ಅರುಣಾಚಲ–ನಾಗಾಲ್ಯಾಂಡ್ನಲ್ಲಿ ಕಾಡ್ಗಿಚ್ಚು: 1.39 ಲಕ್ಷ ಲೀಟರ್ ನೀರು ಸುರಿಸಿದ ಐಎಎಫ್; ಡ್ಜುಕೋ ಕಣಿವೆಯಲ್ಲಿನ ರೋಮಾಂಚನಕಾರಿ ಕಾರ್ಯಾಚರಣೆಯ ವಿಡಿಯೊ ವೈರಲ್
ಅರುಣಾಚಲ ಪ್ರದೇಶದ ವಾಲೋಂಗ್ ಹಾಗೂ ನಾಗಾಲ್ಯಾಂಡ್ನ ಡ್ಜುಕೋ ಕಣಿವೆಯಲ್ಲಿ ಉಂಟಾದ ಭಾರಿ ಕಾಡ್ಗಿಚ್ಚನ್ನು ನಿಯಂತ್ರಿಸಲು ಭಾರತೀಯ ಸೇನೆ ಮತ್ತು ಐಎಎಫ್ ಸಂಯೋಜಿತ ಕಾರ್ಯಾಚರಣೆ ನಡೆಸಿವೆ. ವಾಲೋಂಗ್ನಲ್ಲಿ ಹೆಲಿಕಾಪ್ಟರ್ಗಳ ಮೂಲಕ 1.39 ಲಕ್ಷ ಲೀಟರ್ ನೀರು ಸುರಿದು ಬೆಂಕಿ ನಿಯಂತ್ರಣಕ್ಕೆ ತರಲಾಗಿದ್ದು, ಡ್ಜುಕೋ ಕಣಿವೆಯಲ್ಲಿ ಮಿ-17 ವಿ5 ಹೆಲಿಕಾಪ್ಟರ್ಗಳ ಹೈ-ರಿಸ್ಕ್ ವೈಮಾನಿಕ ಕಾರ್ಯಾಚರಣೆ ಮುಂದುವರಿದಿದೆ.
ಕಾಡ್ಗಿಚ್ಚು -
ನವದೆಹಲಿ, ಫೆ. 18: ಅರುಣಾಚಲ ಪ್ರದೇಶ (Arunachal Pradesh) ಮತ್ತು ನಾಗಾಲ್ಯಾಂಡ್ನಲ್ಲಿ (Nagaland) ಉರಿಯುತ್ತಿರುವ ಭೀಕರ ಕಾಡ್ಗಿಚ್ಚನ್ನು(Wildfire) ನಿಯಂತ್ರಿಸಲು ಭಾರತೀಯ ಸೇನೆ (Indian Force) ಮತ್ತು ಭಾರತೀಯ ವಾಯುಪಡೆ (IAF) ಸಂಯೋಜಿತ ಕಾರ್ಯಾಚರಣೆ ಮುಂದುವರೆಸಿವೆ. ಅರುಣಾಚಲ ಪ್ರದೇಶದ ವಾಲೋಂಗ್ನಲ್ಲಿ ಐಎಎಫ್ ಹೆಲಿಕಾಪ್ಟರ್ಗಳು ಬೆಂಕಿ ಹೊತ್ತಿಕೊಂಡ ಪ್ರದೇಶಗಳ ಮೇಲೆ ಒಟ್ಟು 1,39,800 ಲೀಟರ್ ನೀರನ್ನು ಸುರಿದು ಬೆಂಕಿಯ ತೀವ್ರತೆಯನ್ನು ಕಡಿಮೆ ಮಾಡಿವೆ. ರೋಮಾಂಚನಕಾರಿ ಕಾರ್ಯಾಚರಣೆಯ ವಿಡಿಯೊ ವೈರಲ್ ಆಗಿದೆ.
ದುರ್ಗಮ ಪರ್ವತ ಪ್ರದೇಶ, ತೀವ್ರ ಗಾಳಿ ಮತ್ತು ಹೆಚ್ಚಿನ ಉಷ್ಣಾಂಶದ ನಡುವೆಯೂ ವೈಮಾನಿಕ ಕಾರ್ಯಾಚರಣೆ ನಿರಂತರವಾಗಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಗಾಲ್ಯಾಂಡ್ನ ಡ್ಜುಕೌ ಕಣಿವೆಯಲ್ಲಿ ಜಪ್ಫು ಶಿಖರದ ಸಮೀಪ ಬೆಂಕಿ ವ್ಯಾಪಿಸಿದ್ದು, ಮಿ-17 ವಿ5 ಹೆಲಿಕಾಪ್ಟರ್ಗಳು ದಿಮಾಪುರದ ಬಳಿಯ ಪದುಂಪೋಖಿರಿ ಸರೋವರದಿಂದ ನೀರು ತೆಗೆದುಕೊಂಡು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ. ಅಸ್ಪಷ್ಟ ಗೋಚರತೆ ಮತ್ತು ಗಾಳಿಯ ವೇಗದಿಂದ ಹಾರಾಟ ಸವಾಲಿನದ್ದಾಗಿದೆ.
