ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ಎಲ್ಲೋಯ್ತು ನಮ್ಮ ಎಂಜಿನಿಯರುಗಳ (ಕ) ಮಿಷನ್‌ ?

ಚೆನಾಬ್ ಸೇತುವೆ ಕಂಡ ಎಂಜಿನಿಯರಿಂಗ್ ಕೌಶಲ್ಯ ನಮ್ಮಲ್ಲಿ ಯಾಕಿಲ್ಲ? ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜಿ. ಮಾಧವಿ ಲತಾ ಅವರು 17 ವರ್ಷಗಳ ಕಾಲ ಈ ಯೋಜನೆಯಲ್ಲಿ ತೊಡಗಿಸಿ ಕೊಂಡಿದ್ದರು. ಈ ಹಿತ್ತಲಗಿಡ ನಮಗೇಕೆ ಮದ್ದಾಗಲಿಲ್ಲ? ರಾಜಧಾನಿ ಬೆಂಗಳೂರಿ ನಲ್ಲಿ ಜೋರಾಗಿ ಅರ್ಧ ಗಂಟೆ ಮಳೆ ಬಂದರೆ ಸಾಕು. ರಸ್ತೆಗಳೇ ನದಿಗಳಾಗುತ್ತವೆ. ಸಂಚಾರ, ಜನಜೀವನ ಅಸ್ತವ್ಯಸ್ತ. ಬಸ್-ಕಾರುಗಳು ಬಿಡಿ, ಆಂಬುಲೆನ್ಸ್ ಕೂಡ ಹೋಗಲಿಕ್ಕಾಗದ ಸ್ಥಿತಿ.

ಎಲ್ಲೋಯ್ತು ನಮ್ಮ ಎಂಜಿನಿಯರುಗಳ (ಕ) ಮಿಷನ್‌ ?

ಲೋಕಮತ

kaayarga@gmail.com

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉದ್ಘಾಟಿಸಿದ ಜಮ್ಮುವಿನ ರಿಯಾಸಿ ಜಿಲ್ಲೆಯ ಚೆನಾಬ್ ಸೇತುವೆಯ ಎಂಜಿನಿಯರಿಂಗ್ ಕೌಶಲ್ಯದ ಬಗ್ಗೆ ಎನ್ ಡಿಎಯೇತರ ಪಕ್ಷಗಳ ನಾಯಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ, ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಫಾರೂಕ್ ಅಬ್ದುಲ್ಲಾ ಅವರಂತೂ ವಂದೇ ಭಾರತ್ ರೈಲಿನಲ್ಲಿ ಚೆನಾಬ್ ಸೇತುವೆಯನ್ನು ದಾಟಿದ ಬಳಿಕ ಸಂತಸದಿಂದ ಕಣ್ಣೀರಿಟ್ಟಿದ್ದಾರೆ.

ಕಾಶ್ಮೀರ ಮತ್ತು ದೇಶದ ಉಳಿದ ಭಾಗಗಳ ನಡುವಿನ ದಿಲ್ ಕಿ ದೂರಿ (ಭಾವನಾತ್ಮಕ ಅಂತರ) ಮತ್ತು ದಿಲ್ಲಿ ಕಿ ದೂರಿ (ರಾಜಕೀಯ ಅಂತರ) ಎರಡನ್ನೂ ಕಡಿಮೆ ಮಾಡುವಲ್ಲಿ ಈ ರೈಲು ಸಂಪರ್ಕವು ಪ್ರಮುಖ ಹೆಜ್ಜೆಯಾಗಿದೆ ಎಂಬ ಅಬ್ದುಲ್ಲಾ ಅವರ ಮಾತು ಬಿಜೆಪಿ ನಾಯಕರಿಗೂ ಖುಷಿ ತಂದಿದೆ. ಈ ಸೇತುವೆಗೆ ಋತುಮಾನದ ಅಡ್ಡಿ, ಆತಂಕಗಳಿಲ್ಲ. ಭೂಕಂಪದ ಭಯವಿಲ್ಲ.

