ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸುಖಕರ ಪ್ರಯಾಣ ಅಲ್ಲ, ಪ್ರತಿದಿನವೂ ನರಕ ದರ್ಶನ

ಜನರಲ್ ಬೋಗಿಯಲ್ಲಿ ಕೂರಲು ಸ್ಥಳವಕಾಶವಿಲ್ಲದೇ ಅನಿವಾರ್ಯವಾಗಿ ಪ್ರಯಾಣಿಕರು ರಿಸರ್ವೇಷನ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ತುಸು ಕೂರಲು ಸ್ಥಳವಿಲ್ಲದೇ ಗಂಟೆಗಂಟಲೇ ನಿಂತುಕೊಂಡೆ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ರೈಲ್ವೆ ಇಲಾಖೆಗೆ ಪ್ರತಿ ಕೇಂದ್ರ ಬಜೆಟ್‌ ನಲ್ಲಿ ಸಾವಿರಾರು ಕೋಟಿ ಅನುದಾನ ಹರಿದು ಬಂದರೂ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಚಲಿಸುವ ರೈಲುಗಳನ್ನು ಮಾತ್ರ ಹೆಚ್ಚಳ ಮಾಡುತ್ತಿಲ್ಲ.

ಸುಖಕರ ಪ್ರಯಾಣ ಅಲ್ಲ, ಪ್ರತಿದಿನವೂ ನರಕ ದರ್ಶನ

-

Profile
Ashok Nayak May 21, 2026 9:02 AM

ದೇವೇಂದ್ರ ಜಾಡಿ ಕಲಬುರಗಿ

ಕಲಬುರಗಿ-ಬೆಂಗಳೂರು ರೈಲು ಪ್ರಯಾಣ, ಹೈರಾಣ

ಜನರಲ್ ಬೋಗಿಗಳಾದ ರಿಸರ್ವೇಷನ್

ಹೆಚ್ಚಿನ ರೈಲುಗಳಿಗೆ ಆಗ್ರಹ

ರಾಜಧಾನಿ ಬೆಂಗಳೂರು ಕಲಬುರಗಿ ನಡುವಿನ ರೈಲು ಪ್ರಯಾಣ ನರಕ ದರ್ಶನ ಆದಂತೆ. 10 ಗಂಟೆ ಗಳ ದೂರ ಪ್ರಯಾಣ ಮಾಡುವ ಸಾಮಾನ್ಯ ಬೋಗಿಯ ಪ್ರತಿ ಪ್ರಯಾಣಿಕರು ಹೈರಾಣ ಆಗುತ್ತಿದ್ದಾರೆ. ಜನರಲ್ ಬೋಗಿಯಲ್ಲಿ ಕೂರಲು ಸ್ಥಳವಕಾಶವಿಲ್ಲದೇ ಅನಿವಾರ್ಯವಾಗಿ ಪ್ರಯಾಣಿಕರು ರಿಸರ್ವೇಷನ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ತುಸು ಕೂರಲು ಸ್ಥಳವಿಲ್ಲದೇ ಗಂಟೆಗಂಟಲೇ ನಿಂತುಕೊಂಡೆ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ರೈಲ್ವೆ ಇಲಾಖೆಗೆ ಪ್ರತಿ ಕೇಂದ್ರ ಬಜೆಟ್‌ನಲ್ಲಿ ಸಾವಿರಾರು ಕೋಟಿ ಅನುದಾನ ಹರಿದು ಬಂದರೂ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಚಲಿಸುವ ರೈಲುಗಳನ್ನು ಮಾತ್ರ ಹೆಚ್ಚಳ ಮಾಡುತ್ತಿಲ್ಲ.

ಸೂಕ್ತ ಸೌಲಭ್ಯಗಳಿಲ್ಲದೆ, ಪರದಾಡಿಕೊಂಡೆ ಜನ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ. ನಿಲ್ದಾಣದಲ್ಲಿ ದಿನದ ಇಪ್ಪತ್ತ ನಾಲ್ಕು ಗಂಟೆಯೂ ಸಾರ್ವಜನಿಕರ ಹತಾಶೆಯ ಕೂಗು ಕೇಳಿ ಬರುತ್ತಿದ್ದರೂ, ಕೇಂದ್ರ ಸರಕಾರ, ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಶ್ರೀಮಂತರಿಗೆ ವಂದೇ ಭಾರತ್: ನಿತ್ಯವೂ ಕಲಬುರಗಿ ಮಾರ್ಗದ ಮೂಲಕ 10ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿದ್ದರೂ ಸಾಮಾನ್ಯ ಜನರಿಗೆ ಅವುಗಳಿಂದ ಯಾವುದೇ ಪ್ರಯೋಜನ ವಾಗುತ್ತಿಲ್ಲ. ಬಹುನಿರೀಕ್ಷಿತ ವಂದೇ ಭಾರತ್ (22231) ರೈಲಿನ ದರ ಗಗನಕುಸುಮ ಆಗಿದ್ದು, ಬಡವರು ಮತ್ತು ಮಧ್ಯಮ ವರ್ಗದವರು ಇತ್ತ ಮುಖ ಮಾಡದ ಪರಿಸ್ಥಿತಿ ಇದೆ. ಇನ್ನುಳಿದ ಕರ್ನಾಟಕ ಎಕ್ಸ್‌ಪ್ರೆಸ್ (12628), ರಾಜಧಾನಿ (22692), ಕುರ್ಲಾ ಕೊಯಮತ್ತೂರು (11013) ಹಾಗೂ ಹುಸೇನ್ ಸಾಗರ್ (12702) ನಂತಹ ಪ್ರಮುಖ ರೈಲುಗಳು ನಿಲ್ದಾಣಕ್ಕೆ ಮಧ್ಯರಾತ್ರಿ ಬರುವುದರಿಂದ ವೃದ್ಧರು, ಮಹಿಳೆಯರು ಮತ್ತು ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.

ಇದನ್ನೂ ಓದಿ: Kalaburgi Khadak Rotti: ದೇಶದ ಅಂಗಳಕ್ಕೆ ʼಕಲಬುರಗಿ ಖಡಕ್ ರೊಟ್ಟಿʼ ಲಗ್ಗೆ

ಜನರಲ್ ಬೋಗಿಯಾದ ರಿಸರ್ವೇಶನ್ ಕಂಪಾರ್ಟ್‌ಮೆಂಟ್‌ಗಳು!: ಇದಲ್ಲದೇ, ನಿತ್ಯ ಜನಸಾಮಾನ್ಯರ ಆಸರೆಯಾಗಿರುವ ಸಿದ್ದೇಶ್ವರ ಉದ್ಯಾನ್ ಎಕ್ಸ್‌ಪ್ರೆಸ್ (11301), ಸೋಲಾಪುರ್-ಹಾಸನ್ ಎಕ್ಸ್‌ಪ್ರೆಸ್ (11311) ಮತ್ತು ಬಸವ ಎಕ್ಸ್'ಪ್ರೆಸ್ (17308) ರೈಲುಗಳಲ್ಲಂತೂ ಅಮಾನವೀಯ ಸ್ಥಿತಿ ನಿರ್ಮಾಣವಾಗಿದೆ. ಕಾಯ್ದಿರಿಸಿದ ಟಿಕೆಟ್ ಪಡೆದ ಪ್ರಯಾಣಿಕರಿಗೂ ಸೀಟು ಸಿಗುತ್ತಿಲ್ಲ. ‌

ಅತಿಯಾದ ಜನದಟ್ಟಣೆಯಿಂದಾಗಿ ರಿಸರ್ವೇಶನ್ ಕಂಪಾರ್ಟ್‌ಮೆಂಟ್‌ಗಳೂ ಜನರಲ್ ಬೋಗಿ ಗಳಾಗಿ ಮಾರ್ಪಟ್ಟಿವೆ. ಒಳಗೆ ಓಡಾಡಲು ಜಾಗವಿಲ್ಲದೆ, ಮೂತ್ರ ಹಾಗೂ ಮಲ ವಿಸರ್ಜನೆಗೂ ಶೌಚಾಲಯಕ್ಕೆ ಹೋಗಲಾಗದಂತಹ ಸ್ಥಿತಿ ಇದೆ. ಕಲಬುರಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಜನರಿಗೆ ಬೆಂಗಳೂರು ಪ್ರಯಾಣ ನರಕ ದರ್ಶನ ಆಗುತ್ತಿದೆ.

