ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Gururaj Arakeri Column: ಬೀದಿಯಲ್ಲಿ ಹೋಗೋ ಮಾರಿಯನ್ನು ಮನೆಯೊಳಗೆ ಕರೆತರೋದ್ಯಾಕೆ..?!

ಸಾರ್ವಜನಿಕ ಸಾರಿಗೆ ವಾಹನದ ಮೇಲಿದ್ದ ಜಾಹೀರಾತಿನತ್ತ ಹೊರಳಿದವು. ಅದನ್ನು ಆತ ತೋರಿಸುತ್ತಾ, “ಸರ್, ಅದೇ..." ಎಂದ. ಅರೆಕ್ಷಣ ಗೊಂದಲಗೊಂಡ ನಾನು ನಂತರ ಖಾತ್ರಿಪಡಿಸಿಕೊಳ್ಳಲೆಂದು, “ಅರೆ! ಅದು ಗುಟ್ಕಾ ಅಲ್ಲವಲ್ಲ?" ಎಂದೆ. ಅದಕ್ಕೆ ಆತ, “ಸರ್, ಅದರ ಜತೆಗೆ ತಂಬಾಕು ಕೇಳಿದರೆ ಉಚಿತವಾಗಿ ಕೊಡುತ್ತಾರೆ; ಎರಡನ್ನೂ ಬೆರೆಸಿಕೊಂಡರೆ ಗುಟ್ಕಾ ಆಗುತ್ತದೆ" ಅಂದ. ನನಗೆ ಯಾರೋ ಝಾಡಿಸಿ ಎದೆಗೆ ಒದ್ದಂತಾ ಯಿತು, ಮನದಲ್ಲಿ ಆಘಾತದ ಅಲೆ ಮೂಡಿತು.

ಬೀದಿಯಲ್ಲಿ ಹೋಗೋ ಮಾರಿಯನ್ನು ಮನೆಯೊಳಗೆ ಕರೆತರೋದ್ಯಾಕೆ..?!

Profile Ashok Nayak Jun 2, 2025 1:26 PM

ಕಳಕಳಿ

ಡಾ.ಗುರುರಾಜ ಅರಕೇರಿ

ಅದೊಂದು ಬೆಳಗ್ಗೆ 16ರ ಹುಡುಗನೊಬ್ಬ ತಪಾಸಣೆಗೆಂದು ನನ್ನಲ್ಲಿಗೆ ಬಂದ. ಆತನ ಬಾಯಿ ಯೊಳಗಿನ ಲೋಳೆಪೊರೆಯಲ್ಲಿ ನಾರುಗಟ್ಟುವಿಕೆಯನ್ನು, ಅಂದರೆ ಬಾಯಿ ಬಿಗಿತದ ಆರಂಭಿಕ ಸ್ಥಿತಿಯನ್ನು ಗಮನಿಸಿದೆ. ಗುಟ್ಕಾ, ಪಾನ್ ಮಸಾಲಾಗಳನ್ನು ಜಗಿಯುವ ಚಟದಿಂದ ಹುಟ್ಟುವ ಈ ಕಾಯಿಲೆ, ನಮ್ಮ ಗ್ರಾಮೀಣ ಭಾಗದ ಜನರಲ್ಲಿ ಸರ್ವೇಸಾಮಾನ್ಯ. ಆ ಸ್ಥಿತಿ ಇನ್ನೂ ಪ್ರಾರಂಭಿಕ ಹಂತದಲ್ಲಿರುವುದನ್ನು ಕಂಡು, ಆ ಚಟವನ್ನು ತೊರೆಯುವಂತೆ ಅವನಿಗೆ ಬುದ್ಧಿಮಾತು ಹೇಳಿ, ಕೆಲವು ಮಾತ್ರೆಗಳನ್ನು ಸೂಚಿಸಿ ಮತ್ತೆ ಬರಲು ತಿಳಿಸಿದೆ.

ಮಿಕ್ಕ ರೋಗಿಗಳ ತಪಾಸಣೆ ಮುಗಿಸಿ ಹೊರಬಂದಾಗ ಆ ಹುಡುಗ ಇನ್ನೂ ಅಲ್ಲೇ ಕಾದು ಕೂತಿರು ವುದು ಗೋಚರಿಸಿತು. ನನ್ನನ್ನು ನೋಡುತ್ತಿದ್ದಂತೆ ಮಾತಾಡಲು ಧಾವಿಸಿ ಬಂದ. “ಏನಾಯಿತು?" ಎಂದು ಕೇಳಿದ್ದಕ್ಕೆ “ಸ್ವಲ್ಪ ಮಾತನಾಡಬೇಕಿತ್ತು" ಎಂದ ತೊದಲುತ್ತ. “ಸರಿ ಬಾ ಇಲ್ಲಿ" ಎಂದು ಒಂದೆಡೆಗೆ ಕರೆದೊಯ್ದು ಧೈರ್ಯತುಂಬಿದಾಗ ಆತ ಮನದಾಳದಿಂದ ಮಾತಾಡ ತೊಡಗಿದ- “ಸರ್, ಕಳೆದ ೩ ತಿಂಗಳಿಂದ ವಸಡಿನಲ್ಲಿ ತಾಳಲಾಗದ ಉರಿ, ಯಾತನೆ. ಸರಿಯಾಗಿ ಊಟವನ್ನೂ ಮಾಡಲಾಗದೆ ಒದ್ದಾಡುತ್ತಿರುವೆ. ಬೆಳಗ್ಗೆ ಅಣ್ಣ ಜತೆಯಲ್ಲಿದ್ದ ಕಾರಣ ಮನಬಿಚ್ಚಿ ಮಾತನಾಡ ಲಾಗಲಿಲ್ಲ.

