ʻದಳಪತಿʼ ವಿಜಯ್ ʻಜನ ನಾಯಗನ್ʼ ಲೀಕ್: ಸೈಬರ್ ಕ್ರೈಂ ಪೊಲೀಸರ ಬಲೆಗೆ ಬಿದ್ದ ಪ್ರಕರಣದ ಮಾಸ್ಟರ್ ಮೈಂಡ್, ಈ ಸಿನಿಮಾ ಪೈರಸಿ ಆಗಿದ್ದೇಗೆ?
ʻಜನ ನಾಯಗನ್ʼ ಸಿನಿಮಾ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸೈಬರ್ ಕ್ರೈಂ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಎಡಿಟಿಂಗ್ ಸ್ಟುಡಿಯೋವೊಂದರಲ್ಲಿ ಫ್ರೀಲ್ಯಾನ್ಸ್ ಸಹಾಯಕ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಚಿತ್ರದ ಪ್ರಮುಖ ದೃಶ್ಯಗಳನ್ನು ಅನಧಿಕೃತವಾಗಿ ಕಾಪಿ ಮಾಡಿ ಹಂಚಿಕೊಂಡಿರುವುದು ಪತ್ತೆಯಾಗಿದೆ.
-
ʻದಳಪತಿʼ ವಿಜಯ್ ಅವರ ʻಜನ ನಾಯಗನ್ʼ ಸಿನಿಮಾವು ಆನ್ಲೈನ್ನಲ್ಲಿ ಲೀಕ್ ಆಗಿ ಎಂಥ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಚಿತ್ರದ ಪ್ರಮುಖ ಭಾಗದ ದೃಶ್ಯಗಳನ್ನೇ ಲೀಕ್ ಮಾಡಿ, ಚಿತ್ರತಂಡಕ್ಕೆ ಕಿಡಿಗೇಡಿಗಳು ದೊಡ್ಡ ಹೊಡೆತ ನೀಡಿದ್ದರು. ಇದೀಗ ಈ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಯಾರು ಅನ್ನೋದು ಬಯಲಾಗಿದೆ. ಆತನು ಸೇರಿದಂತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು, ಇತ್ತೀಚಿನ ದಿನಗಳ ಅತ್ಯಂತ ಹೈ-ಪ್ರೊಫೈಲ್ ಪೈರಸಿ ಪ್ರಕರಣಗಳಲ್ಲಿ ಒಂದಾದ ‘ಜನ ನಾಯಗನ್’ ಚಿತ್ರದ ಆನ್ಲೈನ್ ಲೀಕ್ಗೆ ಸಂಬಂಧಿಸಿದಂತೆ ತಮಿಳುನಾಡು ಸೈಬರ್ ಕ್ರೈಂ ವಿಭಾಗವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಮತ್ತೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಇದಕ್ಕೂ ಮೊದಲು ಆರು ಮಂದಿಯನ್ನು ಅರೆಸ್ಟ್ ಮಾಡಲಾಗಿತ್ತು.
ಈಗ ಸಿಕ್ಕಿಬಿದ್ದಿರುವ ಮಾಸ್ಟರ್ ಮೈಂಡ್ ಯಾರು?
ಸದ್ಯ ಬಂಧಿತನಾಗಿರುವ ಪ್ರಮುಖ ಆರೋಪಿಯು ಬೇರೊಂದು ಚಿತ್ರದ ಪ್ರಾಜೆಕ್ಟ್ನಲ್ಲಿ ಫ್ರೀಲ್ಯಾನ್ಸ್ ಸಹಾಯಕ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದನು. ಈತನೇ ಎಡಿಟಿಂಗ್ ಸ್ಟುಡಿಯೋವೊಂದರಲ್ಲಿ ‘ಜನ ನಾಯಗನ್’ ಚಿತ್ರದ ಫೂಟೇಜ್ಗಳನ್ನು ಅನಧಿಕೃತವಾಗಿ ಪಡೆದುಕೊಂಡಿದ್ದಾನೆ ಎಂಬ ಆರೋಪವಿದೆ. ಆರೋಪಿಯು ಚಿತ್ರದ ಫೂಟೇಜ್ಗಳನ್ನು ಕಾಪಿ ಮಾಡಿ, ನಂತರ ಅದನ್ನು ಇತರರೊಂದಿಗೆ ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಈ ರೀತಿ ಹಂಚಿಕೊಂಡಿದ್ದೇ, ಪೈರಸಿ ಕಾಪಿಯು ಜಾಲತಾಣದಲ್ಲಿ ಚಿತ್ರವು ವೇಗವಾಗಿ ವೈರಲ್ ಆಗಲು ಕಾರಣವಾಯಿತು ಎಂಬ ಮಾತುಗಳು ಕೇಳಿಬಂದಿವೆ.
Jana Nayagan: 'ಜನ ನಾಯಗನ್' ದೃಶ್ಯ ಲೀಕ್; ಬೆಂಬಲಕ್ಕೆ ನಿಂತ ತಾರೆಯರು
ಸದ್ಯ ಸೈಬರ್ ಕ್ರೈಮ್ ಪೊಲೀಸರಿಂದ ಅರೆಸ್ಟ್ ಆಗಿರುವ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜನ ನಾಯಗನ್ ಚಿತ್ರದ ಯಾವುದೇ ಅನಧಿಕೃತ ಅಥವಾ ಪ್ರಮಾಣೀಕರಿಸದ ಆವೃತ್ತಿಗಳನ್ನು ಪ್ರಸಾರ ಮಾಡದಂತೆ ಇಂಟರ್ನೆಟ್ ಸೇವಾ ಪೂರೈಕೆದಾರರು ಮತ್ತು ಕೇಬಲ್ ಆಪರೇಟರ್ಗಳಿಗೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಜನ ನಾಯಗನ್ ಟೀಮ್ಗೆ ದೊಡ್ಡ ಹೊಡೆತ
ʻದಳಪತಿʼ ವಿಜಯ್ ಅವರ ‘ಜನ ನಾಯಗನ್’ ಸಿನಿಮಾದ ಎಚ್ಡಿ ಕ್ಲಿಪ್ಗಳು ಮತ್ತು ಪ್ರಮುಖ ದೃಶ್ಯಗಳು ಏಪ್ರಿಲ್ 9ರಂದು ಆನ್ಲೈನ್ನಲ್ಲಿ ಸೋರಿಕೆಯಾದಾಗಿದ್ದವು. ಇದು ಚಿತ್ರತಂಡಕ್ಕೆ ಭಾರಿ ಹೊಡೆತ ನೀಡಿತ್ತು. ಈಗಾಗಲೇ ಸೈಬರ್ ಕ್ರೈಮ್ ಪೊಲೀಸರು ಈವರೆಗೆ ನೂರಾರು ಪೈರಸಿ ಲಿಂಕ್ಗಳನ್ನು ಡಿಲೀಟ್ ಮಾಡಿದ್ದಾರೆ. ಪೈರಸಿ ಕಂಟೆಂಟ್ ಅನ್ನು ವೀಕ್ಷಿಸುವುದು ಅಥವಾ ಹಂಚಿಕೊಳ್ಳುವುದು ಕೂಡ ಅಪರಾಧ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಎಚ್ ವಿನೋದ್ ನಿರ್ದೇಶನದ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಮಮಿತಾ ಬೈಜು, ಪ್ರಕಾಶ್ ರಾಜ್, ಬಾಬಿ ಡಿಯೋಲ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ.