ಭಯೋತ್ಪಾದಕರ ಸ್ವರ್ಗ ಪಾಕಿಸ್ತಾನದಲ್ಲೇ ಲಷ್ಕರ್-ಎ-ತೊಯ್ಬಾ ಉಗ್ರರ ಸರಣಿ ಹತ್ಯೆ; ಅಪರಿಚಿತರ ದಾಳಿಗೆ 30ಕ್ಕೂ ಹೆಚ್ಚು ಸದಸ್ಯರ ಸಾವು
Lashkar-e-Taiba: ಲಷ್ಕರ್-ಎ-ತೊಯ್ಬಾದ ಹಿರಿಯ ಉಗ್ರ ರಿಜ್ವಾನ್ ಹನೀಫ್ ವಿಡಿಯೊವೊಂದರಲ್ಲಿ 3–4 ವರ್ಷಗಳಲ್ಲಿ ಪಾಕಿಸ್ತಾನ ಹಾಗೂ ಪಿಒಕೆ ಪ್ರದೇಶಗಳಲ್ಲಿ ಸಂಘಟನೆಯ 30ಕ್ಕೂ ಹೆಚ್ಚು ಸದಸ್ಯರು ಅಪರಿಚಿತ ದಾಳಿಕೋರರಿಂದ ಹತ್ಯೆಯಾಗಿದ್ದಾರೆ ಎಂದು ಹೇಳಿದ್ದಾನೆ. ಈ ಹತ್ಯೆಗಳ ಹಿಂದೆ ಭಾರತದ ಕೈವಾಡವಿದೆ ಎಂದು ಆತ ಆರೋಪಿಸಿದ್ದರೂ, ಭಾರತ ಈ ಆರೋಪವನ್ನು ತಳ್ಳಿಹಾಕಿದೆ.
ರಿಜ್ವಾನ್ ಹನೀಫ್ ಭಾಷಣ -
ಇಸ್ಲಾಮಾಬಾದ್, ಆ. 3: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾಗೆ (LeT) ಸೇರಿದ ಹಿರಿಯ ಕಾರ್ಯಕರ್ತ ರಿಜ್ವಾನ್ ಹನೀಫ್ (Rizwan Hanif) ವಿಡಿಯೊವೊಂದರಲ್ಲಿ, ಕಳೆದ 3ರಿಂದ 4 ವರ್ಷಗಳ ಅವಧಿಯಲ್ಲಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ವಿವಿಧ ಭಾಗಗಳಲ್ಲಿ ತಮ್ಮ ಸಂಘಟನೆಯ 30ಕ್ಕೂ ಹೆಚ್ಚು ಸದಸ್ಯರು ಅಪರಿಚಿತ ದಾಳಿಕೋರರಿಂದ ಹತ್ಯೆಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಪೇಶಾವರ್, ಕರಾಚಿ, ರಾವಲ್ಪಿಂಡಿ, ರಾವಲಕೋಟ್ ಮತ್ತು ಮುಜಾಫರಾಬಾದ್ ಸೇರಿ ಹಲವು ಪ್ರದೇಶಗಳಲ್ಲಿ ಈ ಹತ್ಯೆಗಳು ನಡೆದಿವೆ ಎಂದು ಆತ ಆರೋಪಿಸಿದ್ದಾನೆ.
2008ರ ಮುಂಬೈ ಉಗ್ರ ದಾಳಿಯ ಹಿಂದಿದ್ದ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸಂಬಂಧಿಸಿದ ಉಗ್ರನೊಬ್ಬ ಈ ರೀತಿಯ ಹತ್ಯೆಗಳ ಬಗ್ಗೆ ಸಾರ್ವಜನಿಕವಾಗಿ ಒಪ್ಪಿಕೊಂಡಿರುವುದು ಇದೇ ಮೊದಲು. 2005ರಲ್ಲಿ ಅಲ್-ಖೈದಾ ಹಾಗೂ ತಾಲಿಬಾನ್ ಸಂಘಟನೆಗಳೊಂದಿಗಿನ ಸಂಬಂಧದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಈ ಸಂಘಟನೆಯನ್ನು ನಿರ್ಬಂಧಿತ ಉಗ್ರ ಸಂಘಟನೆಯೆಂದು ಘೋಷಿಸಿತ್ತು.
ವೈರಲ್ ವಿಡಿಯೊ:
Lashkar Terrorist Accuses Indian Agencies of Using an "Unknown Gunman Model" to Kill Terrorists in Porkistan.
— Avinash K S🇮🇳 (@AvinashKS14) August 3, 2026
He Said that in the last 4 years, 30 of their men (terrorists) have been killed in mysterious ways , some in Rawalakot, some in Rawalpindi, and some in Karachi:
+1 pic.twitter.com/116ZXVFcZ3
ಭಾರತೀಯ ಭದ್ರತಾ ಸಂಸ್ಥೆಗಳು ವಿಡಿಯೊದ ಪ್ರಾಮಾಣಿಕತೆಯನ್ನು ಪರಿಶೀಲಿಸಿದ್ದು, ವಿಡಿಯೊದಲ್ಲಿರುವ ವ್ಯಕ್ತಿ ಭಾರತಕ್ಕೆ ಬೇಕಾಗಿರುವ ಹಿರಿಯ ಲಷ್ಕರ್ ಉಗ್ರನೆಂದು ದೃಢಪಡಿಸಿವೆ.
ವಿಡಿಯೊದಲ್ಲಿ ರಿಜ್ವಾನ್ ಹನೀಫ್ ಈ ಹತ್ಯೆಗಳ ಹಿಂದೆ ಭಾರತೀಯ ಭದ್ರತಾ ಸಂಸ್ಥೆಗಳ ಕೈವಾಡವಿದೆ ಎಂದು ಆರೋಪಿಸಿದ್ದಾನೆ. ಆದರೆ ಭಾರತ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ.
ಜಮ್ಮು-ಕಾಶ್ಮೀರದಲ್ಲಿ ಹೈಬ್ರಿಡ್ ಉಗ್ರರು ಸಕ್ರಿಯ; ದಾಳಿಯ ನಂತರ ಸಾಮಾನ್ಯ ಜನರ ನಡುವೆ ಬೆರೆತು ತಪ್ಪಿಸಿಕೊಳ್ಳುವ ತಂತ್ರ
ಇದೇ ವೇಳೆ, ವಿಡಿಯೊದಲ್ಲಿ ಹನೀಫ್ ಹಿಂದೂ ಧರ್ಮದ ವಿರುದ್ಧ ದ್ವೇಷಪೂರಿತ ಮತ್ತು ಅವಹೇಳನಕಾರಿ ಭಾಷೆ ಬಳಸಿರುವುದು ಕೇಳಿಬಂದಿದೆ. ಉಗ್ರ ಸಂಘಟನೆಗಳು ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ದ್ವೇಷ ಹರಡುವುದು ಮತ್ತು ಯುವಕರನ್ನು ಉಗ್ರವಾದದತ್ತ ಸೆಳೆಯಲು ಹೇಗೆ ಪ್ರಯತ್ನಿಸುತ್ತವೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ತೋರಿಸಿದೆ.