ಸರ್, ಇದು ವಾಸಿಯಾಗುತ್ತದೆ ತಾನೇ?" ಎಂದು ಕೇಳಿದ. ಆತನ ಕಣ್ಣುಗಳಲ್ಲಿ ಭಯದ ನೆರಳು. ಆ ಕ್ಷಣ ನನಗೆ ಸ್ಪಷ್ಟವಾಯಿತು- ಆತನನ್ನು ಕ್ಯಾನ್ಸರ್ ಭೀತಿ ಕಾಡುತ್ತಿತ್ತು. ಆತ ಚಿಕ್ಕ ವಯಸ್ಸಿನಲ್ಲೇ ಗುಟ್ಕಾ ಜಗಿಯುವ ಚಟಕ್ಕೆ ಬಿದ್ದು, ಬಾಯಿಯ ಆ ಸಮಸ್ಯೆಯಿಂದಾಗಿ ಗಾಬರಿಗೊಂಡಿದ್ದ. ‘ಅದು ಕ್ಯಾನ್ಸರ್‌ಗೆ ತಿರುಗಿರಬಹುದೇ?’ ಎಂದು ಶಂಕೆಗೊಂಡು, ಅದನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ, ಮನದೊಳಗೇ ಒದ್ದಾಡುತ್ತಿದ್ದ. ಅಂದು ಧೈರ್ಯ ಕೂಡಿಕೊಂಡು ನನ್ನಲ್ಲಿಗೆ ಬಂದು ತನ್ನ ಆತಂಕ ವನ್ನು ತೋಡಿಕೊಂಡಿದ್ದ.

ಇದನ್ನೂ ಓದಿ: R T Vittalmurthy Column: ಅಮಿತ್‌ ಶಾ ಆತುರಕ್ಕೆ ಏನು ಕಾರಣ ?

ನಾನು ಆತನನ್ನು ಉದ್ದೇಶಿಸಿ, “ಏನೂ ಆಗಿಲ್ಲ. ಸಮಸ್ಯೆಯಿನ್ನೂ ಆರಂಭಿಕ ಹಂತದಲ್ಲಿದೆ. ಈ ಚಟವನ್ನು ತೊರೆದರೆ ಯಾವ ಅಪಾಯವೂ ಇಲ್ಲ" ಎಂದು ಸಾಂತ್ವನದ ಮಾತುಗಳನ್ನಾಡಿ ನಂತರ, “ನೀನು ಎಂಥ ಗುಟ್ಕಾವನ್ನು ತಿನ್ನುತ್ತಿದ್ದೆ?" ಎಂದು ಪ್ರಶ್ನಿಸಿದೆ. ಈ ಪ್ರಶ್ನೆಗೆ ಉತ್ತರಿಸಲಾಗದೆ ಸುಮ್ಮನೆ ತಲೆ ತಗ್ಗಿಸಿದ ಆತನ ಕಣ್ಣುಗಳು ಹೊರಗೆ ನಿಂತಿದ್ದ ಸಾರ್ವಜನಿಕ ಸಾರಿಗೆ ವಾಹನದ ಮೇಲಿದ್ದ ಜಾಹೀರಾತಿನತ್ತ ಹೊರಳಿದವು. ಅದನ್ನು ಆತ ತೋರಿಸುತ್ತಾ, “ಸರ್, ಅದೇ..." ಎಂದ. ಅರೆಕ್ಷಣ ಗೊಂದಲಗೊಂಡ ನಾನು ನಂತರ ಖಾತ್ರಿಪಡಿಸಿಕೊಳ್ಳಲೆಂದು, “ಅರೆ! ಅದು ಗುಟ್ಕಾ ಅಲ್ಲವಲ್ಲ?" ಎಂದೆ. ಅದಕ್ಕೆ ಆತ, “ಸರ್, ಅದರ ಜತೆಗೆ ತಂಬಾಕು ಕೇಳಿದರೆ ಉಚಿತವಾಗಿ ಕೊಡುತ್ತಾರೆ; ಎರಡನ್ನೂ ಬೆರೆಸಿಕೊಂಡರೆ ಗುಟ್ಕಾ ಆಗುತ್ತದೆ" ಅಂದ. ನನಗೆ ಯಾರೋ ಝಾಡಿಸಿ ಎದೆಗೆ ಒದ್ದಂತಾ ಯಿತು, ಮನದಲ್ಲಿ ಆಘಾತದ ಅಲೆ ಮೂಡಿತು. ವಾಹನದ ಮೇಲಿನ ಅಂಥ ಜಾಹೀರಾತುಗಳನ್ನು ಪ್ರತಿನಿತ್ಯ ನೋಡುತ್ತಿದ್ದರೂ, ಅವು ಇಷ್ಟೊಂದು ಆಳವಾದ ಪರಿಣಾಮ ಬೀರುತ್ತವೆ ಎಂದು ನಾನು ಊಹಿಸಿರಲಿಲ್ಲ.

