪ್ ಗೆದ್ದರೆ ಖುಷಿಪಡುವವರು. ಪಂದ್ಯ ಮುಗಿದ ನಂತರ ಟಿವಿ ಆರಿಸಿ ಮಲಗುವವರು. ಉಳಿದವರು ದೃಶ್ಯರು, ದರ್ಶಕರು ಮತ್ತು ಈಗ ಡಜನ್ ನತದೃಷ್ಟರು. ಛೇ, ಇವೆಲ್ಲವೂ ನ್ಯಾಯವಲ್ಲದ ಸಾವು...!!