ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜೆನ್‌ ಝೀ ಕಾಲಘಟ್ಟದ ಕಥೆ ಇರುವ ʻಇಂದಿರಾʼ; ಮಾಜಿ ಪ್ರಧಾನಿಗೂ ಈ ಸಿನಿಮಾಕ್ಕೂ ಏನ್‌ ಸಂಬಂಧ?

GEN-Z ತಲೆಮಾರಿನ ಯುವಕರ ಆಲೋಚನಾ ಲಹರಿ ಮತ್ತು ತಂತ್ರಜ್ಞಾನದ ಪ್ರಭಾವದ ಕುರಿತು 'ಇಂದಿರಾ' ಸಿನಿಮಾ ಸಿದ್ಧವಾಗುತ್ತಿದೆ. ವೇದ್‌ ನಿರ್ದೇಶನದ ಈ ಚಿತ್ರವು ಮಹಿಳಾ ಪ್ರಧಾನ ಕಥಾಹಂದರ ಹೊಂದಿದ್ದು, ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಇಂಟರ್‌ನೆಟ್ ಬಳಕೆ ಹಾಗೂ ಅದರ ಸಾಧಕ-ಬಾಧಕಗಳನ್ನು ಈ ಸಿನಿಮಾ ಚರ್ಚಿಸಲಿದೆ.

ಜೆನ್ ಝೀ ಬಗ್ಗೆ ಕಥೆ ಇರುವ 'ಇಂದಿರಾ' ಚಿತ್ರದ ಪೋಸ್ಟರ್‌ - ಟೀಸರ್‌ ರಿಲೀಸ್‌!

-

Avinash GR
Avinash GR Jan 24, 2026 1:01 PM

ಜೆನ್‌ ಝೀ (Gen-Z) ತಲೆಮಾರಿನ ಯುವ ಜನಾಂಗದ್ದೇ ಜಮಾನ ಈಗ. ಎಲ್ಲರ ಅಂಗೈಯಲ್ಲೂ ಸ್ಮಾರ್ಟ್‌ ಫೋನ್‌ಗಳು. ಈಗ ಎಲ್ಲರಿಗೂ ಇಂಟರ್‌ನೆಟ್‌ ಸಂಪರ್ಕ ಲಭ್ಯವಿದ್ದರೂ, ಅದನ್ನು ಅತಿಯಾಗಿ ಬಳಸಿಕೊಳ್ಳುತ್ತಿರುವುದು ಮಾತ್ರ ಇಂದಿನ ಜೆನ್‌ ಝೀ ತಲೆಮಾರು ಎಂಬುದರಲ್ಲಿ ಎರಡು ಮಾತಿಲ್ಲ. ಸದ್ಯ ಈ ಹೊಸ ತಲೆಮಾರು ಮತ್ತು ಅದು ತಂತ್ರಜ್ಞಾನವನ್ನು ಹೇಗೆಲ್ಲ ಬಳಸಿಕೊಳ್ಳುತ್ತಿದೆ ಎಂಬ ವಿಷಯವನ್ನೇ ಕಥೆ ಮಾಡಿಕೊಂಡು, ಒಂದು ಸಿನಿಮಾದ ಮೂಲಕ ತೆರೆಮೇಲೆ ತರಲು ಹೊರಟಿದೆ ಹೊಸದೊಂದು ಚಿತ್ರತಂಡ.

ಸಿನಿಮಾಕ್ಕೆ ಇಂದಿರಾ ಟೈಟಲ್‌!