‘ಕ್ಯಾನ್ಸರ್ ರಾಜಧಾನಿ’ ಎಂದೇ ಇತ್ತೀಚೆಗೆ ಗುರುತಿಸಲ್ಪಟ್ಟಿರುವ ಭಾರತವು ಈ ಕಾಯಿಲೆಯ ಕಗ್ಗಂಟಿನಿಂದ ಹೊರಬರಲು ಹೆಣಗಾಡುತ್ತಿದೆ. ಗುಟ್ಕಾದಂಥ ಉತ್ಪನ್ನಗಳು ನಿಷೇಧಿಸಲ್ಪಟ್ಟಿದ್ದರೂ, ಬೇರೆ ಬೇರೆ ರೂಪಗಳಲ್ಲಿ ಮತ್ತೆ ತಲೆಯೆತ್ತಿ ಯುವಕರನ್ನು, ವಿಶೇಷವಾಗಿ ಗ್ರಾಮೀಣ ಭಾಗದವರನ್ನು ಕ್ಯಾನ್ಸರ್‌ನ ವಿಷವ್ಯೂಹಕ್ಕೆ ತಳ್ಳುತ್ತಿವೆ. ಅಚ್ಚರಿಯ ಸಂಗತಿಯೆಂದರೆ, ಸಾರಿಗೆ ಬಸ್ಸುಗಳ ಮೇಲೆ ಲಗತ್ತಿಸಲಾಗುವ ಪರೋಕ್ಷ ಜಾಹೀರಾತುಗಳು ಗುಟ್ಕಾ, ಪಾನ್ ಮಸಾಲಾದಂಥ ಚಟಗಳಿಗೆ ಪ್ರಚೋ ದನೆ ನೀಡುತ್ತಿವೆ. ಇದೊಂದು ದುರಂತ ಸತ್ಯ.

gutkha affect

ಸರಕಾರವು ಬ್ಲಾಕ್ ಆಂಡ್ ವೈಟ್ ಟಾಪಿಂಗ್ ಯೋಜನೆಯಂಥ ಉಪಕ್ರಮಗಳಿಂದ ರಸ್ತೆಗಳನ್ನು ಸುಗಮಗೊಳಿಸಿ, ಜನರ ಸಂಚಾರ ಸುರಕ್ಷತೆಯನ್ನು ಕಾಪಾಡುವ ಗುರಿಯಿಟ್ಟುಕೊಂಡಿದೆ. ಆದರೆ, ಅದೇ ರಸ್ತೆಗಳಲ್ಲಿ ಓಡಾಡುವ ಬಸ್ಸುಗಳ ಮೇಲೆ ಬಿಂಬಿತವಾಗುವ ಇಂಥ ಜಾಹೀರಾತುಗಳು ಜನರ ಆರೋಗ್ಯಕ್ಕೆ ಗಂಭೀರ ಕಂಟಕವಾಗಿರುವುದು ವಿಪರ್ಯಾಸವಲ್ಲವೇ?! ಭಾರತದಲ್ಲಿ ‘ಬಾಯಿ ಕ್ಯಾನ್ಸರ್’ ಪ್ರಕರಣಗಳು ಜಾಗತಿಕ ಸರಾಸರಿಗಿಂತ ಎರಡು ಪಟ್ಟು ಜಾಸ್ತಿಯಾಗಿದ್ದು, ಕರ್ನಾಟಕದ ಉತ್ತರ ಹಾಗೂ ಈಶಾನ್ಯ ಭಾಗಗಳಲ್ಲಿ ಅವು ತಾರಕಕ್ಕೆ ಏರಿವೆ.

ಒಂದು ಅಂದಾಜಿನಂತೆ, ದೇಶದಲ್ಲಿ ವರ್ಷಕ್ಕೆ 77 ಸಾವಿರಕ್ಕೂ ಹೆಚ್ಚು ಬಾಯಿ ಕ್ಯಾನ್ಸರ್ ಪ್ರಕರಣ ಗಳು ದಾಖಲಾಗುತ್ತವೆ ಹಾಗೂ 52 ಸಾವಿರಕ್ಕೂ ಅಧಿಕ ಜನರು ಈ ಕಾಯಿಲೆಗೆ ಬಲಿ ಯಾಗುತ್ತಾರೆ. ಇದು ವಿಶ್ವದ ಬಾಯಿ ಕ್ಯಾನ್ಸರ್‌ನ ಮೂರನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ. ದೇಶದ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ.30ರಷ್ಟು ಬಾಯಿಯ ಕ್ಯಾನ್ಸರ್‌ಗಳೇ ಆಗಿದ್ದು, ಕರ್ನಾಟಕದಲ್ಲಿ ಈ ಸಂಖ್ಯೆ ಗಮನಾರ್ಹವಾಗಿದೆ.