Screenshot_12

ಅಶ್ವಿನಿ ವೈಷ್ಣವ್, ಸೋಮಣ್ಣಗೂ ಸಲ್ಲಿಸಿದ ಮನವಿ ವ್ಯರ್ಥ: ಇತ್ತೀಚೆಗಷ್ಟೇ ಬೆಂಗಳೂರು ಕಂಟೋನ್ಮೆಂಟ್ʼನಿಂದ ಕಲಬುರಗಿಗೆ ವಿಶೇಷ ರೈಲನ್ನು ಪ್ರಾರಂಭಿಸಲಾಗಿದೆಯಾದರೂ, ಅದು ವಾರಕ್ಕೊಮ್ಮೆ ಮಾತ್ರ ಸಂಚರಿಸುವುದರಿಂದ ದಿನನಿತ್ಯ ನರಳುತ್ತಿರುವ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಕುರಿತು ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ಹಾಗೂ ಸಾರ್ವ ಜನಿಕರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೂ ಮುಂಚಿತವಾಗಿ ಅನೇಕ ಬಾರಿ ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜ ಆಗಿಲ್ಲ. ತದನಂತರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೂ ಖುದ್ದಾಗಿ ಭೇಟಿಯಾಗಿ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಡ ಲಾಗಿದ್ದರೂ ಯಾವುದೇ ಲಾಭವಾಗಿಲ್ಲ.

ಇಬ್ಬರು ಸಚಿವರುಗಳಿದ್ದರೂ ಕಲ್ಯಾಣ ಕರ್ನಾಟಕದ ಜನರ ರೋದನೆ ಕೇಳುವವರೇ ಇಲ್ಲದಂತಾ ಗಿದೆ. ಈ ಭಾಗದ ಜನರ ಹಿತದೃಷ್ಟಿಯಿಂದ ಕಲಬುರಗಿ-ಬೆಂಗಳೂರು ನಡುವೆ ತಕ್ಷಣವೇ ಒಂದು ಪ್ರತ್ಯೇಕ ನಿತ್ಯ ಸಂಚರಿಸುವ ಸೂಪರ್ ಫಾಸ್ಟ್ ರೈಲು ಆರಂಭಿಸಬೇಕಿದೆ.

ರೂ.1000 ಕೋಟಿ ಕೊಟ್ರು ಯಾಕೀ ಅನ್ಯಾಯ?

ಕಲಬುರಗಿ ರೈಲ್ವೆ ನಿಲ್ದಾಣದಿಂದ ಪ್ರತಿವರ್ಷ ಸಾರ್ವಜನಿಕರ ಪ್ರಯಾಣ, ಗೂಡ್ಸ್ ವಾಹನ ಸಂಚಾರ ಹಾಗೂ ಇತರೆ ಮೂಲಗಳಿಂದ ಸೋಲಾಪುರ ರೈಲ್ವೆ ವಿಭಾಗಕ್ಕೆ ಬರೋಬ್ಬರಿ 1000 ಕೋಟಿಗೂ ಅಧಿಕ ರುಪಾಯಿ ಭಾರಿ ಆದಾಯ ಹರಿದು ಹೋಗುತ್ತಿದೆ. ಇಷ್ಟೊಂದು ಬೃಹತ್ ಲಾಭ ತಂದು ಕೊಡುತ್ತಿದ್ದರೂ ಕಲ್ಯಾಣ ಕರ್ನಾಟಕದ ಸಾರ್ವಜನಿಕರಿಗೆ ಸಿಗುತ್ತಿರುವ ಸೌಲಭ್ಯ ಮಾತ್ರ ಶೂನ್ಯ. ರಾಜಧಾನಿಗೆ ನಿತ್ಯ ಸಂಚರಿಸುವ ಒಂದೇ ಒಂದು ಪ್ರತ್ಯೇಕ ಎಕ್ಸ್‌ಪ್ರೆಸ್ ರೈಲು ಇಲ್ಲದಿರುವುದು ಈ ಭಾಗಕ್ಕೆ ಮಾಡುತ್ತಿರುವ ದ್ರೋಹವಾಗಿದೆ. ಕೇವಲ ವಾರದ ರೈಲು ನೀಡಿ ಕೈತೊಳೆದುಕೊಳ್ಳುತ್ತಿರುವ ರೈಲ್ವೆ ಇಲಾಖೆ, ಆದಾಯದ ಶೇಕಡಾ 10 ರಷ್ಟೂ ಸೌಲಭ್ಯ ನೀಡದಿರುವುದು ದುರಂತ.

ಅತೀ ಜನಸಂದಣಿ ರೈಲುಗಳು

ಸಿದ್ದೇಶ್ವರ ಉದ್ಯಾನ್ ಎಕ್ಸ್‌ಪ್ರೆಸ್ (11301)

ಸೋಲಾಪುರ್-ಹಾಸನ್ ಎಕ್ಸ್‌ಪ್ರೆಸ್ (11311)

ಬಸವ ಎಕ್ಸ್‌ಪ್ರೆಸ್ (17308)

image

ಕಲಬುರಗಿ-ಬೆಂಗಳೂರು ನಡುವೆ ಮಾತ್ರ ದಿನನಿತ್ಯ ಓಡಾಡುವ ಪ್ರತ್ಯೇಕ ರೈಲು ಬಿಡುವಂತೆ ಕೇಂದ್ರ ಸಚಿವರಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೌನ್ಸಿಲಿಂಗ್‌ಗೆ ಹೋಗುವ ವಿದ್ಯಾರ್ಥಿಗಳಿಗೆ ಟಿಕೆಟ್ ಸಿಗುತ್ತಿಲ್ಲ. ಬಡವರಿಗೆ ವಂದೇ ಭಾರತ್ ದುಬಾರಿಯಾಗಿದೆ. 2 ತಿಂಗಳ ಮುನ್ನ ಟಿಕೆಟ್ ಕಾಯ್ದಿರಿಸಿದರೂ ಸೀಟಿಲ್ಲದೇ, ವಲಸೆ ಹೋದ ಕಲ್ಯಾಣ ಕರ್ನಾಟಕದ ಜನ ಊರಿಗೆ ಮರ ಳಲು ನರಕಯಾತನೆ ಅನುಭವಿಸುತ್ತಿದ್ದಾರೆ. ತಕ್ಷಣ ಪ್ರತ್ಯೇಕ ರೈಲು ಬಿಡಿ.

- ಶರಣಬಸಪ್ಪಾಪಪ್ಪಾ, ಅಧ್ಯಕ್ಷ, ಕೆಕೆಸಿಸಿಐ
image

ನಾವು ಹಣ ಕೊಟ್ಟು ರಿಸರ್ವೇಶನ್ ಟಿಕೆಟ್ ಪಡೆದರೂ ನಮ್ಮ ಸೀಟಿನಲ್ಲಿ ನಮಗೆ ಕೂರಲು ಜಾಗ ಸಿಗುತ್ತಿಲ್ಲ. ಶೌಚಾಲಯದವರೆಗೂ ಜನ ತುಂಬಿರುತ್ತಾರೆ. ಕಲ್ಯಾಣ ಕರ್ನಾಟಕದ ಜನ ಎಂದರೆ ರೈಲ್ವೆ ಇಲಾಖೆಗೆ ಏಕಿಷ್ಟು ನಿರ್ಲಕ್ಷ್ಯ? ಸಚಿವ ವಿ.ಸೋಮಣ್ಣನವರೇ, ನಮಗೆ ವಾರಕ್ಕೊಮ್ಮೆ ಓಡುವ ರೈಲು ಬೇಡ, ದಿನನಿತ್ಯ ಸಂಚರಿಸುವ ಪ್ರತ್ಯೇಕ ಕಲಬುರಗಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಬೇಕು.

- ಮುತ್ತಣ್ಣ ನಡಗೇರಿ, ಹೋರಾಟಗಾರ, ಕಲಬುರಗಿ