ಈ ಹೊಸ ಚಿತ್ರಕ್ಕೆ 'ಇಂದಿರಾ' ಎಂದು ಹೆಸರಿಡಲಾಗಿದ್ದು, ಶೀರ್ಷಿಕೆಗೆ 'ಜೆನ್‌ ಝೀ' (Gen-Z) ಎಂಬ ಅಡಿಬರಹವಿದೆ. ಈ ಹಿಂದೆ 'ರಾವೆನ್‌' ಚಿತ್ರವನ್ನು ನಿರ್ದೇಶಿಸಿದ್ದ ವೇದ್‌ ಈಗ 'ಇಂದಿರಾ' ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. 'ಕಿರಣ್‌ ಫಿಲಂಸ್‌' ಸಂಸ್ಥೆಯ ಅಡಿಯಲ್ಲಿ ಕಿರಣ್‌ ಕುಮಾರ್‌ ಎಂ. ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಮತ್ತು ಕೆಲವು ಸಿನಿಮಾಗಳಿಗೆ ಸಹ ನಿರ್ಮಾಪಕರಾಗಿ ಅನುಭವವಿರುವ ಕಿರಣ್ ಕುಮಾರ್ 'ಇಂದಿರಾ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಬಡ್ತಿ ಹೊಂದುತ್ತಿದ್ದಾರೆ.‌

Viral News: Gen-Zಗಳಿಗಾಗಿಯೇ ಬೆಂಗಳೂರಿನಲ್ಲಿ ತೆರೆಯಲಾಯ್ತು ಅಂಚೆ ಕಚೇರಿ; ಏನಿದು ಹೊಸ ಥೀಮ್‌?

ನಿರ್ದೇಶಕ ವೇದ್‌ ಹೇಳಿದ್ದೇನು?

"ಇದು ಇಂದಿನ ತಲೆಮಾರಿನ ಜನತೆಗೆ ಕನೆಕ್ಟ್‌ ಆಗುವಂಥ ಸಿನಿಮಾ. ಈಗಾಗಲೇ ಜಗತ್ತಿನ ಅನೇಕ ದೇಶಗಳಲ್ಲಿ 'ಜೆನ್‌ ಝೀ ಕಡೆಯಿಂದ ಏನೇನು ಆಗುತ್ತಿದೆ. ಇಂದಿನ Gen-Z ತಲೆಮಾರು ಹೇಗೆಲ್ಲ ಯೋಚಿಸುತ್ತದೆ. ಅವರಿಂದ ಏನೆಲ್ಲ ಆಗಬಹುದು, ಈ ಹೊಸ ಜನರೇಷನ್‌ ಮನಸ್ಸು ಮಾಡಿದರೆ, ಏನೆಲ್ಲ ಮಾಡಲು ಸಾಧ್ಯ? ಎಂಬ ಹಲವು ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದೇವೆ. ಇದೊಂದು ಮಹಿಳಾ ಪ್ರಧಾನ ಕಥಾಹಂದರದ ಸಿನಿಮಾವಾಗಿದ್ದು, ಹಾಗಾಗಿ ಸಿನಿಮಾಕ್ಕೆ 'ಇಂದಿರಾ' ಎಂದು ಹೆಸರಿಟ್ಟಿದ್ದೇವೆ. 'ಇಂದಿರಾ' ಸಿನಿಮಾದಲ್ಲಿ ಮನರಂಜನೆಯ ಜೊತೆಗೆ ಸಮಾಜಕ್ಕೆ ಒಂದು ಸಂದೇಶ ಕೂಡ ಇರಲಿದೆ. ಸದ್ಯ ಸಿನಿಮಾದ ಟೈಟಲ್‌ ಮತ್ತು ಟೀಸರ್‌ ಬಿಡುಗಡೆಯಾಗಿದ್ದು, ಇದೇ ಮಾರ್ಚ್‌ ವೇಳೆಗೆ 'ಇಂದಿರಾ' ಚಿತ್ರದ ಚಿತ್ರೀಕರಣ ಆರಂಭಿಸುವ ಯೋಚನೆ ಇದೆ" ಎನ್ನುತ್ತಾರೆ ನಿರ್ದೇಶಕರು.

ಇಂದಿರಾ ಗಾಂಧಿಗೂ ಈ ಸಿನಿಮಾಕ್ಕೂ ಸಂಬಂಧವಿಲ್ಲ!