ಗುಟ್ಕಾ ಎಂಬ ಮಾರಕ ಉತ್ಪನ್ನವು ತಂಬಾಕು ಸೇರಿದಂತೆ ವಿವಿಧ ‘ಘಾತಕ ಘಟಕಾಂಶ’ಗಳನ್ನು ಒಳಗೊಂಡಿದ್ದು, ಈ ಬಾಯಿ ಕ್ಯಾನ್ಸರ್‌ಕಾರಕವನ್ನು 2013ರಲ್ಲಿ ಆಹಾರ ಸುರಕ್ಷತಾ ಕಾನೂನಿನ ಅಡಿಯಲ್ಲಿ ನಿಷೇಧಿಸಲಾಗಿದೆ. ಆದರೆ, ನಗರದಿಂದ ಹಳ್ಳಿಗಳವರೆಗೆ ಇದು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಲಭ್ಯವಾಗುತ್ತಲೇ ಇದೆ.

ಜನರನ್ನು ಈ ಚಟಕ್ಕೆ ಬೀಳಿಸುವಲ್ಲಿ ಪರೋಕ್ಷ ಜಾಹೀರಾತುಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಕಾನೂನಿನ ಎಲ್ಲೆಯೊಳಗೆ, ತಂಬಾಕು ಇಲ್ಲದಿರುವ ಇಲಾಯ್ಚಿ ಅಥವಾ ಬಾಯಿ ತಾಜಾಗೊಳಿಸುವ ಉತ್ಪನ್ನಗಳ ಹೆಸರಿನಡಿ, ಈ ಜಾಹೀರಾತುಗಳು ಜಾಣತನದಿಂದ ಪ್ರದರ್ಶನಗೊಳ್ಳುತ್ತವೆ/ಬಿತ್ತರ ಗೊಳ್ಳುತ್ತವೆ, ಗುಟ್ಕಾದ ಛಾಪನ್ನು ಜನರ ಮನದಲ್ಲಿ ಗಾಢವಾಗಿ ಒತ್ತುತ್ತವೆ.

ಡಿಜಿಟಲ್ ಪರದೆಗಳ ಮೇಲೆ ಸೊಗಸಾದ ಸಂಗೀತದೊಂದಿಗೆ ಬಿಂಬಿತವಾಗುವ ಇಂಥ ಜಾಹೀರಾತು ಗಳು ‘ತಂಬಾಕು’ ಎಂಬ ಪದವನ್ನು ಉಚ್ಚರಿಸದಿದ್ದರೂ, ಅಗತ್ಯವಿದ್ದವರಿಗೆ ಅವು ನೀಡುವ ಸಂದೇಶ ಸ್ಪಷ್ಟವಾಗಿರುತ್ತದೆ! ಇಂಥ ಪರೋಕ್ಷ ಜಾಹೀರಾತುಗಳು ಈಚೀಚೆಗೆ ಸಾರ್ವಜನಿಕ ಸಾರಿಗೆ ಬಸ್ಸುಗಳ ಮೇಲೆ ಸರ್ವೇಸಾಮಾನ್ಯವಾಗಿದ್ದು, ನಗರದಿಂದ ಗ್ರಾಮಾಂತರ ಪ್ರದೇಶದವರೆಗಿನ ಲಕ್ಷಾಂತರ ಪ್ರಯಾಣಿಕರ ಕಣ್ಣಿಗೆ ರಾಚುತ್ತಿವೆ. ಇತ್ತೀಚಿನ ಸಮೀಕ್ಷೆಗಳಂತೆ, ಶೇ.68ರಷ್ಟು ಜನರು ಇಂಥ ಉತ್ಪನ್ನಗಳ ಜಾಹೀರಾತುಗಳಲ್ಲಿನ ಚಿತ್ರತಾರೆಯರನ್ನು ಗುರುತಿಸಿದ್ದಾರೆ. ಇದು ಯುವಕರ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ಪ್ರಭಾವ ಬೀರಿ, ಇಂಥ ಉತ್ಪನ್ನಗಳೆಡೆಗಿನ ಆಕರ್ಷಣೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