ಡ್ಜುಕೌ ಕಣಿವೆಯಲ್ಲಿನ ಕಾರ್ಯಾಚರಣೆ:
#WATCH | Indian Air Force helicopters are battling wildfires at two fronts, conducting relentless aerial firefighting missions in challenging terrain. At Walong, Arunachal Pradesh, a total of 139,800 litres of water has been dropped, successfully extinguishing the blaze.… pic.twitter.com/9JEkWNXdph
— ANI (@ANI) February 18, 2026
ಫೆಬ್ರವರಿ 13ರಂದು ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಳೆದ ಐದು ದಿನಗಳಿಂದ ಮಾನವ ಶಕ್ತಿ, ಅಗ್ನಿಶಾಮಕ ಉಪಕರಣಗಳು, ಭಾರಿ ಯಂತ್ರೋಪಕರಣಗಳು ಹಾಗೂ ವೈಮಾನಿಕ ಬೆಂಬಲದೊಂದಿಗೆ ಸಂಘಟಿತ ಪ್ರಯತ್ನ ಮುಂದುವರಿದಿದೆ. ಕಡಿದಾದ ಭೂ ಪ್ರದೇಶ ಮತ್ತು ದೂರದ ಪ್ರದೇಶಗಳ ಕಾರಣ ನೆಲದ ಮೇಲಿನ ಕಾರ್ಯಾಚರಣೆ ಕಷ್ಟವಾಗುತ್ತಿದೆ. ಶುಷ್ಕ ಹವಾಮಾನ ಮತ್ತು ಪರ್ವತ ಪ್ರದೇಶಗಳಲ್ಲಿ ಅನುಸರಿಸುವ ಸಾಂಪ್ರದಾಯಿಕ ಜುಮ್ ಕೃಷಿ ಪದ್ಧತಿ ಬೆಂಕಿ ಹರಡುವುದಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆ:
Indian Air Force helicopters are battling wildfires at two fronts, conducting relentless aerial firefighting missions in challenging terrain. At Walong, Arunachal Pradesh, a total of 139,800 litres of water has been dropped, successfully extinguishing the blaze. Simultaneously,… pic.twitter.com/rYQZYdVau7
— Indian Air Force (@IAF_MCC) February 18, 2026
ಸೇನೆ ಮತ್ತು ವಾಯುಪಡೆಯ ಸಂಯೋಜಿತ ಕ್ರಮಗಳು ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲು ನಿರ್ಣಾಯಕ ಹಂತದ ಕಾರ್ಯಾಚರಣೆ ನಡೆಯುತ್ತಿವೆ.
ಅಧಿಕಾರಿಗಳ ಪ್ರತಿಕ್ರಿಯೆ
ಏರ್ ವೈಸ್ ಮಾರ್ಷಲ್ ಅಜಯ್ ಕುನ್ನತ್ ಮಾತನಾಡಿ, ಇಂತಹ ವೈಮಾನಿಕ ಕಾರ್ಯಾಚರಣೆಗಳು “ಶೂನ್ಯ ದೋಷ ಪರಿಸರದಲ್ಲಿ” ನಡೆಯಬೇಕಾಗುತ್ತದೆ ಎಂದರು. ತಂತ್ರಜ್ಞಾನ ಬಳಕೆಯಲ್ಲಿ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂಬುದನ್ನೂ ಒತ್ತಿ ಹೇಳಿದ್ದಾರೆ.
ಕಾಡ್ಗಿಚ್ಚಿನ ಸಾಧ್ಯ ಕಾರಣಗಳು
- ಶುಷ್ಕ ಹವಾಮಾನ ಪರಿಸ್ಥಿತಿಗಳು.
- ಪರ್ವತ ಪ್ರದೇಶಗಳಲ್ಲಿ ವ್ಯಾಪಕವಾದ ಸಾಂಪ್ರದಾಯಿಕ ಜುಮ್ ಕೃಷಿ ಪದ್ಧತಿ.
- ತೀವ್ರ ಗಾಳಿಯ ಪರಿಣಾಮ.
ಈ ಎಲ್ಲ ಅಂಶಗಳು ಬೆಂಕಿ ವೇಗವಾಗಿ ಹರಡುವುದಕ್ಕೆ ಕಾರಣವಾಗಿವೆ ಎಂದು ಗುವಾಹಟಿಯಲ್ಲಿರುವ ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಇನ್ನು ದುರ್ಗಮ ಭೂಪ್ರದೇಶ ಮತ್ತು ಹವಾಮಾನ ಸವಾಲುಗಳ ನಡುವೆಯೂ ಸೇನೆ ಮತ್ತು ಐಎಎಫ್ನ ಸಂಯೋಜಿತ ಪ್ರಯತ್ನಗಳು ಬೆಂಕಿ ಮತ್ತಷ್ಟು ಹರಡುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಪರಿಸ್ಥಿತಿ ಹಂತ ಹಂತವಾಗಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.