Shidlaghatta News: ಬಿಎಲ್ಒಗಳ ಕಾರ್ಯವೇ ಪ್ರಜಾಪ್ರಭುತ್ವದ ಭದ್ರ ಬುನಾದಿ: ರಾಜೀವ್ ಗೌಡ
ಬಿಎಲ್ಒ-1 ಮತ್ತು ಬಿಎಲ್ಒ-2 ಪರಸ್ಪರ ಸಹಕಾರ, ಸಮನ್ವಯ ಮತ್ತು ತಂಡದ ಮನೋಭಾವ ದೊಂದಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆ ಕಾಪಾಡಲು ಸಾಧ್ಯವಾಗುತ್ತದೆ. ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಮತದಾರರಿಗೆ ಅಗತ್ಯ ಸೇವೆಗಳನ್ನು ಸಮಯಕ್ಕೆ ತಲುಪಿಸಲು ಆದ್ಯತೆ ನೀಡಲಾಗುವುದು
-
ಶಿಡ್ಲಘಟ್ಟ :ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಕಾರ್ಯವೇ ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದ್ದು, ಪ್ರತಿಯೊಬ್ಬ ಮತದಾರರ ಮಾಹಿತಿ ನಿಖರವಾಗಿ ದಾಖಲಾಗುವಂತೆ ನೋಡಿ ಕೊಳ್ಳುವುದು ನಮ್ಮ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಹೇಳಿದರು.
ನಗರದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಬಿಎಲ್ಒಗಳ ಆಯ್ಕೆ ಪ್ರಕ್ರಿಯೆಯ ಅಂತಿಮ ಘಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಆಯ್ಕೆಯಾದ ಬಳಿಕ ಮಾತನಾಡಿದರು.
ಮತದಾರರ ಪಟ್ಟಿಯ ಪರಿಷ್ಕರಣೆ, ಹೊಸ ಮತದಾರರ ಸೇರ್ಪಡೆ, ಮನೆ ಮನೆ ಸಮೀಕ್ಷೆ, ಸ್ಥಳಾಂತರ ಗೊಂಡ ಹಾಗೂ ಮೃತಪಟ್ಟ ಮತದಾರರ ವಿವರಗಳ ಪರಿಶೀಲನೆ ಸೇರಿದಂತೆ ಪ್ರತಿಯೊಂದು ಕಾರ್ಯವನ್ನೂ ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Shidlaghatta News: ಅಕ್ಷರಾಭ್ಯಾಸಕ್ಕೆ ಪೇಜಾವರ ಶ್ರೀಗಳ ಆಶೀರ್ವಾದ; ನೂತನ ಕಟ್ಟಡ ಉದ್ಘಾಟನೆ
ಬಿಎಲ್ಒ-1 ಮತ್ತು ಬಿಎಲ್ಒ-2 ಪರಸ್ಪರ ಸಹಕಾರ, ಸಮನ್ವಯ ಮತ್ತು ತಂಡದ ಮನೋಭಾವ ದೊಂದಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ. ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಮತದಾರರಿಗೆ ಅಗತ್ಯ ಸೇವೆಗಳನ್ನು ಸಮಯಕ್ಕೆ ತಲುಪಿಸಲು ಆದ್ಯತೆ ನೀಡಲಾಗುವುದು ಎಂದು ರಾಜೀವ್ ಗೌಡ ತಿಳಿಸಿದರು.
ತಮಗೆ ದೊರೆತಿರುವ ಈ ಜವಾಬ್ದಾರಿಯನ್ನು ಜನಸೇವೆಯ ಅವಕಾಶವೆಂದು ಪರಿಗಣಿಸಿ, ಸಂಪೂರ್ಣ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಭು ಜಿ., ತಹಶೀಲ್ದಾರ್ ಗಗನ್ ಸಿಂಧು, ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಆರ್., ಚಿಕ್ಕಬಳ್ಳಾಪುರದ ಜಂಟಿ ಕೃಷಿ ನಿರ್ದೇಶಕರು, ಮತದಾರರ ನೋಂದಣಿ ಅಧಿಕಾರಿ ಅಬ್ಬಿದ್ ಎಸ್.ಎಸ್., ವಿವಿಧ ಇಲಾಖೆಗಳ ಅಧಿಕಾರಿಗಳು, ಬಿಎಲ್ಒಗಳು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.