ಇಂಥ ಜಾಹೀರಾತುಗಳಲ್ಲಿನ ಖ್ಯಾತನಾಮರ ಪಾಲ್ಗೊಳ್ಳುವಿಕೆಯು ಈ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ. ಸೂಪರ್‌ಸ್ಟಾರ್‌ಗಳನ್ನು ಇಟ್ಟುಕೊಂಡು ಇಂಥ ಉತ್ಪನ್ನಗಳನ್ನು ಚಿತ್ತಾಕ ರ್ಷಕವಾಗಿ ಚಿತ್ರಿಸಿದಾಗ, ‘ಇವು ಸುರಕ್ಷಿತ’ ಎಂಬ ತಪ್ಪುಕಲ್ಪನೆ ಜನರಲ್ಲಿ ಮೂಡುತ್ತದೆ. ಇದರಿಂದಾಗಿ ಈ ಚಟದತ್ತ ಅವರು ಸಲೀಸಾಗಿ ಸೆಳೆಯಲ್ಪಡುತ್ತಾರೆ. ದೇಶಾದ್ಯಂತ ನಡೆದ ವಿವಿಧ ಸಮೀಕ್ಷೆಗಳು ತಿಳಿಸುವಂತೆ, ತಂಬಾಕು ಉತ್ಪನ್ನಗಳಿಗೆ ಒಡ್ಡಿಕೊಂಡಿರುವ ಮಕ್ಕಳಲ್ಲಿ ಶೇ.24ರಷ್ಟು ಮಂದಿ ಏಳರ ಹರೆಯಕ್ಕಿಂತ ಮೊದಲೇ ಗುಟ್ಕಾ ಎಂಬ ವಿಷದ ರುಚಿ ನೋಡಿರುತ್ತಾರೆ. ವಿವಿಧ ಮಾಧ್ಯಮಗಳಲ್ಲಿ ಕಾಣಬರುವ ರಂಗುರಂಗಿನ ಪರೋಕ್ಷ ಜಾಹೀರಾತುಗಳ ಪ್ರಭಾವದ ಗಂಭೀರತೆ ಯನ್ನು ಇದು ಸ್ಪಷ್ಟಪಡಿಸುತ್ತದೆ.

ಕರ್ನಾಟಕದ ವಿವಿಧೆಡೆ ಶಾಲೆಗಳ ಸುತ್ತಮುತ್ತ ಈ ಉತ್ಪನ್ನಗಳು ಲಭ್ಯವಿರುವುದು ಮತ್ತೊಂದು ಆತಂಕಕಾರಿ ಸಂಗತಿ. ಕಾನೂನು ಜಾರಿಯನ್ನು ಮತ್ತಷ್ಟು ಬಿಗಿಗೊಳಿಸಬೇಕಿರುವ ಅನಿವಾರ್ಯತೆ ಯನ್ನು ಇದು ಸೂಚಿಸುತ್ತದೆ.

ಗುಟ್ಕಾ ಎಂಬ ಮಹಾಮಾರಿಯು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು ನಿಜಕ್ಕೂ ಆಘಾತಕಾರಿಯಾಗಿವೆ. ಇತ್ತೀಚಿನ ಜಾಗತಿಕ ಬಾಯಿ ಆರೋಗ್ಯ ವರದಿಯ ಪ್ರಕಾರ, ಭಾರತವು ಆಗ್ನೇಯ ಏಷ್ಯಾ ವಲಯದಲ್ಲಿ ಬಾಯಿ ಕ್ಯಾನ್ಸರ್‌ನ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಗುಟ್ಕಾದ ಪ್ರಮುಖ ಘಟಕಗಳಾದ ತಂಬಾಕು, ಅಡಕೆ, ಸುಣ್ಣ ಮತ್ತು ಸಿಹಿಕಾರಕ ಮಸಾಲೆಗಳು ಒಂದಾಗಿ, ಕ್ಯಾನ್ಸರ್‌ಗೆ ದಾರಿ ಮಾಡಿಕೊಡುವ ‘ಘಾತಕ ಮಿಶ್ರಣ’ವನ್ನು ರೂಪಿಸುತ್ತವೆ. ಅಡಕೆಯನ್ನು ಸಾಮಾನ್ಯವಾಗಿ ಜೀರ್ಣಕಾರಕವಾಗಿ ಮತ್ತು ತಾಂಬೂಲದ ಜತೆಗೆ ಸಾಂಪ್ರದಾಯಿಕವಾಗಿ ಬಳಸ ಲಾಗುತ್ತದೆಯಾದರೂ, ಅದು ತಂಬಾಕು, ಸುಣ್ಣ ಮತ್ತು ಇತರ ಹಾನಿಕಾರಕ ರಾಸಾಯನಿಕ ಗಳೊಂದಿಗೆ ಸೇರಿಕೊಂಡಾಗ ಮಾರಕವಾಗುತ್ತದೆ.

