BBK 13: ತಾರಕಕ್ಕೇರಿದ ಪ್ರಥಮಾ ಪ್ರಸಾದ್ - ಕಿರಣ್ ಶಾಸ್ತ್ರಿ ಕಿತ್ತಾಟ! ‘ನಾನು ಕೆಟ್ಟ ಸೈಕ್ ನನ್ಮಗ ಆಗ್ಬಿಡ್ತೀನಿ’ ಎಂದ ಅವಿನಾಶ್!
BBK 13: ಬಿಗ್ ಬಾಸ್ ಸ್ಪರ್ಧಿಗಳ ಮಧ್ಯೆ ದಿನದಿಂದ ದಿನಕ್ಕೆ ಜಗಳ ತಾರಕಕ್ಕೇರುತ್ತಿದೆ. ಆಸನ ಹಂಚಿಕೆಯ ವಿಚಾರವಾಗಿ ಶುರುವಾದ ಮಾತಿನ ಚಕಮಕಿಯು ಕಿರಣ್ ಶಾಸ್ತ್ರಿ ಹಾಗೂ ಪ್ರಥಮಾ ಪ್ರಸಾದ್ ನಡುವೆ ತೀವ್ರ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿದೆ. ಕಿರಣ್ ಅವರ ವಾದ ಕಂಡು ರೊಚ್ಚಿಗೆದ್ದ ಅವಿನಾಶ್ ಶಠಮರ್ಷಣ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
-
ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 13' ಆರಂಭವಾದ ದಿನದಿಂದಲೇ ಸ್ಪರ್ಧಿಗಳ ನಡುವೆ ಭಿನ್ನಾಭಿಪ್ರಾಯ ಹಾಗೂ ಗಲಾಟೆಗಳು ತಾರಕಕ್ಕೇರುತ್ತಿವೆ. ವಿಶೇಷವಾಗಿ ಸ್ಪರ್ಧಿಗಳಾದ ಕಿರಣ್ ಶಾಸ್ತ್ರಿ ಮತ್ತು ಪ್ರಥಮಾ ಪ್ರಸಾದ್ ನಡುವೆ ಮೊದಲ ದಿನದಿಂದಲೂ ಹೊಂದಾಣಿಕೆ ಇಲ್ಲದೆ ಹೆಜ್ಜೆ ಹೆಜ್ಜೆಗೂ ಕಿತ್ತಾಟ ನಡೆಯುತ್ತಿದ್ದು, ಬುಧವಾರದ (ಸೆಪ್ಟೆಂಬರ್ 9) ಸಂಚಿಕೆಯಲ್ಲಿ ಈ ಜಗಳ ಮಿತಿ ಮೀರಿದೆ.
ಇನ್ನೂ ಫ್ಲೈಟ್ನಲ್ಲೇ ಜೀವನ
ಕಿರಣ್ ಶಾಸ್ತ್ರಿ ಇನ್ನೂ ಮುಖ್ಯ ಬಿಗ್ ಬಾಸ್ ಮನೆಯ ಪ್ರವೇಶಕ್ಕೆ ಅರ್ಹತೆ ಪಡೆಯದೆ, ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ 'ಫ್ಲೈಟ್' ಸೆಟಪ್ನಲ್ಲಿಯೇ ಉಳಿದುಕೊಂಡಿದ್ದಾರೆ. ಅವರೊಂದಿಗೆ ಪ್ರಥಮಾ ಪ್ರಸಾದ್, ಸೌಂದರ್ಯಾ ಶೆಟ್ಟಿ, ಅವಿನಾಶ್ ಶಠಮರ್ಷಣ, ಧನುಷ್ ಹಾಗೂ ಲಿಖಿತ್ ಮುಂತಾದವರು ಕಾಲ ಕಳೆಯುತ್ತಿದ್ದು, ಈ ಕಠಿಣ ಪರಿಸ್ಥಿತಿಯ ನಡುವೆಯೇ ಸಣ್ಣಪುಟ್ಟ ವಿಚಾರಗಳೂ ದೊಡ್ಡ ಜಗಳಕ್ಕೆ ಕಾರಣವಾಗುತ್ತಿವೆ.