"ಈ ಸಿನಿಮಾದ ಹೆಸರು 'ಇಂದಿರಾ' ಅಂತಿದ್ದರೂ, ಈ ಸಿನಿಮಾಕ್ಕೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೂ ಯಾವುದೇ ಸಂಬಂಧವಿಲ್ಲ. ಇದು ರಾಜಕೀಯ ಕಥೆಯಾಧಾರಿತ ಸಿನಿಮಾವಲ್ಲ. ಆದರೆ ಸಿನಿಮಾದ ಕಥೆಯಲ್ಲಿ ಇಂದಿನ ಹಲವು ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಸಿನಿಮಾದ ಕಥೆಗೆ ತಕ್ಕಂತೆ ಪವರ್‌ಫುಲ್‌ ಟೈಟಲ್‌ ಇರಬೇಕೆಂಬ ಕಾರಣಕ್ಕೆ ಈ ಹೆಸರಿಡಲಾಗಿದೆ. ಇಂದಿನ 'ಜೆನ್‌ ಜೀ ಜನರೇಷನ್‌'ಗೆ ಕನೆಕ್ಟ್‌ ಆಗುವ ಸಿನಿಮಾ ಇದಾಗಿರುವುದರಿಂದ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಈ ಸಿನಿಮಾ ನಿರ್ಮಿಸುತ್ತಿದ್ದೇವೆ. ಕನ್ನಡದ ಜೊತೆಗೆ ಇತರ ಭಾಷೆಗಳಲ್ಲೂ ಈ ಸಿನಿಮಾವನ್ನು ತೆರೆಗೆ ತರುವ ಯೋಜನೆಯಿದೆ. ಈಗಾಗಲೇ 'ಇಂದಿರಾ' ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, 2026ರ ಡಿಸೆಂಬರ್‌ನಲ್ಲಿ ಈ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದ್ದೇವೆ" ಎಂದು ಮಾಹಿತಿ ನೀಡಿದರು ನಿರ್ಮಾಪಕ ಕಿರಣ್‌ ಕುಮಾರ್‌.

ಈ ಚಿತ್ರದ ಟೈಟಲ್‌ ಪೋಸ್ಟರ್‌ ಮತ್ತು ಟೈಟಲ್‌ ಟೀಸರ್‌ ಹೊರಬಂದಿದೆ. ಚಿತ್ರಕ್ಕೆ ರವಿವರ್ಮ ಛಾಯಾಗ್ರಹಣ, ಧನುಶ್‌ ಸಂಕಲನ ಕಾರ್ಯವಿದೆ. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಕರ್ನಾಟಕ ಪ್ರಮುಖ ತಾಣಗಳು ಮತ್ತು ಹೊರರಾಜ್ಯಗಳಲ್ಲೂ 'ಇಂದಿರಾ' ಚಿತ್ರದ ಚಿತ್ರೀಕರಣ ನಡೆಯಲಿದೆ. ಇನ್ನು 'ಇಂದಿರಾ' ಚಿತ್ರದ ಪ್ರಧಾನ ಪಾತ್ರಕ್ಕೆ ಕನ್ನಡದ ಜನಪ್ರಿಯ ನಟಿಯೊಬ್ಬರನ್ನು ಕರೆತರುವ ಯೋಜನೆಯಲ್ಲಿದೆ ಚಿತ್ರತಂಡ.

ಇತ್ತೀಚೆಗೆ ನಡೆದ 'ಇಂದಿರಾ' ಚಿತ್ರದ ಟೈಟಲ್‌ ಪೋಸ್ಟರ್‌ ಮತ್ತು ಟೀಸರ್‌ ಬಿಡುಗಡೆ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮ. ಹರೀಶ್‌, ನಿರ್ಮಾಪಕರಾದ ಟಿ. ಪಿ. ಸಿದ್ಧರಾಜು, ನಿತ್ಯಾನಂದ ಪ್ರಭು, ಕನ್ನಡ ಚಲನಚಿತ್ರ ನಿರ್ಮಾಪಕ ಸಂಘದ ಗೌರವ ಕಾರ್ಯದರ್ಶಿ ಭಾ. ಮ. ಗಿರೀಶ್‌, ನಟ ದೇವ್ ದೇವಯ್ಯ ಸೇರಿದಂತೆ ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಹಾಜರಾಗಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.