ಅಂದರೆ, ಬಾಯಿಯ ಒಳಗಿನ ಲೋಳೆಪೊರೆಯನ್ನು ನಾರುಗೆಡಿಸುವ, ಚಟಕ್ಕೆ ಒಡ್ಡುವ ವಿಷಕಾರಿ ಸಂಯೋಗವಾಗಿ ಅದು ಬದಲಾಗುತ್ತದೆ. ಗುಟ್ಕಾದ ನಿರಂತರ ಬಳಕೆಯಿಂದ ಬಾಯಿಯ ಒಳಗಿನ ಪೊರೆ ನಾರುಗಟ್ಟಿ, ‘ಓರಲ್ ಸಬ್‌ಮ್ಯೂಕಸ್ ಫೈಬ್ರೋಸಿಸ್’ನಂಥ ಕ್ಯಾನ್ಸರ್‌ನ ಪೂರ್ವಸ್ಥಿತಿಗಳು ಉದ್ಭವಿಸುತ್ತವೆ, ಇವು ಕಾಲಾಂತರದಲ್ಲಿ ಕ್ಯಾನ್ಸರ್‌ಗೆ ತಿರುಗುತ್ತವೆ. ಭಾರತದಲ್ಲಿ ಪ್ರತಿ ಗಂಟೆಗೆ ಐವರು ಬಾಯಿಯ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವ ದುರಂತಸತ್ಯವು ಈ ಸಮಸ್ಯೆಯ ಗಂಭೀರತೆಯನ್ನು ಎತ್ತಿ ಹಿಡಿಯುತ್ತದೆ.

ಕ್ಯಾನ್ಸರ್‌ಗೆ ಹಲವಾರು ಸಮರ್ಪಕ ಚಿಕಿತ್ಸೆಗಳಿದ್ದರೂ, ಗುಟ್ಕಾ ಬಳಕೆದಾರರಲ್ಲಿ ಕಾಣಬರುವ ‘ಓರಲ್ ಸಬ್‌ಮ್ಯೂಕಸ್ ಫೈಬ್ರೋಸಿಸ್’ಗೆ ಇನ್ನೂ ಸಮರ್ಪಕವಾದ ಚಿಕಿತ್ಸೆ ಲಭ್ಯವಿಲ್ಲ; ಇದೊಂದು ದುಃಖಕರ ಸಂಗತಿ. ಈ ಸ್ಥಿತಿಯಿಂದಾಗಿ ಬಾಯಿಯನ್ನು ತೆರೆಯಲಾಗದಷ್ಟರ ಮಟ್ಟಿಗೆ ತೊಂದರೆ ಯಾಗುತ್ತದೆ, ಉರಿಯ ಯಾತನೆ ಕಾಡುತ್ತದೆ. ಇದು ವ್ಯಕ್ತಿಯನ್ನು ದೈಹಿಕವಾಗಿಯೂ ಮಾನಸಿಕ ವಾಗಿಯೂ ಕುಗ್ಗಿಸುತ್ತದೆ. ಈ ನೋವಿನಿಂದ ಪಾರಾಗಲು ಅನೇಕರು ಮತ್ತೆ ಗುಟ್ಕಾದೆಡೆಗೇ ಹೊರಳು ತ್ತಾರೆ.

ಜತೆಗೆ ಸಾಮಾಜಿಕ ಒತ್ತಡಗಳು, ಖಿನ್ನತೆ, ಮಾನಸಿಕ ತುಮುಲಗಳು ಸೇರಿಕೊಂಡು ಈ ಚಟವನ್ನು ಬಲಗೊಳಿಸಿ, ಕ್ರಮೇಣವಾಗಿ ಕ್ಯಾನ್ಸರ್‌ನ ವಿಷಚಕ್ರದತ್ತ ವ್ಯಕ್ತಿಯನ್ನು ತಳ್ಳುತ್ತವೆ. ಈ ‘ಬಾಯಿಬಿಗಿತ’ ಕಾಯಿಲೆಯ ಬಗ್ಗೆ ಸಮರ್ಪಕ ಜಾಗೃತಿಯ ಕೊರತೆಯಿರುವುದರಿಂದ, ಚಿಕಿತ್ಸೆಗೆ ಅಲೆದಾಡುವವರು ಪರಿಹಾರ ಕಾಣಲಾಗದೆ ನಿರಾಶೆಗೊಳಗಾಗುತ್ತಾರೆ. ಇಂಥ ಗಂಭೀರ ಪರಿಸ್ಥಿತಿಯ ನಡುವೆಯೂ ಗುಟ್ಕಾದ ಬಳಕೆಯನ್ನು ಮುಂದುವರಿಸಿದರೆ, ಕ್ಯಾನ್ಸರ್‌ನ ಭೀಕರ ಅಪಾಯಕ್ಕೆ ಒಡ್ಡಿಕೊಳ್ಳುವ ಸಾಧ್ಯತೆ ಅತಿಹೆಚ್ಚಾಗಿರುತ್ತದೆ.