ಬಾಂಬ್ ಸ್ಫೋಟದ ಭೀತಿಯೂ ಇಲ್ಲ. ಪ್ಯಾರಿಸ್‌ನ ಐಫೆಲ್ ಟವರ್ ಗಿಂತ 30 ಕಿ.ಮೀ. ಎತ್ತರದ, ವಿಶ್ವದ ಅತಿ ಎತ್ತರದ ಈ ಸೇತುವೆ ನವಭಾರತದ ಇಂಜಿನಿಯರಿಂಗ್ ಕೌಶಲ್ಯಕ್ಕೆ ಸಾಕ್ಷಿಯಾಗಿದೆ ಎನ್ನಲಾಗುತ್ತಿದೆ. ಇದೆಲ್ಲವೂ ನಮ್ಮ ಹೆಮ್ಮೆ ಎಂದು ಒಪ್ಪಿಕೊಳ್ಳೋಣ. ಆದರೆ ಇವೆಲ್ಲವುಗಳ ಮಧ್ಯೆ ನಮ್ಮನ್ನು ಕೆಲವು ಪ್ರಶ್ನೆಗಳು ಆಗಾಗ ಕಾಡುತ್ತವೆ. ಬೆಂಗಳೂರು, ಮಂಗಳೂರಿನಂತಹ ಮಹಾನಗರ ಗಳಲ್ಲಿ, ಪಶ್ಚಿಮ ಘಟ್ಟದಲ್ಲಿ ಹಾದುಹೋಗುವ ನಮ್ಮ ಹೆದ್ದಾರಿಗಳಲ್ಲಿ ಎಲ್ಲ ಋತುಮಾನಗಳಲ್ಲೂ ಸಂಚರಿಸಬಲ್ಲ ರಸ್ತೆ, ಮೇಲುಸೇತುವೆ ನಿರ್ಮಿಸುವ ಎಂಜಿನಿಯರಿಂಗ್ ಕೌಶಲ್ಯ ನಮ್ಮಲ್ಲಿ ಇಲ್ಲವೇ? ಅರ್ಧ ಗಂಟೆಗಿಂತ ಹೆಚ್ಚು ಕಾಲ ಸುರಿಯುವ ಮಳೆಯನ್ನು ತಡೆದುಕೊಳ್ಳುವ ರಸ್ತೆ ನಿರ್ಮಿಸಲು ನಮಗೆ ಸಾಧ್ಯವಿಲ್ಲವೇ? ಹರಪ್ಪ ಮತ್ತು ಸಿಂಧೂ ನಾಗರಿಕತೆಯ ಅವಧಿಯಲ್ಲಿಯೇ ಸುಸಜ್ಜಿತ ಚರಂಡಿ ನಿರ್ಮಿಸಿದ ಭಾರತೀಯರಿಗೆ ಮಳೆ ನೀರು ಸರಾಗವಾಗಿ ಸಾಗಬಲ್ಲ ಚರಂಡಿ ನಿರ್ಮಿಸಲು ಆಗುತ್ತಿಲ್ಲವೇಕೇ? ಇದಕ್ಕೆ ಇಂಜಿನಿಯರಿಂಗ್ ಕೌಶಲ್ಯವನ್ನೂ ಮೀರಿದ ‘ವ್ಯಾವಹಾರಿಕ ಮತ್ತು ರಾಜಕೀಯ ಕೌಶಲ್ಯ’ ಅಗತ್ಯವಿದೆಯೇ? ರಾಜ್ಯ ಮಾತ್ರವಲ್ಲ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆಗಾಗ ಇಂತಹ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಕಳೆದ ವರ್ಷ 10ಕ್ಕೂ ಹೆಚ್ಚು ಸೇತುವೆಗಳು ಉರುಳಿ ಬಿದ್ದಿವೆ. ಇವು ಉದ್ಘಾಟನೆಯಾಗಿ ಇನ್ನೂ 10 ವರ್ಷಗಳು ಕಳೆದಿರಲಿಲ್ಲ. ಚೆನಾಬ್ ಸೇತುವೆಯ ವೈಶಿಷ್ಟ್ಯವನ್ನು ಕಂಡು ಇವರು ಹೀಗೂ ಉಂಟೆ ಎಂದು ಮೂಗು ಮರಿಯಬಹುದು.

ಇದನ್ನೂ ಓದಿ: Lokesh Kaayarga Column: ಆರತಿ ನೆಪದಲ್ಲಾದರೂ ನಮ್ಮ ನದಿಗಳು ಸ್ವಚ್ಛತೆ ಕಾಣಲಿ !

