ದೆಹಲಿಯಲ್ಲಿ ಸಿಎನ್ಜಿ ಸಿಲಿಂಡರ್ ಸ್ಫೋಟ; ಮೂವರು ಸಾವು, ಮೂವರಿಗೆ ಗಾಯ
CNG Cylinder Explodes: ದೆಹಲಿಯ ಟಿಕ್ರಿ ಕಲಾನ್ ಮೆಟ್ರೋ ನಿಲ್ದಾಣದ ಬಳಿ ಸಿಎನ್ಜಿ ಪಂಪ್ನಲ್ಲಿ ಟ್ರಕ್ಗೆ ಇಂಧನ ತುಂಬುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಪಂಪ್ನ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಸ್ಫೋಟದ ನಿಖರ ಕಾರಣದ ಕುರಿತು ತನಿಖೆ ನಡೆಯುತ್ತಿದೆ.
ದೆಹಲಿಯಲ್ಲಿ ಸಿಎನ್ಜಿ ಪಂಪ್ನಲ್ಲಿ ಸ್ಫೋಟ -
ನವದೆಹಲಿ, ಆ. 19: ದೆಹಲಿಯ ಟಿಕ್ರಿ ಕಲಾನ್ ಮೆಟ್ರೋ ನಿಲ್ದಾಣದ (Tikri Kalan Metro Station) ಸಮೀಪದ ಸಿಎನ್ಜಿ ಪಂಪ್ನಲ್ಲಿ (CNG Pump) ಟ್ರಕ್ಗೆ ಸಿಎನ್ಜಿ ತುಂಬುತ್ತಿದ್ದ (CNG Refuelling) ವೇಳೆ ಸಿಲಿಂಡರ್ ಸ್ಫೋಟಗೊಂಡು ಮೂವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಬುಧವಾರ ಸಂಜೆ ಈ ಘಟನೆ ಸಂಭವಿಸಿದೆ. ಮೃತಪಟ್ಟ ಮೂವರೂ ಸಿಎನ್ಜಿ ಪಂಪ್ನ ಕಾರ್ಮಿಕರಾಗಿದ್ದಾರೆ. ಮೃತರನ್ನು ಪಶ್ಚಿಮ ದೆಹಲಿಯ ಬಾಬಾ ಹರಿದಾಸ್ ಕಾಲೋನಿ ನಿವಾಸಿ ಮನುಷ್ (25) ಹಾಗೂ ನಿಜಾಂಪುರ ನಿವಾಸಿಗಳಾದ ಬ್ರಹ್ಮಜೀತ್ (34) ಮತ್ತು ಸನ್ನಿ (30) ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಸುರ್ಜೀತ್, ಸಂಜಯ್ ಮತ್ತು ವಿಪಿನ್ ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮುಂಡ್ಕಾದ ಸಿಡಿ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಪಿನ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಬಳಿಕ ಸ್ಥಳದಿಂದ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಸಿಎನ್ಜಿ ಸಿಲಿಂಡರ್ ಸ್ಫೋಟ:
Delhi: Two people died and six others were injured after a truck's CNG cylinder exploded at a CNG pump in Tikri Kalan, Mundka. pic.twitter.com/zEjpGDfseA
— IANS (@ians_india) August 19, 2026
ಟ್ರಕ್ನ ಸಿಎನ್ಜಿ ಸಿಲಿಂಡರ್ಗೆ ಅನಿಲ ತುಂಬುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮನುಷ್, ಸನ್ನಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಜನತೆಗೆ ಗುಡ್ನ್ಯೂಸ್: ದೆಹಲಿ-ಹುಬ್ಬಳ್ಳಿ, ದೆಹಲಿ-ಬೆಳಗಾವಿ ಮಧ್ಯೆ ಇನ್ನು ನಿತ್ಯವೂ ವಿಮಾನ ಸಂಚಾರ
ಸ್ಫೋಟದ ತೀವ್ರತೆಗೆ ಟ್ರಕ್, ಒಂದು ಕಾರು ಹಾಗೂ ದ್ವಿಚಕ್ರ ವಾಹನ ಹಾನಿಗೊಳಗಾಗಿವೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಪರಾಹ್ನ 3:37ಕ್ಕೆ ದೆಹಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ಬಂದಿದ್ದು, ತಕ್ಷಣ ಆರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಹೊರ ದೆಹಲಿ ಡಿಸಿಪಿ, ಎಸಿಪಿ ಹಾಗೂ ಮುಂಡ್ಕಾ ಠಾಣೆಯ ಎಸ್ಎಚ್ಒ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದು, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.