ಮೊದಲೇ ಉಲ್ಲೇಖಿಸಿದಂತೆ, ಕರ್ನಾಟಕದ ಉತ್ತರ ಮತ್ತು ಈಶಾನ್ಯ ಭಾಗಗಳಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲಾದ ದುಷ್ಪರಿಣಾಮಗಳು ತೀವ್ರವಾಗಿ ಕಾಡುತ್ತಿವೆ. ದುಃಖಕರ ಸಂಗತಿಯೆಂದರೆ, ಇಲ್ಲಿ ಹಲವೆಡೆ ಗುಟ್ಕಾ ಮತ್ತು ಪಾನ್ ಮಸಾಲಾದ ಬಳಕೆಯು ಸಾಮಾಜಿಕ ಸಂಪ್ರದಾಯವಾಗಿ ಮಾರ್ಪ ಟ್ಟಿದ್ದು, ಕಡಿಮೆ ಆದಾಯವರ್ಗದ ಕಾರ್ಮಿಕರು, ಬೀದಿಬದಿಯ ಅಂಗಡಿಯವರು, ವಾಹನ ಚಾಲಕರು, ರಾತ್ರಿಪಾಳಿಯ ಕೆಲಸಗಾರರು/ಕಾವಲುಗಾರರು ಮತ್ತು ಯುವಕರು ಈ ಚಟದತ್ತ ಸೆಳೆಯಲ್ಪಡುತ್ತಿದ್ದಾರೆ.

ಈ ಸೆಳೆತವನ್ನು ಪರೋಕ್ಷ ಜಾಹೀರಾತುಗಳು ಮತ್ತಷ್ಟು ತೀವ್ರಗೊಳಿಸಿವೆ. ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ‘ಬಾಯಿಬಿಗಿತ’ದ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಬಲ್ಲಂಥ ಸೌಕರ್ಯಗಳ ಅಲಭ್ಯತೆ ಹಾಗೂ ಆರೋಗ್ಯ ಜಾಗೃತಿಯ ಕೊರತೆಯು ಕೂಡ ಇಂಥ ಕ್ಯಾನ್ಸರ್ ಪ್ರಕರಣಗಳನ್ನು ಗಣನೀಯವಾಗಿ ಹೆಚ್ಚಿಸಿವೆ. ಒಂದು ಅಧ್ಯಯನದಂತೆ, ಇಂಥ ಹಿಂದುಳಿದ ಪ್ರದೇಶಗಳಲ್ಲಿ ಶೇ.60-80ರಷ್ಟು ಬಾಯಿ ಕ್ಯಾನ್ಸರ್ ಗಳು ಮುಂದುವರಿದ ಹಂತದಲ್ಲಿ ಪತ್ತೆ ಯಾಗುತ್ತವೆ ಯಾದ್ದರಿಂದ, ಇದು ಚಿಕಿತ್ಸೆಯನ್ನು ಜಟಿಲಗೊಳಿಸಿ ಸಾವಿನ ಸಂಖ್ಯೆಯನ್ನು ಏರಿಸುತ್ತಿದೆ.

ರಾಜ್ಯ ಮತ್ತು ಕೇಂದ್ರ ಸರಕಾರಗಳು ದಶಕಗಳಿಂದ ಗುಟ್ಕಾ ಉತ್ಪಾದನೆ ಮತ್ತು ಜಾಹೀರಾತುಗಳನ್ನು ಕಟ್ಟುನಿಟ್ಟಾಗಿ ನಿಷೇಈಸಿದ್ದರೂ, ಕಾನೂನಿನೊಳಗಿನ ಸಣ್ಣಪುಟ್ಟ ಲೋಪಗಳು ಅಥವಾ ತಾಂತ್ರಿಕ ತೊಡಕುಗಳನ್ನು ಆಸರೆಯಾಗಿಟ್ಟುಕೊಂಡು ಪರೋಕ್ಷ ಜಾಹೀರಾತುಗಳು ವಿವಿಧ ಮಾಧ್ಯಮಗಳಲ್ಲಿ ನುಸುಳಿಕೊಂಡು, ಜನಮನವನ್ನು ತಮ್ಮೆಡೆಗೆ ಸೆಳೆಯುತ್ತಿವೆ.

ಸಾರ್ವಜನಿಕ ಸಾರಿಗೆ ವಾಹನಗಳ ಮೇಲಿನ ಇಂಥ ಜಾಹೀರಾತುಗಳೇ ಈ ಮಾತಿಗೆ ಸ್ಪಷ್ಟ ಸಾಕ್ಷಿ ಯಾಗಿವೆ. ಈ ಸವಾಲನ್ನು ಎದುರಿಸುವಲ್ಲಿನ ಸಕಾರಾತ್ಮಕ ಕ್ರಮಗಳು ಹಿಂದೆಂದಿಗಿಂತ ಈಗ ಹೆಚ್ಚು ಅನಿವಾರ್ಯವಾಗಿವೆ. ರಸ್ತೆ ಸಂಚಾರಿ ನಿಯಮಗಳ ಸುಧಾರಣೆಯೆಡೆಗೆ ತೋರುವ ಕಾಳಜಿಯನ್ನು ಆರೋಗ್ಯ ಕ್ಷೇತ್ರಕ್ಕೂ ವಿಸ್ತರಿಸಬೇಕಾದ ಕಾಲ ಸನ್ನಿಹಿತವಾಗಿದೆ. ವಿವಿಧ ಮಾಧ್ಯಮಗಳಲ್ಲಿ ಬಿತ್ತರ ವಾಗುವ ಪರೋಕ್ಷ ಜಾಹೀರಾತುಗಳನ್ನು ಸಂಪೂರ್ಣವಾಗಿ ತೊಡೆದು, ‘ಗುಟ್ಕಾ-ಪಾನ್ ಮಸಾಲಾ ಗಳನ್ನು ತೊರೆಯಿರಿ, ಜೀವವನ್ನು ಕಾಪಾಡಿರಿ’ ಎಂಬಂಥ ಜಾಗೃತಿಪೂರ್ವಕ ಉದ್ಘೋಷಗಳನ್ನು ಬಿಂಬಿಸಲು ಇದು ಸಕಾಲ.