ಸೀಟಿನಲ್ಲಿ ಕುಳಿತುಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಕಿರಣ್ ಹಾಗೂ ಪ್ರಥಮಾ ನಡುವೆ ತೀವ್ರ ವಾಗ್ದಾಳಿ ನಡೆದಿದ್ದು, "ನನ್ನ ತಲೆಮೇಲೆ ನಿಂತುಕೊಂಡು ಕಿರುಚಾಡುತ್ತಿದ್ದೀರಿ, ನಿಮಗೆ ಕನಿಷ್ಠ ಸೌಜನ್ಯ ಹಾಗೂ ಮರ್ಯಾದೆ ಇಲ್ಲ" ಎಂದು ಪ್ರಥಮಾ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಕಿರಣ್ ಶಾಸ್ತ್ರಿ, "ನನಗೆ ಕೂರಲು ಬಿಡುತ್ತಿಲ್ಲ, ನಿಮಗೆ 'ನಾನು' ಅನ್ನೋ ಅಹಂ ಜಾಸ್ತಿ ಇದೆ" ಎಂದು ವಾದಕ್ಕಿಳಿದಿದ್ದಾರೆ.
ಅವಿನಾಶ್ ಬಳಿ ದೂರು
ಇದೇ ವಿಚಾರವಾಗಿ ಕಿರಣ್ ಶಾಸ್ತ್ರಿ ಅವರು ಸಹ-ಸ್ಪರ್ಧಿ ಅವಿನಾಶ್ ಶಠಮರ್ಷಣ ಬಳಿ ದೂರುತ್ತಾ, "ಮೊದಲು ಗಲಾಟೆ ಶುರು ಮಾಡಿದ್ದೇ ಅವರು, ಅವರಿಗೆ ಹೋಗಿ ಹೇಳಿ" ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ. ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಿದ ಅವಿನಾಶ್, "ಅವರು ಸೈಲೆಂಟ್ ಆಗಿದ್ದಾರೆ, ನೀನು ಸೈಲೆಂಟ್ ಆಗು" ಎಂದು ಸಮಾಧಾನಪಡಿಸಲು ಮುಂದಾಗಿದ್ದಾರೆ. ಆದರೆ ಕಿರಣ್ ಸುಮ್ಮನಾಗದೆ ವಾದ ಮುಂದುವರಿಸಿದಾಗ ಸಹನೆ ಕಳೆದುಕೊಂಡ ಅವಿನಾಶ್, "ಬಾಯಿ ಮುಚ್ಚಿಕೊಂಡು ಕೂತ್ಕೋ, ಇಲ್ಲ ಅಂದ್ರೆ ಕೆಟ್ಟ ಸೈಕ್ ನನ್ಮಗ ಆಗ್ಬಿಡ್ತೀನಿ" ಎಂದು ಕಿರಣ್ಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ನಿಮ್ಮ ಬಾಯಲ್ಲಿ ಒಳ್ಳೆಯ ಮಾತು ಬರಲಿ
ನಂತರ ಊಟ ಮಾಡುವ ಸಂದರ್ಭದಲ್ಲೂ ಸಹ-ಸ್ಪರ್ಧಿಗಳು ಕಿರಣ್ಗೆ ಬುದ್ಧಿಮಾತು ಹೇಳಲು ಪ್ರಯತ್ನಿಸಿದರಾದರೂ, ಅವರು ಅದಕ್ಕೆ ಕಿವಿಗೊಡಲಿಲ್ಲ. ಈ ವೇಳೆ ಪ್ರಥಮಾ ಪ್ರಸಾದ್ ಅವರು "ಅನ್ನ ತಿನ್ನುವಾಗಲಾದರೂ ನಿಮ್ಮ ಬಾಯಲ್ಲಿ ಒಳ್ಳೆಯ ಮಾತು ಬರಲಿ" ಎಂದು ನೇರವಾಗಿಯೇ ತಿವಿದಿದ್ದಾರೆ. ಯಾವುದೇ ಐಷಾರಾಮಿ ಸೌಲಭ್ಯಗಳಿಲ್ಲದೆ ಕಂಗೆಟ್ಟಿರುವ ವಿಮಾನ ಪ್ರಯಾಣದ ಸ್ಪರ್ಧಿಗಳ ನಡುವೆ ಕಿರಣ್ ಶಾಸ್ತ್ರಿ ಹಾಗೂ ಪ್ರಥಮಾ ಅವರ ಈ ನಿರಂತರ ಜಟಾಪಟಿ ಬಿಗ್ ಬಾಸ್ ಮನೆಯ ತಾಪಮಾನವನ್ನು ಮತ್ತಷ್ಟು ಏರಿಸಿದೆ.