ನಾವಾದರೂ ಅಷ್ಟೆ. ರಾಜ್ಯದಲ್ಲಿ ಮೇ ತಿಂಗಳಿನಲ್ಲಿಯೇ ಆರಂಭವಾದ ಮಳೆ ಆರ್ಭಟ ಮುಂದು ವರಿದಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಎಂದಿನಂತೆ ರಸ್ತೆಗಳು ಕೆರೆಗಳಾಗಿವೆ. ಎಂದಿನಂತೆ ಹೆದ್ದಾರಿಗಳ ಮೇಲೆ ಗುಡ್ಡಗಳು ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಸೇತುವೆಗಳು ಕೊಚ್ಚಿ ಹೋಗಿವೆ. ಕಟ್ಟಡಗಳು ಕುಸಿದು ಬಿದ್ದಿವೆ. ಅಲ್ಲಲ್ಲಿ ಧರೆ ಬಾಯ್ತೆರೆದು ಸಿಕ್ಕವರೆನ್ನೆಲ್ಲ ನುಂಗಲು ಹಾತೊರೆಯುತ್ತಿದೆ.

ಚೆನಾಬ್ ಸೇತುವೆ ಕಂಡ ಎಂಜಿನಿಯರಿಂಗ್ ಕೌಶಲ್ಯ ನಮ್ಮಲ್ಲಿ ಯಾಕಿಲ್ಲ? ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜಿ. ಮಾಧವಿ ಲತಾ ಅವರು 17 ವರ್ಷಗಳ ಕಾಲ ಈ ಯೋಜನೆ ಯಲ್ಲಿ ತೊಡಗಿಸಿಕೊಂಡಿದ್ದರು. ಈ ಹಿತ್ತಲಗಿಡ ನಮಗೇಕೆ ಮದ್ದಾಗಲಿಲ್ಲ? ರಾಜಧಾನಿ ಬೆಂಗಳೂರಿ ನಲ್ಲಿ ಜೋರಾಗಿ ಅರ್ಧ ಗಂಟೆ ಮಳೆ ಬಂದರೆ ಸಾಕು. ರಸ್ತೆಗಳೇ ನದಿಗಳಾಗುತ್ತವೆ. ಸಂಚಾರ, ಜನಜೀವನ ಅಸ್ತವ್ಯಸ್ತ. ಬಸ್-ಕಾರುಗಳು ಬಿಡಿ, ಆಂಬುಲೆನ್ಸ್ ಕೂಡ ಹೋಗಲಿಕ್ಕಾಗದ ಸ್ಥಿತಿ.

ನೀರಲ್ಲಿ ಮುಳುಗಿದ ಅಂಡರ್‌ಪಾಸ್, - ಓವರ್‌ನ ಎಂಟ್ರಿ ಪಾಯಿಂಟ್, ಮೆಟ್ರೋ ನಿಲ್ದಾಣಗಳೆಲ್ಲವೂ ಈ ಗಳಿಗೆಯಲ್ಲಿ ನಮ್ಮ ಎಂಜಿನಿಯರ್‌ಗಳ ಕೌಶಲ್ಯವನ್ನು, ನಮ್ಮ ನಾಯಕರ ದೂರದೃಷ್ಟಿಯನ್ನು ಲೇವಡಿ ಮಾಡುವಂತಿರುತ್ತವೆ. ಜಮ್ಮುವಿನಲ್ಲಿ ಭೂಕಂಪಕ್ಕೆ ಜಗ್ಗದ, ಹವಾಮಾನದ ಎಲ್ಲ ಹೊಡೆತ ಗಳನ್ನು ಸಹಿಸುವ ವಿಶ್ವದ ಅತಿ ದೊಡ್ಡ ಸೇತುವೆಯನ್ನು ನಿರ್ಮಿಸಿದವರು, ಮಂಗಳಯಾನ, ಚಂದ್ರಯಾನ 3 ಯೋಜನೆ ಯಶಸ್ವಿಯಾಗಿ ಮುಗಿಸಿ ಈಗ ಮಾನವ ಸಹಿತ ಗಗನಯಾನಕ್ಕೆ ಹೊರಟ ಎಂಜಿನಿಯರಿಂಗ್ ಮತ್ತು ವೈಜ್ಞಾನಿಕ ಕೌಶಲ ನಿಜಕ್ಕೂ ನಮ್ಮದೇ ಎಂದು ಸಂಶಯ ಪಡುವಂತಾಗುತ್ತದೆ.