ಜತೆಗೆ, ಉತ್ತರ ಹಾಗೂ ಈಶಾನ್ಯ ಕರ್ನಾಟಕದ ಗ್ರಾಮೀಣ ಭಾಗದ ಜನರಿಗೆ, ಆರೋಗ್ಯ ಸಂರಕ್ಷಣೆ ಸಂಬಂಧಿತ ಅರಿವಿನ ಕಾರ್ಯಕ್ರಮಗಳನ್ನು ತೋರಿಸಿ, ಗುಟ್ಕಾದಿಂದ ಆಗುವ ಹಾನಿಯ ಬಗ್ಗೆ ಅವರನ್ನು ಮಾಹಿತಿವಂತರನ್ನಾಗಿಸಬೇಕಾದ ಅಗತ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ, ಕ್ಯಾನ್ಸರ್‌ಗೆ ಮುಂಚಿನ ಸ್ಥಿತಿಗಳನ್ನು ಸಕಾಲಕ್ಕೆ ಪತ್ತೆ ಹಚ್ಚಬಹುದು.

ತಂಬಾಕು ಉತ್ಪನ್ನಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ನಿಯಂತ್ರಿಸುವ ಕಾನೂನುಗಳನ್ನು ನಿಷ್ಠುರವಾಗಿ ಜಾರಿಗೊಳಿಸುವ ಮೂಲಕವೂ ಈ ಬಿಕ್ಕಟ್ಟಿಗೆ ಕಡಿವಾಣ ಹಾಕಬಹುದು. ಶಾಲಾ-ಕಾಲೇಜುಗಳ ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟವಾಗುವುದನ್ನು ತಡೆಯಲು, ನಿಯತ ಕ್ರಮದಲ್ಲಿ ಗಸ್ತುಕಾರ್ಯವನ್ನು ಹಮ್ಮಿಕೊಂಡು, ವಿದ್ಯಾರ್ಥಿಗಳನ್ನು ಈ ವಿಷಕಾರಿ ಚಾಳಿಯ ಸೆಳೆತದಿಂದ ಕಾಪಾಡಬಹುದು.

ಗುಟ್ಕಾ, ಪಾನ್ ಮಸಾಲಾ, ತಂಬಾಕಿನ ಪರೋಕ್ಷ ಜಾಹೀರಾತುಗಳು ಆರೋಗ್ಯಕ್ಕೆ ಮಾತ್ರವಲ್ಲದೆ ಸಮಾಜದ ಒಟ್ಟಾರೆ ಒಳಿತಿಗೂ ಕಂಟಕಪ್ರಾಯವಾಗಿವೆ. ಸಾರ್ವಜನಿಕ ಸಾರಿಗೆ ವಾಹನಗಳ ಮೇಲಿನ ಇಂಥ ಜಾಹೀರಾತುಗಳಿಗೆ ಆಕ್ಷೇಪಿಸಿ ತೆಗೆಯುವಂತೆ ವಿನಂತಿಸಿದರೂ, ಕೆಲವೆಡೆ ಇವು ಇನ್ನೂ ಕಾಣಸಿಗುವುದು ವಿಷಾದದ ಸಂಗತಿ. ಆದರೆ, ಸರಕಾರ, ಸಾರ್ವಜನಿಕರು ಮತ್ತು ಸಮಾಜದ ವಿವಿಧ ಸಂಘ-ಸಂಸ್ಥೆಗಳು ಒಗ್ಗಟ್ಟಿನಿಂದ ಕೈಜೋಡಿಸಿದರೆ, ಈ ಸವಾಲನ್ನು ಮೆಟ್ಟಿನಿಂತು ಆರೋಗ್ಯವಂತ ಸಮಾಜವನ್ನೂ ಭವಿಷ್ಯವನ್ನೂ ಕಟ್ಟಲು ಸಾಧ್ಯವಿದೆ. ಸಂಬಂಧಪಟ್ಟವರು ಇದನ್ನು ಅರ್ಥಮಾಡಿ ಕೊಳ್ಳಬೇಕಷ್ಟೇ...!

(ಲೇಖಕರು ವೈದ್ಯರು)