ಇದು ಯಾಕೆ ಎಂದು ಪ್ರಶ್ನಿಸಿದರೆ ಬಹುತೇಕರು ರಾಜಕೀಯ ನಾಯಕರ ಒತ್ತಾಸೆ, ಹಸ್ತಕ್ಷೇಪವಿಲ್ಲದೆ ನಮ್ಮಲ್ಲಿ ಯಾವ ಕೆಲಸವೂ ಆಗುವುದಿಲ್ಲ ಎನ್ನುತ್ತಾರೆ. ಆದರೆ ಇದೊಂದೇ ಕಾರಣವಾಗಿದ್ದರೆ, ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಅಂಡರ್ ಪಾಸ್ ನಿರ್ಮಾಣಕ್ಕೆ ಸಲಹೆ ಕೊಟ್ಟಿದ್ದು ನಮ್ಮ ನಾಯಕರೇ?, ಚರಂಡಿಗಳ ಮೇಲೆ ಮೇಲ್ಸೇತುವೆ ಪಿಲ್ಲರ್ ನಿರ್ಮಿಸಿ ಮಳೆ ನೀರು ರಸ್ತೆಗೆ ಬರುವಂತಹ ಐಡಿಯಾ ಕೊಟ್ಟಿದ್ದು ನಮ್ಮ ನಾಯಕರೇ ? ಮೇಲ್ಸೇತುವೆಯಲ್ಲೂ ಟ್ರಾಫಿಕ್ ಸಿಗ್ನಲ್, ಅವೈಜ್ಞಾನಿಕವಾಗಿ ಹಂಪ್ಸ್ ಹಾಕಲು ನಾಯಕರ ಒತ್ತಾಯವಿತ್ತೇ? ಹೆದ್ದಾರಿಯ ಇಕ್ಕೆಲ ಗಳಲ್ಲಿ ಮೈಸೂರು ಪಾಕ್‌ನಂತೆ ಗುಡ್ಡವನ್ನು ನೇರವಾಗಿ ಕಡಿದು, ಮಳೆಗಾಲದಲ್ಲಿ ಕುಸಿಯುವಂತೆ ಮಾಡಿದ್ದು ನಮ್ಮ ನಾಯಕರ ಯೋಜನೆಗಳೇ? ಎಲ್ಲವೂ ನಮ್ಮ ಎಂಜಿನಿಯರ್‌ಗಳ ತಪ್ಪು ಎಂದಲ್ಲ.

ಕಂಪ್ಯೂಟರಿನಲ್ಲಿಯೇ ಯೋಜನೆ, ವಿನ್ಯಾಸ ರೂಪಿಸುವ ಹೊಸ ಪೀಳಿಗೆಯ ಎಂಜಿನಿಯರುಗಳು ಯೋಜನಾ ಸ್ಥಳದಲ್ಲಿ ಕುಳಿತು ಸಾಧಕ-ಬಾಧಕಗಳ ಬಗ್ಗೆ ಒಂದಷ್ಟು ಹೊತ್ತು ಸಲ ಯೋಚಿಸಿದ್ದರೆ ನಮ್ಮ ಬುದ್ದಿಗೇ ಹೊಳೆಯುವ ಎಡವಟ್ಟುಗಳು ಅವರಿಗೂ ಮನದಟ್ಟಾಗುತ್ತಿತ್ತು. ಯೋಜನೆಗಳ ನೀಲ ನಕ್ಷೆ ರೂಪಿಸಿ, ನಾಯಕರ ಅನುಮೋದನೆ ಪಡೆಯುವ ಪಡೆಯುವ ಮುನ್ನ ಹಿರಿಯ ಅಧಿಕಾರಿ ಗಳಾದರೂ ಈ ಬಗ್ಗೆ ಯೋಚಿಸಿದ್ದರೆ ಮಳೆಗಾಲದ ನಿತ್ಯ ಪ್ರಹಸನಗಳನ್ನು ಕಾಣುವ ಅಗತ್ಯವಿರ ಲಿಲ್ಲ.

ನಮ್ಮ ರಾಜ್ಯದ ಶಿಲ್ಪಕಲಾ ವೈಭವ, ವಾಸ್ತು ಕಲೆಯ ಸೊಬಗನ್ನು ಕಾಣಲು ದೇಶವಿದೇಶಗಳ ಪ್ರವಾಸಿಗರು ಈಗಲೂ ಬರುತ್ತಿದ್ದಾರೆ. ಹಾಗೆಯೇ ರಾಜ್ಯದ ಒಂದಷ್ಟು ನಗರಗಳಿಗೆ ಭೇಟಿ ಕೊಟ್ಟರೆ ನಮ್ಮ ಆಧುನಿಕ ಎಂಜಿನಿಯರ್‌ಗಳ ಕಟ್ಟಡ ನಿರ್ಮಾಣ ಕೌಶಲ ಕಂಡು ಬೆರಗಾಗಬಹುದು.

ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಸುಮಾರು ಒಂದೂವರೆ ದಶಕದ ಹಿಂದೆ ಪರಭವನದ ಸಮೀಪವೇ ಪ್ರತ್ಯೇಕ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಯಿತು. ನರ್ಮ್ ಯೋಜನೆಯಡಿ ಅನುದಾನವೂ ಇತ್ತು. ಪಾರ್ಕಿಂಗ್ ಕಟ್ಟಡ ಪೂರ್ಣಗೊಂಡಾಗಲೇ ಎಂಜಿನಿಯರ್‌ ಗಳ ಎಡವಟ್ಟು ಬೆಳಕಿಗೆ ಬಂದಿದ್ದು.

ಕಟ್ಟಡದೊಳಗೆ ಹೋಗಲು ಮತ್ತು ವಾಪಸಾಗಲು ಒಂದೇ ಇರುವುದು ಒಂದೇ ದ್ವಾರ. ಒಳಗಿನಿಂದ ವಾಹನ ಬಂದರೆ ಪಾರ್ಕ್ ಮಾಡಲು ಹೊರಟವರು ರಿವರ್ಸ್ ತೆಗೆದುಕೊಳ್ಳಬೇಕು. ಕಟ್ಟಡ ಪೂರ್ಣ ಗೊಂಡು ವರ್ಷಗಳು ಉರುಳಿದರೂ ಇದರ ಪೂರ್ಣ ಬಳಕೆ ಸಾಧ್ಯವಾಗಿಲ್ಲ. ಇದಕ್ಕೆ ಅನುಮೋದನೆ ನೀಡಿದ ಪಾಲಿಕೆ ಅಧಿಕಾರಿಗಳು, ಎಂಜಿನಿಯರ್‌ಗಳು ಈಗ ಬಡ್ತಿ ಪಡೆದು ಉನ್ನತ ಹುದ್ದೆಗಳಲ್ಲಿದ್ದಾರೆ!

ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆದಾಗ ಮೈಸೂರಿನ ಹೃದಯಭಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವ ಬಗ್ಗೆ ಯಾರೋ ಸಲಹೆ ನೀಡಿದರು. ಸಚಿವ ಎಚ್.ಸಿ. ಮಹದೇವಪ್ಪ ಅವರೂ ಖುದ್ದು ಆಸಕ್ತಿ ತೋರಿದರು. 15 ವರ್ಷಗಳು ಕಳೆದಿವೆ. ಕಟ್ಟಡ ಬಹುತೇಕ ಪೂರ್ಣಗೊಂಡಿದೆ. ಈಗಾಗಲೇ 80 ಕೋಟಿಗೂ ಹೆಚ್ಚು ಹಣ ವ್ಯಯಿಸಲಾಗಿದೆ.

ತಿಂಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಒಳಾಂಗಣ ವಿನ್ಯಾಸಕ್ಕೆ ಇನ್ನೂ 20 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ಮೈಸೂರಿನ ಜನನಿಬಿಡ ದೇವರಾಜು ರಸ್ತೆಗೆ ಹೊಂದಿಕೊಂಡಿರುವ ಈ ಕಟ್ಟಡಕ್ಕೆ ಪಾರ್ಕಿಂಗ್ ಜಾಗವೇ ಇಲ್ಲ. 600ರಿಂದ 700 ಜನ ಬರುತ್ತಾರೆ ಎಂದುಕೊಂಡರೆ ಇವರು ವಾಹನಗಳನ್ನು ಎಲ್ಲಿ ಬಿಡಬೇಕೆಂಬ ಬಗ್ಗೆ ನೀಲನಕ್ಷೆ ರೂಪಿಸಿದ ಕ‘ಮಿಷನ್’ ಎಂಜಿನಿಯರ್‌ ಗಳನ್ನೇ ಕೇಳಬೇಕು!

ಮಂಗಳೂರಿನ ಕಂಕನಾಡಿ ಸಮೀಪದ ಪಂಪ್‌ವೆಲ್ ಸೇತುವೆ ತನ್ನ ಎಂಜಿನಿಯರಿಂಗ್ ಕೌಶಲಕ್ಕೆ ವರ್ಲ್ಡ್ ಫೇಮಸ್. ಇದರ ನಿರ್ಮಾಣಕ್ಕೆ ತೆಗೆದುಕೊಂಡ ದೀರ್ಘ ಅವಧಿ ಸೋಶಿಯಲ್ ಮೀಡಿಯಾ ದಲ್ಲಿ ಮೀಮ್ಸ್‌ಗಳಿಗೆ ಆಹಾರವಾಗಿತ್ತು. ಇದು ಪರೋಕ್ಷವಾಗಿ ಹಿಂದಿನ ಸಂಸದರ ಸ್ಥಾನಕ್ಕೂ ಚ್ಯುತಿ ತಂದಿತ್ತು. ಪಂಪ್‌ವೆಲ್ ನಾಲ್ಕು ಕಡೆಗಳಿಂದ ಏರು ರಸ್ತೆಗಳಿಂದ ಸುತ್ತುವರಿದ ಪ್ರದೇಶ. ಇಲ್ಲಿ ಮೇಲು ಸೇತುವೆ ನಿರ್ಮಾಣಕ್ಕೆ ಮುನ್ನ ನಾಲ್ಕೂ ಕಡೆಯಿಂದ ನುಗ್ಗಿ ಬರುವ ನೀರನ್ನು ಎಲ್ಲಿಗೆ ಹರಿಸಬೇಕೆಂಬ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ಗಳು ಯೋಚಿಸಬೇಕಿತ್ತು.

ಈಗ ಅರ್ಧ ಗಂಟೆಯ ಮಳೆ ಬಂದರೂ ಎರಡು ಹೆದ್ದಾರಿಗಳನ್ನು ಸಂಧಿಸುವ ಈ ಜಾಗ ಕೆರೆಯಾಗುತ್ತದೆ. ನೂರಾರು ವಾಹನಗಳು ನಿಂತಲ್ಲಿಯೇ ನೀರಲ್ಲಿ ಮುಳುಗುತ್ತವೆ. ಈ ಸಮಸ್ಯೆಯನ್ನು ನಿವಾರಿಸ ಬೇಕಾದರೆ ಈಗ ಇಡೀ ಸೇತುವೆಯನ್ನೇ ಒಡೆದು ಮರು ವಿನ್ಯಾಸ ಮಾಡಬೇಕು.

ಕೊಡಗಿನ ಮಡಿಕೇರಿಯಲ್ಲಿ ಭೌಗೋಳಿಕ ಸಂರಚನೆ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಇಲ್ಲಿ ಯಾವುದೇ ಕಾಮಗಾರಿ ನಡೆಸಬೇಕಾದರೂ ಇಲ್ಲಿನ ಇಳಿಜಾರು ಪ್ರದೇಶ, ಸುರಿಯುವ ಭಾರೀ ಮಳೆ, ಸವಕಲು ಮಣ್ಣು ಮತ್ತು ಹವಾಮಾನ ಪರಿಸ್ಥಿತಿಯನ್ನು ಪರಿಗಣಿಸಿ ಮುಂದಡಿ ಇಡಬೇಕಿತ್ತು. ಆದರೆ ಸಮತಟ್ಟು ಜಾಗದಲ್ಲಿ ಕಟ್ಟಿದಂತೆ ನೇರವಾಗಿ ಕಟ್ಟಿದ ತಡೆಗೋಡೆ ಮೊದಲ ಮಳೆಯಲ್ಲಿಯೇ ಜಾರಿ ಕುಳಿತಿದೆ.

ಕಳೆದ ಎರಡು ವರ್ಷಗಳಿಂದ ಇಲ್ಲಿ ಪ್ರತಿ ಮಳೆಗೆ ತಡೆಗೋಡೆಗೆ ಟಾರ್ಪಲಿನ್ ಹೊದಿಸಲಾಗುತ್ತಿದೆ. ಈ ತಡೆಗೋಡೆ ಪೂರ್ತಿಯಾಗಿ ಕುಸಿದು ಬಿದ್ದರೆ ಮಡಿಕೇರಿ-ಸುಳ್ಯ ಹೆದ್ದಾರಿ ಬಂದ್ ಆಗುವುದು ಮಾತ್ರವಲ್ಲ ಘನ ವಾಹನಗಳ ಸಂಚಾರಕ್ಕೆ ಪರ‍್ಯಾಯ ರಸ್ತೆಯೂ ಇಲ್ಲದೆ ಪರದಾಡಬೇಕಿದೆ.

ಕಳೆದ ವರ್ಷ ಅಂಕೋಲಾ ಸಮೀಪದ ಶಿರೂರು ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿದು ಸುಮಾರು 11 ಮಂದಿ ಬಲಿಯಾದ ವಿಚಾರ ಇನ್ನೂ ನಮ್ಮ ನೆನಪಲ್ಲಿ ಹಸಿರಾಗಿದೆ. ಹೆದ್ದಾರಿ ವಿಸ್ತರಣೆ ವೇಳೆ ಗುಡ್ಡವನ್ನು ನೇರವಾಗಿ ಕತ್ತರಿಸದೆ ಓರೆಯಾಗಿ ಕತ್ತರಿಸಿದ್ದರೆ ಇಡೀ ಗುಡ್ಡ ಕುಸಿಯುವ ಅವಕಾಶ ಇರಲಿಲ್ಲ. ಆದರೆ ಹಲ್ವ ಕತ್ತರಿಸಿದಂತೆ ನೇರಕ್ಕೆ ನೇರಕ್ಕೆ ಕಡಿದ ಪರಿಣಾಮ ಗುಡ್ಡ ಕುಸಿತ ನಿರೀಕ್ಷಿತವೇ ಆಗಿತ್ತು.

ವಿಚಾರಣೆ ವೇಳೆ ಅರಣ್ಯ ಇಲಾಖೆ ಜಾಗ ಬಿಟ್ಟುಕೊಡದ ಕಾರಣ ಕಾಮಗಾರಿಗೆ ಅಗತ್ಯ ಜಾಗ ಸಿಕ್ಕಿರಲಿಲ್ಲ ಎಂದು ಗುತ್ತಿಗೆದಾರರು ದೂರಿದ್ದರು. ಇದು ಪಶ್ಚಿಮ ಘಟ್ಟದ ಹೆದ್ದಾರಿಯುದ್ಧಕ್ಕೂ ಇರುವ ಸಮಸ್ಯೆ. ಎರಡೂ ಇಲಾಖೆಯ ಸಚಿವರು, ಮುಖ್ಯಮಂತ್ರಿಗಳು ಸೇರಿ ಒಂದು ಸಲ ಸಭೆ ನಡೆಸಿದ್ದರೆ ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ ಅಮಾಯಕರ ಪ್ರಾಣಹರಣದ ಹೊರತು ಈ ಸಮಸ್ಯೆ ಹಾಗೆಯೇ ಉಳಿದಿದೆ.

ಎರಡು ವರ್ಷಗಳ ಹಿಂದೆ ಮೈಸೂರು ವಿವಿ ಕ್ಯಾಂಪಸ್‌ನಲ್ಲಿ ಸರಕಾರದ ವತಿಯಿಂದ ಉತ್ಸವ ವೊಂದನ್ನು ಆಯೋಜಿಸಲಾಗಿತ್ತು. ಗಣ್ಯರು ಬರುವಾಗ ವಾಹನ ನಿಯಂತ್ರಿಸಲೆಂದು ವಿವಿ ಮುಂದಿನ ಬೋಗಾದಿ ರಸ್ತೆಗೆ ರಾತ್ರೋ ರಾತ್ರಿ ಎರಡು ಕಡೆ ಹಂಪ್ಸ್ ಹಾಕಲಾಯಿತು. ಹಂಪ್ಸ್‌ನ ಅರಿವಿಲ್ಲದೆ ರಾತ್ರಿ ಬಂದ ದ್ವಿಚಕ್ರ ಸವಾರರು, ಆಟೋ ಚಾಲಕ ಸೇರಿ ನಾಲ್ಕು ಮಂದಿ ಈ ಹಂಪ್ಸ್‌ನಲ್ಲಿ ಬಿದ್ದು ಬಾರದ ಲೋಕಕ್ಕೆ ಪಯಣಿಸಿದ್ದರು.

ಪೊಲೀಸರಾಗಲೀ, ಪಾಲಿಕೆ ಎಂಜಿನಿಯರ್‌ಗಳಾಗಲಿ ಯಾರೊಬ್ಬರೂ ಇದಕ್ಕೆ ಹೊಣೆ ಹೊರಲಿಲ್ಲ. ನಮ್ಮ ಅಧಿಕಾರಿಗಳ ‘ದೂರ’ದೃಷ್ಟಿಯ ಇಂತಹ ಕಾಮಗಾರಿ, ಯೋಜನೆಗಳ ನೂರಾರು ಉದಾಹರಣೆಗಳಿವೆ.

5ನೇ ಶತಮಾನದಲ್ಲಿಯೇ ಬನವಾಸಿಯಲ್ಲಿ ಮಧುಕೇಶ್ವರ ದೇಗುಲವನ್ನು ನಿರ್ಮಿಸಿದ ಕದಂಬರು, ಐದು- ಆರನೇ ಶತಮಾನದಲ್ಲಿ ಬಾದಾಮಿ, ಐಹೊಳೆ, ಪಟ್ಟದಕಲ್ಲಿನಲ್ಲಿ ಗುಹಾಂತರ ದೇಗುಲ ಸೇರಿ ಹತ್ತಾರು ದೇಗುಲಗಳನ್ನು ನಿರ್ಮಿಸಿದ ಚಾಳುಕ್ಯರು, 9ನೇ ಶತಮಾನದಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಏಕಶಿಲಾ ವಿಗ್ರಹವನ್ನುನಿರ್ಮಿಸಿದ ಗಂಗರು, 12ನೇ ಶತಮಾನದಲ್ಲಿ ಬೇಲೂರು- ಹಳೆಬೇಡು ಸೇರಿದಂತೆ ಹಾಸನ ಜಿಲ್ಲೆಯುದ್ದಕ್ಕೂ ಶಿಲ್ಪಕಲಾ ವೈಭವವನ್ನು ಸೃಷ್ಟಿಸಿದ ಹೊಯ್ಸಳರು, ಹಂಪಿಯಂತಹ ಕನಸಿನ ನಗರಿಯನ್ನು ಕಟ್ಟಿದ ವಿಜಯನಗರದ ಅರಸರು,

ಗೋಲಗುಂಬಜ್‌ನಂತಹ ಅಪೂರ್ವ ಕಟ್ಟಡವನ್ನು ಪರಿಚಯಿಸಿದ ವಿಜಾಪುರ-ಬಹುಮನಿ ಸುಲ್ತಾನರು ಕರ್ನಾಟಕದ ವಾಸ್ತುಶಿಲ್ಪದ ಸೊಬಗನ್ನು ವಿಶ್ವಕ್ಕೆ ಪರಿಚಯಿಸಿದವರು.

200 ವರ್ಷಗಳ ಹಿಂದಷ್ಟೇ ಕಟ್ಟಿದ ಮೈಸೂರು ಅರಮನೆ, 70 ವರ್ಷಗಳ ಹಿಂದಷ್ಟೇ ಕೆಂಗಲ್ ಅವರು ಮುತುವರ್ಜಿ ತೋರಿಸಿ ಕಟ್ಟಿದ ವಿಧಾನ ಸೌಧ ನಮ್ಮ ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಕೌಶಲಕ್ಕೆ ಸಾಕ್ಷಿಯಾಗಿವೆ. ಕಳೆದ ನಾಲ್ಕೈದು ದಶಕಗಳಲ್ಲಿ ನಮ್ಮಲ್ಲಿ ಲಕ್ಷಾಂತರ ಬಹುಮಹಡಿ ಕಟ್ಟಡಗಳು, ಸಾವಿರಾರು ಕೋಟಿ ರು. ವೆಚ್ಚದ ಕಾಮಗಾರಿಗಳು ನಡೆದಿವೆ. ಆದರೆ ಒಂದು ಕ್ಷಣ, ಮತ್ತೊಮ್ಮೆ ತಿರುಗಿ ನೋಡುವ, ವ್ಹಾವ್ ಎಂದು ಉದ್ಘರಿಸುವ ದೃಶ್ಯವೈಭವವನ್ನು ಕಟ್ಟಿಕೊಟ್ಟ ಕಟ್ಟಡಗಳು, ಕಾಮಗಾರಿಗಳು ಎಷ್ಟಿವೆ ಎಂದು ಯೋಚಿಸಿ. ವಿಶ್ವೇಶ್ವರಯ್ಯರಂತಹ ಧೀಮಂತರಿದ್ದ ನಮ್ಮ ಎಂಜಿನಿಯರ್‌ಗಳ ಮಿಷನ್ ಎಲ್ಲಿ ಹೋಯಿತು ಎಂದು ಬೇಸರವಾಗುತ್ತಿದೆ.